ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ ಬಂಧನ
x
ಪ್ರೊ.ಬಿ.ಸಿ.ಮೈಲಾರಪ್ಪ

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ ಬಂಧನ

ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲೂ ಕೇಸ್ ದಾಖಲಾಗಿತ್ತು. ಆದಾಗ್ಯೂ, ಮೈಲಾರಪ್ಪ ಸಂತ್ರಸ್ಥ ಮಹಿಳೆಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ.


ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಸಿ.ಮೈಲಾರಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಬಸವೇಶ್ವರನಗರ ಠಾಣೆಯಲ್ಲಿ ಸಂತ್ರಸ್ಥೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೈಲಾರಪ್ಪ ಅವರನ್ನು ಬಂಧಿಸಿದ್ದಾರೆ. ಸಂತ್ರಸ್ತೆ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಆಕೆಯ ಪರ ಮೈಲಾರಪ್ಪ ವಾದಿಸಿದ್ದರು.

ಸಂತ್ರಸ್ತೆಯು 2022ನೇ ಸಾಲಿನ ನವೆಂಬರ್ ತಿಂಗಳಲ್ಲಿ ಅಂದಿನ ಬೆಂಗಳೂರು ವಿ.ವಿ ನಿರ್ದೇಶಕರಾದ ಪ್ರೊ.ಬಿ.ಸಿ ಮೈಲಾರಪ್ಪ ಅವರು ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಕೆಲಸಕ್ಕೆ ಸೇರಿದ್ದರು. ಆಗಿನಿಂದ 2 ವರ್ಷ ಅಲ್ಲಿಯೇ ಕೆಲಸ ಮಾಡಿದ್ದರು. ಈ ವೇಳೆ ಮಹಿಳೆಯ ಪತಿ ಅಸಹಜವಾಗಿ ಮೃತಪಟ್ಟಿದ್ದರು. ಅತ್ತೆ ಮನೆಯವರು ಮಹಿಳೆಯ ವಿರುದ್ಧವೇ ದೂರು ದಾಖಲಿಸಿದ್ದರು.

ಸಂತ್ರಸ್ತೆಯ ಹೆಸರಿನಲ್ಲಿದ್ದ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿದ್ದರು. ಆಗ ಬಿ.ಸಿ.ಮೈಲಾರಪ್ಪ ಅವರು ಮಹಿಳೆಯ ಪತಿ ಸಾವಿನ ಬಗ್ಗೆ ಮಹಾಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ಪರ ವಾದಿಸಿ, ಓಡಾಟ ನಡೆಸಿದ್ದರು.

ಸಂತ್ರಸ್ಥೆಯ ತಂದೆ ಆಸ್ತಿಯ ಭಾಗಾಂಶಕ್ಕಾಗಿ ಸೋದರನಾದ ವಕೀಲ ರಘು ಎನ್ನುವವರ ಸಹಾಯದಿಂದ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಈ ವಿಷಯವಾಗಿ ವಕೀಲರು ಆಗಾಗ ಸಂತ್ರಸ್ತೆ ಭೇಟಿ ಮಾಡುವ ಸುದ್ದಿ ತಿಳಿದ ಮೈಲಾರಪ್ಪ, ಒಂದು ಹೋಟೆಲ್ ಬಳಿ ಮಾತನಾಡಬೇಕೆಂದು ಕರೆಸಿಕೊಂಡಿದ್ದರು. ಭೇಟಿ ಮಾಡಲು ಬಂದಾಗ ಆಕೆಗೆ ಒಂದಿಷ್ಟು ದಾಖಲಾತಿಗಳನ್ನು ನೀಡಿ, ಸಹಿ ಹಾಕುವಂತೆ ಹೇಳಿದ್ದರು.

ದಾಖಲಾತಿ ಪರಿಶೀಲಿಸಿದಾಗ, ‘ನನ್ನ ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ವಕೀಲ ರಘು ಕಾರಣ’ ಎಂದು ಬರೆದಿದ್ದನ್ನು ನೋಡಿ, ಸಹಿ ಹಾಕಲು ನಿರಾಕರಿಸಿದ್ದರು. ಹೀಗೆ ಬರೆದು ಸಹಿ ಹಾಕಿಸಿಕೊಳ್ಳಲು ನೀವು ಯಾರೆಂದು ಪ್ರಶ್ನಿಸಿದಾಗ ಕೋಪಗೊಂಡ ಮೈಲಾರಪ್ಪ, ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದರು.

ಇಷ್ಟಕ್ಕೇ ಸುಮ್ಮನಾಗದೇ ಮಹಿಳೆ ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದರು. ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿಯೂ ಕಾಮಾಕ್ಷಿಪಾಳ್ಯ ದಲ್ಲಿ ಕೇಸ್ ದಾಖಲಾಗಿತ್ತು. ಆದರೂ ಕರೆ ಮಾಡಿ ಸಹಕರಿಸುವಂತೆ ಬಲವಂತಪಡಿಸಿದ್ದಾಗಿಯೂ ಮಹಿಳೆ ಹೇಳಿಕೊಂಡಿದ್ದಾರೆ. ಈ ದೂರಿನ ಆಧಾರ ಮೇಲೆ ಬಸವೇಶ್ವರನಗರ ಪೊಲೀಸರು ದೂರು ದಾಖಲಿಸಿಕೊಂಡು ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬಂಧಿಸಿದ್ದಾರೆ.

Read More
Next Story