“ವಿಶ್ವಗುರು ಬಸವಣ್ಣ” ಪಠ್ಯದಲ್ಲಿ “ವೀರಶೈವ” ಪದ ಬೇಡ: ಮುಖ್ಯಮಂತ್ರಿಗೆ ಪತ್ರ ಬರೆದ ಸಾಣೇಹಳ್ಳಿ ಸ್ವಾಮೀಜಿ
x
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

“ವಿಶ್ವಗುರು ಬಸವಣ್ಣ” ಪಠ್ಯದಲ್ಲಿ “ವೀರಶೈವ” ಪದ ಬೇಡ: ಮುಖ್ಯಮಂತ್ರಿಗೆ ಪತ್ರ ಬರೆದ ಸಾಣೇಹಳ್ಳಿ ಸ್ವಾಮೀಜಿ

ಕರ್ನಾಟಕದ 9ನೇ ತರಗತಿಯ 'ಸಮಾಜ ವಿಜ್ಞಾನ' ಭಾಗ-1 ಪಠ್ಯದಲ್ಲಿರುವ “ವಿಶ್ವಗುರು ಬಸವಣ್ಣನವರು - ಸಾಂಸ್ಕೃತಿಕ ನಾಯಕ” ಎಂಬ ಶೀರ್ಷಿಕೆಯ ಪಾಠದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬಾರದು. ಈ ಪಾಠಕ್ಕೆ “ವೀರಶೈವ” ಪದವನ್ನು ಸೇರಿಸಬಾರದು ಎಂದು ಸಾಣೇಹಳ್ಳಿ ತರಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.


ಕರ್ನಾಟಕದ 9ನೇ ತರಗತಿಯ 'ಸಮಾಜ ವಿಜ್ಞಾನ' ಭಾಗ-1 ಪಠ್ಯದಲ್ಲಿರುವ “ವಿಶ್ವಗುರು ಬಸವಣ್ಣನವರು - ಸಾಂಸ್ಕೃತಿಕ ನಾಯಕ” ಎಂಬ ಶೀರ್ಷಿಕೆಯ ಪಾಠದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬಾರದು. ಈ ಪಾಠಕ್ಕೆ “ವೀರಶೈವ” ಪದವನ್ನು ಸೇರಿಸಬಾರದು ಎಂದು ಸಾಣೇಹಳ್ಳಿ ತರಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.

ಪಠ್ಯದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ವೀರಶೈವ ಪದವನ್ನು ಸೇರಿಸಬಾರದು. ವೀರಶೈವ ಎನ್ನುವ ಪದವನ್ನು ಸೇರ್ಪಡೆ ಮಾಡಿದರೆ, ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಪ್ರಚಾರ ಮಾಡಿದಂತೆ. ಹೀಗಾಗಿ, ಈಗ ಇರುವ ಪಾಠದ ಯಥಾವತ್ತು ಮಾದರಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾಣೇಹಳ್ಳಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ 'ವಚನ ಕಮ್ಮಟ'ದಲ್ಲಿ 70ಕ್ಕೂ ಹೆಚ್ಚು ಬಸವಪರಂಪರೆಯ ಮಠಾಧೀಶರು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಪಠ್ಯ ರಚನಾ ಸಮಿತಿಯು ಪರಿಷ್ಕಾರ ಮಾಡಿರುವ ಪಠ್ಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಹಿಂದಿನ ಸರ್ಕಾರದ ಪಠ್ಯ ರಚನಾ ಸಮಿತಿ ಬಸವೇಶ್ವರರ ಬಗ್ಗೆ ಮಾಡಿರುವ ದೋಷಗಳ ಬಗ್ಗೆ ಮಠಾಧೀಶರೆಲ್ಲ ಸೇರಿ ಮಾಧ್ಯಮಗಳ ಮೂಲಕ ಪ್ರತಿಭಟಿಸಿ, ಸರ್ಕಾರದ ಗಮನಕ್ಕೂ ತಂದು ಪಠ್ಯದಲ್ಲಿ ಸತ್ಯ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಕೊಡಲು ಒತ್ತಾಯಿಸಿದ್ದೆವು. ಆಗ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಷ್ಕರಿಸುವುದಾಗಿ ತಿಳಿಸಿತ್ತು ಎಂದು ಪತ್ರದಲ್ಲಿ ಶಿವಾಚಾರ್ಯ ಸ್ವಾಮೀಜಿ ಅವರು ಉಲ್ಲೇಖಿಸಿದ್ದಾರೆ.


2024ರಲ್ಲಿ 9ನೇ ತರಗತಿಯ 'ಸಮಾಜ ವಿಜ್ಞಾನ' ಭಾಗ - 1 ರಲ್ಲಿ 'ವಿಶ್ವಗುರು ಬಸವಣ್ಣನವರು ನಾಯಕ' ಎನ್ನುವ ಪಠ್ಯವಿದ್ದು, ಇದು ಬಸವಣ್ಣನವರಿಗೆ ನ್ಯಾಯ ಒದಗಿಸುವಂತಿದೆ. ಇದರಲ್ಲಿ ಬಸವಣ್ಣನವರು ಮತ್ತು ಅವರ ಕ್ರಾಂತಿಯನ್ನು ಕುರಿತಂತೆ ವಾಸ್ತವ ಅಂಶಗಳಿವೆ. ಈ ಪಠ್ಯದಲ್ಲಿ 'ವೀರಶೈವ' ಶಬ್ದ ಇಲ್ಲವೆಂದು `ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆʼಯಿಂದ ತಕರಾರು ಮಾಡಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ. ವರ್ಗ, ವರ್ಣ, ಲಿಂಗ ಬೇಧಗಳನ್ನು ಅಳಿಸಿ 'ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ' ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸಲು ಬಸವಣ್ಣನವರು 900 ವರ್ಷಗಳ ಹಿಂದೆ ಕ್ರಾಂತಿ ಮಾಡಿದ್ದು ಜಗತ್ತಿನ ಇತಿಹಾಸದಲ್ಲೇ ದಾಖಲಾಗಿದೆ ಎಂದು ಹೇಳಿದ್ದಾರೆ.

ಲಿಂಗತತ್ವದ ಮೂಲಕವೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು ಶ್ರಮಿಕ ವರ್ಗದ ಎಲ್ಲ ಕಾಯಕಜೀವಿಗಳನ್ನು ಒಗ್ಗೂಡಿಸಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ನ್ಯಾಯ ಎಂಬ ಸಮಾಜವಾದಿ ಪರಿಕಲ್ಪನೆಗಳ ಹಿನ್ನಲೆಯಲ್ಲಿ ಹೊಸ ಸಮಾಜವನ್ನು ನಿರ್ಮಿಸಿದ್ದು ವಚನಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಐತಿಹಾಸಿಕ ಕ್ರಾಂತಿ ಪುರುಷ ಬಸವಣ್ಣ ಅವರನ್ನು ವಿಶ್ವಗುರು ಎಂದು ಜಗತ್ತೇ ಗೌರವಿಸುತ್ತಿದೆ. ಅವರ ಕ್ರಾಂತಿಯ ಸ್ಮರಣೆ ಮತ್ತು ನವಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ವರ್ತಮಾನದಲ್ಲೂ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ವೀರಶೈವ ಪದ ಬಳಕೆಗೆ ವಿರೋಧ

9ನೇ ತರಗತಿಯ “ವಿಶ್ವಗುರು ಬಸವಣ್ಣನವರು - ಸಾಂಸ್ಕೃತಿಕ ನಾಯಕ” ಪಠ್ಯದಲ್ಲಿ ಯಾವುದೇ ಕಾರಣಕ್ಕೂ 'ವೀರಶೈವ' ಪದ ಸೇರಿಸಬಾರದು. ಈ ರೀತಿ ಮಾಡುವುದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಚಾರ ಮಾಡಿದಂತೆ. ಪ್ರಸ್ತುತ ಇರುವ ಪಠ್ಯವನ್ನೇ ಮುಂದುವರಿಸಲು ಬಸವ ಪರಂಪರೆಯ ಮಠಾಧೀಶರೆಲ್ಲರೂ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಬಸವಣ್ಣನವರನ್ನು ಲಿಂಗಾಯತ ಧರ್ಮದ ಧರ್ಮಗುರು ಎಂದು ಐತಿಹಾಸಿಕ ಆಧಾರಗಳು ಖಚಿತವಾಗಿ ಹೇಳುತ್ತಿರುವಾಗ ಆ ಸತ್ಯವನ್ನು ಮರೆಮಾಚಿ ಸುಳ್ಳನ್ನು ಪಠ್ಯಗಳಲ್ಲಿ ಸೇರ್ಪಡಿಸುವುದು ಸಮಂಜಸವಲ್ಲ. ನಾಡಿನ ಶರಣಕ್ರಾಂತಿಯ ಇತಿಹಾಸವನ್ನು ಆಳವಾಗಿ ಅರಿತಿರುವ ತಾವು ಸುಳ್ಳು ವದಂತಿಗಳಿಗೆ ಮಾನ್ಯತೆ ನೀಡಬಾರದು. ಯಾರ ಒತ್ತಾಯಕ್ಕೂ ಮಣಿಯದೆ ಈಗಿರುವ ಪಠ್ಯವನ್ನೇ ಮುಂದುವರಿಸುವಂತೆ ಎಲ್ಲ ಮಠಾಧೀಶರು ಮತ್ತೊಮ್ಮೆ ಒತ್ತಾಯ ಪೂರ್ವಕವಾಗಿ ವಿನಂತಿಸುತ್ತಿದ್ದೇವೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

Read More
Next Story