
Operation Sindoor : ಪಹಲ್ಗಾಮ್ ದಾಳಿ ಭಯೋತ್ಪಾದಕರ ಪೋಸ್ಟರ್ ಬಿಡುಗಡೆ; ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ
ಕಳೆದ ನಾಲ್ಕು ದಿನಗಳಿಂದ ತೀವ್ರಗೊಂಡಿದ್ದ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಂದಕ್ಕೆ ಬಂದಿವೆ. ಉಭಯ ದೇಶಗಳು ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಿವೆ.
ಏಪ್ರಿಲ್ 22 ರಂದು 26 ನಾಗರಿಕರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚುಕೋರರೆಂದು ಶಂಕಿಸಲಾಗಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಪೋಸ್ಟರ್ಗಳನ್ನು ಭದ್ರತಾ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದ ರಸ್ತೆಗಳಲ್ಲಿ ಹಾಕಿದ್ದಾರೆ. ‘
'ಭಯೋತ್ಪಾದನೆ ಮುಕ್ತ ಕಾಶ್ಮೀರ' ಎಂಬ ಸಂದೇಶವನ್ನು ಹೊಂದಿರುವ ಈ ಪೋಸ್ಟರ್ಗಳು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿವೆ. ಪೋಸ್ಟರ್ಗಳಲ್ಲಿ ಭಯೋತ್ಪಾದಕರ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿದೆ.
ವಿಮಾನಗಳ ರದ್ದು
ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ತಿಳಿಯಾದ ಹೊರತಾಗಿಯೂ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಮಂಗಳವಾರ (ಮೇ 13) ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಸೇರಿದಂತೆ ಕೆಲವು ಗಡಿ ನಗರಗಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿವೆ. ಪ್ರಯಾಣಿಕರ ಸುರಕ್ಷತೆಯೇ ಮುಖ್ಯ ಕಾರಣ ಎಂದು ಸಂಸ್ಥೆಗಳು ತಿಳಿಸಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅವು ಹೇಳಿವೆ.
ಈ ನಡುವೆ, "ಆಪರೇಷನ್ ಸಿಂದೂರ್" ಕಾರ್ಯಾಚರಣೆಯ ಕುರಿತು ಸೋಮವಾರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಭಾರತವು ಪರಮಾಣು ಬೆದರಿಕೆಗಳಿಗೆ ಜಗ್ಗುವುದಿಲ್ಲ ಮತ್ತು ಭಯೋತ್ಪಾದನೆಯೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಆಪರೇಷನ್ ಸಿಂದೂರ್ ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿಯಾಗಿದ್ದು, ಇದು ಕೇವಲ ತಾತ್ಕಾಲಿಕ ವಿರಾಮವಷ್ಟೇ. ಮುಂದಿನ ಕ್ರಮಗಳು ಪಾಕಿಸ್ತಾನದ ವರ್ತನೆಯನ್ನು ಅವಲಂಬಿಸಿರುತ್ತವೆ" ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಬುದ್ಧಿಮಾತನ್ನು ಹೇಳಿದ ಮೋದಿ, "ನೀವು ಪೋಷಿಸುತ್ತಿರುವ ಭಯೋತ್ಪಾದಕರು ಒಂದು ದಿನ ನಿಮ್ಮನ್ನೇ ನಾಶ ಮಾಡುತ್ತಾರೆ. ನಿಮಗೆ ಬದುಕುವ ಆಸೆ ಇದ್ದರೆ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ" ಎಂದಿದ್ದಾರೆ. ಭಯೋತ್ಪಾದನೆಗೆ ಬೆಂಬಲ ನೀಡುವ ಸರ್ಕಾರ ಮತ್ತು ಭಯೋತ್ಪಾದಕರನ್ನು ಭಾರತವು ಬೇರೆ ಬೇರೆಯಾಗಿ ಪರಿಗಣಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಯಾವುದೇ ತಪ್ಪಾದ ನಡೆಯು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅವರು ನುಡಿದಿದ್ದಾರೆ.
"ಇದು ಯುದ್ಧದ ಯುಗವಲ್ಲ, ಆದರೆ ಭಯೋತ್ಪಾದನೆಯ ಯುಗವೂ ಅಲ್ಲ" ಎಂದು ಹೇಳಿದ ಮೋದಿ, ಪಾಕಿಸ್ತಾನದ ಎಂಟು ವಾಯುನೆಲೆಗಳಿಗೆ ಹಾನಿಯಾದ ನಂತರ ಶಾಂತಿಗಾಗಿ ಮನವಿ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯವನ್ನು ಶ್ಲಾಘಿಸಿದರು.
ಅಲ್ಲದೆ, ಪ್ರಧಾನಮಂತ್ರಿಗಳು, "ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆದರೂ ಅದು ಕೇವಲ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ" ಎಂದು ಸ್ಪಷ್ಟಪಡಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಸಂಘರ್ಷವು ಪರಮಾಣು ಯುದ್ಧಕ್ಕೆ ತಿರುಗಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರು ಸಂಘರ್ಷ ಮುಂದುವರೆದರೆ ಉಭಯ ದೇಶಗಳೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದಿದ್ದರು.
ಮೋದಿ ಅವರು "ಪಾಕಿಸ್ತಾನವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೋರಿತು. ಆದರೆ, ಅವರು ತಮ್ಮ ದುಷ್ಕೃತ್ಯಗಳನ್ನು ನಿಲ್ಲಿಸುವ ಭರವಸೆ ನೀಡಿದ ನಂತರವೇ ಭಾರತವು ಈ ಮನವಿಯನ್ನು ಪರಿಗಣಿಸಿತು" ಎಂದು ತಿಳಿಸಿದರು. "ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಇದು ಭಾರತದ ಸಂಕಲ್ಪವನ್ನು ಜಗತ್ತಿಗೆ ತೋರಿಸಿದೆ. ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಭಯಾನಕ ಭಯೋತ್ಪಾದಕರನ್ನು ಕೊಲ್ಲಲಾಗಿದೆ" ಎಂದು ಅವರು ಹೇಳಿದರು. "ಪಾಕಿಸ್ತಾನವು ನಮ್ಮ ಸಹೋದರಿಯರ ಕುಂಕುಮವನ್ನು ಅಳಿಸಿತು. ನಾವು ಪಾಕಿಸ್ತಾನದಲ್ಲಿನ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನೇ ನಾಶಪಡಿಸಿದೆವು" ಎಂದು ಹೇಳಿದ ಅವರು, ಸಶಸ್ತ್ರ ಪಡೆಗಳ ಈ ಧೈರ್ಯವನ್ನು ದೇಶದ ಮಹಿಳೆಯರಿಗೆ ಅರ್ಪಿಸಿದರು.
Live Updates
- 13 May 2025 12:02 PM IST
ಪಹಲ್ಗಾಮ್ ದಾಳಿ: ಕಾರ್ಗಿಲ್ ಮಾದರಿಯ ವಿಶ್ಲೇಷಣೆಗೆ ಕಾಂಗ್ರೆಸ್ ಆಗ್ರಹ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ‘ಎಕ್ಸ್’ ಪೋಸ್ಟ್ನಲ್ಲಿ, "ಕಾರ್ಗಿಲ್ ಯುದ್ಧ ಮುಗಿದ ಮೂರು ದಿನಗಳ ನಂತರ, 1999ರ ಜುಲೈ 29ರಂದು ವಾಜಪೇಯಿ ಸರ್ಕಾರವು ಕಾರ್ಗಿಲ್ ವಿಮರ್ಶಾ ಸಮಿತಿಯನ್ನು ರಚಿಸಿತ್ತು. ಭಾರತ- ಪಾಕ್ ನಡುವೆ ಸಂಧಾನ ಮಾಡಿದ್ದು ನಾವು ಎಂದು ಟ್ರಂಪ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
- 13 May 2025 11:41 AM IST
ಶೋಪಿಯಾನ್ನಲ್ಲಿ ಭದ್ರತಾ ಪಡೆಗಳು- ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ
ಕಳೆದ 11 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಎನ್ಕೌಂಟರ್ ಇದಾಗಿದೆ. ಭಾರತ ಮತ್ತು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ 'ಆಪರೇಷನ್ ಸಿಂದೂರ್' ನಂತರ ಚಕಮಕಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- 13 May 2025 11:32 AM IST
ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಇನ್ನೂ ತೆರೆಯದ ಶಾಲೆಗಳು. ಬ್ಲ್ಯಾಕ್ಔಟ್ ಮುಂದುವರಿಕೆ
ಪಂಜಾಬ್ನ ಗಡಿ ಭಾಗದ ಐದು ಜಿಲ್ಲೆಗಳಾದ ಅಮೃತಸರ, ಪಠಾಣ್ಕೋಟ್, ಫಾಜಿಲ್ಕಾ, ಫಿರೋಜ್ಪುರ ಮತ್ತು ತಾರನ್ ತಾರನ್ನಲ್ಲಿ ಮಂಗಳವಾರ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸೋಮವಾರ ರಾತ್ರಿ ಅಮೃತಸರ ಹಾಗೂ ಹೊಶಿಯಾರ್ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
- 13 May 2025 9:36 AM IST
ಭಾರತ-ಪಾಕ್ ಸಂಘರ್ಷದ ವೇಳೆ ಭಾರತ, ಅಮೆರಿಕದ ಉನ್ನತ ನಾಯಕರ ನಡುವಿನ ಮಾತುಕತೆಯಲ್ಲಿ ವ್ಯಾಪಾರದ ಉಲ್ಲೇಖವಿಲ್ಲ
ಭಾರತ-ಪಾಕಿಸ್ತಾನ ಸೈನಿಕ ಸಂಘರ್ಷದ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕದ ಉನ್ನತ ನಾಯಕರ ನಡುವಿನ ಮಾತುಕತೆಯಲ್ಲಿ ವ್ಯಾಪಾರದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ಸ್ಪಷ್ಟಪಡಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತ ಮತ್ತು ಪಾಕಿಸ್ತಾನದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸುವ ಬೆದರಿಕೆಯ ಮೂಲಕ ಎರಡೂ ದೇಶಗಳನ್ನು ಶತ್ರುತ್ವವನ್ನು ನಿಲ್ಲಿಸಲು ಒತ್ತಾಯಿಸಿದ್ದೇನೆ ಎಂದು ಹೇಳಿಕೊಂಡ ನಂತರ ಈ ಸ್ಪಷ್ಟನೆ ಹೊರಬಿದ್ದಿದೆ.
- 13 May 2025 9:25 AM IST
ಮೇ 19 ರಂದು ಥರೂರ್ ಸಮಿತಿಗೆ ಪಾಕಿಸ್ತಾನದ ಪರಿಸ್ಥಿತಿ ಕುರಿತು ಮಾಹಿತಿ ನೀಡಲಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಮೇ 19 ರಂದು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ಪಾಕಿಸ್ತಾನದೊಂದಿಗಿನ ಪ್ರಸ್ತುತ ಪರಿಸ್ಥಿತಿಯ ಕುರಿತು ವಿವರವಾದ ಮಾಹಿತಿ ನೀಡಲಿದ್ದಾರೆ. ಸಮಿತಿಯ ಅಧ್ಯಕ್ಷರೂ ಹಾಗೂ ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ಥರೂರ್ ಅವರು ಪಿಟಿಐಗೆ ಈ ವಿಷಯವನ್ನು ತಿಳಿಸಿದ್ದಾರೆ. ಭಾರತವು ಪಾಕಿಸ್ತಾನದ ಭಯೋತ್ಪಾದನಾ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಉಂಟಾದ ಉದ್ವಿಗ್ನತೆ ಮತ್ತು ಎರಡೂ ದೇಶಗಳು ಸೈನಿಕ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿ ನಂತರ ಗುಂಡಿನ ಚಕಮಕಿಯನ್ನು ನಿಲ್ಲಿಸಲು ಒಪ್ಪಿಕೊಂಡಿರುವ ಬೆಳವಣಿಗೆಗಳ ಕುರಿತು ವಿದೇಶಾಂಗ ಕಾರ್ಯದರ್ಶಿಗಳು ಸಮಿತಿಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಈ ಹಿಂದೆ ಕೂಡ ಬಾಂಗ್ಲಾದೇಶ ಸೇರಿದಂತೆ ಭಾರತದ ನೆರೆಯ ರಾಷ್ಟ್ರಗಳ ಬೆಳವಣಿಗೆಗಳು ಮತ್ತು ಕೆನಡಾದೊಂದಿಗಿನ ಸಂಬಂಧಗಳ ಕುರಿತು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಾ ಬಂದಿದ್ದಾರೆ. ಮೇ 19 ರಂದು ನಡೆಯಲಿರುವ ಈ ಸಭೆಯಲ್ಲಿ ಪಾಕಿಸ್ತಾನದೊಂದಿಗಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಅವರ ವಿವರಣೆಯು ಮಹತ್ವದ್ದಾಗಿರಲಿದೆ.