ವಾಲ್ಮೀಕಿ ನಿಗಮ ಹಗರಣ| ಎಸ್​​ಐಟಿಯಿಂದ 85 ಕೋಟಿಗಿಂತ ಅಧಿಕ ಹಣ ಜಪ್ತಿ: ಸಿಎಂ ಸಿದ್ದರಾಮಯ್ಯ ಮಾಹಿತಿ
x

ವಾಲ್ಮೀಕಿ ನಿಗಮ ಹಗರಣ| ಎಸ್​​ಐಟಿಯಿಂದ 85 ಕೋಟಿಗಿಂತ ಅಧಿಕ ಹಣ ಜಪ್ತಿ: ಸಿಎಂ ಸಿದ್ದರಾಮಯ್ಯ ಮಾಹಿತಿ


ವಾಲ್ಮಿಕಿ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಸ್‌ಐಟಿ ತನಿಖೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆಯಿದೆ. ಈ ಪ್ರಕರಣದಲ್ಲಿ ಎಸ್​​ಐಟಿ ಅಧಿಕಾರಿಗಳು ಈವರೆಗೆ ಚಿನ್ನ ಇತರೆ ಬೆಲೆಬಾಳುವ ವಸ್ತು ಸೇರಿದಂತೆ ಎಸ್‌ಐಟಿ ಒಟ್ಟು 85,25,07,698 ರೂ. ಹಣ ಜಪ್ತಿ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕೌಂಟ್‌ ಸುಪರಿಡೆಂಟ್‌ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡ ದಿನವೇ ಅವರ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೇ 31ರಂದು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಇದರಲ್ಲಿ ನಾಲ್ಕು ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳು ಇದ್ದಾರೆ.

ಯೂನಿಯನ್‌ ಬ್ಯಾಂಕ್‌ ಅಫ್‌ ಇಂಡಿಯಾದ ಅಧಿಕಾರಿ ಮಹೇಶ್‌ ಎಂಬವರ ದೂರಿನ ಮೇರೆಗೆ ಸಿಬಿಐ ತನಿಖೆಯನ್ನು ಕೈಗೊಂಡಿದ್ದು, ಇಡಿ ಸ್ವಯಂ ಪ್ರೇರಿತವಾಗಿ ತನಿಖೆಯನ್ನು ನಡೆಸುತ್ತಿದೆ. ಎಸ್‌ಐಟಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಎಸ್‌ಐಟಿಯಿಂದ ಒಟ್ಟು ಜಪ್ತಿ ಮಾಡಲಾದ ಹಣದ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ʻʻಪ್ರಕರಣದ ಆರೋಪಿಗಳಾದ ಸತ್ಯನಾರಾಯಣ ವರ್ಮಾ, ಜೆ.ಜಿ.ಪದ್ಮನಾಭ, ನಾಗೇಶ್ವರ ರಾವ್‌, ಚಂದ್ರಮೋಹನ್‌, ಜಿ.ಕೆ.ಜಗದೀಶ್‌ ಅವರಿಂದ ಒಟ್ಟು 14,33,35,000 ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಚಂದ್ರಮೋಹನ್‌ ಮತ್ತು ಜಿ.ಕೆ.ಜಗದೀಶ್‌ ಅವರಿಂದ ಕ್ರಮವಾಗಿ 207 ಮತ್ತು 47.6 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆʼʼ ಎಂದು ತಿಳಿಸಿದರು.

ವಿವಿಧ 217 ಬ್ಯಾಂಕ್‌ ಅಕೌಂಟ್‌ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ. ಮೊತ್ತವನ್ನು ಫ್ರೀಜ್‌ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಸ್‌ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ.

ಸತ್ಯನಾರಾಯಣ ವರ್ಮಾ, ಲ್ಯಾಂಬೋರ್ಗಿನಿ ಉರುಸ್‌ ಎಂಬ ಕಾರನ್ನು ಬಿಗ್‌ಬಾಯ್ಸ್‌ ಟಾಯ್ಸ್‌ ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಎಸ್‌ಐಟಿ ಆ ಕಾರನ್ನು ವಶಕ್ಕೆ ಪಡೆದಿದೆ. ಸದರಿ ಕಂಪನಿಯು ಕಾರನ್ನು ವಾಪಸ್‌ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್‌ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆದಿದೆ. ಈ ಕಾರನ್ನೂ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಿಂದ ಎಸ್‌.ಟಿ ನಿಗಮದ ಖಾತೆಗೆ 5 ಕೋಟಿ ಮರಳಿಸಿರುತ್ತದೆ. ಯೂನಿಯನ್‌ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ 46 ಕೋಟಿಗೂ ಹೆಚ್ಚು ಹಣ ರತ್ನಾಕರ್‌ ಬ್ಯಾಂಕ್‌ನಲ್ಲಿದೆ. ಈ ಹಣವನ್ನೂ ನಮ್ಮ ಎಸ್‌ಐಟಿ ತಂಡವು ಫ್ರೀಜ್‌ ಮಾಡಿದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ವಿಪಕ್ಷಗಳಿಂದ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರಕ್ಕೆ ಹಾಗೂ ತನಗೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧಪಕ್ಷಗಳು ಮಾಡುತ್ತಿವೆ. ಪ್ರಕರಣದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ನಾವು ಹೇಳುತ್ತಿಲ್ಲ. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ವಿರೊಧ ಪಕ್ಷಗಳ ಸದಸ್ಯರು ನಿಯಮ 69ರ ಅಡಿಯಲ್ಲಿ 7ತಾಸಿಗೂ ಅಧಿಕ ಕಾಲ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶದಷ್ಟೇ, ಸರ್ಕಾರಕ್ಕೂ ತನ್ನ ನಿಲುವು ವ್ಯಕ್ತಪಡಿಸಲು ಹಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಆಡಳಿತ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣವಾದಾಗ ಅವರ ಪಕ್ಷದವರೇ ಆದ ಗೂಳಿಹಟ್ಟಿ ಶೇಖರ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಆಗ ಯಾರು ರಾಜೀನಾಮೆ ನೀಡಿದ್ದರು? ಎಪಿಎಂಸಿ ಯಲ್ಲಿ ಆವರ್ತನಿಧಿ ʻಲೂಟಿ ಮಾಡಿದಾಗ, ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ಹಗರಣದಲ್ಲಿ 47.10 ಕೋಟಿ ರೂ. ಅವ್ಯವಹಾರವಾದಾಗ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೇ? ಈ ಪ್ರಕರಣಗಳಲ್ಲಿ ಇ.ಡಿ. ಯಾಕೆ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಎಲ್ಲಾ ಅಭಿವೃದ್ಧಿ ನಿಗಮಗಳ ಹಣವನ್ನು ಕಡ್ಡಾಯವಾಗಿ ರಾಜ್ಯ ಖಜಾನೆಯಲ್ಲಿ ಜಮಾ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಹಲವು ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಜಾರಿಗೊಳಿಸಿದೆ ಎಂದು ಹೇಳಿದರು.

Read More
Next Story