
ಚಿನ್ನಸ್ವಾಮಿ ಕಾಲ್ತುಳಿತ ದುರಂತದ ವೇಳೆ 'ದೋಸೆ ತಿಂದ' ಆರೋಪಕ್ಕೆ ಸದನದಲ್ಲಿ ಭಾವುಕರಾಗಿ ಉತ್ತರಿಸಿದ ಸಿಎಂ
ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಸತ್ತ ಘಟನೆಯನ್ನು ನಾನು ನೋಡಿಯೇ ಇರಲಿಲ್ಲ ಎಂದು ಸಿಎಂ ಸದನದಲ್ಲಿ ಹೇಳಿದರು.
ರಾಜ್ಯವನ್ನು ಬೆಚ್ಚಿಬೀಳಿಸಿದ ಚಿನ್ನಸ್ವಾಮಿ ಸ್ಟೇಡಿಯಮ್ ಕಾಲ್ತುಳಿತ ದುರಂತದ ಕುರಿತು ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದರ ಜೊತೆಗೆ, ವೈಯಕ್ತಿಕ ಟೀಕೆಗಳಿಗೆ ಭಾವುಕರಾಗಿ ಉತ್ತರ ನೀಡಿದರು. "ಹೌದು, ನಾನು ದೋಸೆ ತಿನ್ನಲು ಹೋಗಿದ್ದು ನಿಜ. ನನ್ನ ಮೊಮ್ಮಗನಿಗಾಗಿ ಹೋಗಿದ್ದೆ," ಎಂದು ಅವರು ನೀಡಿದ ಸ್ಪಷ್ಟನೆ ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.
ತಮ್ಮ ಮೇಲಿನ 'ದೋಸೆ ತಿಂದ' ಆರೋಪಕ್ಕೆ ವೈಯಕ್ತಿಕ ನೆಲೆಯಲ್ಲಿ ಉತ್ತರಿಸಿದ ಸಿಎಂ, "ಆ ಘಟನೆ ನಡೆದಾಗ ನಾನು ದೋಸೆ ತಿನ್ನಲು ಹೋಗಿದ್ದೆ ಎಂದು ಆರೋಪಿಸಿದ್ದಾರೆ. ಹೌದು, ನಾನು ಹೋಗಿದ್ದು ನಿಜ, ಸುಳ್ಳು ಹೇಳುವುದಿಲ್ಲ. ನನ್ನ ಮೊಮ್ಮಗ ಹಿಂದಿನ ದಿನವಷ್ಟೇ ಲಂಡನ್ನಿಂದ ಬಂದಿದ್ದ. 'ತಾತ, ದೋಸೆ ತಿನ್ನಲು ಹೋಗೋಣ' ಎಂದು ಕೇಳಿದ. ಹಾಗಾಗಿ ಅವನನ್ನು ಕರೆದುಕೊಂಡು ಹೋಗಿದ್ದೆ. ಇದನ್ನು ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ," ಎಂದು ಸ್ಪಷ್ಟಪಡಿಸಿದರು.
"ಸಂಜೆ 5.30ಕ್ಕೆ ಸಚಿವ ಪೊನ್ನಣ್ಣ ಅವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದಾಗಲೇ ಘಟನೆಯ ಗಂಭೀರತೆ ಗೊತ್ತಾಗಿದ್ದು. ತಕ್ಷಣ ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದೆ. ಅಷ್ಟರಲ್ಲಾಗಲೇ 11 ಮಂದಿ ಮೃತಪಟ್ಟಿದ್ದರು. ಮನುಷ್ಯತ್ವ ಇರುವ ಯಾರಿಗಾದರೂ ಇಂತಹ ಘಟನೆ ನಡೆದಾಗ ದುಃಖ ಬಂದೇ ಬರುತ್ತದೆ," ಎಂದು ಭಾವುಕರಾಗಿ ನುಡಿದರು.
42 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಘಟನೆ ನೋಡಿಲ್ಲ
ದುರಂತದ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ಸಿದ್ದರಾಮಯ್ಯ, "ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಸತ್ತ ಘಟನೆಯನ್ನು ನಾನು ನೋಡಿಯೇ ಇರಲಿಲ್ಲ. ಈ ಘಟನೆಯಿಂದ ನನಗೂ ಅತೀವ ದುಃಖವಾಗಿದೆ, ಆ ನೋವಿನಿಂದ ನಾನಿನ್ನೂ ಹೊರಬಂದಿಲ್ಲ. ಘಟನೆ ನಡೆದ ದಿನವೇ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಆದರೆ, ಇವರು (ವಿಪಕ್ಷಗಳು) ತಮ್ಮ ಮಾತಿನ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ," ಎಂದು ಆರೋಪಿಸಿದರು.
ಬಿಜೆಪಿ ಪ್ರಶ್ನೆಗಳಿಗೆ ಉತ್ತರ
ಕಾಲ್ತುಳಿತ ದುರಂತದ ಬಗ್ಗೆ ಪ್ರತಿಪಕ್ಷ ಬಿಜೆಪಿ ಮಾಡಿದ ಆರೋಪಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, "ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅನುಭವಿಗಳು, ಅವರು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಮಾತುಗಳನ್ನು ನಾನು ಒಂದೇ ಒಂದು ಪ್ರತಿರೋಧ ತೋರದೆ ಕೇಳಿದ್ದೇನೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ಮುಗಿಬೀಳಲು ನೀವು ಮೊದಲೇ ತಯಾರಾಗಿದ್ದೀರಿ ಎನಿಸುತ್ತದೆ," ಎಂದು ಟೀಕಿಸಿದರು.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಮಾತಿನ ವೈಖರಿಯನ್ನು ಷೇಕ್ಸ್ಪಿಯರ್ ನಾಟಕಕ್ಕೆ ಹೋಲಿಸಿದ ಸಿಎಂ, "ಸುರೇಶ್ ಕುಮಾರ್ ಉತ್ತಮ ಮಾತುಗಾರರು. ಷೇಕ್ಸ್ಪಿಯರ್ ನಾಟಕದಲ್ಲಿ ಬರುವ ಮಾರ್ಕ್ ಆಂಟೋನಿಯಂತೆ ಚಾಣಾಕ್ಷತನದಿಂದ ಮಾತನಾಡುತ್ತಾರೆ," ಎಂದು ಕುಟುಕಿದರು.
ಆರ್. ಅಶೋಕ್ ಅವರು ಮಾಡಿದ ವೈರ್ಲೆಸ್ ಸಂದೇಶದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಅಶೋಕ್ ಅವರು ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾದ ಅಂಶಗಳನ್ನೇ ಇಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಮಾತು ಮತ್ತು ವರದಿಯ ಅಂಶಗಳು ಒಂದೇ ರೀತಿ ಇದ್ದವು," ಎಂದು ತಿರುಗೇಟು ನೀಡಿದರು.
ಸರ್ಕಾರದ ಕ್ರಮಗಳ ಸಮರ್ಥನೆ
ಕಾಲ್ತುಳಿತದ ಬಳಿಕ ರಾಹ್ತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಿಎಂ ಬಲವಾಗಿ ಸಮರ್ಥಿಸಿಕೊಂಡರು. ದುರಂತದ ಬಳಿಕ ತಾವೇ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹಗಳನ್ನು ನೋಡಿ ತೀವ್ರವಾಗಿ ನೊಂದಿದ್ದಾಗಿ ಹೇಳಿಕೊಂಡ ಅವರು, ಘಟನೆಯ ಸತ್ಯಾಸತ್ಯತೆ ತಿಳಿಯಲು ಮ್ಯಾಜಿಸ್ಟೀರಿಯಲ್ ಮತ್ತು ನ್ಯಾಯಾಂಗ ತನಿಖೆ ಎರಡಕ್ಕೂ ತಕ್ಷಣವೇ ಆದೇಶಿಸಿದ್ದಾಗಿ ಸದನಕ್ಕೆ ಸ್ಪಷ್ಟಪಡಿಸಿದರು.
ತನಿಖಾ ಕ್ರಮಗಳ ಬಗ್ಗೆ ಸಿಎಂ ಸ್ಪಷ್ಟನೆ
ವಿಪಕ್ಷ ಶಾಸಕ ಸುರೇಶ್ ಕುಮಾರ್ ಅವರು 'ಸಾವಿಗೆ ಸರ್ಕಾರವೇ ಪ್ರಚೋದನೆ ಮತ್ತು ಕುಮ್ಮಕ್ಕು ನೀಡಿದೆ' ಎಂದು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, "ತನಿಖೆ ನಿಖರವಾಗಿ ನಡೆಯಲಿ ಎಂಬ ಕಾರಣಕ್ಕಾಗಿಯೇ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಿದ್ದೇವೆ," ಎಂದರು.
"ಮ್ಯಾಜಿಸ್ಟ್ರೇಟ್ ತನಿಖೆಗೆ 15 ದಿನಗಳೊಳಗೆ ಹಾಗೂ ಕುನ್ಹಾ ಆಯೋಗಕ್ಕೆ ಒಂದು ತಿಂಗಳೊಳಗೆ ವರದಿ ನೀಡಲು ಸೂಚಿಸಲಾಗಿತ್ತು. ಅದರಂತೆ, ಕುನ್ಹಾ ಅವರು ಜುಲೈ 10ರಂದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಾವು ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ," ಎಂದು ಅವರು ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.
ಬೆಲ್ಲದ್ಗೆ ಕನ್ನಡ ಪಾಠ
ಇದೇ ವೇಳೆ, ಚರ್ಚೆಯ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ಅವರತ್ತ ತಿರುಗಿದ ಸಿಎಂ ಸಿದ್ದರಾಮಯ್ಯ, "ಬೆಲ್ಲದ್, ನಿನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ನಿನ್ನ ತಂದೆ ಮತ್ತು ನಾನು ಗೋಕಾಕ್ ಚಳವಳಿಯಲ್ಲಿ ಒಟ್ಟಿಗೆ ಭಾಗವಹಿಸಿದ್ದೆವು. ಆಗ ನೀನು ಬಹಳ ಚಿಕ್ಕವನಿದ್ದೆ, ಅಥವಾ ಹುಟ್ಟಿದ್ದೀಯೋ ಇಲ್ಲವೋ. ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ," ಎಂದು ಹೇಳುವ ಮೂಲಕ ಕನ್ನಡದ ಬಗ್ಗೆ ಅವರಿಗೆ ಲಘು ಧಾಟಿಯಲ್ಲಿ ಪಾಠ ಮಾಡಿದರು. ಈ ಅನಿರೀಕ್ಷಿತ ಮಾತಿನಿಂದ ಸದನದಲ್ಲಿ ಕೆಲಕಾಲ ನಗೆಯುಕ್ಕಿತು.
Live Updates
- 22 Aug 2025 2:26 PM IST
ತ್ಯಾಜ್ಯ ಮಾಫಿಯಾ ನಿಯಂತ್ರಿಸಲು ಆಡಳಿತ-ಪ್ರತಿಪಕ್ಷಗಳು ವಿಫಲ: ಡಿಕೆಶಿ
ಬೆಂಗಳೂರನ್ನು ಗಾರ್ಬೆಜ್ ಸಿಟಿ ಎಂದು ಶಾಸಕ ಅಶ್ವಥ್ ನಾರಾಯಣ್ ಹೇಳಿದ್ದಾರೆ, ಈ ರೀತಿಯ ಕಸದ ಸಮಸ್ಯೆ ಯಾವ ಕಾಲದಲ್ಲಿಯೂ ಇರಲಿಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಶುಕ್ರವಾರ ಸದನದಲ್ಲಿ ಮಾತನಾಡಿದ ಅವರು, ಮಳೆ ಹೆಚ್ಚಾಗಿ ಬಂದರೆ ದೆಹಲಿ, ಗುಜರಾತ್, ಬಿಹಾರಗಳಲ್ಲಿ ಕಾರುಗಳು ತೆಲಿ ಹೋಗುತ್ತವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಪರವಾಗಿಲ್ಲ. ತ್ಯಾಜ್ಯ ಒಂದು ದೊಡ್ಡ ಮಾಫಿಯಾ, ಆ ಮಾಫಿಯಾವನ್ನು ನಿಯಂತ್ರಿಸಲು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ವಿಫಲವಾಗಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
- 22 Aug 2025 1:45 PM IST
ಬೆಂಗಳೂರು ನಗೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯ
ಬೆಂಗಳೂರು ನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಂದು ರೂಪಾಯಿಯೂ ಅನುದಾನ ನೀಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅನುದಾನ ಇಲ್ಲ ಎಂದು ಯಾರು ಗಾಬರಿಗೊಳ್ಳುವುದು ಬೇಡ. ನಗರದ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಭೇಟಿ ನೀಡಿ ಬಂದಿದ್ದೇನೆ. ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಎಲ್ಲಾ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡೋಣ ಎಂದರು.
- 22 Aug 2025 1:23 PM IST
ನಗರದಲ್ಲಿ 44 ಕಿ.ಮೀ ಉದ್ದದ ಡಬ್ಬಲ್ ಡೆಕ್ಕರ್ ಸೇತುವೆ ನಿರ್ಮಾಣ
ನಗರದಲ್ಲಿ ಡಬ್ಬಲ್ ಡೆಕ್ಕರ್ ಸೇತುವೆಗಳನ್ನು ನಿರ್ಮಿಸಲು ಪ್ರತಿ ಕಿ.ಮೀ 120 ಕೋಟಿ ರೂ. ವೆಚ್ಚವಾಗಲಿದೆ. ಮಹಾನಗರ ಪಾಲಿಕೆ ಹಾಗೂ ಮೆಟೋ ಸಂಸ್ಥೆ ಪಾಲುದಾರಿಕೆಯಲ್ಲಿ 44 ಕಿ.ಮೀ ಸೇತುವೆ ನಿರ್ಮಿಸಲು ಅಂದಾಜು 9,000 ಕೋಟಿ ರೂ. ಖರ್ಚಾಗಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
- 22 Aug 2025 1:15 PM IST
ಬೆಂಗಳೂರು ನಗರ ರಸ್ತೆಗಳ ಗುಂಡಿ ಮುಚ್ಚಲು ಕ್ರಮ: ಡಿಕೆಶಿ
ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕೆಲವು ಕಡೆ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡುವುದರಿಂದ 30ವರ್ಷ ರಸ್ತೆ ಬಾಳಿಕೆ ಬರುತ್ತವೆ. ಗುಂಡಿಗಳ ಪೋಟೋ ತೆಗೆದು ಕಳಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಗುಂಡಿ ಮುಚ್ಚಲು ಹಾಗೂ ವೈಟ್ ಟಾಪಿಂಗ್ ಮಾಡಲು 9,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡದರು.
- 22 Aug 2025 12:54 PM IST
ಆರ್ಸಿಬಿ ದುರಂತಕ್ಕೆ ಸರ್ಕಾರವೇ ಕಾರಣ, ಬಿಜೆಪಿ-ಜೆಡಿಎಸ್ ಸದಸ್ಯರ ಸಭಾತ್ಯಾಗ
ಆರ್ಸಿಬಿ ಬಹಳ ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ. ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲದಿದ್ದರು ಸರ್ಕಾರವೇ ಈ ಕಾರ್ಯಕ್ರಮ ಮಾಡಿತ್ತು ಎಂದು ಆರ್. ಅಶೋಕ್ ಆರೋಪಿಸಿದರು.
ಆದರೂ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ.ಸಿಎಂ ಸಿದ್ದರಾಮಯ್ಯಗೆ ಸ್ವಲ್ಪವೂ ಹೃದಯವಂತಿಕೆ ಇಲ್ಲವೇ, ಘಟನೆ ಆದ ಒಂದು ಗಂಟೆಗೆ ವಿಷಯ ತಿಳಿಯಿತು ಎಂದು ಸಿಎಂ ಹೇಳುತ್ತಾರೆ. ಇದು ಗುಪ್ತಚರ, ಸರ್ಕಾರದ ವಿಫಲತೆಯಲ್ಲವೆ ಎಂದು ಪ್ರಶ್ನಿಸಿದರು.
ಸಿಎಂ ನೀಡಿದ ಉತ್ತರ ನಮಗೆ ಸಮಾದಾನವಾಗಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
- 22 Aug 2025 12:40 PM IST
ಕಾಲ್ತುಳಿತ ದುರಂತ: ಸಿಎಂ ಸಿದ್ದರಾಮಯ್ಯರ ಉತ್ತರಕ್ಕೆ ಆರ್. ಅಶೋಕ್ ಅಕ್ಷೇಪ
ಆರ್ಸಿಬಿ ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನಕ್ಕೆ ನೀಡಿದ ಉತ್ತರದ ಬಗ್ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ವಿದೇಶ ಹಾಗೂ ದೇಶದಲ್ಲಿ ನಡೆದ ದುರಂತದ ಬಗ್ಗೆ ಮಾತನಾಡಿದ ಸಿಎಂ, ಆರ್ಸಿಬಿ ದುರಂತದ ಬಗ್ಗೆ ಕ್ಷಮೆ ಕೇಳಲಿಲ್ಲ ಹಾಗೂ ಸ್ಪಷ್ಟನೆಯನ್ನೂ ನೀಡಿಲ್ಲ. ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದರೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
- 22 Aug 2025 12:31 PM IST
ಕಾಲ್ತುಳಿತ ದುರಂತ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೂ ಕಾರ್ಯಕ್ರಮಕ್ಕೆ ಬರುವಂತೆ ನಾನೇ ಕರೆ ಮಾಡಿ ಆಹ್ವಾನ ನೀಡಿದ್ದೆ. ಆದಿನ ಮಳೆ ಬಂದು ಕಾರ್ಯಕ್ರಮ ಮುಕ್ತಯವಾಗಿತ್ತು. ನಾನು ಅಲ್ಲಿಂದ ಹೊರಟೆ ನಂತರ ಏನಾಯಿತು, ಎಷ್ಟು ಜನ ಮೃತಪಟ್ಟರು ಎಂದು ನನಗೆ ತಿಳಿಯಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ ಎಂದು ಬಿಜೆಪಿ ಆರೋಪಿಸಿದ್ದರು. ನಾವು ಈ ಪ್ರಕರಣದಲ್ಲಿ ಕ್ರಮ ಕೈಗೊಂಡು ಐವರು ಅಧಿಕಾರಿಗಳ ಅಮಾನತು ಮಾಡಿದ್ದೇವೆ. ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.
- 22 Aug 2025 12:21 PM IST
ಸದನದಲ್ಲಿ ಬಿಜೆಪಿ-ಜೆಡಿಎಸ್ ಅವಧಿಯಲ್ಲಿನ ದುರಂತಗಳ ಪ್ರಸ್ತಾಪ, ಗದ್ದಲ
ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ನಡೆದಿರುವ ವಿವಿಧ ಪ್ರಕರಣಗಳನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಚಾಮರಾಜನಗರ ಆಕ್ಸಿಜನ್ ದುರಂತ ನಡೆಯಿತು. ಆಗ 36 ಜನ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ರಾಜೀನಾಮೆ ಕೊಟ್ಟಿದ್ದರೆ ?, ಆಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಡಾ. ಸುಧಾಕರ್ ವಿರುದ್ಧ ನೀವು ಅಬೆಟರ್ ಎಂದು ಕರೆದ್ರಾ? ಎಂದು ಜೋರು ಧ್ವನಿಯಲ್ಲಿ ಶಾಸಕ ಸುರೇಶ್ ಕುಮಾರ್ನನ್ನು ಪ್ರಶ್ನಿಸಿದರು.
2006ರಲ್ಲಿ ವರನಟ ಡಾ. ರಾಜ್ ಕುಮಾರ್ ಮೃತಪಟ್ಟಾಗ ಸರ್ಕಾರ ಗೋಲಿಬಾರ್ ಮಾಡಿತು. ಆ ಸಂದರ್ಭದಲ್ಲಿ ಏಳು ಜನ ಮೃತಪಟ್ಟಿದ್ದರು. ಆಗ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದರೆ? ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಆದಾಗ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೋಟ್ಟಿದ್ದರೆ ? ಎಂದರು.
ಸಿಎಂ ಮಾತಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
- 22 Aug 2025 12:09 PM IST
ಬಿಜೆಪಿಯಿಂದ ಉನ್ಮಾದಕ್ಕೆ ತುಪ್ಪಸುರಿವ ಕೆಲಸ: ಸಿಎಂ ಟೀಕೆ
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚಿಸಿದಾಗ ಆರಂಭದಲ್ಲಿ ಬಿಜೆಪಿ ಸುಮ್ಮನಿದ್ದು, ಇದೀಗ ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅನಾಮಿಕ ಗುರುತಿಸಿದ ಎರಡು ಕಡೆ ಮೂಳೆಗಳು ದೊರೆತಿದ್ದು ಉಳಿದ 13 ಸ್ಥಳಗಳಲ್ಲಿ ಮೂಳೆಗಳು ಸಿಕ್ಕಿಲ್ಲ. ಬಿಜೆಪಿಯವರ ಅಬ್ಬರ ಈಗ ಶುರುವಾಗಿದ್ದು, ಬಿಜೆಪಿ ಉನ್ಮಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
- 22 Aug 2025 11:56 AM IST
ಧರ್ಮಸ್ಥಳ ಪ್ರಕರಣ: ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಪ್ರತಿಭಟನೆ
ಎಸ್ಐಟಿ ತನಿಖೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಆದರೆ ಬಿಜೆಪಯವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.