LIVE ಪ್ರತಿಭಟನಾ ಸಮಾವೇಶ | ಮಹದೇವಪುರ ಮಾತ್ರವಲ್ಲ, ಇಡೀ ದೇಶಾದ್ಯಂತ ಮತಕಳವು - ರಾಹುಲ್‌ ಗಾಂಧಿ ಗಂಭೀರ ಆರೋಪ
x

ಪ್ರತಿಭಟನಾ ಸಮಾವೇಶ | ಮಹದೇವಪುರ ಮಾತ್ರವಲ್ಲ, ಇಡೀ ದೇಶಾದ್ಯಂತ ಮತಕಳವು - ರಾಹುಲ್‌ ಗಾಂಧಿ ಗಂಭೀರ ಆರೋಪ

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಚುನಾವಣಾ ಅಕ್ರಮದ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು


ಕರ್ನಾಟಕದ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು 1,00,250 ಮತಕಳವು ಮಾಡಿರುವುದು ನೂರಕ್ಕೆ ನೂರು ಸತ್ಯ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕಾದ ಚುನಾವಣಾ ಆಯೋಗವು ಬಿಜೆಪಿ ಆಣತಿಯಂತೆ ವರ್ತಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಮತಕಳವು ಕುರಿತ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಮತಕಳವು ಆರೋಪ ಮಾಡಿದ ಕಾರಣ ಚುನಾವಣಾ ಆಯೋಗ ನನಗೆ ನೋಟಿಸ್‌ ನೀಡಿದೆ. ಪ್ರತಿ ಮತ ಕಳುವಾಗಿರುವುದನ್ನು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ. ಮಹದೇವಪುರದಲ್ಲಿ ಮಾತ್ರವಲ್ಲ, ಇಡೀ ದೇಶದ ಎಲ್ಲೆಡೆ ಮತಕಳವು ನಡೆದಿದೆ ಎಂದು ದೂರಿದರು.

ಚುನಾವಣೆಯ ಮಾಹಿತಿ ಬಹಿರಂಗಪಡಿಸಲು ಒತ್ತಾಯಿಸಿದರೆ ಚುನಾವಣಾ ಆಯೋಗ ಅದನ್ನು ನಿರಾಕರಿಸುತ್ತದೆ. ಕೇಂದ್ರ ಸರ್ಕಾರದ ಆಣತಿಯಂತೆ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣದ ದೃಶ್ಯಗಳನ್ನು ಡಿಲೀಟ್‌ ಮಾಡಿದೆ. ಅಲ್ಲದೇ ನಾವು ಕೇಳುವ ಪ್ರತಿ ಮಾಹಿತಿಯನ್ನು ಅಳಿಸಿ ಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಚುನಾವಣಾ ಆಯೋಗ ಕೂಡಲೇ ಅಗತ್ಯ ಮಾಹಿತಿ ನೀಡದೇ ಹೋದರೆ ಒಂದಲ್ಲ, ಎರಡಲ್ಲ. ಸುಮಾರು 25 ಕ್ಷೇತ್ರದ ಮತಕಳವು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗುರುವಾರ ರಾಹುಲ್‌ ಗಾಂಧಿ ಅವರು ಮತಕಳವು ಆರೋಪಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಹಲವರು ಭಾಗವಹಿಸಲಿದ್ದಾರೆ.

ಚುನಾವಣಾ ಆಯೋಗದ ಕಚೇರಿಗೆ ಕಾಲ್ನಡಿಗೆ ಜಾಥಾ

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಮಾವೇಶ ಮುಗಿದ ಬಳಿಕ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ನಾಯಕರೊಂದಿಗೆ ಮುಖ್ಯ ಚುನಾವಣಾ ಅಧಿಕಾರಿಯನ್ನು ಕಾಲ್ನಡಿಗೆಯಲ್ಲೇ ತೆರಳಿ ದೂರು ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಕಳವು ನಡೆದಿದೆ ಎಂಬ ತಮ್ಮ ಆರೋಪ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ವಿವರಣೆ ನೀಡಲಿದ್ದಾರೆ. ಈಗಾಗಲೇ ಆಯೋಗಕ್ಕೆ ದಾಖಲೆ ಸಲ್ಲಿಸುವಂತೆ ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಮನವಿ ಮಾಡಿದ್ದಾರೆ.

ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ ದಾಖಲೆಗಳನ್ನು ಸಹಿ ಸಮೇತ ಆಯೋಗಕ್ಕೆ ಸಲ್ಲಿಸುವಂತೆ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಚುನಾವಣಾ ಆಯೋಗ ತಿರುಗೇಟು

ಮಹದೇವಪುರದಲ್ಲಿ ಮತಕಳವು ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ಮತದಾರರ ಪಟ್ಟಿ ಪಾರದರ್ಶಕವಾಗಿ ತಯಾರಿಸಲಾಗುತ್ತದೆ ಎಂಬುದು ನಿಮಗೂ ಗೊತ್ತಿದೆ. ಆದರೂ, ಮತಕಳವು ಬಗ್ಗೆ ಆರೋಪ ಮಾಡಿದ್ದೀರಿ, ಚುನಾವಣೆಗೂ ಮುನ್ನ ಕಾಂಗ್ರೆಸ್‌ ನಾಯಕರಿಗೂ ಮತದಾರರ ಪಟ್ಟಿ ನೀಡಲಾಗಿರುತ್ತದೆ. 2024 ರ ಕರಡು ಪ್ರತಿ ಮತ್ತು 2025 ರ ಅಂತಿಮಪಟ್ಟಿ ನೀಡಿದಾಗ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಈಗ ಮಾಧ್ಯಮಗೋಷ್ಠಿಯಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರು ಇದ್ದಾರೆ ಎಂದು ತೋರಿಸಿದ್ದೇಕೆ ಎಂದು ಪ್ರಶ್ನಿಸಿದೆ.

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1,14,046 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದರಲ್ಲಿ 1,00,250 ಮತಗಳು ನಕಲಿಯಾಗಿವೆ. ಈ ಪೈಕಿ 11,965 ಮತದಾರರು ನಕಲಿಯಾಗಿದ್ದರೆ, 40,009 ಖೊಟ್ಟಿ ವಿಳಾಸ ಹೊಂದಿದ್ದಾರೆ. 10,452 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. 4132 ನಕಲಿ ಫೋಟೋಗಳಿವೆ. 33,692 ಮಂದಿ ಫಾರಂ-6 ಅನ್ನು ದುರುಪಯೋಗಪಡಿಸಿಕೊಂಡು ಹೊಸ ಮತದಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ರಾಹುಕ್‌ ಗಾಂಧಿ ಅವರು ದಾಖಲೆ ಸಮೇತ ಆರೋಪ ಮಾಡಿದ್ದರು.

Live Updates

  • 8 Aug 2025 12:32 PM IST

    ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನಿಂದ ದೂರು; ಆರು ನಾಯಕರಿಗೆ ಮಾತ್ರ ಅವಕಾಶ

    ಮತಗಳ್ಳತನ ಆರೋಪ‌ ವಿಚಾರಕ್ಕೆ ಸಂಬಂಧಪಟ್ಟಂತೆ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ  ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಬಳಿಕ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದ್ದು, 6 ನಾಯಕರಿಗಷ್ಟೇ ಅನುಮತಿ ನೀಡಲಾಗಿದೆ.

    ರಾಜ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ನಾಯಕರಿಂದ ದೂರು ಹಿನ್ನೆಲೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗಷ್ಟೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ದೂರು ಸಲ್ಲಿಸಲು ಅನುಮತಿ ನೀಡಿದ್ದಾರೆ.

  • 8 Aug 2025 11:18 AM IST

    ಚುನಾವಣಾ ಆಯೋಗಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ದೂರು

    ಫ್ರೀಡಂ ಪಾರ್ಕಿನಲ್ಲಿ ಮತಗಳ್ಳತನ ವಿಚಾರವಾಗಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ರಾಹುಲ್‌ ಗಾಂಧಿ ಅವರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಇನ್ನೂ ಬಂದಿಲ್ಲ.

    ರಾಹುಲ್ ಗಾಂಧಿ ಆಸೀನರಾಗುವ ವೇದಿಕೆಯಲ್ಲಿ ಸಚಿವರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ವೇದಿಕೆಯಲ್ಲಿ ಶಾಸಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

    ವೇದಿಕೆಯಲ್ಲಿ ಭಾಷಣ ಬಳಿಕ 100 ಮೀಟರ್ ದೂರದಲ್ಲಿರುವ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

  • 8 Aug 2025 10:08 AM IST

    ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ - ಬಿಜೆಪಿ ತೀವ್ರ ಆಕ್ರೋಶ, ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸವಾಲ್

    ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 

     ಲೋಕಸಭೆಯ ವಿರೋಧ ಪಕ್ಷದ ನಾಯಕರು ರಾಹುಲ್‌ ಗಾಂಧಿ ಅವರೆ,ನೀವು ಇಂದು ಬೆಳಿಗ್ಗೆ ನಿಮ್ಮ ಪಕ್ಷ ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿದ್ದಿರಿ.

    ಯಾವುದೇ ವಿಷಯದ ಕುರಿತು ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಹೀಗಾಗಿ ನೀವು ಪ್ರತಿಭಟಿಸಲು ಸರ್ವ ಸ್ವತಂತ್ರರು. ಆದರೆ ಈ ಕೆಳಗಿನ ಪ್ರಶ್ನೆಗಳಿಗೆ ಮಾತ್ರ ನಿಮ್ಮಿಂದ ನೇರವಾದ ಹಾಗೂ ಸಮಂಜಸವಾದ ಉತ್ತರವನ್ನು ಬಯಸುತ್ತೇವೆ. ಏಕೆಂದರೆ ಈ ಪ್ರಶ್ನೆಗಳು ಕರ್ನಾಟಕದ ಜನತೆಯದ್ದಾಗಿವೆ. ಬಹಳಷ್ಟು ದಿನಗಳಿಂದ ಕನ್ನಡಿಗರು ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವನ್ನು ಬಯಸುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಉತ್ತರಿಸುತ್ತಿರಾ ಎಂದು ನಾವು ನಂಬಿದ್ದೇವೆ ಎಂದು ಕಿಡಿಕಾರಿದ್ದಾರೆ.

  • ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ನಿಖಿಲ್ ಕುಮಾರಸ್ವಾಮಿ
    8 Aug 2025 9:48 AM IST

    ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ನಿಖಿಲ್ ಕುಮಾರಸ್ವಾಮಿ

    ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಅವರಿಗೆ ಸ್ವಾಗತಿಸಿದ್ದಾರೆ. 'ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ'ದ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಗುರುವಾರ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇಂದು ಪ್ರತಿಭಟನೆ ನಡೆಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ರಾಹುಲ್ ಗಾಂಧಿ ದೂರು ಸಲ್ಲಿಕೆ ಮಾಡಲಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಟ್ವೀಟ್

    ಶ್ರೀ ರಾಹುಲ್ ಗಾಂಧಿ ಅವರೇ, ನಮ್ಮ ಕರ್ನಾಟಕಕ್ಕೆ ಸ್ವಾಗತ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

    ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ.

    ರಾಜ್ಯದ GSDPಯಲ್ಲಿ ಸಾಲದ ಪ್ರಮಾಣ 24.91% ಆಗಿದೆ.

    ನಿಮ್ಮ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ಬೇಕಾಗಿರುವುದು 55 ಸಾವಿರ ಕೋಟಿ, ಕಳೆದ 3 ವರ್ಷದಿಂದ ನಿಮ್ಮ ಸರ್ಕಾರ ಮಾಡುತ್ತಿರುವ ಸಾಲ ವರ್ಷಕ್ಕೆ 1 ಲಕ್ಷ ಕೋಟಿ.

    ⁠ನಿಮ್ಮ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ.

    ತಾಯಿ ಮಹಾಲಕ್ಷ್ಮಿಯು ಹಣಕಾಸು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಸರ್ವಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

  • 8 Aug 2025 9:47 AM IST

    ʼಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿ ಪಿತೂರಿʼ

    ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ (Benefit of the doubt) ಪಡೆಯುವ ಕಿಡಿಗೇಡಿ ಪಿತೂರಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ. ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದು ಹೇಳಿದ್ದು, ರಾಹುಲ್‌ ಗಾಂಧಿ ಆರೋಪವನ್ನು ಟೀಕಿಸಿದ್ದಾರೆ.


  • ಫ್ರೀಡಂ ಪಾರ್ಕಿನಲ್ಲಿ ಬಿಗಿ ಪೊಲೀಸ್ ಭದ್ರತೆ
    8 Aug 2025 9:38 AM IST

    ಫ್ರೀಡಂ ಪಾರ್ಕಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ರಾಹುಲ್ ಗಾಂಧಿ ಪ್ರತಿಭಟನಾ ಸಮಾವೇಶ ಹಿನ್ನೆಲೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸಾವಿರಾರು ಪೊಲೀಸರು ಸ್ಥಳದಲ್ಲಿದ್ದು, ಅಧಿಕಾರಿಗಳು ಮಹತ್ವದ ಸೂಚನೆ ನೀಡುತ್ತಿದ್ದಾರೆ. 

    ಇನ್ನು ಚುನಾವಣಾ ಆಯೋಗದ ಮುಂದೆಯೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಅಗಮಿಸುವ ಕಾರಣ ಬಿಗಿ ಭದ್ರತೆ ಒದಗಿಸಲಾಗಿದೆ.

Read More
Next Story