
ಅಪರಾಧಿ ನಾನಲ್ಲ: ಸಂದರ್ಶನದಲ್ಲಿ ವಿಜಯ್ ಮಲ್ಯ ಮಾತು! ಸುಳ್ಳಿನ ಸವಾರಿಯ ಸತ್ಯ ಶೋಧನೆ
ಮಲ್ಯ ಅವರು ಮಂಡಿಸುವ ವಿಷಯಗಳು ಮನವೊಲಿಸುವ ಒಂದು ಪ್ರಯತ್ನ. ಆದರೆ ಅವುಗಳ ಗಹನ ಪರಿಶೀಲನೆ ನಡೆಸಿದಾಗ ಅವೆಲ್ಲವೂ ನುಣುಚಿಕೊಳ್ಳುವ ತಂತ್ರ ಎಂಬುದನ್ನು ಸಾಬೀತುಪಡಿಸುತ್ತವೆ.
ಭಾರತದಿಂದ ಪಲಾಯನಗೈದು ಸುಮಾರು 9 ವರ್ಷಗಳ ಬಳಿಕ ವಿಜಯ್ ಮಲ್ಯ ಅಂತಿಮವಾಗಿ ಮಾತನಾಡಿದ್ದಾರೆ. ಅದೂ ನ್ಯಾಯಾಲಯದಲ್ಲಿ ಅಲ್ಲ, ಬದಲಿಗೆ ಪ್ರಭಾವಿ ರಾಜ್ ಶಮಾನಿ ಅವರಿಗೆ ನೀಡಿದ ನಾಲ್ಕು ಗಂಟೆಗಳ ಸಂದರ್ಶನದಲ್ಲಿ.
ಶಾಂತ ಮತ್ತು ಸ್ಪಷ್ಟವಾದ ಆದರೆ ಕಾಲದ ಹೊಡೆತಕ್ಕೆ ಸಿಲುಕಿದ ವಿಜಯ್ ಮಲ್ಯ, ತಮ್ಮನ್ನು ತಾವು ವಂಚಕನಾಗಿ ಅಲ್ಲ, ಬದಲಿಗೆ ವ್ಯವಸ್ಥೆಯಿಂದ ವಂಚನೆಗೊಳಗಾದ, ಮಾಧ್ಯಮಗಳಿಂದ ತಪ್ಪಾಗಿ ನಿರೂಪಿಸಲ್ಪಟ್ಟ ಹಾಗೂ ತಮ್ಮದಲ್ಲ ಎಂದು ಅವರು ಪ್ರತಿಪಾದಿಸುವ ವೈಫಲ್ಯಗಳಿಗಾಗಿ ಬೆನ್ನಟ್ಟಲ್ಪಟ್ಟ ಉದ್ಯಮಿಯಾಗಿ ಬಿಂಬಿಸಿಕೊಂಡರು.
ನಾಲ್ಕು ತಾಸುಗಳ ಸಂದರ್ಶನದ ಅವಧಿಯಲ್ಲಿ, ಮಲ್ಯ ಅವರು ತಮ್ಮನ್ನು ತಾವು ತಪ್ಪಾಗಿ ಗ್ರಹಿಸಿದ ಉದ್ಯಮಿಯಾಗಿ, ಪ್ರತಿಕೂಲ ಆರ್ಥಿಕ ಪರಿಸ್ಥಿತಿ, ಕಳಪೆ ನೀತಿ, ರಾಜಕೀಯ ಒತ್ತಡ ಮತ್ತು ಪಕ್ಷಪಾತ ಧೋರಣೆ ತೋರಿದ ಮಾಧ್ಯಮಗಳಿಂದ ಬಲಿಪಶುವಾದೆ ಎಂಬುದಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು.
"ಪರಂಪರಾಗತ ಮಾಧ್ಯಮಗಳು ಕಥೆಯ ಒಂದು ಭಾಗವನ್ನು ಮಾತ್ರ ತೋರಿಸುತ್ತವೆ" ಎಂಬುದು ಅವರು ಮುಂದಿಟ್ಟ ಆರೋಪ. ತಾವೇನು ಅಪರಾಧಿಯಲ್ಲ, ಬದಲಾಗಿ ಪರಿಸ್ಥಿತಿಯ ಬಲಿಪಶು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಮಲ್ಯ ಅವರು ನಿರೂಪಿಸಲು ಹೊರಟಿರುವ ಸತ್ಯಾಂಶಗಳು, ಕಾನೂನು ಸಂಬಂಧಿ ದಾಖಲೆಗಳು, ನ್ಯಾಯಾಲಯದ ತೀರ್ಪುಗಳು ಮತ್ತು ನಿಯಂತ್ರಕರು ಪತ್ತೆ ಮಾಡಿದ ಸಂಗತಿಗಳ ಭಾರದ ಅಡಿಯಲ್ಲಿ ಕುಸಿಯುತ್ತವೆ ಎಂಬುದು ಮಾತ್ರ ಸತ್ಯ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವರ ಈ ಹೇಳಿಕೆಗಳು ಅವರೇ ಆಯ್ಕೆ ಮಾಡಿಕೊಂಡ ಸತ್ಯವಾಗಿವೆ ಎಂಬುದು ವೇದ್ಯವಾಗುತ್ತದೆ.
ಸಾಲ ಮಾಡಿದ್ದು ನಾನಲ್ಲ!
"ನಾನು ಒಂದೇ ಒಂದು ಪೈಸೆ ಸಾಲ ಮಾಡಿಲ್ಲ, ಕಿಂಗ್ಫಿಶರ್ ಏರ್ಲೈನ್ಸ್ ಮಾಡಿದೆ."
ತಾಂತ್ರಿಕವಾಗಿ ಹೇಳುವುದಾದರೆ ನಿಖರವಾದ ಮಾತು. ಆದರೆ ಗಹನವಾಗಿ ಯೋಚನೆ ಮಾಡಿದರೆ ವಂಚನೆಯಿಂದ ಕೂಡಿದ ಮಾತು ಇದಾಗಿದೆ.
ಅವರು ಹೇಳಿರುವುದು ನಿಜ. ಸಾಲಗಳೆಲ್ಲ ಕಿಂಗ್ಫಿಶರ್ ಏರ್ಲೈನ್ಸ್ ಹೆಸರಿನಲ್ಲಿವೆ. ಆದರೆ ಮಲ್ಯ ಅವುಗಳಲ್ಲಿ ಹಲವು ವೈಯಕ್ತಿಕ ಗ್ಯಾರಂಟಿಗಳಿಗೆ ಸಹಿ ಮಾಡಿದ್ದಾರೆ, ಮತ್ತು ಭಾರತೀಯ ಹಾಗೂ ಬ್ರಿಟನ್ನಿನ ಕೋರ್ಟ್-ಗಳು ಅವರನ್ನು ಸಾಲ ಮರುಪಾವತಿಗೆ ನೀವೇ ಹೊಣೆಗಾರರು ಎಂದು ಹೇಳಿವೆ.
ವಸೂಲಾತಿ ಪ್ರಕ್ರಿಯೆಗಳನ್ನು ಆರಂಭಿಸಲು 2021ರಲ್ಲಿ ಬ್ರಿಟನ್ ಹೈಕೋರ್ಟ್ ಅವರನ್ನು ದಿವಾಳಿ ಎಂದು ಘೋಷಿಸಿತು. ಕಾನೂನು ಸಂಬಂಧಿ ತಾಂತ್ರಿಕ ಅಂಶಗಳನ್ನು ಬದಿಗಿಟ್ಟು ನೋಡಿದರೆ, ಮಲ್ಯ ಕೇವಲ ಷೇರುದಾರರಾಗಿರಲಿಲ್ಲ, ಬದಲಾಗಿ ಅವರು ಇಡೀ ಕಾರ್ಯಾಚರಣೆಯ ನಿಯಂತ್ರಣವನ್ನು ಚಲಾಯಿಸಿದ ಸಿಇಒ ಮತ್ತು ಪ್ರಾಯೋಜಕರಾಗಿದ್ದರು.
ಮಾಡಿರುವ ಸಾಲ ಸಂಪೂರ್ಣ ಕಾರ್ಪೊರೇಟ್ ಆಗಿದೆಯೇ ಹೊರತು ವೈಯಕ್ತಿಕವಲ್ಲ ಎಂದು ಅವರು ಮುಂದಿಡುವ ವಾದ ಅರ್ಧ ಸತ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
2015ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ಅವರು ಹೀಗೆ ಹೇಳಿದ್ದರು: "ಒಂದು ಸಾರ್ವಜನಿಕ ನಿಯಮಿತ ಸಂಸ್ಥೆಯಲ್ಲಿ, ಅಧ್ಯಕ್ಷನಾಗಿರುವ ಒಬ್ಬ ವ್ಯಕ್ತಿ, ಇಡೀ ಕಂಪನಿಯ ಹಣಕಾಸಿಗೆ ಹೇಗೆ ಜವಾಬ್ದಾರನಾಗುತ್ತಾನೆ? ಅದಕ್ಕೂ ನನ್ನ ಉಳಿದ ವ್ಯವಹಾರಗಳಿಗೂ ಏನು ಸಂಬಂಧ? ನಾನು ಈ ದೇಶದಲ್ಲಿ ವಿಶ್ವದ ಅತಿದೊಡ್ಡ ಸ್ಪಿರಿಟ್ಸ್ ಕಂಪನಿಯನ್ನು ಕಟ್ಟಿ ಬೆಳೆಸಿದ್ದೇನೆ."
ನಾಲ್ಕು ಸಂಧಾನದ ಪ್ರಸ್ತಾಪಗಳು
“ನಾಲ್ಕು ಬಾರಿ ಸಂಧಾನ ಪ್ರಸ್ತಾಪಗಳನ್ನು ಮುಂದಿಟ್ಟಿದ್ದೆ. ಯಾವುದನ್ನೂ ಒಪ್ಪಿಕೊಳ್ಳಲಿಲ್ಲ,” ಎಂದು ಅವರು ಹೇಳುತ್ತಾರೆ.
ಮಲ್ಯ ಇಲ್ಲಿ ಹೇಳದೇ ಇರುವ ಅಂಶಗಳು ಏನೆಂದರೆ; 2016 ರಲ್ಲಿ ಮಾಡಿದ 4,000 ಕೋಟಿ ರೂಗಳ ಪ್ರಸ್ತಾಪ, ಬಡ್ಡಿಯನ್ನೂ ಸೇರಿದಂತೆ ಒಟ್ಟು 9,000 ಕೋಟಿ ರೂ.ಗೂ ಹೆಚ್ಚಿನ ಬಾಕಿ ಮೊತ್ತಕ್ಕಿಂತ ಅದು ತೀರಾ ತೀರಾ ಕಡಿಮೆ. ಬ್ಯಾಂಕುಗಳು ಈ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದವು. ಯಾಕೆಂದರೆ ಅದರಲ್ಲಿ ಮಲ್ಯ ಬಯಸಿದ್ದು ದೊಡ್ಡ ಪ್ರಮಾಣದ ಕಡಿತ.
ನಂತರ, ಅವರು ದೇಶದಿಂದ ಕಾಲ್ಕಿತ್ತು ‘ಪಲಾಯನಗಾರ’ ಎಂದು ಘೋಷಿಸಲ್ಪಟ್ಟ ನಂತರ “ಷರತ್ತುರಹಿತ” ಪ್ರಸ್ತಾಪಗಳು ಅವರಿಂದ ಬಂದವು. ಜಾರಿ ಕ್ರಮದ ಸಂದರ್ಭದಲ್ಲಿ ಏರ್ಪಡುವ ಸಂಧಾನ ಮಾತುಕತೆಗಳು ಕಾರ್ಯತಂತ್ರದ ಕಾನೂನು ಯೋಜನೆಗಳಾಗಿರುತ್ತವೆಯೇ ಹೊರತು ಸದ್ಭಾವನೆಯಿಂದ ಕೂಡಿದ ಕಾರ್ಯಗಳಾಗುವುದಿಲ್ಲ.
14,000 ಕೋಟಿ ವಸೂಲಾತಿ
“ಬ್ಯಾಂಕುಗಳು ತಾವು ನೀಡಿದ ಸಾಲಕ್ಕಿಂತ ಹೆಚ್ಚು ಅಂದರೆ 14,000 ಕೋಟಿ ರೂ. ವಸೂಲಿ ಮಾಡಿವೆ,” ಎಂದು ಅವರು ವಾದಿಸುತ್ತಾರೆ.
ಅವರ ಈ ಮಾತು ಸರಿಯಾಗಿಯೇ ಇದೆ ಆದರೆ ಇದು ಅವರನ್ನು ನಿರಪರಾಧಿ ಎಂದು ಸಾಬೀತು ಮಾಡುವುದಿಲ್ಲ.
ಜಾರಿ ನಿರ್ದೇಶನಾಲಯವು ಮಲ್ಯ ಅವರ ಆಸ್ತಿಗಳನ್ನು ಜಪ್ತಿ ಮಾಡಿ ಮಾರಾಟ ಮಾಡಿದ ನಂತರ 14000 ಕೋಟಿ ರೂ. ವಸೂಲಿ ಮಾಡಲಾಗಿದೆ. ಇವು ಸ್ವಯಂಪ್ರೇರಿತ ಮರುಪಾವತಿಗಳಲ್ಲ. ಇದು ಯುನೈಟೆಡ್ ಬ್ರೂವರೀಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ನಲ್ಲಿ ಅಡಮಾನವಿಟ್ಟ ಷೇರುಗಳನ್ನು ಬಲವಂತವಾಗಿ ಮಾರಾಟ ಮಾಡಿದ ಹಣದಿಂದ ಬಂದಿದೆ. ವಸೂಲಾತಿಯು ಕಾನೂನು ಪ್ರಕ್ರಿಯೆಯ ಫಲಿತಾಂಶವೇ ಹೊರತು ಮಲ್ಯ ಅವರ ಔದಾರ್ಯವಲ್ಲ.
ಬ್ಯಾಂಕುಗಳು ತಾವು ನೀಡಿದ ಸಾಲಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿರುವುದು, ಮಲ್ಯ ತಮ್ಮ ಇಡೀ ಸಾಮ್ರಾಜ್ಯವನ್ನೇ ಹೇಗೆ ಅಡಮಾನವಿಟ್ಟಿದ್ದರು ಎಂಬ ಚಿತ್ರಣವನ್ನು ಅನಾವರಣಮಾಡುತ್ತದೆ.
ಏರ್-ಲೈನ್ ಕುಗ್ಗಿಸದಿರಿ
“ವಿಮಾನಯಾನ ಸಂಸ್ಥೆಯನ್ನು ಯಾವ ಕಾರಣಕ್ಕೂ ಕುಗ್ಗಿಸಬೇಡಿ ಎಂದು ಸರ್ಕಾರ ನನಗೆ ಹೇಳಿತು.”
ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರನ್ನೂ ಶಾಮೀಲುಗೊಳಿಸುವ ಈ ಹೇಳಿಕೆಯು ಕಟ್ಟುಕಥೆ ಮತ್ತು ರುಜುವಾತುಪಡಿಸಲು ಸಾಧ್ಯವಿಲ್ಲದ್ದು. 2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವೆಚ್ಚಗಳ ಕಡಿತ ಮಾಡುವುದು ತಮ್ಮ ಉದ್ದೇಶವಾಗಿತ್ತು. ಆದರೆ ಉದ್ಯೋಗಗಳನ್ನು ಉಳಿಸುವ ದೃಷ್ಟಿಯಿಂದ ಕಿಂಗ್ಫಿಶರ್ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಸರ್ಕಾರ ಒತ್ತಾಯಿಸಿತು ಎಂದು ಮಲ್ಯ ಹೇಳುತ್ತಾರೆ.
ಇದು ನಿಜವಾಗಿರಲೂಬಹುದು. ಆದರೆ, ಅಂತಿಮ ನಿರ್ಧಾರವೇನಿದ್ದರೂ ಕಂಪನಿಯ ಆಡಳಿತ ಮಂಡಳಿಗೆ ಸೇರಿದ್ದಾಗಿತ್ತು. ಏರ್ ಡೆಕ್ಕನ್ ಸ್ವಾಧೀನಪಡಿಸಿಕೊಳ್ಳುವಂತೆ ಅಥವಾ ಹಣ ಸೋರಿಕೆಗೆ ದಾರಿ ಮಾಡಿದ ದ್ವಿ-ವಿಮಾನಯಾನ ಮಾದರಿ ನಿರ್ವಹಿಸುವಂತೆ ಯಾವುದೇ ಸಚಿವರು ಕಿಂಗ್ಫಿಶರ್ಗೆ ಆದೇಶಿಸಿರಲಿಲ್ಲ. ತಾನು ಮಾಡಿದ ಕಾರ್ಯತಂತ್ರದ ವೈಫಲ್ಯಕ್ಕೆ ಸರ್ಕಾರವನ್ನು ದೂಷಿಸುವುದು ಅನುಕೂಲಸಿಂಧು ಧೋರಣೆಯಾಗಿದೆ.
ಕಿಂಗ್ಫಿಶರ್ ಏರ್ಲೈನ್ಸ್ ಅಷ್ಟರಲ್ಲಾಗಲೇ ಸುಮಾರು 1,000 ಕೋಟಿ ರೂ.ಗಳ ನಷ್ಟದಲ್ಲಿತ್ತು. ಅಂತಹುದೇ ರೀತಿಯ ನಷ್ಟಗಳನ್ನು ಎದುರಿಸುತ್ತಿದ್ದ ಮತ್ತೊಂದು ವಿಮಾನಯಾನ ಸಂಸ್ಥೆ-ಏರ್ ಡೆಕ್ಕನ್-ನ್ನು ಸ್ವಾಧೀನಪಡಿಸಿಕೊಳ್ಳುವ ಹಿಂದಿನ ತರ್ಕವಾದರೂ ಏನು? ಗಣಿತದಲ್ಲಿ ಎರಡು ಋಣಾತ್ಮಕ ಸಂಖ್ಯೆಗಳು ಧನಾತ್ಮಕವಾಗಬಹುದು, ಆದರೆ ಖಂಡಿತವಾಗಿಯೂ ಲಾಭ ಮತ್ತು ನಷ್ಟವನ್ನು ಅದಕ್ಕೆ ತಳಕುಹಾಕಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸಲು, ದೊಡ್ಡ ಮಟ್ಟದ ಸಂಪನ್ಮೂಲಗಳು ಬೇಕಾಗುತ್ತವೆ. ಜೊತೆಗೆ ಒಟ್ಟು 2,000 ಕೋಟಿ ರೂ.ಗಳ ನಷ್ಟವನ್ನು ಬಗಲಲ್ಲಿ ಇಟ್ಟುಕೊಂಡರೆ ಯಾವುದೆ ವಿಮಾನಯಾನ ಸಂಸ್ಥೆಗೆ ಯಾವಾಗಲೂ ನಷ್ಟದ ಬಾಬತ್ತೇ ಆಗುತ್ತದೆ.
ಏರ್ ಡೆಕ್ಕನ್ ಸ್ವಾಧೀನಪಡಿಸಿಕೊಳ್ಳುವ ಮೂಲಕ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಹಕ್ಕನ್ನು ಕಿಂಗ್ಫಿಶರ್ ಪಡೆದುಕೊಂಡಿತು, ಆದರೆ ಹಾಗೆ ಮಾಡುವುದು ದೇಶೀಯ ಕಾರ್ಯಾಚರಣೆಗಳನ್ನು ನಡೆಸುವುದಕ್ಕಿಂತ ದುಬಾರಿ ಎಂಬುದು ಗಮನಾರ್ಹ.
“ನಾನು ಹಣ ದುರುಪಯೋಗ ಮಾಡಿ. ನನ್ನ ಸ್ವಂತ ನಿಧಿಯಿಂದ 3,000 ಕೋಟಿ ರೂ. ಹೂಡಿಕೆ ಮಾಡಿದ್ದೇನೆ.”
ಈ ವಿಚಾರದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಭಿನ್ನಾಭಿಪ್ರಾಯ ಹೊಂದಿವೆ. ಸಾಲದ ಹಣವನ್ನು ಶೆಲ್ ಕಂಪನಿಗಳು, ವಿದೇಶಿ ಖಾತೆಗಳು ಮತ್ತು ಮಲ್ಯ ಅವರದ್ದೇ ಆದ ಎಫ್1 ತಂಡಕ್ಕೆ ವರ್ಗಾಯಿಸಲಾಗಿದೆ ಎಂದು ಅನೇಕ ಚಾರ್ಜ್ಶೀಟ್ಗಳು ಆರೋಪಿಸುತ್ತವೆ. ಮಲ್ಯ ಅವರ ಗಡಿಪಾರಿಗೆ ಅನುಮೋದನೆ ನೀಡಿದ ಬ್ರಿಟನ್ ಕೋರ್ಟ್ “ತಪ್ಪು ನಿರೂಪಣೆಯ ಸ್ಪಷ್ಟ ಪುರಾವೆ" ಮತ್ತು “ನಿಧಿಗಳ ತಿರುಚುವಿಕೆ" ಎಂದು ಸ್ಪಷ್ಟವಾಗಿ ಹೇಳಿದೆ.
“ಇಡಿ ವಶಪಡಿಸಿಕೊಂಡ ಆಸ್ತಿಗಳಾದ ಕ್ರೀಡಾ ದೋಣಿಗಳು, ಆಸ್ತಿಗಳು, ಷೇರುಗಳು ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿರಲಿಲ್ಲ”
ದೋಷಪೂರಿತ ಹೇಳಿಕೆ
“ನಾನು ನಿಜವಾಗಿಯೂ ಕಳ್ಳನೇ ಆಗಿದ್ದರೆ, ಬ್ಯಾಂಕುಗಳು ತಮ್ಮ ಹಣವನ್ನು ಹೇಗೆ ವಸೂಲಿ ಮಾಡಿದವು?”
ಬಹುಶಃ ಮಲ್ಯ ಅವರ ಹೇಳಿಕೆಗಳಲ್ಲಿಯೇ ಅತ್ಯಂತ ಧೈರ್ಯದ ಮತ್ತು ಹೆಚ್ಚು ದೋಷಪೂರಿತವಾದುದು.
ವಸೂಲಿ ಮಾಡಿದರೆ ವಂಚನೆ ಮಾಫ್ ಎಂದು ಕಾನೂನು ಯಾವತ್ತೂ ಹೇಳುವುದಿಲ್ಲ. ಅದೇ ರೀತಿ ನಂತರದ ಮರುಪಾವತಿಯೂ ದುರ್ನಡತೆಯನ್ನು ನಿವಾರಣೆ ಮಾಡುವುದಿಲ್ಲ. ಇಂತಹ ತರ್ಕಗಳನ್ನೆಲ್ಲ ಒಪ್ಪಿಕೊಂಡರೆ, ಪ್ರತಿಯೊಬ್ಬ ಆರ್ಥಿಕ ಅಪರಾಧಿಯೂ ತನ್ನ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ನಿರಪರಾಧಿ ಎಂದು ಘೋಷಿಸಿಕೊಳ್ಳಬಹುದು. ಹಣ ವಸೂಲಿ ಮಾಡಲಾಗಿದೆಯೇ ಎಂಬುದು ಪ್ರಶ್ನೆಯಲ್ಲ, ಬದಲಿಗೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದೆಯೇ, ಬೇರೆಡೆಗೆ ವರ್ಗಾಯಿಸಲಾಗಿದೆಯೇ ಅಥವಾ ತಪ್ಪು ನಿರೂಪಣೆಯ ಮೂಲಕ ಪಡೆಯಲಾಗಿದೆಯೇ ಎಂಬುದೇ ಮುಖ್ಯವಾಗುತ್ತದೆ. ಆ ವಿಷಯದಲ್ಲಿ, ನ್ಯಾಯಾಲಯಗಳು ಪದೇ ಪದೇ ಅವರ ವಿರುದ್ಧ ತೀರ್ಪು ನೀಡಿವೆ.
ಕಾನೂನುಬದ್ಧವಾಗಿ ಭಾರತ ತೊರೆದೆ
"ನಾನು ಓಡಿಹೋಗಲಿಲ್ಲ, ನಾನು ಕಾನೂನುಬದ್ಧವಾಗಿಯೇ ಭಾರತವನ್ನು ತೊರೆದೆ."
2016ರ ಮಾರ್ಚ್ 2 ರಂದು ಮಲ್ಯ ಅವರು ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ಲಂಡನ್ಗೆ ಹಾರಿದರು. ಅವರು ಬಹಿರಂಗವಾಗಿಯೇ ಪ್ರಯಾಣ ಕೈಗೊಂಡರು, ಆದರೆ ಬ್ಯಾಂಕುಗಳು ಅವರನ್ನು ತಡೆಯಲು ಸುಪ್ರೀಂ ಕೋರ್ಟ್ಗೆ ಮೊರೆ ಹೋದ ಒಂದು ದಿನದ ನಂತರ ಹಾಗೆ ಮಾಡಿದರು. ಸಿಬಿಐ ಲುಕ್ಔಟ್ ಸುತ್ತೋಲೆ ಹೊರಡಿಸಿತ್ತು ಆದರೆ ಅದನ್ನು “report departure” (ನಿರ್ಗಮನ ವರದಿ) ಸೂಚನೆ ಮಟ್ಟಕ್ಕೆ ಇಳಿಸಿತ್ತು – ಈ ತಪ್ಪನ್ನು ನಂತರ ಒಪ್ಪಿಳ್ಳಲಾಯಿತು. ಕಾನೂನುಬದ್ಧವಾಗಿ ಹೇಳುವುದಾದರೆ ಅವರು ಪರಾರಿಯಾಗಲಿಲ್ಲ. ಆದಾಗ್ಯೂ, ಅವರು ಸಮನ್ಸ್ಗಳಿಗೆ ಉತ್ತರಿಸುವ ಬದಲಿಗೆ ಗಡಿಪಾರು ಆಯ್ಕೆ ಮಾಡಿಕೊಂಡರು. ಅದು ಅಕ್ರಮ ವಿಮಾನಯಾನವಲ್ಲ. ಬದಲಿಗೆ ಅದು ಪೂರ್ವಯೋಜಿತ ವಂಚನೆ.
ಹಾಗೆ ಅವರು ದೇಶ ತೊರೆದ ನಂತರ, ಹೇಳಿಕೆಯನ್ನು ಹೊರಡಿಸಿದರು; ತಾವು ದೇಶದಿಂದ ಪಲಾಯನ ಮಾಡಿಲ್ಲ, ಆದರೆ ಕೆಲಸದ ನಿಮಿತ್ತ ವಿದೇಶಕ್ಕೆ ಆಗಾಗ್ಗೆ ತೆರಳುವುದಾಗಿ ಮತ್ತು ಭಾರತದಲ್ಲಿ ಇ.ಡಿ.ಯಂತಹ ಯಾವುದೇ ಅಧಿಕಾರಿಗಳು ತಮ್ಮನ್ನು ಕರೆದು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಕೇಳಿದರೆ ಮೊದಲು ಹಿಂತಿರುಗುವ ಮತ್ತು ಕಾನೂನು ಪಾಲಿಸುವ ಪ್ರಜೆ ಎಂಬುದು ಅವರ ಹೇಳಿಕೆಯ ಸಾರಾಂಶ.
ಯಾವಾಗ ಅವರು ಲಂಡನ್ಗೆ ಹೋದರೋ ಅಲ್ಲಿ ತಮ್ಮ ವರಸೆ ಬದಲಿಸಿದರು. ಅಲ್ಲಿಂದ ಮತ್ತೊಂದು ಹೇಳಿಕೆ ನೀಡಿ, ಬಂಧನ ಮತ್ತು ಕಿರುಕುಳ ನೀಡುತ್ತಾರೆ ಎಂಬ ಭಯ ಇರುವುದರಿಂದ ದೇಶಕ್ಕೆ ಹಿಂತಿರುಗುವುದಿಲ್ಲ ಎಂದರು. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದೇ ಹೌದಾದರೆ ದೇಶಕ್ಕೆ ಹಿಂತಿರುಗಬೇಕಿತ್ತು ಮತ್ತು ಅವರ ವಿರುದ್ಧದ ಪ್ರಕರಣಗಳನ್ನು ಎದುರಿಸಬೇಕಿತ್ತು.
'ನ್ಯಾಯಸಮ್ಮತ ವಿಚಾರಣೆ'ಯ ಸಮಸ್ಯೆ
“ನಾನು ನ್ಯಾಯಸಮ್ಮತವಾದ ವಿಚಾರಣೆಯ ಭರವಸೆ ನೀಡಿದರೆ ಹಿಂತಿರುಗುತ್ತೇನೆ.”
ಭಾರತದ ಯಾವುದೇ ನ್ಯಾಯಾಲಯವು ವಿಶೇಷ ಖಾತರಿಗಳನ್ನು ನೀಡುವುದಿಲ್ಲ ಎಂಬುದು ಮಲ್ಯ ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರು ಬ್ರಿಟನ್ ನಲ್ಲಿ ತಮ್ಮ ಎಲ್ಲ ಮೇಲ್ಮನವಿಗಳನ್ನು ಮುಗಿಸಿದ್ದಾರೆ, ಮತ್ತು ಅವರ ಅಜ್ಞಾತ ಆಶ್ರಯ ವಿನಂತಿಯು ಲಂಡನ್ನಲ್ಲಿ ಅವರ ನಿರಂತರ ವಾಸ್ತವ್ಯಕ್ಕೆ ರಕ್ಷಣೆಯನ್ನು ನೀಡುತ್ತದೆ.
ಅವರು ನಿಜವಾಗಿಯೂ ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಬಯಸಿದ್ದರೆ, ಮುಂಬೈನಲ್ಲಿ ನ್ಯಾಯಾಲಯದ ಬಾಗಿಲು ಯಾವತ್ತೂ ತೆರೆದಿರುತ್ತದೆ. ಮಲ್ಯ ತಮ್ಮ ಗಡಿಪಾರನ್ನು ವಿಳಂಬಗೊಳಿಸಿದಕ್ಕೆ "ಚಾಲ್ತಿಯಲ್ಲಿರುವ ಗೌಪ್ಯ ಕಾನೂನು ಸಂಗತಿ"ಯನ್ನು ಅಸ್ಪಷ್ಟವಾಗಿ ಉಲ್ಲೇಖಿಸುತ್ತಾರೆ, ಆದರೆ ಅವರು ಎಂದಿಗೂ "ಆಶ್ರಯ" ಎಂಬ ಪದವನ್ನು ಬಳಸುವುದಿಲ್ಲ ಅಥವಾ ತಾವು ನಿರಾಶ್ರಿತರ ಸ್ಥಾನಮಾನ ಕೋರಿರುವುದಾಗಿ ಸ್ಪಷ್ಟವಾಗಿ ದೃಢೀಕರಿಸುವುದಿಲ್ಲ.
ಸಿಬ್ಬಂದಿ ವೇತನ
“ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಆದರೆ ಸಿಬ್ಬಂದಿ ವೇತನವನ್ನು ಪಾವತಿಸಲು ನನಗೆ ಅವಕಾಶ ನೀಡಲಿಲ್ಲ.”
ಮಲ್ಯ ಕಿಂಗ್ಫಿಶರ್ನ ಬಾಕಿ ಇರುವ ವೇತನವನ್ನು ಪಾವತಿ ಮಾಡುವ ಉದ್ದೇಶದಿಂದ ಕರ್ನಾಟಕ ಹೈಕೋರ್ಟ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಬಿಡುಗಡೆ ಮಾಡಿಸುವ ಪ್ರಯತ್ನ ನಡೆಸಿದರು.
ಬ್ಯಾಂಕುಗಳು ಆಕ್ಷೇಪಿಸಿದವು, ನ್ಯಾಯಾಲಯ ನನ್ನ ಮನವಿಯನ್ನು ತಿರಸ್ಕರಿಸಿತು – ಎಂಬ ಅವರ ಕಥೆಯ ಈ ಭಾಗ ನಿಜ. ಆದಾಗ್ಯೂ, ವಿಮಾನಯಾನ ಸಂಸ್ಥೆ ಕುಸಿದುಬೀಳುವ ಬಹಳಷ್ಟು ಹಿಂದಿನಿಂದಲೇ ವೇತನ ಬಾಕಿ ಉಳಿದಿತ್ತು, ಮತ್ತು ಸಿಬ್ಬಂದಿಗೆ ಸಹಾಯ ಮಾಡಲು ಮಲ್ಯ ಅವರು ತಮ್ಮ ವೈಯಕ್ತಿಕ ಸಂಪತ್ತನ್ನು ಬಳಸುವುದಕ್ಕೆ ಯಾವುದೂ ತಡೆ ಇರಲಿಲ್ಲ.
ಖಳನಾಯಕನನ್ನಾಗಿ ಮಾಡಿದ ಮಾಧ್ಯಮಗಳು
"ಮಾಧ್ಯಮಗಳು ನನ್ನನ್ನು ಖಳನಾಯಕನನ್ನಾಗಿ ಮಾಡಿದವು"
ಈ ವಿಷಯದಲ್ಲಿ, ಮಲ್ಯ ಅವರ ಮಾತು ನಿಜ.
ಕಿಂಗ್ ಆಫ್ ಗುಡ್ ಟೈಮ್ಸ್ ಆಗಿದ್ದ ಮಲ್ಯ ಭಾರತೀಯ ಮಾಧ್ಯಮಗಳ ಇಷ್ಟದ ಉದ್ಯಮಿಯಾಗಿದ್ದರು. ಅವರ ಐಷಾರಾಮಿ ಜೀವನಶೈಲಿ, ಆಡಂಬರದ ಪಾರ್ಟಿಗಳು, ಕ್ರಿಕೆಟ್, ಫಾರ್ಮುಲಾ ಒನ್ ಮತ್ತು ಫ್ಯಾಷನ್ಗೆ ನೀಡಿದ ಪ್ರೋತ್ಸಾಹ ಅವರನ್ನು ಟ್ಯಾಬ್ಲಾಯ್ಡ್ಗಳ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದ್ದವು. ಯಾವತ್ತು ಕಿಂಗ್ಫಿಶರ್ ಕುಸಿಯಿತೋ ಆಗ- ಅದೇ ಯಾಚ್, ಷಾಂಪೇನ್, ಮಾಡೆಲ್ಗಳು- ವಿಪರೀತ ಜೀವನಶೈಲಿಯ ಸಂಕೇತಗಳಾಗಿ ಕಂಡವು.
ಅರ್ಧ ಸತ್ಯಕ್ಕೆ ಗಿಲೀಟು
ವಿಜಯ್ ಮಲ್ಯ ಅವರು ವಿವರಿಸುವ ಘಟನೆಗಳು ಪಾಲಿಶ್ ಮಾಡಿದ, ಮನವೊಲಿಸುವ ಮತ್ತು ಕೆಲವೊಮ್ಮೆ ಸ್ಪಷ್ಟ ವಿವರಣೆಯನ್ನು ನೀಡುತ್ತದೆ. ಅವರು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುವ ವಿವರಣೆಗಳನ್ನು ನೀಡುತ್ತಾರೆ. ಆದರೆ ಗಹನವಾಗಿ ಪರಿಶೀಲನೆ ಮಾಡಿದಾಗ, ಹೆಚ್ಚಿನವು ನುಣುಚಿಕೊಳ್ಳುವ ಅಥವಾ ಅರ್ಧ ಸತ್ಯಗಳಾಗಿ ಹೊರಹೊಮ್ಮುತ್ತವೆ.
ಹೌದು, ಕಿಂಗ್ಫಿಶರ್ ಅಧಿಕ ಇಂಧನ ತೆರಿಗೆಗಳು, ದೋಷಪೂರಿತ ವಿದೇಶಿ ನೇರ ಹೂಡಿಕೆ (ಎಫ್ಡಿಐ) ನೀತಿಗಳು ಮತ್ತು ಆರ್ಥಿಕ ಬಿಕ್ಕಟ್ಟಿನ ಬಲಿಪಶುವಾಗಿದ್ದವು. ಆದರೆ ಇದು ಅಹಂಕಾರ, ಕಳಪೆ ನಿರ್ಧಾರ ಮತ್ತು ಆರ್ಥಿಕ ದುರುಪಯೋಗದ ಬಲಿಪಶು ಕೂಡ ಹೌದು. ಮಲ್ಯ ಅವರನ್ನು ಸಾಲ ತೀರಿಸದ ಕಾರಣ ಬೆನ್ನಟ್ಟಲಿಲ್ಲ. ಅವರು ಪಲಾಯನ ಕಾರಣದಿಂದ ಬೆನ್ನಟ್ಟಿದರು.