
ಮೃತದೇಹ ದೊರೆತ ಬಿಬಿಎಂಪಿ ಲಾರಿ
ಬಿಬಿಎಂಪಿ ಲಾರಿಯಲ್ಲಿ ಮಹಿಳೆಯ ಶವ ಪತ್ತೆ; ಆರೋಪಿ ಬಂಧನ
ಕಸದ ಲಾರಿಯಲ್ಲಿ ಶವವಾಗಿ ಪತ್ತೆಯಾದ ಪುಷ್ಪಾ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮಹಿಳೆಯನ್ನು ಹತ್ಯೆ ಮಾಡಿ ಬಿಬಿಎಂಪಿ ಕಸದ ಲಾರಿಗೆ ಎಸೆದು ಹೋಗಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಭಾನುವಾರ ಮುಂಜಾನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಸ್ಕೇಟಿಂಗ್ ಮೈದಾನದ ಬಳಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.
ಮೃತ ಮಹಿಳೆಯನ್ನು ಹುಳಿಮಾವು ನಿವಾಸಿ ಪುಷ್ಪಾ (34) ಎಂದು ಗುರುತಿಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಯ ಚಲನವಲನದ ಸುಳಿವು ಪಡೆದ ಪೊಲೀಸರು ಅಸ್ಸಾಂ ಮೂಲದ ಶಂಷುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ.
ಪುಷ್ಪಾ ಹಾಗೂ ಆರೋಪಿ ಶಂಷುದ್ದೀನ್ ಹೌಸ್ ಕೀಪಿಂಗ್ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ವಿಧವೆಯಾಗಿದ್ದ ಪುಷ್ಪಾ ಜೊತೆ ಆರೋಪಿ ಸಂಬಂಧ ಇರಿಸಿಕೊಂಡಿದ್ದರು. ಶಂಷುದ್ದೀನ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಶನಿವಾರ ಇಬ್ಬರು ಮಧ್ಯೆ ಜೋರು ಗಲಾಟೆಯಾಗಿದೆ. ಈ ವೇಳೆ ಪುಷ್ಪಾಳನ್ನು ಹತ್ಯೆ ಮಾಡಿ, ಚೀಲದಲ್ಲಿ ತುಂಬಿಸಿ ಕಸದ ಲಾರಿಗೆ ಹಾಕಿದ್ದ.
ಕಸ ಎಸೆಯಲು ಬಂದವನಿಂದ ಪ್ರಕರಣ ಬೆಳಕಿಗೆ
ಭಾನುವಾರ ಮುಂಜಾನೆ ಸುಮಾರು 1.40 ರ ವೇಳೆಗೆ ಕಸ ಎಸೆಯಲು ಸ್ಕೇಟಿಂಗ್ ಮೈದಾನದ ಬಳಿ ವ್ಯಕ್ತಿಯೊಬ್ಬರು ಬಂದಾಗ ಲಾರಿಯೊಳಗಿದ್ದ ಚೀಲದಲ್ಲಿ ತಲೆಯ ಕೂದಲು ಕಾಣಿಸಿದೆ. ಚೀಲ ಬಿಚ್ಚಿ ನೋಡಿದಾಗ ಮಹಿಳೆ ಮೃತದೇಹ ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.