ಮಹಿಳೆ ಮೇಲೆ ಅತ್ಯಾಚಾರ ಯತ್ನ, ಬ್ಲಾಕ್‌ಮೇಲ್ ಆರೋಪ: ಕೇರಳ ಮೂಲದ ಅರ್ಚಕನ ಸೆರೆ
x

ಸಾಂದರ್ಭಿಕ ಚಿತ್ರ

ಮಹಿಳೆ ಮೇಲೆ ಅತ್ಯಾಚಾರ ಯತ್ನ, ಬ್ಲಾಕ್‌ಮೇಲ್ ಆರೋಪ: ಕೇರಳ ಮೂಲದ ಅರ್ಚಕನ ಸೆರೆ

ಮಹಿಳೆ ನೀಡಿದ ದೂರಿದ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದು. ಮತ್ತೊಬ್ಬ ಆರೋಪಿ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.


ಬೆಂಗಳೂರಿನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅರುಣ್ ಎಂಬಾತ ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರಿಂದ ಬಂಧಿತನಾಗಿದ್ದಾನೆ. ಈ ಪ್ರಕರಣದಲ್ಲಿ ಮುಖ್ಯ ಅರ್ಚಕ ಉನ್ನಿ ದಾಮೋದರನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಹುಟುಕಾಟ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು, ಸಾಮಾಜಿಕ ಮಾಧ್ಯಮದಲ್ಲಿ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಬಗ್ಗೆ ಮಾಹಿತಿ ಪಡೆದು, ವಿಶೇಷ ಪೂಜೆ ಮಾಡಿಸಲು ಅಲ್ಲಿಗೆ ತೆರಳಿದ್ದರು. ಈ ವೇಳೆ, ತಮಿಳು ಮತ್ತು ಕನ್ನಡ ಮಾತ್ರ ತಿಳಿದಿದ್ದ ಸಂತ್ರಸ್ತೆಗೆ ಅರ್ಚಕ ಅರುಣ್ ಪರಿಚಯವಾಗಿದ್ದಾನೆ. ಆತ ತಮಿಳಿನಲ್ಲಿ ಮಹಿಳೆಯೊಂದಿಗೆ ಮಾತನಾಡಿ, 24,000 ರೂ.ಗೆ ಪೂಜೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ.

ಸಂತ್ರಸ್ತೆ ಬೆಂಗಳೂರಿಗೆ ಹಿಂದಿರುಗಿದ ನಂತರ, ಅರುಣ್ ಹಲವು ಬಾರಿ ಕರೆ ಮಾಡಿ, "ನಿಮ್ಮ ಮೇಲೆ ಮಾಟ-ಮಂತ್ರ ಆಗಿದೆ, ಅದನ್ನು ಹೋಗಲಾಡಿಸಲು ಪೂಜೆ ಮಾಡುತ್ತೇನೆ. ನಾನು ಹೇಳಿದಂತೆ ಮಾಡಬೇಕು" ಎಂದು ಬೆದರಿಕೆ ಹಾಕಿದ್ದ. ವಾಟ್ಸ್​ಆ್ಯಪ್ ಮೂಲಕ ವೀಡಿಯೊ ಕರೆ ಮಾಡಿ ತಾನು ನಗ್ನನಾಗಿ ನಿಂತು, ಮಹಿಳೆಯನ್ನೂ ನಗ್ನಳಾಗುವಂತೆ ಬಲವಂತ ಮಾಡಿದ್ದ. ಮಹಿಳೆ ನಿರಾಕರಿಸಿದಾಗ, ಮಕ್ಕಳ ಮೇಲೆ ಮಾಟ-ಮಂತ್ರ ಮಾಡಿಸುವುದಾಗಿ ಬೆದರಿಸಿ ನಗ್ನನಾಗುವಂತೆ ಒತ್ತಾಯ ಮಾಡಿದ್ದ.

ಇದಾದ ಮತ್ತೊಂದು ವಿಶೇಷ ಪೂಜೆಗಾಗಿ ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬ್ಲ್ಯಾಕ್‌ಮೇಲ್‌ಗೆ ಹೆದರಿ ಮಹಿಳೆ ದೇವಸ್ಥಾನಕ್ಕೆ ತೆರಳಿದಾಗ, ಅರುಣ್ ಮತ್ತು ಮುಖ್ಯ ಅರ್ಚಕ ಉನ್ನಿ ದಾಮೋದರನ್, "ಧಾರ್ಮಿಕ ಕ್ರಿಯೆ ಇದೆ" ಎಂದು ಹೇಳಿ ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಮಹಿಳೆ ಬೆಂಗಳೂರಿಗೆ ವಾಪಸಾದ ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಬಂಧಿತ ಅರುಣ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾಗಿರುವ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

Read More
Next Story