
Pahalgam LIVE:: ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳ ಮೇಲೆ ನಿಷೇಧ ಹೇರಿದ ಭಾರತ
ಭಾರತವು ಈ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಈ ಯೂಟ್ಯೂಬ್ ಚಾನೆಲ್ಗಳ ನಿಷೇಧವೂ ಸೇರಿದೆ.
ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಭಾರತ ಸರ್ಕಾರ 16 ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ಗಳ ಮೇಲೆ ನಿಷೇಧ ಹೇರಿದೆ. ಈ ಚಾನೆಲ್ಗಳಲ್ಲಿ ಡಾನ್ ನ್ಯೂಸ್, ಸಮಾ ಟಿವಿ, ಆರಿ ನ್ಯೂಸ್, ಜಿಯೋ ನ್ಯೂಸ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳು ಸೇರಿವೆ.
ಈ ಚಾನೆಲ್ಗಳು ಭಾರತದಲ್ಲಿ ಸಾಮಾಜಿಕ ಸೂಕ್ಷ್ಮ ವಿಷಯಗಳನ್ನು ಪ್ರಸಾರ ಮಾಡುತ್ತಿವೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇವು ಭಾರತ, ಭಾರತೀಯ ಸೇನೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಮಾಹಿತಿ, ದ್ವೇಷಪೂರಿತ ಆರೋಪಗಳು ಮತ್ತು ಮಿಥ್ಯ ಕತೆಗಳನ್ನು ಹರಡುತ್ತಿವೆ ಎಂದು ಗೃಹ ಇಲಾಖೆ ಶಿಫಾರಸು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ನಂಟು ಹೊಂದಿರುವ ರೆಸಿಸ್ಟೆನ್ಸ್ ಫ್ರಂಟ್ ಜವಾಬ್ದಾರಿ ಹೊತ್ತುಕೊಂಡಿದೆ. ಈ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಗಣನೀಯವಾಗಿ ಹೆಚ್ಚಾಗಿದೆ.
ಭಾರತವು ಈ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಈ ಯೂಟ್ಯೂಬ್ ಚಾನೆಲ್ಗಳ ನಿಷೇಧವೂ ಸೇರಿದೆ.
ಚಾನೆಲ್ಗಳಿಗೆ ದೊಡ್ಡ ಪ್ರಮಾಣದ ಚಂದಾದಾರರು
ಈ ಚಾನೆಲ್ಗಳು ಭಾರತದಲ್ಲಿ ಗಣನೀಯ ಪ್ರಮಾಣದ ವೀಕ್ಷಕರನ್ನು ಹೊಂದಿವೆ. ಇವುಗಳಲ್ಲಿ ಪ್ರಸಾರವಾಗುವ ವಿಷಯವು ರಾಷ್ಟ್ರದ ಆಂತರಿಕ ಭದ್ರತೆಗೆ ಸವಾಲಾಗಿತ್ತು ಎಂದು ಸರ್ಕಾರ ತಿಳಿಸಿದೆ. ಈ ನಿಷೇಧವನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69A ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ, ಈ ಸೆಕ್ಷನ್ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವ ವಿಷಯವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ
ನಿಷೇಧವು ಸಾಮಾಜಿಕ ಮಾಧ್ಯಮಗಳಲ್ಲಿ. ವಿಶೇಷವಾಗಿ ಎಕ್ಸ್ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಕ್ರಮವನ್ನು "ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್" ಎಂದು ಬಣ್ಣಿಸಿದ್ದಾರೆ, ಇದು ಭಾರತದ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಕೈಗೊಂಡ ದಿಟ್ಟ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳು, ವಿಶೇಷವಾಗಿ ಡಾನ್ ಮತ್ತು ಜಿಯೋ ನ್ಯೂಸ್, ಪಹಲ್ಗಾಮ್ ದಾಳಿಯ ವಿಚಾರದಲ್ಲಿ ಭಾರತದ ಆರೋಪಗಳನ್ನು ತಿರಸ್ಕರಿಸಿವೆ. ಆರಿ ನ್ಯೂಸ್ ಮತ್ತು ಸಮಾ ಟಿವಿಗಳು ಆಕ್ರಮಣಕಾರಿ ಧೋರಣೆಯನ್ನು ಅನುಸರಿಸಿವೆ, ಭಾರತವನ್ನು ಈ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿವೆ. ಆದರೆ, ಈ ನಿಷೇಧದಿಂದಾಗಿ ಈ ಚಾನೆಲ್ಗಳು ಭಾರತದಲ್ಲಿ ತಮ್ಮ ವೀಕ್ಷಕರನ್ನು ಕಳೆದುಕೊಂಡಿವೆ, ಇದು ಅವುಗಳ ಆದಾಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
Live Updates
- 28 April 2025 3:57 PM IST
ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
"ದೇಶದ ಹೆಮ್ಮೆಗೆ ಧಕ್ಕೆಯಾದಾಗ, ನೀವು (ಪ್ರಧಾನಿ ಮೋದಿ) ಬಿಹಾರದಲ್ಲಿ ಚುನಾವಣಾ ಭಾಷಣ ಮಾಡಿರುವುದ ದೇಶದ ದೌರ್ಭಾಗ್ಯ" ಎಂದು ಅವರು ಇಲ್ಲಿ 'ಸಂವಿಧಾನ್ ಬಚಾವೋ' ರ್ಯಾಲಿಯನ್ನು ಉದ್ದೇಶಿಸಿ ಹೇಳಿದ್ದಾರೆ.
"ಎಲ್ಲಾ ಪಕ್ಷಗಳ ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಪ್ರಧಾನಿ ಮೋದಿ ಆ ಸಭೆಗೆ ಬರದಿರುವುದು ಬೇಸರದ ಸಂಗತಿ. ಬಿಹಾರ ಬಹಳ ದೂರದಲ್ಲಿತ್ತೇ? ಪ್ರಧಾನಿಯವರು ಸರ್ವಪಕ್ಷ ಸಭೆಗೆ ಬಂದು ಯೋಜನೆಯನ್ನು ವಿವರಿಸಬೇಕಿತ್ತು. ಅವರಿಗೆ ನಮ್ಮಿಂದ ಏನು ಸಹಾಯ ಬೇಕು?" ಎಂದು ಅವರು ಪ್ರಶ್ನಿಸಿದರು.
ಪ್ರಧಾನಿಯ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, "ಮೋದಿ ಹಣದುಬ್ಬರ ಮತ್ತು ನಿರುದ್ಯೋಗವನ್ನು ನೀಡಿದರು. ಅಂತಹ ಜನರು ದೇಶವನ್ನು ದುರ್ಬಲಗೊಳಿಸುತ್ತಾರೆ. 56 ಇಂಚಿನ ಎದೆ ಕುಗ್ಗಿದೆ ಎಂದು ಹೇಳಿದ್ದಾರೆ.
- 28 April 2025 1:31 PM IST
ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಧೈರ್ಯವಿಲ್ಲ: ಪನ್ನು
ಭಾರತವು ಯಾವುದೇ ಕಾರಣಕ್ಕೂ ಪಾಕಿಸ್ತಾನದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹೇಳಿದ್ದಾನೆ. ಭಾರತೀಯ ಸೇನೆ ಪಂಜಾಬ್ ಮೂಲಕ ಹಾದುಹೋಗಲು ಮತ್ತು ಪಾಕಿಸ್ತಾನದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ, ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಧೈರ್ಯವಿಲ್ಲ. ನಾವು, 20 ಮಿಲಿಯನ್ ಸಿಖ್ಖರು, ಪಾಕಿಸ್ತಾನದೊಂದಿಗೆ ಬಂಡೆಯಂತೆ ನಿಂತಿದ್ದೇವೆ. ಭಾರತದಲ್ಲಿ ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
- 28 April 2025 12:22 PM IST
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ| ನಿರ್ಣಯ ಅಂಗೀಕಾರ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದೆ. ಈ ಘಟನೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮಾನವೀಯತೆಯ ಮೇಲಿನ ಆಕ್ರಮಣವೆಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಭಯೋತ್ಪಾದಕರ ಕಾರ್ಯಚಟುವಟಿಕೆಗಳನ್ನು ಎಲ್ಲ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ಖಂಡಿಸಿದರು. ಶಾಂತಿ ಹಾಗೂ ಸಾಮರಸ್ಯವನ್ನು ಕಾಯ್ದುಕೊಳ್ಳುವ ಮಹತ್ವವನ್ನು ಈ ವೇಳೆ ಸಾರಲಾಯಿತು.