ಕೃಷಿ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡ ಇಬ್ಬರು ಯುವಕರು
x

ಕೃಷಿ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡ ಇಬ್ಬರು ಯುವಕರು

ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ವಿದ್ಯಾರ್ಥಿ ಗೌತಮ್ (22) ಮತ್ತು ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಮೃತಪಟ್ಟವರು.


ಯಡವಾಲ ಗ್ರಾಮದಲ್ಲಿರುವ ಸ್ನೇಹಿತನ ತೋಟದ ಮನೆಯಲ್ಲಿ ಪಾರ್ಟಿಗಾಗಿ ತೆರಳಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಈ ಘಟನೆ ಯುವಕರ ಕುಟುಂಬಗಳಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಆಳವಾದ ಶೋಕವನ್ನು ತಂದಿದೆ.

ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ವಿದ್ಯಾರ್ಥಿ ಗೌತಮ್ (22) ಮತ್ತು ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಮೃತಪಟ್ಟವರು.

ಸ್ನೇಹಿತ ಗೌತಮ್ ಅವರ ಸಹೋದರಿಗೆ ಹೆರಿಗೆಯಾಗಿದ್ದ ಹಿನ್ನೆಲೆಯಲ್ಲಿ, ಚಿರಂಜೀವಿ ಸೇರಿದಂತೆ ಎಂಟು ಮಂದಿ ಯುವಕರು ಶಿವಮೊಗ್ಗದ ಸೀಗೆಹಟ್ಟಿಯಿಂದ ತಾಯಿ ಮತ್ತು ಮಗುವನ್ನು ನೋಡಲು ಸಂಜೆ ಬೈಕ್‌ನಲ್ಲಿ ಯಡವಾಲಕ್ಕೆ ತೆರಳಿದ್ದರು. ಬಳಿಕ ಅವರೆಲ್ಲರೂ ಗೌತಮ್ ಅವರ ಯಡವಾಲದ ತೋಟದ ಮನೆಗೆ ಹೋಗಿ ಅಲ್ಲಿ ಪಾರ್ಟಿ ನಡೆಸಲು ನಿರ್ಧರಿಸಿದ್ದರು.

ಅಲ್ಲಿಯೇ ಅಡುಗೆ ಮಾಡಿ, ಪಾನಗೋಷ್ಠಿ ಕೂಡ ನಡೆಸಿದ್ದರು. ಈ ವೇಳೆ ಚಿರಂಜೀವಿ ಬಹಿರ್ದೆಸೆಗೆ ತೆರಳಲು ಮುಂದಾಗಿದ್ದು, ಗೌತಮ್ ಆತನನ್ನು ಕರೆದುಕೊಂಡು ಹೋಗಿದ್ದಾನೆ. ಪಕ್ಕದಲ್ಲೇ ಇದ್ದ ಗೌತಮ್ ಚಿಕ್ಕಪ್ಪನ ಜಮೀನಿನಲ್ಲಿದ್ದ ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳುವಾಗ, ಚಿರಂಜೀವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಆತನನ್ನು ರಕ್ಷಿಸಲು ಪ್ರಯತ್ನಿಸಿದ ಗೌತಮ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಂಸಿ ಠಾಣೆ ಪೊಲೀಸರು, ಭಾನುವಾರ ಬೆಳಿಗ್ಗೆ ಯುವಕರ ಮೃತದೇಹಗಳನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಈ ದುರದೃಷ್ಟಕರ ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Read More
Next Story