Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ
x

Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮೀಸಲಾತಿಯನ್ನು ಶೇ.32ರಿಂದ ಶೇ.51ಕ್ಕೆ ಏರಿಕೆ ಮಾಡುವ ಇರಾದೆಯನ್ನೂ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಬಹುದು.


ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ (ಏಪ್ರಿಲ್​ 17ರಂದು) ಮೂರು ತಾಸುಗಳ ಕಾಲ (4 pm to 7 pm) ನಡೆದು, ಬಿಸಿಯೇರಿದ ಚರ್ಚೆಗಳ ಬಳಿಕ ಅಂತ್ಯಗೊಂಡಿದೆ. ಆದರೆ, ಯಾವುದೇ ನಿರ್ಧಾರ ಕೈಗೊಳ್ಳದೆ ಸಭೆಯನ್ನು ಮುಂದೂಡಲಾಗಿದೆ.

ಜಾತಿಗಣತಿ ವರದಿಯ ದತ್ತಾಂಶಗಳ ಬಗ್ಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ವರದಿ ಕುರಿತು ಚರ್ಚೆ ತೀವ್ರ ಕುತೂಹಲ ಮೂಡಿಸಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ದತ್ತಾಂಶದ ಕುರಿತು ಸಚಿವರು ಅಭಿಪ್ರಾಯ ಮಂಡಿಸಿದರು. ಆದರೆ, ಎಲ್ಲ ಸಚಿವರು ಅಭಿಪ್ರಾಯ ಮಂಡನೆಗೆ ಸಮಯಾವಕಾಶ ಸಿಗದ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ದಲಿತರು, ಹಿಂದುಳಿದವರು, ಮುಸ್ಲಿಮರು ಸೇರಿದಂತೆ ಎಲ್ಲ ಜಾತಿಗಳ ಜನಸಂಖ್ಯೆ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ವರದಿ ಕುರಿತು ಪರ ಹಾಗೂ ವಿರೋಧ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಹೈಕಮಾಂಡ್ ಗಮನಕ್ಕೆ ತಂದು ಆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದ ಎಂದು ಮೂಲಗಳು ತಿಳಿಸಿವೆ.

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಸಂಪುಟ ಸಭೆಯಲ್ಲಿ ಎಲ್ಲ ಸಮುದಾಯಗಳ ಸಾಧಕ-ಬಾಧಕ ಕುರಿತು ಚರ್ಚೆ ನಡೆಸಲಾಗಿದೆ. ವಿಸ್ತೃತ ಚರ್ಚೆ ಅಗತ್ಯವಾಗಿರುವುದರಿಂದ ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವರದಿಯ ಚರ್ಚೆ ಅಪೂರ್ಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯ ಮುಖ್ಯವಾಗಿರುತ್ತದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಚರ್ಚೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ವರದಿಯ ಪ್ರತಿ ಎಲ್ಲಾ ಸಚಿವರಿಗೆ ಲಭ್ಯವಾಗಿತ್ತು. ಅದರ ಆಧಾರದಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಲು ಎಲ್ಲಾ ಸಚಿವರು ವಿಶೇಷ ಸಚಿವ ಸಂಪುಟ ಸಭೆಗೆ ಆಗಮಿಸಿದ್ದರು. ಮುಖ್ಯಮಂತ್ರಿ ಆರಂಭಿಕ ಮಾತುಗಳ ಬಳಿಕ ಸಚಿವರು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯ ಮಂಡಿಸಿದರು.

ವಿಶೇಷ ಸಂಪುಟ ಸಭೆಯಲ್ಲಿ ಎಲ್ಲ ಸಮುದಾಯಗಳ ಸಚಿವರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಿದ್ದಾರೆ. ಬಳಿಕ ಯಾವುದೇ ನಿರ್ಧಾರಕ್ಕೆ ಬರದೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿಲುವು ಪ್ರಕಟಿಸುವ ನಿರ್ಧಾರ ಕ ಗೊಳ್ಳಲಾಗಿದೆ.

ಜಾತಿಗಣತಿ ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿ ರಚಿಸುವುದು; ಮೂರು ಇಲ್ಲವೇ ಆರು ತಿಂಗಳ ಕಾಲ ಅವಧಿಯೋಳಗೆ ಸಂಪುಟ ಉಪಸಮಿತಿಯ ವರದಿ ಪಡೆಯುವುದು; ಅಂಕಿ ಅಂಶಗಳ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸುವುದು; ಜಾತಿಗಣತಿ ಚರ್ಚೆಯ ಬಗ್ಗೆ ವಿಶೇಷ ಅಧಿವೇಶನ ಕರೆಯುವುದು; ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುವುದು.. ಹೀಗೆ ಯಾವುದಾದರೂ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಸಾರ್ವಜನಿಕ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಜಾತಿಗಣತಿ ಚರ್ಚೆಯ ಬಗ್ಗೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಗಳನ್ನು ಸಚಿವರು ಪ್ರತಿನಿಧಿಸುವುದಿಲ್ಲ. ವಿಧಾನ ಸಭೆ ವಿಶೇಷ ಅಧಿವೇಶನ ಕರೆದರೆ, ಅಲ್ಲಿ ಎಲ್ಲ ಶಾಸಕರ ಅಭಿಪ್ರಾಯಗಳನ್ನು ಆಲಿಸಿ, ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶ ಇದೆ ಎನ್ನಲಾಗಿದೆ.

ಕುತೂಹಲ

ಈ ವರದಿಯು ರಾಜ್ಯದ ಜಾತಿಗಳ ಸಂಖ್ಯಾಬಲ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಒಳಗೊಂಡಿರುವ ಹೊರತಾಗಿಯೂ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ತಮ್ಮ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಆ ಸಮುಯಾಯಗಳಿಗೆ ಸೇರಿದ ಮಂತ್ರಿಗಳ ಮೇಲೆ ಒತ್ತಡ ತಂದಿದೆ. ಹೀಗಾಗಿ ಈ ಸಭೆಯ ಕುತೂಹಲ ಮೂಡಿಸಿದೆ.

ಸಮೀಕ್ಷೆಯ ವರದಿ ಜಾರಿಯಾದರೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮೀಸಲಾತಿಯನ್ನು ಶೇ.32ರಿಂದ ಶೇ.51ಕ್ಕೆ ಏರಿಕೆ ಮಾಡುವ ಇರಾದೆಯನ್ನೂ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಬಹುದು.

ಏಪ್ರಿಲ್ 11ರಿಂದು ಜೋರು ಚರ್ಚೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11ರಂದು ಈ ಸಮೀಕ್ಷೆಯ ವರದಿಯನ್ನು ಸಂಪುಟಕ್ಕೆ ಸಲ್ಲಿಸಿತ್ತು. 2015ರಲ್ಲಿ ಎಚ್. ಕಾಂತರಾಜ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಆಧಾರದ ಮೇಲೆ ತಯಾರಾದ ಈ ವರದಿಯು ರಾಜ್ಯದ 1,821 ಜಾತಿಗಳನ್ನು ಗುರುತಿಸಿದ್ದು, ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳ ಸಂಖ್ಯಾಬಲವು ಸಾಂಪ್ರದಾಯಿಕ ನಿರೀಕ್ಷೆಗಳಿಗಿಂತ ಕಡಿಮೆ ಇದೆ ಎಂದು ತೋರಿಸಿದೆ. ಒಕ್ಕಲಿಗರ ಜನಸಂಖ್ಯೆಯನ್ನು ಶೇ.12.2 ಮತ್ತು ಲಿಂಗಾಯತರ ಜನಸಂಖ್ಯೆಯನ್ನು ಶೇ.13.6 ಎಂದು ಅಂದಾಜಿಸಿದೆ. ಇದು ಸಾಮಾನ್ಯ ಗ್ರಹಿಕೆಯ ಶೇ.17 ಮತ್ತು ಶೇ.15ಕ್ಕಿಂತ ಕಡಿಮೆ ಎನಿಸಿದೆ. ಹೀಗಾಗಿ ಎರಡೂ ಸಮುದಾಯಗಳ ನಾಯಕರು ಸಮೀಕ್ಷೆಗೆ ಒಕ್ಕೊರಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅವರ ಬೇಡಿಕೆಗಳು ಚರ್ಚೆಗೆ ಬರಲಿವೆ.

ಸಮುದಾಯಗಳಿಂದ ವಿರೋಧ

ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಅವರು, ಒಕ್ಕಲಿಗರ ಜನಸಂಖ್ಯೆ ಸುಮಾರು ಒಂದು ಕೋಟಿಯಷ್ಟಿದೆ ಎಂದು ವಾದಿಸಿದ್ದಾರೆ, ವರದಿಯು ಇದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸಿದೆ. ಹೀಗಾಗಿ ವರದಿಯನ್ನು ಸ್ವೀಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ, ಒಕ್ಕಲಿಗ ಸಮುದಾಯದ ಉಪ-ವರ್ಗವಾದ ಕುಂಚಿಟಿಗರನ್ನು ಪ್ರತ್ಯೇಕವಾಗಿ ಪಟ್ಟಿಮಾಡಿರುವುದು ವೊಕ್ಕಲಿಗ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಇದೇ ರೀತಿ, ಲಿಂಗಾಯತ ಮಹಾಸಭಾವು ವರದಿಯನ್ನು "ವೈಜ್ಞಾನಿಕವಲ್ಲ" ಎಂದು ಹೇಳಿದೆ. ಕಾಂಗ್ರೆಸ್‌ ಪಕ್ಷದ ಶಾಸಕರಾಗಿರುವ (ಚನ್ನಗಿರಿ) ಬಸವರಾಜ ಶಿವಗಂಗ ಅವರು ಲಿಂಗಾಯತ ಸಮುದಾಯದ ಏಳು ಸಚಿವರ ವಿರುದ್ಧ ತಮ್ಮ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸದಿರುವ ಆರೋಪ ಮಾಡಿ, ಅವರೆಲ್ಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ

ವರದಿಯು ಕಾಂಗ್ರೆಸ್‌ನ ಒಳಗಿನ ಭಿನ್ನಾಭಿಪ್ರಾಯಗಳನ್ನು ಜಾಹೀರು ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಶಾಸಕರೊಂದಿಗೆ ಏಪ್ರಿಲ್ 15ರಂದು ರಾತ್ರಿ ಸಭೆ ನಡೆಸಿ, ಏಕಮತದಿಂದ ಸಂಪುಟದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ತೀರ್ಮಾನ ಕೈಗೊಂಡಿದ್ದಾರೆ. ಸಭೆಯ ಬಳಿಕ ಅವರು, ಕಾಂಗ್ರೆಸ್ ಸರ್ಕಾರವು 12ನೇ ಶತಮಾನದ ಸಂತ ಬಸವಣ್ಣನವರ "ಸಮಾನ ಜೀವನ, ಸಮಾನ ಪಾಲು" ತತ್ವ ಅನುಸರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವರದಿಯನ್ನು "ದ್ವೇಷದ ಗಣತಿ" ಎಂದು ಕರೆದು, ಇದು ಸಮಾಜವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧಾರ್ಮಿಕ ಒಡಕಿನ ಗುರಿ ಎಂದು ಆರೋಪಿಸಿದ್ದಾರೆ.

ಸಿಎಂ ಭರವಸೆ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದು ಎಂದಿರೆ. "ಇದು ಜಾತಿ ಗಣತಿಯಲ್ಲ, ಸಾಮಾಜಿಕ-ಆರ್ಥಿಕ ಸಮೀಕ್ಷೆ," ಎಂದು ಅವರು ಕಲಬುರಗಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರು, ಸಚಿವರು ವರದಿಯನ್ನು ಅಧ್ಯಯನ ಮಾಡಿ, ಸಲಹೆಗಳೊಂದಿಗೆ ಸಭೆಗೆ ಬರಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ

ಸಂಪುಟ ಸಭೆಯಲ್ಲಿ ಏನಾಗಬಹುದು?

ಇಂದು ನಡೆಯುವ ಸಭೆಯು ವರದಿಯ ಜಾರಿಯ ಭವಿಷ್ಯ ನಿರ್ಧರಿಸಲಿದೆ. ಮೂಲಗಳ ಪ್ರಕಾರ, ಸರ್ಕಾರವು ಸಂಪುಟ ಉಪಸಮಿತಿ ಅಥವಾ ತಜ್ಞರ ಸಮಿತಿ ರಚಿಸಿ ವರದಿಯನ್ನು ಮತ್ತಷ್ಟು ಪರಿಶೀಲಿಸುವ ಸಾಧ್ಯತೆಯಿದೆ. ವರದಿಯನ್ನು ಸಾರ್ವಜನಿಕಗೊಳಿಸಿ, ಜನರಿಂದ ಸಲಹೆಗಳನ್ನು ಕೋರಲು ಮತ್ತು ತಪ್ಪುಗಳಿದ್ದರೆ ಸರಿಪಡಿಸಲು ಚಿಂತನೆ ನಡೆಸಬಹುದು.

Live Updates

  • 17 April 2025 1:11 PM IST

    ವರದಿ ಜಾರಿಗೆ ಸಿಎಂ ಆತುರಪಡುತ್ತಿಲ್ಲ; ಅಧ್ಯಯನಕ್ಕೆ ಸಮಯ ಕೇಳುವ ನಿರೀಕ್ಷೆ

    ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತಂತೆ ಇಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಆತುರ ತೋರುವುದಿಲ್ಲ. ಬದಲಿಗೆ ವರದಿ ಅಧ್ಯಯನಕ್ಕೆ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

    ಮತ್ತೊಂದೆಡೆ ಜಾತಿಗಣತಿ ವರದಿ ಬಹಿರಂಗದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಿ, ಅದರಿಂದ ಎದುರಾಗುವ ಪರಿಣಾಮಗಳನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ ಎಂಬ ಮುನ್ಸೂಚನೆಗಳು ಕಾಣುತ್ತಿವೆ ಎಂದು ಸಿಎಂ ಆಪ್ತರೊಬ್ಬರು ತಿಳಿಸಿದ್ದಾರೆ. ಇದರಿಂದ ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆ ತೀವ್ರ ಕುತೂಹಲ ಮೂಡಿಸಿದೆ.

  • 17 April 2025 1:03 PM IST

    ಶಾಮನೂರು ಬೆದರಿಕೆಗೆ ಎಂ.ಬಿ. ಪಾಟೀಲ್‌ ಉತ್ತರ

    ಶಾಮನೂರು ಸಿಎಂಗೆ ಎಚ್ಚರಿಕೆ‌ ನೀಡಿದ ವಿಚಾರ

    ಸಚಿವ ಎಂಬಿ.ಪಾಟೀಲ್ ಹೇಳಿಕೆ

    ಆ ರೀತಿ ಯಾಕೆ ಹೇಳಿದ್ರು ಗೊತ್ತಿಲ್ಲ.

    ಜಾತಿಗಣತಿಯನ್ನು ಒಪ್ಪಿಕೊಂಡರೆ  ಹಾಗೂ ಲಿಂಗಾಯತರನ್ನು ಮತ್ತು ಒಕ್ಕಲಿಗರನ್ನು ಎದುರುಹಾಕಿಕೊಂಡರೆ ಸರ್ಕಾರ ಬಿದ್ದುಹೋಗುತ್ತದೆ ಎಂಬ ಲಿಂಗಾಯತ ಮುಖಂಡ ಹಾಗೂ ಲಿಂಗಾಯತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಎಚ್ಚರಿಕೆ ಸಂಬಂಧ ಲಿಂಗಾಯತ ಮುಖಂಡರೇ ಆದ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

    "ಇವತ್ತು ಕ್ಯಾಬಿನೆಟ್ ಮೀಟಿಂಗ್ ಚರ್ಚೆ ಯಾಗುತ್ತೆ. ಸಚಿವರು ಸಮಾಜದಲ್ಲಿ‌ ಇರುವ ತಪ್ಪುಕಲ್ಪನೆ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.

  • 17 April 2025 12:58 PM IST

    ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ; ಚೆಲುವರಾಯಸ್ವಾಮಿ

    ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ. ಒಕ್ಕಲಿಗ ಸಂಘ ಈ ಬಗ್ಗೆ  ಯಾಕೆ ಪ್ರತಿಭಟನೆ ಮಾಡಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗುರುವಾರ  ಕ್ಯಾಬಿನೆಟ್ ಸಭೆ ನಡೆಯುತ್ತದೆ. ಈ ಬಗ್ಗೆ ಅಂಗೀಕಾರ ಮಾಡಿದ ಮೇಲಷ್ಟೇ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು. 

  • 17 April 2025 12:20 PM IST

    ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ?

    ಜಾತಿಗಣತಿ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ಬಂದಿರುವ ವಿರೋಧದ ಕುರಿತಂತೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಜಾತಿಗಣತಿ ಬಗ್ಗೆ ಈಗಾಗಲೇ ಯಾವುದೇ ನಿರ್ಧಾರವಾಗಿಲ್ಲ. ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ. ತೀರ್ಮಾನ ಆದ ಮೇಲೆ ವಿರೋಧ ಮಾಡಬೇಕು ತಾನೆ? ಇವತ್ತು ನಮ್ಮ ಕ್ಯಾಬಿನೆಟ್ ಸಭೆ ಇದೆ. ಅದರಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. 

  • 17 April 2025 11:48 AM IST

    ನೊಳಂಬ ಲಿಂಗಾಯತ ಸಮುದಾಯದಿಂದ ಸುದ್ದಿಗೋಷ್ಟಿ

    ಜಾತಿ‌ಜನಗಣತಿ ವಿಚಾರವಾಗಿ ನೊಳಂಬ ಲಿಂಗಾಯತ ರಾಜ್ಯಾಧ್ಯಕ್ಷ ‌ಬಿಕೆ ಚಂದ್ರಶೇಖರ್ ಅವರಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ‌ ಸುದ್ದಿಗೋಷ್ಟಿ ನಡೆಯುತ್ತಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ವ್ಯಾಪಕವಾಗಿ ನೊಳಂಬ ಲಿಂಗಾಯತ ಸಮುದಾಯ ವಾಸವಿದೆ. ನಮ್ಮದು ರೈತಾಪಿ ಸಮುದಾಯ. ನಾವು 20.63 ಲಕ್ಷ ಜನಸಂಖ್ಯೆಯ ಸಮುದಾಯವಾದರೂ, ವರದಿಯಲ್ಲಿ ನಮ್ಮ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಬಿಕೆ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು.

  • 17 April 2025 10:15 AM IST

    ಜಾತಿ ಗಣದಿ ವರದಿ ಬೆನ್ನಲ್ಲೇ ವಿಪಕ್ಷಗಳ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಸತತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. 2ಎ ಪ್ರವರ್ಗ ಮೀಸಲಾತಿಯಡಿ 101 ಜಾತಿಗಳ ಪೈಕಿ ಕೆಲವರಿಗಷ್ಟೇ ಅನುಕೂಲ ಆಗಿ, ಮಿಕ್ಕವರಿಗೆ ಅನ್ಯಾಯ ಆಗಿದೆ ಎಂದು ಗಂಭೀರ ಆರೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿದ್ದಾರೆ. 

Read More
Next Story