
ವಿಧಾನಪರಿಷತ್ನಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿದರು.
Belagavi Session| ಕಾಂಗ್ರೆಸ್ನಲ್ಲಿ ಅವಿಶ್ವಾಸವಿಲ್ಲ, ಬಿಜೆಪಿಯಲ್ಲಿದೆ; ಗುಂಡೂರಾವ್ ವ್ಯಂಗ್ಯ
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಒಂದು ಬಣ ಇದ್ದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಬದಲಿಸಿ ಎಂದು ಇನ್ನೊಂದು ಬಣ ಸದಾ ಪ್ರಯತ್ನಿಸುತ್ತಲೇ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು. ಅದನ್ನು ತಪ್ಪಿಸುವ ಹುನ್ನಾರದಿಂದ ಬಿಜೆಪಿ ಅವಿಶ್ವಾಸ ಮಂಡಿಸಬಹುದು. ನಮ್ಮಲ್ಲಿ ಪೂರ್ಣ ವಿಶ್ವಾಸವಿದೆ. ಅವಿಶ್ವಾಸ ಇರುವುದು ಬಿಜೆಪಿಯಲ್ಲಿ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.
ಸೋಮವಾರ(ಡಿ.8) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಒಂದು ಬಣ ಇದ್ದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಬದಲಿಸಿ ಎಂದು ಇನ್ನೊಂದು ಬಣ ಸದಾ ಪ್ರಯತ್ನಿಸುತ್ತಲೇ ಇದೆ. ಇದು ಬಿಜೆಪಿಯ ಹಣೆಬರಹ. ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ, ನಮ್ಮಲ್ಲಿ ಯಾವುದೇ ಗೊಂದಲವೂ ಇಲ್ಲ ಎಂದು ಹೇಳಿದರು.
ರೈತರ, ಹಿಂದುಳಿದವರ ಪರ ಕೆಲಸ
ಸಮಸ್ಯೆಗಳು ಯಾವಾಗಲೂ ಇರುತ್ತವೆ. ಯಾವ ರೀತಿಯಲ್ಲಿ, ಹೇಗೆ, ಎಷ್ಟು ಪರಿಹಾರ ಮಾಡಲು ಪ್ರಯತ್ನ ಮಾಡಿದ್ದೇವೆ ಎನ್ನುವುದು ಮುಖ್ಯ. ರಾಜ್ಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಆಶಯದಿಂದಲೇ ರಾಜ್ಯದ ಮತದಾರರು ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದೆ. ಯುಕೆಪಿ ಯೋಜನೆ ಕಾರ್ಯರೂಪಕ್ಕೆ ಮುಂದಾಗಿದ್ದೇವೆ. ಹಿಂದುಳಿದವರ ಏಳಿಗೆಗೆ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕೇಂದ್ರದಿಂದ ಮಲತಾಯಿ ಧೋರಣೆ
ಬಿಜೆಪಿಯ ಸಂಸದರು, ಮುಖಂಡರು, ಕೇಂದ್ರ ಮಂತ್ರಿಗಳು ಏನು ಮಾಡುತ್ತಿದ್ದಾರೆ?. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಮಲತಾಯಿ ಧೋರಣೆ ಬಗ್ಗೆ ಯಾರೂ ಮಾತೇ ಆಡುತ್ತಿಲ್ಲ. ಮೆಕ್ಕೆಜೋಳ ಬೆಳೆದ ರೈತರ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಬೆಂಬಲ ಬೆಲೆ ಕೊಡಿಸಲು ಪ್ರಯತ್ನವೇ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಖರೀದಿಗೆ ಒಪ್ಪಿಗೆ ಕೊಡುತ್ತಿಲ್ಲ. ಖರೀದಿಸಿದರೆ ನೀವೇ ಉಪಯೋಗಿಸಕೊಳ್ಳಬೇಕು ಎನ್ನುತ್ತಿದೆ. ಖರೀದಿ ಮಾಡಿದರೆ ನೀವೇ ಜವಾಬ್ದಾರಿ ಎನ್ನಿತ್ತಿದೆ. ಇವುಗಳ ಕುರಿತು ಬಿಜೆಪಿ ಮಾತನ್ನೇ ಆಡುತ್ತಿಲ್ಲ. ಸರ್ಕಾರ ಈಗ ತಮ್ಮ ಬೊಕ್ಕಸದಿಂದಲೇ ಮೆಕ್ಕೆಜೋಳ ಬೆಳೆದ ರೈತರಿಗೆ ಸಹಾಯ ಮಾಡಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

