ಎಲ್ಲಾ ಕಾಲಘಟ್ಟದಲ್ಲೂ ಯಯಾತಿ ಪಾತ್ರಧಾರಿಗಳನ್ನು ಕಾಣಬಹುದು; ಬಂಜಗೆರೆ ಜಯಪ್ರಕಾಶ್
x

ಎಲ್ಲಾ ಕಾಲಘಟ್ಟದಲ್ಲೂ ಯಯಾತಿ ಪಾತ್ರಧಾರಿಗಳನ್ನು ಕಾಣಬಹುದು; ಬಂಜಗೆರೆ ಜಯಪ್ರಕಾಶ್

ಕಾಮ ಎನ್ನುವುದು ಚೂಯಿಂಗ್ ಗಮ್ ರೀತಿ. ಮೊದಲು ಜಿಗಿಯುವಾಗ ಚೆನ್ನಾಗಿರುತ್ತದೆ. ಅದೇ ರೀತಿ ಅತಿ ಕಾಮ ಅತಿರೇಕವಾದದ್ದು, ಇದು ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ಎಂದು ಲೇಖಕ, ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.


ಯಯಾತಿ ಎಲ್ಲಾ ಕಾಲಕ್ಕೂ ಸರ್ವಶ್ರೇಷ್ಠ ವಸ್ತುವಾಗಿದ್ದು, ಎಲ್ಲಾ ಕಾಲಘಟ್ಟದಲ್ಲೂ ಯಯಾತಿ ಪಾತ್ರಧಾರಿಗಳನ್ನು ಕಾಣಬಹುದು. ಕಾಮ ಎನ್ನುವುದು ಚೂಯಿಂಗ್ ಗಮ್ ರೀತಿ. ಮೊದಲು ಜಿಗಿಯುವಾಗ ಚೆನ್ನಾಗಿರುತ್ತದೆ. ಅದೇ ರೀತಿ ಅತಿ ಕಾಮ ಅತಿರೇಕವಾದದ್ದು, ಇದು ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ಎಂದು ಲೇಖಕ, ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮಹಾಭಾರತದ ಆಖ್ಯಾನದ ಎಳೆಯನ್ನು ಆಧರಿಸಿದ, ಪೌರಾಣಿಕ ಕಥಾ ಹಂದರವನ್ನೊಳಗೊಂಡಿರುವ ಪುರುಷೋತ್ತಮ ದಾಸ್ ಹೆಗ್ಗಡೆ ರಚಿತ “ಯಯಾತಿ” ಕಾದಂಬರಿಯನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತಿಗಳು, ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲಿ ಸಮರಸ್ಯದ ದಾಂಪತ್ಯ ಇರುವುದಿಲ್ಲವೋ ಅಲ್ಲಿ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಹೆಣ್ಣು ಗಂಡು ನಡುವಿನ ಪ್ರೇಮ ಮೊದಲಿಗೆ ಆಕರ್ಷಣೆಯಾದರೂ ಕ್ರಮೇಣ ಗೌರವ, ಪರಸ್ಪರ ವಿಶ್ವಾಸ ಮೂಡುವಂತಾಗಬೇಕು. ಆರೈಕೆಯ ಭಾವನೆಯ ಜೊತೆಗೆ ಸಂಬಂಧ ಮಾಗುತ್ತಾ ಮಾಗುತ್ತಾ ಪ್ರೌಢವಾಗುತ್ತಾ ಸಾಗಬೇಕು. ಇಲ್ಲವಾದಲ್ಲಿ ಒಲುಮೆಗಿಂತ ಸಂಘರ್ಷ ಜಾಸ್ತಿಯಾಗುತ್ತದೆ ಎಂದರು.

ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಮೂರು ಅಭೀಪ್ಸೆಗಳು ಇರುತ್ತವೆ. ನನಗೆ ಮುಪ್ಪು ಬರಬಾರದು ಎನ್ನುವುದು. ಯೋಗ ಶಾಸ್ತ್ರವೂ ಕೂಡ ದೇಹವನ್ನು ವಜ್ರಕಾಯ ಮಾಡಿಕೊಳ್ಳುವ ಸಿದ್ದಿ ವಿದ್ಯೆಯಾಗಿದೆ. ಚಿರ ಯವ್ವನಿಗನಾಗಿರಬೇಕು ಎಂದು ಬಯಸುವುದು ಸಹಜ. ಎರಡನೆಯದು ಕಾಮ. ಅತಿ ಕಾಮ ನಪುಂಸಕತ್ವಕ್ಕೂ ಕಾರಣವಾಗುತ್ತದೆ. ಕಾಮ ಎನ್ನುವುದು ಸ್ಪರ್ಧೆಯಲ್ಲ. ದೇಹದ ಮೂಲಕ ಆಡುವ ಆಟವೂ ಅಲ್ಲ. ಪರಸ್ಪರ ಒಲಿದು, ನಿಲಿದು ನಡೆಸುವ ಅನುಭೂತಿ. ಸಾಂಸರಿಕ ಜೀವನದ ಹೊರಗಡೆ ನಡೆಯುವ ಇಂತಹ ಕ್ರಿಯೆಗಳಿಗೆ ಯಯಾತಿ ಕಥೆ ಪ್ರಸ್ತುತವಾಗುತ್ತದೆ ಎಂದರು.


ಯಯಾತಿ ಒಂದು ಪಾತ್ರವಲ್ಲ

ಯಯಾತಿ ಒಂದು ಪಾತ್ರವಲ್ಲ. ಎಲ್ಲರಿಗೂ ಒಂದು ಪಾಠ. ಯಾವುದೇ ಪತ್ರಿಕೆಯಲ್ಲೂ ಕಾಮಶಕ್ತಿ ಉದ್ದೀಪಿಸುವ ವಿಷಯ ಇರುತ್ತದೆ. ಅಂತರ್ಜಾಲದಲ್ಲೂ ಪದೇ ಕಾಮೋತ್ತೇಜಕ ವಿಷಯಗಳೇ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಕಾಮ ಮನುಷ್ಯನ ಹಂಬಲ ಹೆಚ್ಚಿಸುತ್ತದೆ. ನಾವು ಯವ್ವನವನ್ನು ಬೇಗ ಆಹ್ವಾನಿಸುತ್ತೇವೆ. ಆದರೆ ಮುಪ್ಪನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಇದು ಮುನುಷ್ಯನ ಮನೋರೋಗ. ಯಯಾತಿಯನ್ನು ಲೇಖಕರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಕಾಮವನ್ನೇ ಗೆದ್ದ ಯತಿ ಇದ್ದಾನೆ, ಕಾಮವನ್ನೇ ಸದಾ ಬಯಸುವ ಯಯಾತಿ ಇದ್ದಾನೆ ಎಂಬ ಲೇಖಕರ ವಿಚಾರಗಳು ಇಡೀ ವೃತ್ತಾಂತವನ್ನು ಅನಾವರಣಗೊಳಿಸುತ್ತವೆ. ಮೂರನೆಯ ಅಭಿಪ್ಸೆ ಎಂದರೆ ಎಲ್ಲಾ ವಸ್ತುಗಳನ್ನು ಮುಟ್ಟಿ ಚಿನ್ನ ಮಾಡುವ ವಾಂಛೆ. ಎಲ್ಲವೂ ಸುವರ್ಣಮಯವಾಗಬೇಕು. ನಮ್ಮಲ್ಲೇ ಇದು ಸಂಗ್ರಹವಾಗಬೇಕು ಎಂಬುದು. ಇದು ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಪ್ರಕೃತಿ ನೀಡುವ ಉತ್ತರ ಮುಖ್ಯವಾಗುತ್ತದೆ. ಜನಾಂಗೀಯ ಸಂಘರ್ಷಗಳ ಬಗ್ಗೆಯೂ ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದರು.

ಸತ್ಯೋತ್ತರ ಕಾಲ

ಕೃತಿ ಕುರಿತು ಮಾತನಾಡಿದ ವಿಮರ್ಶಕ ಎಚ್. ದಂಡಪ್ಪ, ನಾವು ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯ ಮಾಡುವ ಸತ್ಯೋತ್ತರ ಕಾಲದಲ್ಲಿದ್ದು, ಈಗಲೂ ನಮ್ಮ ಮುಂದೆ ಯಯಾತಿಗಳಿದ್ದಾರೆ. ಇಂತಹವರನ್ನು ಯಯಾತಿ ಕಾಂಪ್ಲೆಕ್ಸ್ ಗಳು ಎಂದು ಕರೆಯುತ್ತಾರೆ. ಈಡಿಪಸ್ ಕಾಂಪ್ಲೆಕ್ಸ್ ರೀತಿ ಇವರೆಲ್ಲರೂ ಕಾಮ ಪಿಶಾಚಿಗಳು. 20 ನೇ ಶತಮಾನದಲ್ಲಿ ಚೀನಾದ ನಾಯಕ ಮಾವೋ ಇದೇ ಗುಂಪಿಗೆ ಸೇರಿದವನು. 19 ನೇ ಶತಮಾನದಲ್ಲಿ ಮಹಾತ್ಮಾಗಾಂಧೀಜಿ ಹೆಣ್ಣು ಮಕ್ಕಳ ಜೊತೆ ಮಲಗಿ ಕಾಮ ನಿಯಂತ್ರಣದ ಬಗ್ಗೆ ಪ್ರಯೋಗ ಮಾಡಿ ಜಗತ್ತಿಗೆ ಮಾದರಿಯಾದರು. ಪ್ರಯೋಗಕ್ಕೆ ಒಳಗಾದ ಹೆಣ್ಣು ಮಕ್ಕಗಳು ಗಾಂಧೀಜಿಯನ್ನು ತಂದೆ ತಾಯಿಯಂತೆ ಅಕ್ಕರೆಯಿಂದ ಕಂಡರೆ, ಮಾವೋ ಜೊತೆ ಬೇರೆಯದೇ ಅನುಭವವಿತ್ತು. ಗಾಂಧೀಜಿ ಕೊಠಡಿ ಬಾಗಿಲು ಸದಾ ತೆರೆದಿರುತ್ತಿತ್ತು. ಆದರೆ ಮಾವೋ ಬಾಗಿಲು ಸದಾ ಮುಚ್ಚಿರುತ್ತಿತ್ತು. ಇಂತಹ ಹತ್ತು ಹಲವು ಪಾತ್ರಗಳು ನಮ್ಮ ಮುಂದೆ ಹಾದುಹೋಗುತ್ತವೆ. ಪೌರಾಣಿಕ ಕಥಾ ಹಂದರ ನಮಗೆ ನೈತಿಕ ಶಿಕ್ಷಣ ನೀಡುತ್ತದೆ. ಹಾಗಾಗಿ ಯಯಾತಿ ಉತ್ತಮ ರೀತಿಯ ನಿರೂಪಣೆಯನ್ನು ಇದು ಒಳಗೊಂಡಿರುವ ಕಾದಂಬರಿ ಎಂದು ಹೇಳಿದರು.

ಯಯಾತಿ- ಮನೋವಿಜ್ಞಾನದ ಸಿದ್ಧಾಂತ

ನಿಮ್ಹಾನ್ಸ್ ನ ಮಾನಸಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಮಂಜುಳಾ ಕಾದಂಬರಿಯನ್ನು ಮನೋ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಮಾತನಾಡಿ, ಮನೋವಿಜ್ಞಾನದ ಸಿದ್ಧಾಂತಗಳನ್ನು ಯಯಾತಿ ಕಥೆಯಲ್ಲಿ ಸೂಕ್ತ ರೀತಿಯಲ್ಲಿ ಅಡಕಗೊಳಿಸಲಾಗಿದೆ. ನಾನಾ ಆಯಾಮಗಳಲ್ಲಿ ಲೇಖಕರು ಮಾನಸಿಕ ಸ್ಥಿತಿಗತಿಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಕಥಾ ವಸ್ತುವಿನಲ್ಲಿ ಮಾನವೀಕರಣವನ್ನು ಕಾಣಬಹುದಾಗಿದೆ. ಇಷ್ಟವಾಗದ ವಿಷಯಗಳ ವಿಚಾರದಲ್ಲಿ ಸಿಗ್ಮಂಡ್ ಫ್ರಾಯ್ಡ್ ನ ಸಿದ್ಧಾಂತಗಳನ್ನು ಸಹ ಅನಾರಣಗೊಳಿಸಲಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ರಕ್ಷಣಾ ವಿಧಾನಗಳಿಗೂ ಇಲ್ಲಿ ಒತ್ತು ನೀಡಲಾಗಿದೆ ಎಂದರು.

ಕಾಂದಬರಿಕಾರ ಪುರುಷೋತ್ತಮ ದಾಸ್ ಹೆಗ್ಗಡೆ ಮಾತನಾಡಿ, ಮನುಷ್ಯನಿಗೆ ಸಾವಿನ ಬಗ್ಗೆ ಅತಿ ಹೆಚ್ಚು ಭಯವಿದ್ದು, ಇತ್ತೀಚೆಗೆ ಈ ಕುರಿತು 3 ಲಕ್ಷಕ್ಕೂ ಅಧಿಕ ಲೇಖನಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಮನುಷ್ಯನ ಚಿರ ಯವ್ವನ ಕಾಪಾಡಲು 700ಕ್ಕೂ ಅಧಿಕ ನವೋದ್ಯಮ ಕಂಪೆನಿಗಳು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಪ್ರೋಟಿನ್ ಗಳ ಮೂಲಕ ಯವ್ವನವನ್ನು ಕಾಪಿಟ್ಟುಕೊಳ್ಳುವ, ಮಕ್ಕಳು, ಮೊಮ್ಮಕ್ಕಳ ರಕ್ತ, ಪ್ಲೇಟ್ಲೇಟ್ ಗಳನ್ನು ವರ್ಗಾಯಿಸಿಕೊಂಡು ಯವ್ವನಿಗರಾಗುವ ಕೆಲಸ ನಡೆಯುತ್ತಿದೆ. ಇಂತಹ ವ್ಯಕ್ತಿತ್ವದವರನ್ನು ಯಯಾತಿ ಸಿಂಡ್ರೋಮ್ ಗಳು ಎನ್ನಲಾಗುತ್ತದೆ. ಈ ವಲಯದಲ್ಲಿರುವವರನ್ನು ಅಮರತ್ವದ ವ್ಯಾಪಾರಿಗಳು ಎಂದು ಕರೆಯಲಾಗುತ್ತದೆ. ಹೀಗಾಗಿ ಯಯಾತಿಗಳು ನಮ್ಮ ಮುಂದೆ ಈಗಲೂ ಇದ್ದಾರೆ ಎಂದರು. ವಂಶಿ ಪ್ರಕಾಶನದ ಪ್ರಕಾಶ್ ಉಪಸ್ಥಿತರಿದ್ದರು.

Read More
Next Story