
Case Census: ಜಾತಿ ಗಣತಿ ವರದಿ ಭಾಗಶಃ ಅವೈಜ್ಞಾನಿಕ: ಕಾಂಗ್ರೆಸ್ ಹಿರಿಯ ನಾಯಕ ಮೊಯ್ಲಿ ಟೀಕೆ
ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ . ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಕುರುಬ ಸಮುದಾಯವನ್ನು ಹೆಚ್ಚು ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. ಹೊಸ ಸಮೀಕ್ಷೆ ವರದಿಯು ಇದನ್ನು ಅತ್ಯಂತ ಹಿಂದುಳಿದ ಎಂದು ವರ್ಗೀಕರಿಸಿದೆ ಎಂದು ಮೊಯ್ಲಿ ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ (ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ವರದಿ)ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ವರದಿ ಭಾಗಷಃ ಅವೈಜ್ಞಾನಿಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಹಾಗೂ ಅನುಷ್ಠಾನಕ್ಕೂ ಮುನ್ನ ಮರುಪರಿಶೀಲನೆಗೆ ಸಲಹೆ ನೀಡಿದ್ದಾರೆ.
ಒಂದು ಕಡೆ ವರದಿ ಅನುಷ್ಠಾನಕ್ಕೆ ವಿರೋಧ ಪಕ್ಷಗಳು, ಸ್ವಪಕ್ಷೀಯರು, ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ ಎಐಸಿಸಿಯ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಈ ಹೇಳಿಕೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿರುವ ಜಾತಿಗಣತಿ ವರದಿ ಜಾರಿ ಪ್ರಯತ್ನಕ್ಕೆ ಹಿಂದುಳಿದ ವರ್ಗಗಳ ನಾಯಕರೇ ಆಗಿರುವ ವೀರಪ್ಪ ಮೊಯ್ಲಿ ಅವರು ತೊಡರುಗಾಲು ಹಾಕಿರುವುದರ ಹಿಂದೆ ಇರುವ ಉದ್ದೇಶದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
"ವರದಿಯ ಅಂಕಿ ಅಂಶಗಳು ಸಾಕಷ್ಟು ಲೋಪದೋಷದಿಂದ ಕೂಡಿದೆ ಎಂದು ಅನೇಕರು ಅಪಸ್ವರ ತೆಗೆದಿದ್ದಾರೆ. ಈ ಅನುಮಾನ ಹೋಗಲಾಡಿಸಲು ರಾಜ್ಯ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಮ್ಮತ ಮೂಡಿಸುವುದು ಈಗಿನ ತುರ್ತು ಕೆಲಸ," ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ - ಆಂಗ್ಲ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಆನೇಕ ಮಾಹಿತಿಗಳನ್ನು ಹಂಚಿಕೊಂಡಿರುವ ಮೊಯ್ಲಿ, "ಕಾಂತರಾಜ್ ಆಯೋಗದ ವರದಿಯನ್ನು ನನಗೆ ತಿಳಿದ ಪ್ರಕಾರ ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಕೂಡ ಒಪ್ಪುವುದು ಕಷ್ಟ," ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಒತ್ತಡದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದರು ಮತ್ತು ಚರ್ಚೆಗಾಗಿ ಎರಡು ಬಾರಿ ವಿಶೇಷ ಸಚಿವ ಸಂಪುಟ ಸಭೆಗಳನ್ನು ಕರೆದಿದ್ದಾರೆ. ಈಗ ರಾಹುಲ್ ಗಾಂಧಿ ವಿರೋಧಿಸಬಹುದು ಎಂಬ ಮಾಜಿ ಮುಖ್ಯಮಂತ್ರಿ ಮೊಯ್ಲಿಯವರ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಅಚ್ಚರಿಯನ್ನುಂಟುಮಾಡಿದೆ.
"ವರದಿ ಅನುಷ್ಠಾನಕ್ಕೆ ಲಿಂಗಾಯಿತ ಮತ್ತು ಒಕ್ಕಲಿಗರು ತಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲಿ ಲೋಪದೋಷವಾಗಿದೆ ಎಂದು ಪತ್ತೆ ಮಾಡಬೇಕು. ಸಚಿವ ಸಂಪುಟದಲ್ಲೂ ಕೂಡ ಇದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆಂದು ತಿಳಿದುಬಂದಿದೆ.
1992ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಬಿಡುಗಡೆ ಮಾಡಿದಾಗ ಲಿಂಗಾಯತರ ಜನಸಂಖ್ಯೆ ಈಗಿನ ವರದಿಗಿಂತ ಹೆಚ್ಚು ಇತ್ತು. ಇಷ್ಟು ವರ್ಷಗಳ ನಂತರ ಸಂಖ್ಯೆ ಕಡಿಮೆಯಾಗುವುದು ಹೇಗೆ? ತಾತ್ವಿಕವಾಗಿ ಇದು ಮಾತ್ರ ಹೆಚ್ಚಾಗಬಹುದು. ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳುವುದು ಸರಿಯಲ್ಲ, ಅದಕ್ಕೆ ಮರುಮೌಲ್ಯ ಮಾಪನದ ಅಗತ್ಯವಿದೆ," ಎಂದು ಪ್ರತಿಪಾದಿಸಿದ್ದಾರೆ.
ವರದಿ ಅವೈಜ್ಞಾನಿಕ
ಈ ವರದಿಯು ಅವೈಜ್ಞಾನಿಕ ಎಂಬುದನ್ನು ನಾನು ಭಾಗಶಃ ಒಪ್ಪುತ್ತೇನೆ. 2015ರಲ್ಲಿ ಸಮೀಕ್ಷೆ ನಡೆದಿದ್ದು, ಮರುಸಮೀಕ್ಷೆಯ ಅಗತ್ಯವಿದೆ. ಹೊಸ ಸಮೀಕ್ಷೆಯಿಂದ ಮಾತ್ರ ನಿಖರವಾದ ಅಂಕಿ ಅಂಶವನ್ನು ನಾವು ಪಡೆಯುತ್ತೇವೆ. ಇಲ್ಲದಿದ್ದರೆ ಜನರು ಸಂಖ್ಯೆಗಳನ್ನು ವಿವಾದಿಸುತ್ತಾರೆ. ಹಲವು ಸಮುದಾಯಗಳು ಶಂಕೆ ವ್ಯಕ್ತಪಡಿಸಿರುವ ಪರಿಸ್ಥಿತಿಯಲ್ಲಿ ಸರ್ಕಾರ ಆತುರದಿಂದ ನಿರ್ಧಾರ ಕೈಗೊಳ್ಳುವಂತಿಲ್ಲ, ಇನ್ನು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದು ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಪಕ್ಷಗಳು ಮತ್ತು ಸಮುದಾಯದ ಮುಖಂಡರ ಸಲಹೆಯನ್ನೂ ಪಡೆಯಬೇಕು. ಒಮ್ಮತಕ್ಕೆ ಬಂದ ನಂತರ ಅವರು ಅದನ್ನು ಕಾರ್ಯಗತಗೊಳಸಬಹುದು ಅಥವಾ ಸಮೀಕ್ಷೆಯ ಹೆಚ್ಚು ವೈಜ್ಞಾನಿಕ ನವೀಕರಣಕ್ಕೆ ಹೋಗಬಹುದು. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಪ್ರತಿ 10 ವರ್ಷಗಳಿಗೊಮ್ಮೆ ಜಾತಿ ಗಣತಿಯನ್ನು ಪರಿಶೀಲಿಸಬೇಕು. ನನ್ನ ಸರ್ಕಾರ ಅಂಗೀಕರಿಸಿದ ಚಿನ್ನಪ್ಪ ರೆಡ್ಡಿ ಆಯೋಗ ಕೂಡ 10 ವರ್ಷಗಳಿಗೊಮ್ಮೆ ಪರಿಶೀಲಿಸಬೇಕು ಎಂದು ಹೇಳಿದೆ. ಈಗ 30ಕ್ಕೂ ಹೆಚ್ಚು ವರ್ಷಗಳು ಕಳೆದಿವೆ ಎಂದು ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಒಡಕಿಲ್ಲ
ಪಕ್ಷದಲ್ಲಿ ಒಡಕು ಇದೆ ಎಂದು ಹೇಳುವುದು ಸರಿಯಲ್ಲ, ಪ್ರತಿ ರಾಜ್ಯದಲ್ಲೂ ಹಿಂದುಳಿದ ವರ್ಗಗಳ ವರದಿಯನ್ನು ಜಾರಿಗೊಳಿಸಿದ್ದೇವೆ. ಹಿಂದುಳಿದ ವರ್ಗಗಳ ವರದಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಸ್ಥಿರ ಸಾಮಾಜಿಕ ಸಮತೋಲನಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕಾಂಗ್ರೆಸ್ಸಿಗರಲ್ಲಿ ಮಾತ್ರ ರಾಜಕೀಯ ಒಮ್ಮತ ಮೂಡಬೇಕಿಲ್ಲ. ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಅಂಕಿ ಅಂಶಗಳಲ್ಲಿನ ವಿರೋಧಾಭಾಸಗಳಿಗೆ ಸರ್ಕಾರವು ಉತ್ತರಿಸಬೇಕಾಗಿದೆ. ಇದು ಸಮಾಜವನ್ನು ಧ್ರುವೀಕರಣಗೊಳಿಸುತ್ತದೆ ಮತ್ತು ರಾಜಕೀಯವಾಗಿ ಅಪಾಯಕಾರಿಯಾಗಿದೆ. ಸಮೀಕ್ಷೆಯು ಮುಸ್ಲಿಂ ಜನಸಂಖ್ಯೆಯಲ್ಲಿ ಸುಮಾರು ಶೇ.4 ಅಥವಾ ಶೇ.6ರಷ್ಟು ಹೆಚ್ಚಳವಾಗಿದೆ ಎಂದು ತೋರಿಸಿದೆ ಆದರೆ ಇತರ ಅನೇಕ ಹಿಂದುಳಿದ ಜನರನ್ನು ಕಡಿಮೆ ತೋರಿಸಲಾಗಿದೆ. ಹಾಗಾಗಿಯೇ ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ ಎಂಬ ಅನುಮಾನ ಮೂಡಿದೆ ಎಂದಿದ್ದಾರೆ.
ರಾಹುಲ್ ವಿರೋಧಿಸಬಹುದು
ಸರಿಯಾದ ಮಾಹಿತಿ ಇಲ್ಲದ ಅವೈಜ್ಞಾನಿಕ ವರದಿಯನ್ನು ರಾಹುಲ್ ಗಾಂಧಿ ಕೂಡ ವಿರೋಧಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಹೆಚ್ಚು ಸರಿಯಾದ ಮತ್ತು ಕಾರ್ಯಸಾಧ್ಯವಾದ ವರದಿಯನ್ನು ಹೇಗೆ ನೀಡಬೇಕೆಂದು ಸಚಿವ ಸಂಪುಟ ಪರಿಗಣಿಸುತ್ತಿದೆ. ಅದರ ಆಧಾರದ ಮೇಲೆ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ಇದು ಅಂತಹ ಆಯ್ಕೆಯನ್ನು ಪರಿಗಣಿಸುತ್ತಿದೆ. ಏಕೆಂದರೆ ಅನೇಕ ಮಂತ್ರಿಗಳು ಅತ್ಯಂತ ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಅವರೆಲ್ಲರೂ ಖಂಡಿತವಾಗಿಯೂ ಧ್ವನಿ ಎತ್ತುತ್ತಾರೆ. ಎಲ್ಲ ಜನರಿಗೂ ಸ್ವೀಕಾರಾರ್ಹವಾಗಬೇಕಾದ ಸೂತ್ರವನ್ನು ಅವರು ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಪ್ರಭಾವಿ ಜಾತಿಗಳ ಸಂಖ್ಯೆ ಕಡಿಮೆ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಬಹುಶಃ ಸರಿಯಾದ ಜಾತಿ ವರದಿ ಇಲ್ಲದ ಕಾರಣ ಜನ ಇಂತಹ ಅನುಮಾನಗಳನ್ನು ಹುಟ್ಟು ಹಾಕುತ್ತಾರೆ. ಸರ್ಕಾರದಿಂದ ವೈಜ್ಞಾನಿಕ ಸಮೀಕ್ಷೆಯ ಮೂಲಕ ಈ ಅನುಮಾನಗಳನ್ನು ಕಾಂಕ್ರೀಟ್ ಪದಗಳಲ್ಲಿ ತೆಗೆದುಹಾಕುವ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತೇನೆ. ಅದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಕುರುಬ ಸಮೂದಾಯ ಅತ್ಯಂತ ಹಿಂದುಳಿದ ವರ್ಗ ಆಗುವುದು ಹೇಗೆ?
ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಕುರುಬ ಸಮುದಾಯವನ್ನು ಹೆಚ್ಚು ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. ಹೊಸ ಸಮೀಕ್ಷೆ ವರದಿಯು ಇದನ್ನು ಅತ್ಯಂತ ಹಿಂದುಳಿದ ಎಂದು ವರ್ಗೀಕರಿಸಿದೆ. ಹೆಚ್ಚು ಹಿಂದುಳಿದ ವ್ಯಕ್ತಿಯು ಅತ್ಯಂತ ಹಿಂದುಳಿದವ ಆಗುವುದು ಹೇಗೆ? ಎಂದು ಮೊಯ್ಲಿ ಪ್ರಶ್ನಿಸಿದ್ದಾರೆ. ಸಮೀಕ್ಷೆಯಲ್ಲಿ ಲಕ್ಷಗಟ್ಟಲೆ ಜನರನ್ನು ಕೈ ಬಿಟ್ಟಿರುವುದು ಗಮನಕ್ಕೆ ಬಂದಿದೆ. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರು ಹೊರಗುಳಿದಿದ್ದಾರೆ. ವಂಚಿತ ಮತ್ತು ದುರ್ಬಲ ಜನರಿಗೆ ನಾವು ಸಾಮಾಜಿಕ ನ್ಯಾಯ ನೀಡಬಹುದೆಂದು ಮೊಯ್ಲಿ ಹೇಳಿದ್ದಾರೆ.