Valmiki Corporation Scam 2.0 | ವಾಲ್ಮೀಕಿ ನಿಗಮದಲ್ಲಿ ಮತ್ತೊಂದು ಹಗರಣ; ಐಎಸ್‌ಬಿ ಯೋಜನೆಯಲ್ಲಿ ಕೋಟ್ಯಂತರ ರೂ. ಗುಳುಂ?
x

Valmiki Corporation Scam 2.0 | ವಾಲ್ಮೀಕಿ ನಿಗಮದಲ್ಲಿ ಮತ್ತೊಂದು ಹಗರಣ; ಐಎಸ್‌ಬಿ ಯೋಜನೆಯಲ್ಲಿ ಕೋಟ್ಯಂತರ ರೂ. ಗುಳುಂ?

ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ತಾಲೂಕಿನ ಪರಿಶಿಷ್ಟ ಪಂಗಡದ ಯುವಕರು ಎರಡನೇ ಬಾರಿಗೆ ಸಾಲ ಸೌಲಭ್ಯಕ್ಕಾಗಿ ನಿಗಮಕ್ಕೆ ಅರ್ಜಿ ಸಲ್ಲಿಸಿದಾಗ ಸಾಲ ಮಂಜೂರಾಗಿ, ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಹಗರಣದ ಬಳಿಕ ನಿಗಮದಲ್ಲೇ ಮತ್ತೊಂದು ಹಣ ದುರುಪಯೋಗದ ಪ್ರಕರಣ ಬೆಳಕಿಗೆ ಬಂದಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆಯಡಿ (ಐಎಸ್‌ಬಿ) ಸಾಲ ಸೌಲಭ್ಯಕ್ಕಾಗಿ ಅರ್ಜಿ ಹಾಕಿದ್ದವರ ಹೆಸರಿನಲ್ಲಿ ಕೋಟ್ಯಂತರ ರೂ. ಗೋಲ್‌ ಮಾಲ್‌ ನಡೆದಿದೆ. ತುಮಕೂರಿನಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಯುವಕರ ಹೆಸರಿನಲ್ಲೇ ನಕಲಿ ಅರ್ಜಿ, ಸಹಿ ಸೃಷ್ಟಿಸಿ ಕೋಲಾರದಲ್ಲಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿದೆ. ಈ ಅಕ್ರಮದಲ್ಲಿ ನಿಗಮ ಹಾಗೂ ಬ್ಯಾಂಕ್‌ ಅಧಿಕಾರಿಗಳೇ ಶಾಮೀಲಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಏನಿದು ಪ್ರಕರಣ?

2019-20ರಲ್ಲಿ ತುಮಕೂರಿನಲ್ಲಿ ವಾಲ್ಮೀಕಿ ಸಮುದಾಯದ ಯುವಕರು ನಿಗಮದ ಉದ್ಯಮಶೀಲತಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆಗ ನಿಗಮದಿಂದ ಯಾವುದೇ ಹಣ ಮಂಜೂರಾಗಿರಲಿಲ್ಲ. ಇದೇ ಯುವಕರು 2023-24ನೇ ಸಾಲಿನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದಾಗ ಅದಾಗಲೇ ಸಾಲ ಪಡೆದಿರುವುದಾಗಿ ಹೇಳಿ ಅರ್ಜಿಗಳನ್ನು ವಜಾಗೊಳಿಸಲಾಗಿದೆ.

ನಿಗಮದಿಂದ ಸಾಲ ಸಿಗದೇ ಬೇಸರಗೊಂಡಿದ್ದ ಯುವಕರು ಈ ಕುರಿತು ಪರಿಶೀಲಿಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ.

ಕೋಲಾರದಲ್ಲಿ ಸಾಲದ ಹಣ ಡ್ರಾ

ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ತಾಲೂಕಿನ ಪರಿಶಿಷ್ಟ ಪಂಗಡದ ಯುವಕರು ಸಾಲಕ್ಕಾಗಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಹಾಗೂ ಇನ್ನಿತರೆ ದಾಖಲೆಗಳನ್ನು ನೀಡಿದ್ದರು. ಎರಡನೇ ಬಾರಿ ಯುವಕರು ಅರ್ಜಿ ಸಲ್ಲಿಸಿದಾಗ ಸಾಲ ಮಂಜೂರಾಗಿ, ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ತಮ್ಮ ಹೆಸರಿನಲ್ಲಿ ಕೋಲಾರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಣ ಡ್ರಾ ಆಗಿದೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಅಧಿಕಾರಿಗಳಿಂದಲೇ ಅರ್ಜಿ ಭರ್ತಿ, ನಕಲಿ ಸಹಿ

ತುಮಕೂರಿನಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದ ಯುವಕರ ಹೆಸರಿನಲ್ಲಿ ನಿಗಮದ ಅಧಿಕಾರಿಗಳೇ ಹೊಸದಾಗಿ ಅರ್ಜಿ ಸಲ್ಲಿಸಿ, ಸಹಿ ನಕಲು ಮಾಡಿದ್ದಾರೆ. ಅಲ್ಲದೇ ಫಲಾನುಭವಿಗಳ ಹೆಸರಿನಲ್ಲೇ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಹಣ ಪಡೆಯಲಾಗಿದೆ.

ವಿಪರ್ಯಾಸವೆಂದರೆ ಎಲ್ಲಾ ಅರ್ಜಿಗಳನ್ನು ಒಬ್ಬರೇ ಬರೆದಿರುವುದು ಕಂಡು ಬಂದಿದೆ. ಇದರಿಂದ ಸಮುದಾಯದ ಯುವಕರಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾದ ಅಧ್ಯಕ್ಷ ಬಂಗಾರು ಹಣಮಂತು ಅವರು ʼದ ಫೆಡರಲ್ ಕರ್ನಾಟಕʼಕ್ಕೆ ದೂರಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ವಾಲ್ಮೀಕಿ ನಿಗಮದಿಂದ ಈಗಾಗಲೇ ಕೋಟ್ಯಾಂತರ ರೂ.ಲೂಟಿ ಮಾಡಿ ಚುನಾವಣೆಗೆ ಬಳಸಲಾಗಿದೆ. ಈಗ ಸಾಲ ಯೋಜನೆಯಲ್ಲೂ ನೂರಾರು ಕೋಟಿ ಲಪಟಾಯಿಸಿದ್ದಾರೆ ಎಂದು ದೂರಿದ್ದಾರೆ.

ತಲಾ 3 ಲಕ್ಷ ರೂ. ಬಿಡುಗಡೆ

2024-25 ನೇ ಸಾಲಿನಲ್ಲಿ ತುಮಕೂರಿನ ಆಕಾಂಕ್ಷಿಗಳು ಎರಡನೇ ಬಾರಿಗೆ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರು. ಪಾವಗಡ ಹಾಗೂ ಶಿರಾ ತಾಲೂಕಿನ ತಲಾ ಆರು ಮಂದಿಗೆ ತಲಾ 3 ಲಕ್ಷ ರೂ.ಗಳಂತೆ ಹಣ ಡ್ರಾ ಆಗಿದೆ. ಹಣ ದುರುಪಯೋಗ ಪ್ರಕರಣದಲ್ಲಿ ಸರ್ಕಾರದ ಶಾಸಕರು, ಸಚಿವರು ಕೂಡ ಭಾಗಿಯಾಗಿದ್ದಾರೆ ಎಂದು ಬಂಗಾರು ಹಣಮಂತು ಆರೋಪಿಸಿದ್ದಾರೆ.

ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ತುಮಕೂರಿನ ಫಲಾನುಭವಿಗಳ ಹೆಸರಿನಲ್ಲಿ ನಿಗಮದಿಂದ 1.25 ಕೋಟಿ ರೂ. ಹಣ ಡ್ರಾ ಮಾಡಲಾಗಿದೆ. ಇದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಅಂದಾಜು 500 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಆಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಂಗಾರು ಹಣಮಂತು ಅವರು ಮಾಧ್ಯಮಗೋಷ್ಠಿ ನಡೆಸಿದರು

ಇಡಿ ಹಾಗೂ ಸಿಬಿಐಗೆ ದೂರು

ವಾಲ್ಮೀಕಿ ನಿಗಮದ ಸಾಲ ವಿತರಣೆಯಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ಶುಕ್ರವಾರ ದೂರು ನೀಡಲು ಬಿಜೆಪಿ ನಿರ್ಧರಿಸಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ ಅವಧಿಯಲ್ಲಿ ಅಕ್ರಮ ನಡೆದಿದೆ. ಅವ್ಯವಹಾರದಲ್ಲಿ ತುಮಕೂರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಶ್ರೀಧರ್, ಭಾಗೀರಥಿ, ನಾಗೇಂದ್ರ ಕೂಡ ಶಾಮೀಲಾಗಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕು. ಸದ್ಯ ತುಮಕೂರು ಜಿಲ್ಲೆಯ ಫಲಾನುಭವಿಗಳ ಮಾಹಿತಿ ಸಿಕ್ಕಿದೆ. ಉಳಿದ ಜಿಲ್ಲೆಗಳ ಮಾಹಿತಿ ಪಡೆಯುತ್ತೇವೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಂಗಾರು ಹಣಮಂತು ಆಗ್ರಹಿಸಿದ್ದಾರೆ.

ಮಾಹಿತಿ ನೀಡಲು ಹಿಂದೇಟು

ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾಲ ವಿತರಣೆಯಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಕೆಲ ಶಾಖೆಗಳಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮಾಹಿತಿ ಕೇಳಿದರೆ ಅಧಿಕಾರಿಗಳೇ ಬೆದರಿಕೆ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣ ಇತ್ಯರ್ಥವಾಗುವವರೆಗೂ ಸುಮ್ಮನಿರುವುದಿಲ್ಲ. ವಾಲ್ಮೀಕಿ ಸಮುದಾಯದ ಯುವಕರಿಗೆ ನ್ಯಾಯ ದೊರಕಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ಉದ್ಯಮಶೀಲತಾ ಯೋಜನೆ (ಐಎಸ್‌ಬಿ)?

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಸಮುದಾಯದ ಯುವಕರಿಗಾಗಿ ಉದ್ಯಮಶೀಲತಾ ಯೋಜನೆ (ಐಎಸ್‌ಬಿ) ಜಾರಿಯಲ್ಲಿದೆ. ಈ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರಿಗೆ ಒಟ್ಟು 3 ಲಕ್ಷ ಸಾಲ ಮಂಜೂರು ಆಗಲಿದೆ. ಇದರಲ್ಲಿ 1 ಲಕ್ಷ ನೇರ ಸಾಲ ಹಾಗೂ 2 ಲಕ್ಷ ರೂ. ಸಬ್ಸಿಡಿ ಇರಲಿದೆ.

ಬ್ಯಾಂಕುಗಳ ಸಹಯೋಗದೊಂದಿಗೆ ಉದ್ಯಮಶೀಲತೆ ಯೋಜನೆಯಡಿ ಹಣಕಾಸಿನ ನೆರವು ನೀಡಲಾಗುತ್ತದೆ.

ನಿಗಮದಲ್ಲಿ ನಡೆದಿತ್ತು ದೊಡ್ಡ ಹಗರಣ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆಯ ಬೃಹತ್‌ ಹಗರಣ ನಡೆದಿತ್ತು. ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ ಆತ್ಮಹತ್ಯೆ ನಂತರ ಹಗರಣ ಬೆಳಕಿಗೆ ಬಂದಿತ್ತು.

2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿರಿಸಿದ್ದ ಹಣದಲ್ಲಿ 187 ಕೋಟಿ ರೂ. ಮೊತ್ತವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ತರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಸರ್ಕಾರದ ಸಚಿವರಾಗಿದ್ದ ಬಿ.ನಾಗೇಂದ್ರ ಅವರನ್ನು ಬಂಧಿಸಿತ್ತು. ಬಳಿಕ ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು. ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿಕೊಂಡು, ತನಿಖೆ ತೀವ್ರಗೊಳಿಸಿದೆ.

Read More
Next Story