ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಜೀವಂತ: ಬಿಸಿಯೂಟ ತಯಾರಿಕೆಗೆ ದಲಿತ ಮಹಿಳೆ ನೇಮಕ, ಶಾಲೆ ಬಿಟ್ಟ ಮಕ್ಕಳು
x

ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಶಾಲೆ ಹಾಗೂ ಬಿಸಿಯೂಟ ತಯಾರಿಕೆಗೆ ನೇಮಕವಾದ  ಮಹಿಳೆ.

ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಜೀವಂತ: ಬಿಸಿಯೂಟ ತಯಾರಿಕೆಗೆ ದಲಿತ ಮಹಿಳೆ ನೇಮಕ, ಶಾಲೆ ಬಿಟ್ಟ ಮಕ್ಕಳು

ರಾಜ್ಯದಲ್ಲಿ ಅಸ್ಪೃಶತೆ ಆಚರಣೆ ನಿರಂತರವಾಗಿ ನಡೆಯುತ್ತಲೇ ಇವೆ. ಇದೀಗ ಚಾಮರಾಜನಗರದ ಹೊಮ್ಮ ಶಾಲೆಯಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.


ಅಂಗನವಾಡಿ ಹಾಗೂ ಶಾಲೆಗಳಿಗೆ ದಲಿತ ಮಹಿಳೆಯರನ್ನು ನೇಮಕ ಮಾಡಿದ್ದಾರೆ ಎಂದು ಮಕ್ಕಳನ್ನು ಅಂಗನವಾಡಿ, ಶಾಲೆಗಳಿಗೆ ಕಳುಹಿಸದ ಪ್ರಕರಣ ರಾಜ್ಯಾದ್ಯಂತ ನಡೆಯುತ್ತಲೇ ಇವೆ. ಇದೀಗ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ದಲಿತ ಮಹಿಳೆಯನ್ನು ನೇಮಕ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿರುವ ಅಮಾನವೀಯ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ.

2024 ಹಾಗೂ 25ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾಗಿದ್ದರು. ಈ ಹಿಂದೆ ದಲಿತ ಮಹಿಳೆಯೂ ಸೇರಿದಂತೆ ಇಬ್ಬರು ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳು ಕಡಿಮೆಯಾದ ಕಾರಣ ಒಬ್ಬ ಅಡುಗೆ ತಯಾರಕರನ್ನು ತೆಗೆದು ಹಾಕಿ ರೋಸ್ಟರ್‌ ಪದ್ದತಿ ಪ್ರಕಾರ ದಲಿತ ಮಹಿಳೆಯನ್ನು ನೇಮಕ ಮಾಡಲಾಗಿತ್ತು.

ಶಾಲೆಯಲ್ಲಿ 22 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿದ್ದು, ಒಂಬತ್ತು ವಿದ್ಯಾರ್ಥಿಗಳು ವರ್ಗಾವಣೆ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದು ಇದೀಗ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಉಳಿದುಕೊಂಡಿದ್ದಾನೆ.

ವರದಿ ನೀಡಲು ಡಿಡಿಪಿಐ ಸೂಚನೆ

ದಲಿತ ಮಹಿಳೆಯನ್ನು ಬಿಸಿಯೂಟ ತಯಾರಿಕೆಗೆ ನೇಮಕ ಮಾಡಿದ ನಂತರ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಾಗುತ್ತಿದ್ದಾರೆ ಎಂಬ ಆರೋಪವಿದ್ದು, ಶೀಘ್ರವೇ ಹೊಮ್ಮ ಗ್ರಾಮಕ್ಕೆ ತೆರಳಿ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆಯಲು ನಿಖರವಾದ ಕಾರಣವೇನೆಂದು ವರದಿ ನೀಡುವಂತೆ ಚಾಮರಾಜನಗರ ತಾಲೂಕು ಶಿಕ್ಷಣಾಧಿಕಾರಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.

ಉತ್ತಮ ಶಿಕ್ಷಣದ ಕೊರತೆಯಿಂದ ಬೇರೆ ಶಾಲೆಗೆ ಸೇರ್ಪಡೆ

ಹೊಮ್ಮ ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹಲವಾರು ಬಾರಿ ಶಿಕ್ಷಕರನ್ನು ಬದಲಾಯಿಸುವಂತೆ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರ್ಪಡೆಗೊಳಿಸುತ್ತಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂಗನವಾಡಿ ಹಾಗೂ ಶಾಲೆಗಳಿಗೆ ಶಿಕ್ಷಕಿ ಹಾಗೂ ಅಡುಗೆ ಸಹಾಯಕರಾಗಿ ನೇಮಕವಾದ ದಲಿತ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಅದೇ ಗ್ರಾಮದ ಮೇಲ್ವರ್ಗದ ಜನರು ತಡೆಯೊಡ್ಡಿರುವ ಪ್ರಮುಖ ಪ್ರಕರಣಗಳು ಇಲ್ಲಿವೆ.

ಅಂಗನವಾಡಿ ಸಹಾಯಕಿ ಕಾರ್ಯಕ್ಕೆ ತಡೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಸಹಾಯಕಿಯಾಗಿ ದಲಿತ ಮಹಿಳೆ ಮಿಲನಾ ಬಾಯಿ ಅವರು 2021 ಜೂನ್‌ನಲ್ಲಿ ಬೀದರ್‌ನ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮಕ್ಕೆ ನೇಮಕವಾಗಿದ್ದರು. ದಲಿತ ಸಹಾಯಕಿ ಅಂಗನವಾಡಿಗೆ ಪ್ರವೇಶಿಸದಂತೆ ಗ್ರಾಮದ ಮರಾಠರು ಹಾಗೂ ಇತರ ಮೇಲ್ಜಾತಿಯವರು ತಡೆದಿದ್ದರು. ಮಿಲನಾ ಬಾಯಿ ಅವರ ಜಾತಿ ಕಾರಣಕ್ಕಾಗಿ ಸ್ಥಳೀಯ ಗ್ರಾಮಸ್ಥರು ತಮ್ಮದೇ ಮರಾಠ ಜಾತಿಯ ಸ್ವಯಂ ಸೇವಕಿಯನ್ನು ಅಂಗನವಾಡಿಯಲ್ಲಿ ಅಡುಗೆ ಮಾಡಲು ನೇಮಿಸಿಕೊಂಡು, 10 ಕಿ.ಮೀ ದೂರದಲ್ಲಿರುವ ಪಕ್ಕದ ಸಿರ್ಗಾಪುರ ಗ್ರಾಮಕ್ಕೆ ವರ್ಗಾವಣೆಯಾಗುವಂತೆ ಮಿಲನಾ ಬಾಯಿಗೆ ಸೂಚನೆ ನೀಡಿದ್ದರು.

ಶಿಕ್ಷಕಿಗೆ ಅಂಗನವಾಡಿ ಪ್ರವೇಶಕ್ಕೆ ನಿಷೇಧ

ದಲಿತೆ ಎಂಬ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬರಿಗೆ ಗ್ರಾಮಸ್ಥರು ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ್ದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ನಡೆದಿತ್ತು. ಪರಿಶಿಷ್ಠ ಜಾತಿಗೆ ಸೇರಿದ ಶಿಕ್ಷಕಿ ಆನಂದಮ್ಮ ರಾಜಘಟ್ಟದಲ್ಲಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಅಂಗನವಾಡಿ ಶಿಕ್ಷಕಿಯಾಗಿ ಬಡ್ತಿ ನೀಡಿ, ಮೆಳೇಕೋಟೆ ಗ್ರಾಮಕ್ಕೆ 2022ರ ಸೆಪ್ಟೆಂಬರ್‌ನಲ್ಲಿ ವರ್ಗಾವಣೆ ಮಾಡಲಾಗಿತ್ತು. ನೇಮಕವಾಗಿ 10 ತಿಂಗಳು ಅವರು ಕೇಂದ್ರಕ್ಕೆ ಪ್ರವೇಶಿಸಲಾಗದೇ ಹೊರಗೇ ನಿಲ್ಲುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿ ಶಿಕ್ಷಕಿಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದರು.

“ಎಸ್‌ಸಿ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ನನ್ನನ್ನು ಅಂಗನವಾಡಿಯಲ್ಲಿ ಕೆಲಸ ಮಾಡಲು ಗ್ರಾಮಸ್ಥರು ಬಿಡುತ್ತಿಲ್ಲ. ಹಲವಾರು ಬಾರಿ ಅಂಗನವಾಡಿ ಕೇಂದ್ರವನ್ನು ಪ್ರವೇಶಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ತಡೆಯುತ್ತಿದ್ದು, 10 ತಿಂಗಳಿಂದ ಇಲ್ಲಿಗೆ ಬರುತ್ತಿದ್ದೇನೆ” ಎಂದು ಶಿಕ್ಷಕಿ ಆನಂದಮ್ಮ ಆರೋಪಿಸಿದ್ದರು.

ಸಹಾಯಕಿಯನ್ನೇ ತಡೆದಿದ್ದ ಅಂಗನವಾಡಿ ಶಿಕ್ಷಕಿ

ಅಂಗನವಾಡಿ ಕೇಂದ್ರದ ಸಹಾಯಕಿ ದಲಿತ ಮಹಿಳೆ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗದಂತೆ ಅಂಗನವಾಡಿ ಶಿಕ್ಷಕಿಯೇ ಬೀಗ ಹಾಕಿದ್ದ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲ್ಲೂರು ನವಗ್ರಾಮದಲ್ಲಿ ನಡೆದಿತ್ತು. ಅಂಗನವಾಡಿ ಕೇಂದ್ರಕ್ಕೆ ಅಡುಗೆ ಸಹಾಯಕಿಯಾಗಿ ದಲಿತ ಮಹಿಳೆ ಕೆ.ಎ. ಶಾಂತಾ ಅವರನ್ನು ನಿಯೋಜಿಸಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಆದೇಶಿದ್ದರು. ನಿಯೋಜಿಸಲ್ಪಟ್ಟ ಸಹಾಯಕಿ ದಲಿತೆ ಎಂಬ ಕಾರಣಕ್ಕಾಗಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಕಲಾವತಿ ಕೇಂದ್ರಕ್ಕೆ ಬೀಗ ಹಾಕಿ ಅವರೂ ಕರ್ತವ್ಯಕ್ಕೂ ಗೈರು ಹಾಜರಾಗಿದ್ದರು. ನಂತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿತ್ತು.

ಅಂಗನವಾಡಿ ಕೇಂದ್ರಕ್ಕೆ ಮುಳ್ಳಿನ ತಂತಿ ಬೇಲಿ ಅಳವಡಿಕೆ

ಚಿಕ್ಕಬಳ್ಳಾಪುರ ತಾಲೂಕಿನ ನಕ್ಕನಹಳ್ಳಿ ಅಂಗನವಾಡಿಯಲ್ಲಿ ಸತತ 40 ವರ್ಷಗಳಿಂದ ಕಾರ್ಯಕರ್ತೆಯಾಗಿದ್ದ ಸೀತಾ ಮಹಾಲಕ್ಷ್ಮೀ ಎಂಬುವರು ನಿವೃತ್ತಿಯಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಖಾಲಿ ಇದ್ದ ಕಾರ್ಯಕರ್ತೆಯ ಹುದ್ದೆಗೆ ನಿಯಮಾನುಸಾರ ದಲಿತ ಸಮುದಾಯಕ್ಕೆ ಸೇರಿದ ಮಮತಾ ಎಂಬುವವರನ್ನು ಆಯ್ಕೆ ಮಾಡಿತ್ತು. ಈ ನೇಮಕವನ್ನು ಸಹಿಸದ ಗ್ರಾಮದ ಮೇಲ್ಜಾತಿಯವರು ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತೆ ಹೋಗದಂತೆ ಮುಳ್ಳಿನ ತಂತಿಬೇಲಿ ಅಳವಡಿಸಿ ಅಮಾನವೀಯ ನಡೆ ಅನುಸರಿಸಿದ್ದರು. ವಿಷಯ ತಿಳಿದು ಗ್ರಾಮಕ್ಕೆ ಬಂದ ಅಧಿಕಾರಿಗಳು ಸಮಸ್ಯೆ ತಿಳಿಗೊಳಿಸಿ ಕಾರ್ಯಕರ್ತೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.

Read More
Next Story