Why hasnt the government announced a support price for mangoes, which will pay Rs 6 crore to an actress: MLA Samriddhi Manjunath
x

ಜೆಡಿಎಸ್‌ ಶಾಸಕರಾದ ಸಮೃದ್ಧಿ ಶ್ರೀನಿವಾಸ್‌ ಹಾಗೂ ವೆಂಕಟಶಿವಾರೆಡ್ಡಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. 

ನಟಿ ತಮನ್ನಾಗೆ ಕೊಡುವ 6 ಕೋಟಿ ಮಾವು ಬೆಳೆಗಾರರಿಗೆ ಕೊಡಿ; ಸರ್ಕಾರಕ್ಕೆ ಒತ್ತಾಯ!

ಆಂಧ್ರ ಪ್ರದೇಶ ಸರ್ಕಾರ ಈಗಾಗಲೇ ರಾಜ್ಯದ ಮಾವಿನ ಬೆಳೆಗಾರರಿಗೆ ಟನ್‌ಗೆ 4,000 ರೂ. ಬೆಂಬಲ ಬೆಲೆ ಘೋಷಿಸಿದೆ. ಅದೇ ರೀತಿ ನಮ್ಮ‌ ಸರ್ಕಾರವೂ ಮಾವಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕೆಂದು ಶಾಸಕ ಸಮೃದ್ದಿ ಮಂಜುನಾಥ್‌ ಆಗ್ರಹಿಸಿದ್ದಾರೆ.


ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕಾಗಿ ನಟಿ ತಮನ್ನಾ ಭಾಟಿಯಾಗೆ 6 ಕೋಟಿ ರೂಪಾಯಿ ನೀಡುವ ಸರ್ಕಾರ. ಸಂಕಷ್ಟದಲ್ಲಿರುವ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಲು ಏಕೆ ಹಿಂದೇಟು ಹಾಕುತ್ತಿದೆ ಎಂದು ರೈತರು ಪ್ರಶ್ನಿಸಿದರು. ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ವೆಂಕಟಶಿವರೆಡ್ಡಿ ನೇತೃತ್ವದಲ್ಲಿ ನಡೆದ ಮಾವು ಬೆಳೆಗಾರರ ಪರ ಪ್ರತಿಭಟನೆ ವೇಳೆ ಈ ರೀತಿಯ ಆಕ್ರೋಶ ವ್ಯಕ್ತವಾಯಿತು. ಇದೇ ವೇಳೆ ಅವರು, ಬೆಲೆ ಕುಸಿತದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಶಾಸಕರಾದ ಸಮೃದ್ಧಿ ಮಂಜುನಾಥ್ ಮತ್ತು ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಮಾವು ಬೆಳೆಗಾರರು ಇಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಆಂಧ್ರಪ್ರದೇಶ ಮಾದರಿಯಲ್ಲಿ ಮಾವು ಬೆಳೆಗಾರರಿಗೆ ಟನ್‌ಗೆ ₹ 4,000 ರೂಪಾಯಿ ಬೆಂಬಲ ಬೆಲೆ ಘೋಷಿಸುವಂತೆ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನಾಕಾರರು, "ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಮಾವಿಗೆ ಬೆಂಬಲ ಬೆಲೆ ಘೋಷಿಸಿದೆ. ಅದೇ ರೀತಿ ನಮ್ಮ ಸರ್ಕಾರವೂ ಮಾವಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ 6 ಕೋಟಿ ರೂಪಾಯಿ ನೀಡುವ ಸರ್ಕಾರ, ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆ ಘೋಷಿಸಲು ಏಕೆ ಹಿಂದೇಟು ಹಾಕುತ್ತಿದೆ?" ಎಂದು ಪ್ರಶ್ನಿಸಿದರು.

ರೈತರ ಆಕ್ರೋಶ ಮತ್ತು ಸರ್ಕಾರಿ ನಿಷ್ಕ್ರಿಯತೆ ಆರೋಪ

ಕೋಲಾರ, ಚಿತ್ತೂರು ಮತ್ತು ಕೃಷ್ಣಗಿರಿ ಭಾಗಗಳಲ್ಲಿ ರೈತರು ಹೆಚ್ಚಾಗಿ ತೋತಾಪುರಿ ಮಾವಿನ ಕಾಯಿ ಬೆಳೆಯುತ್ತಾರೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ರೈತರು ಬಂದ್ ಆಚರಿಸಿ, ಮಾವಿನ ಕಾಯಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ಆದರೂ ಸರ್ಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ರ ವ್ಯವಹಾರ

ರಾಜ್ಯದ ಮಾವು ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದರಿಂದ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ಕುಸಿತ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ದಿಢೀರ್ ಬೆಲೆ ಕುಸಿತದಿಂದ ಮಾವು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿತ್ತು.

ಇದಲ್ಲದೆ, ಕರ್ನಾಟಕದ ಮಾವಿಗೆ ಆಂಧ್ರಪ್ರದೇಶದಲ್ಲಿ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಈ ಬಾರಿ ಮಾವು ಉತ್ತಮ ಇಳುವರಿ ಕಂಡಿದ್ದರೂ, ಬೆಲೆ ಕುಸಿತವಾಗಿರುವುದರಿಂದ ಆಂಧ್ರದಲ್ಲಿ ಮಾವಿನ ಹಣ್ಣು ಆಮದಿಗೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಸಿಎಂ ಕೋರಿದ್ದರು.

Read More
Next Story