Upper Bhadra Project; ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣ; ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
x

Upper Bhadra Project; ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣ; ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

"ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಗಮನ ಹರಿಸುತ್ತೇವೆ. ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಲು ಗಮನ ಹರಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.


"ಭದ್ರಾ ಮೇಲ್ದಂಡೆ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಕಾನೂನು ಪ್ರಕಾರ ಪರಿಹಾರ ನೀಡಿ ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರು ಆದ ಉಪ ಮುಖ್ಯಮಂತ್ರಿ ಡಿ .ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳ ಭೂಸ್ವಾಧೀನ ಸಮಸ್ಯೆ ನಿವಾರಿಸುವ ಕುರಿತು ರೈತರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

"ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಗಮನ ಹರಿಸುತ್ತೇವೆ. ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಲು ಗಮನ ಹರಿಸುತ್ತೇವೆ" ಎಂದು ಹೇಳಿದರು.

"ಭೂ ಸ್ವಾಧೀನ ಪರಿಹಾರ ವಿಚಾರದಲ್ಲಿ ತಾರತಮ್ಯವಾಗಿರುವ ಕಾರಣ ಭದ್ರಾ ಮೇಲ್ದಂಡೆ ಕಾಮಗಾರಿಗೆ ರೈತರು ತಡೆ ಒಡ್ಡಿದ್ದರು. ಹಳೇ ದರದ ಪ್ರಕಾರ ಕೆಲವರಿಗೆ ₹4 ಲಕ್ಷ ಪರಿಹಾರ ಸಿಕ್ಕಿದೆ.‌ ಅದೇ ಸರ್ವೇ ನಂಬರ್ ಅಲ್ಲಿ ಕೆಲವರಿಗೆ ₹20 ಲಕ್ಷ ಪರಿಹಾರ ಸಿಕ್ಕಿರುವುದರಿಂದ ತಾರತಮ್ಯವಾಗಿದೆ ಎಂದು ಆರೋಪಿಸಿ ರೈತರು ಕೆಲಸ ಮುಂದುವರೆಸಲು ಬಿಟ್ಟಿರಲಿಲ್ಲ" ಎಂದರು.

"ಈ ಮೊದಲು ನಾನು, ಒಂದಷ್ಟು ಸಚಿವರು, ಶಾಸಕರು, ಅಧಿಕಾರಿಗಳು ರೈತರ ಬಳಿ ಕೆಲಸ ಮುಂದುವರೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಅದೇ ರೀತಿ ಪರಿಹಾರದ ತಾರತಮ್ಯ ಹೋಗಲಾಡಿಸಲು ಕಾನೂನಿನ ಅಡಿ ಏನು ಮಾಡಬಹುದು ಎಂದು ಚರ್ಚೆ ನಡೆಸಿದ್ದೆವು. ಮೂರು- ನಾಲ್ಕು ದಿನಗಳಲ್ಲಿ ಪರಿಹಾರ ಸಂಬಂಧ ಅಂತಿಮ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದರು.

ಕಾರ್ಯಕರ್ತರಿಗೆ ಗೌರವ

"ಗ್ಯಾರಂಟಿ ಸಮಿತಿ ನೇಮಕಾತಿ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಗೌರವ ನೀಡಿದ್ದೇವೆ. ಇದರಿಂದ ಶಾಸಕರ ಅಧಿಕಾರವನ್ನು ನಾವು ಕಿತ್ತು ಕೊಳ್ಳುವುದಿಲ್ಲ. ಅವರಿಗೆ ಇರುವ ಅಧಿಕಾರ ಇದ್ದೇ ಇರುತ್ತದೆ. ಅನುಷ್ಠಾನ ಸಮಿತಿ ಮೂಲಕ ಫಲಾನುಭವಿಗಳನ್ನು ಗುರುತಿಸುವ ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕರ್ತರ ನೇಮಕಾತಿಗಳನ್ನು ಬದಲಾವಣೆ ಮಾಡುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಹೋರಾಟ ಮಾಡುವವರನ್ನು ಬೇಡ ಎನ್ನಲ್ಲ

ಅನುಷ್ಠಾನ ಸಮಿತಿಗಳ ವಿರುದ್ಧ ಬಿಜೆಪಿ ಹೋರಾಟದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹೋರಾಟ ಮಾಡುವವರಿಗೆ ಬೇಡ ಎಂದು ಹೇಳಲು ಆಗುವುದಿಲ್ಲ. ಅವರಿಗೂ ಅರಿವಿದೆ, ಏಕೆಂದರೆ ಇದು ರಾಜಕೀಯ ಕಾರ್ಯಕ್ರಮವಲ್ಲ. ಜನರ ಬದುಕಿಗಾಗಿ ಇರುವ ಕಾರ್ಯಕ್ರಮ. ಅನುಷ್ಠಾನ ಸಮಿತಿಯವರಿಗೆ ಗೌರವಧನ ಎಂದು ಹೇಳಿ 25- 30 ಸಾವಿರ, ಸಭೆಗೆ ಬಂದರೆ 1 ಸಾವಿರ ಕೊಡಲಾಗುತ್ತಿದೆ. ಇದರ ಹೊರತಾಗಿ ಬೇರೆ ಏನೂ ಇಲ್ಲ. ಶಾಸಕರಿಗೆ ಯಾವ ಹಕ್ಕು ಇದೆಯೋ ಅದು ಸಮಿತಿಯವರಿಗೂ ಇರುತ್ತದೆ. ಗ್ಯಾರಂಟಿಗಳ ಅನುಷ್ಠಾನ ಚೆನ್ನಾಗಿ ಆಗಲಿ ಎಂದು ಇದನ್ನು ನಮ್ಮ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದು, ಇದಕ್ಕೆ ಸಹಕಾರ ಕೊಡಬೇಕು" ಎಂದರು.

Read More
Next Story