ತರಾತುರಿ ಬೇಡ, ಜಾತಿ ಸಮೀಕ್ಷೆ ಮುಂದೂಡಿ: ಸರ್ಕಾರದ ಮೇಲೆ ಒಕ್ಕಲಿಗ ಮುಖಂಡರಿಂದ ಒತ್ತಡ
x

ಕಾಂಗ್ರೆಸ್ ಪರಿಷತ್ ಸದಸ್ಯ ಪುಟ್ಟಣ್ಣ

ತರಾತುರಿ ಬೇಡ, ಜಾತಿ ಸಮೀಕ್ಷೆ ಮುಂದೂಡಿ: ಸರ್ಕಾರದ ಮೇಲೆ ಒಕ್ಕಲಿಗ ಮುಖಂಡರಿಂದ ಒತ್ತಡ

ಸಮೀಕ್ಷೆ ಪ್ರಾರಂಭವಾಗಿ ಒಂದು ದಿನ ಕಳೆದರೂ, ಸರ್ವರ್ ಸಮಸ್ಯೆ ಮತ್ತು ಇಂಟರ್ನೆಟ್ ಸಂಪರ್ಕದ ತೊಂದರೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಮೀಕ್ಷೆ ನಡೆದಿಲ್ಲ ಎಂದು ಪುಟ್ಟಣ್ಣ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ಸದ್ಯಕ್ಕೆ ಮುಂದೂಡಬೇಕೆಂದು ಒಕ್ಕಲಿಗ ಸಮುದಾಯದ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಮೀಕ್ಷೆಯು ಆರಂಭದಲ್ಲೇ ಹಲವು ಗೊಂದಲಗಳಿಂದ ಕೂಡಿದ್ದು, ತರಾತುರಿಯಲ್ಲಿ ಸಮೀಕ್ಷೆ ನಡೆಸುವುದು ಸರಿಯಲ್ಲ ಎಂದು ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಪರಿಷತ್ ಸದಸ್ಯ ಪುಟ್ಟಣ್ಣ, "ಸಮೀಕ್ಷೆ ಆರಂಭವಾಗಿ ಒಂದು ದಿನ ಕಳೆದರೂ, ಸರ್ವರ್ ಸಮಸ್ಯೆ ಮತ್ತು ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ. ಅಲ್ಲದೆ, ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನೂ ನೀಡಿಲ್ಲ. ರಜಾ ದಿನಗಳನ್ನು ಹೊರತುಪಡಿಸಿ, ಕಡಿಮೆ ಅವಧಿಯಲ್ಲಿ ಏಳು ಕೋಟಿ ಜನರ ಸಮೀಕ್ಷೆ ನಡೆಸುವುದು ಕಷ್ಟಸಾಧ್ಯ," ಎಂದು ಹೇಳಿದರು.

ಈ ಸಮೀಕ್ಷೆ ವಿರುದ್ಧ ಈಗಾಗಲೇ ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ, ತೀರ್ಪು ಬರುವವರೆಗೂ ಕಾಯುವುದು ಸೂಕ್ತ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಸರ್ಕಾರವು ಸಮೀಕ್ಷೆಯನ್ನು ಮುಂದೂಡಬೇಕು ಎಂಬುದು ಒಕ್ಕಲಿಗ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

'ಗೌಡ ಕ್ರಿಶ್ಚಿಯನ್' ಹೆಸರು ಕೈಬಿಟ್ಟ ಆಯೋಗ

ಇತ್ತೀಚೆಗೆ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ 'ಗೌಡ ಕ್ರಿಶ್ಚಿಯನ್' ಎಂಬ ಪದವನ್ನು ಸೇರಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಪುಟ್ಟಣ್ಣ, "ಸಮುದಾಯದ ವಿರೋಧದ ನಂತರ ಹಿಂದುಳಿದ ವರ್ಗಗಳ ಆಯೋಗವು ಆ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದೆ. ಸಮೀಕ್ಷೆಯನ್ನು ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ಬದಲಾಗಿ, ಅದನ್ನು ಯಾವುದೇ ಗೊಂದಲಗಳಿಲ್ಲದೆ, ವೈಜ್ಞಾನಿಕವಾಗಿ ಮತ್ತು ಸಾಕಷ್ಟು ಸಮಯ ನೀಡಿ ನಡೆಸಬೇಕು ಎಂಬುದೇ ನಮ್ಮ ಆಗ್ರಹ," ಎಂದು ಸ್ಪಷ್ಟಪಡಿಸಿದರು.

ಈ ವಿಷಯದ ಕುರಿತು ಸಚಿವ ಸಂಪುಟ ಸಭೆ ಅಥವಾ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದು ಯಾವುದೇ ಏಕಪಕ್ಷೀಯ ನಿರ್ಧಾರವಲ್ಲ ಎಂದು ಪುಟ್ಟಣ್ಣ ತಿಳಿಸಿದರು.

Read More
Next Story