ನಿಮ್ಮ ಸರ್ವೋಚ್ಛ ನಾಯಕ ಪೋಕ್ಸೋ ಕಾಯ್ದೆಯಡಿ ಜೈಲಿನ ದಾರಿಯಲ್ಲಿದ್ದಾರೆ: ಬಿಜೆಪಿಗೆ ಸಿಎಂ ತಿರುಗೇಟು
x

ನಿಮ್ಮ ಸರ್ವೋಚ್ಛ ನಾಯಕ ಪೋಕ್ಸೋ ಕಾಯ್ದೆಯಡಿ ಜೈಲಿನ ದಾರಿಯಲ್ಲಿದ್ದಾರೆ: ಬಿಜೆಪಿಗೆ ಸಿಎಂ ತಿರುಗೇಟು

ʻರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಪೋಕ್ಸೋ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ಇಂತಹ ಮಹಿಳಾ ಭಕ್ಷಕರನ್ನು ಕಟ್ಟಿಕೊಂಡು ಮೆರೆಯುತ್ತಿರುವ ನಿಮಗೆ ನಮ್ಮ ಸರ್ಕಾರದ ವಿರುದ್ದ ಆರೋಪ ಮಾಡುವ ಯಾವ ನೈತಿಕತೆ ಇದೆ?ʼ ಎಂದು ಸಿಎಂ ಪ್ರಶ್ನಿಸಿದ್ದಾರೆ.


ಕಳೆದ 7 ತಿಂಗಳಲ್ಲಿ ರಾಜ್ಯದಲ್ಲಿ 340ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿರುವುದು ಕಾಂಗ್ರೆಸ್​​ ಸರ್ಕಾರದ ಅರಾಜಕತೆಯ ಆಡಳಿತಕ್ಕೆ ಹಿಡಿದ ಕೈ ಗನ್ನಡಿ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಬಿಜೆಪಿಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ʻʻರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಪೋಕ್ಸೋ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆʼʼ ಎಂದು ಬಿಎಸ್‌ ಯಡಿಯೂರಪ್ಪ ಹೆಸರು ಬಳಸದೇ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್​ ಮಾಡಿರುವ ಅವರು, ‌ʻʻನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಗೋಳಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರೇ, ಮಹಿಳಾ ಭಕ್ಷಣೆ ಮತ್ತು ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನೀವು ನಿಲ್ಲಿಸಿದರೆ ರಾಜ್ಯದಲ್ಲಿ ಮಹಿಳೆಯರು ಮಾತ್ರವಲ್ಲ ಬಾಲಕಿಯರೂ ಸುರಕ್ಷಿತರಾಗಿರುತ್ತಾರೆ. ರಾಜ್ಯವೂ ಮಹಿಳೆಯರ ಪಾಲಿಗೆ ಸುರಕ್ಷಿತವಾಗಿರುತ್ತದೆʼʼ ಎಂದು ವಾಗ್ದಾಳಿ ಮಾಡಿದ್ದಾರೆ.

ʻʻರಾಜ್ಯದಲ್ಲಿರುವ ನಿಮ್ಮ ಪಕ್ಷದ ಒಬ್ಬ ಸರ್ವೋಚ್ಛ ನಾಯಕರು ಪೋಕ್ಸೊ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ನಿಮ್ಮ ಮಿತ್ರಪಕ್ಷವಾದ ಜೆಡಿ(ಎಸ್)ನ ಮಾಜಿ ಸಂಸದ ನೂರಾರು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ, ಶಾಸಕರಾಗಿರುವ ಅವನ ತಂದೆ ಮೇಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ಅದೇ ಕುಟುಂಬದ ಇನ್ನೊಬ್ಬ ಶಾಸಕ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾನೆ. ಇಂತಹ ಮಹಿಳಾ ಭಕ್ಷಕರನ್ನು ಕಟ್ಟಿಕೊಂಡು ಮೆರೆಯುತ್ತಿರುವ ನಿಮಗೆ ನಮ್ಮ ಸರ್ಕಾರದ ವಿರುದ್ದ ಆರೋಪ ಮಾಡುವ ಯಾವ ನೈತಿಕತೆ ಇದೆ?ʼʼ ಎಂದು ಪ್ರಶ್ನಿಸಿದ್ದಾರೆ.

ʻʻಪ್ರಧಾನಿ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯ ಹಿಂದಿನ ಹಿಪಾಕ್ರಸಿಯನ್ನು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಬಂಡಿ ಸಂಜೀವ್ ಕುಮಾರ್ ಲೋಕಸಭೆಯಲ್ಲಿ ದಾಖಲೆ ಸಹಿತ ಬಿಡಿಸಿಟ್ಟಿದ್ದಾರೆ. 2014ರಲ್ಲಿ ದೇಶದ 3,39,457 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದರೆ 2022ರಲ್ಲಿ ಈ ಸಂಖ್ಯೆ 4,45,256ಕ್ಕೆ ಏರಿದೆ. ಇದೇ ಅವಧಿಯಲ್ಲಿ ಮಕ್ಕಳ ಮೇಲಿನ ಅತ್ಯಾಚಾರಗಳ ಸಂಖ್ಯೆ 89,423 ರಿಂದ 1,62,449ಕ್ಕೆ ಹೆಚ್ಚಿದೆ ಎಂದು ಸಚಿವರು ಕಳೆದ ಜುಲೈ 30ರಂದು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಇದೇನಾ ನೀವು ಹೇಳುತ್ತಿರುವ ಬೇಟಿ ಬಚಾವೋ?ʼʼ ಎಂದು ಕಿಡಿಕಾರಿದ್ದಾರೆ.

ʻʻಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್‌ಸಿಆರ್‌ಬಿಯ 2021ರ ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ 86 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರತಿ ಗಂಟೆಗೆ 49 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳಲ್ಲಿ ಕಳೆದ ಆರು ವರ್ಷಗಳಿಂದ ಬಿಜೆಪಿ ಆಡಳಿತದ ಉತ್ತರಪ್ರದೇಶ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆʼʼ ಎಂದು ಟೀಕಿಸಿದ್ದಾರೆ.

ʻʻ2017ರಲ್ಲಿ ಉತ್ತರಪ್ರದೇಶದ ಉನ್ನಾವೊದಲ್ಲಿ 2020ರಲ್ಲಿ ಅದೇ ರಾಜ್ಯದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಗಳ ಪ್ರಕರಣಗಳಲ್ಲಿ ಆರೋಪಿಗಳಿಗೆ ರಕ್ಷಣೆ ಮಾಡುತ್ತಿರುವವರು ಯಾರು ಬಿಜೆಪಿ ನಾಯಕರೇ? ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಬಿಜೆಪಿ ಮಾಜಿ ಸಂಸದ ಬೃಜ್ ಭೂಷಣ್‌ ಸರಣ್ ಸಿಂಗ್ ಎಂಬ ಸ್ತ್ರೀಪೀಡಕನನ್ನು ರಕ್ಷಿಸುತ್ತಿರುವವರು ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ನಿಮಗಿದೆಯಾ?ʼʼ ಎಂದು ವಾಗ್ದಾಳಿ ಮಾಡಿದ್ದಾರೆ.

Read More
Next Story