ಚಾಮರಾಜನಗರದ ಈ ಸರ್ಕಾರಿ ಶಾಲೆಗೆ 99 ವರ್ಷ! ಆದರೆ ಬಾಧಿಸುತ್ತಿದೆ ಜಾತಿಯ ದಾಸ್ಯ!!
x

ಚಾಮರಾಜನಗರದ ಈ ಸರ್ಕಾರಿ ಶಾಲೆಗೆ 99 ವರ್ಷ! ಆದರೆ ಬಾಧಿಸುತ್ತಿದೆ ಜಾತಿಯ ದಾಸ್ಯ!!

ಈ ಸರ್ಕಾರಿ ಶಾಲೆಗೆ ಮುಂದಿನ ವರ್ಷ ನೂರು ತುಂಬಲಿದೆ ಆದರೆ, ಶಿಕ್ಷಕರ ಆಂತರಿಕ ಕಚ್ಚಾಟ, ದಲಿತ ಮಹಿಳೆ ಮಾಡಿದ ಅಡುಗೆ ತಿನ್ನಬಾರದೆಂಬ ಕಂದಾಚಾರ! ಇವೆರಡು ಕಾರಣಗಳಿಗೆ ಮಕ್ಕಳೆಲ್ಲಾ ಬೇರೆ ಶಾಲೆಗೆ ಸೇರುವ ಪರಿಸ್ಥಿತಿ ಉಂಟಾಗಿದೆ.


ಜಾತಿ, ಮತಗಳ ಸಂಕೋಲೆಯನ್ನು ಕಳೆಯುವ ಕೇಂದ್ರವಾಗಬೇಕಿದ್ದ ಶಾಲೆಯಲ್ಲಿಯೇ ಜಾತಿ ಕಾರಣಕ್ಕೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆಯೇ ಎನ್ನುವ ಆತಂಕಕಾರಿ ಪ್ರಶ್ನೆ ಹುಟ್ಟುಕೊಂಡಿದೆ!

ಚಾಮರಾಜನಗರ ಜಿಲ್ಲೆಯ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ಮುಖ್ಯ ಅಡುಗೆ ಕೆಲಸದವರಾಗಿ ನೇಮಕವಾದ ಬಳಿಕ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಮತ್ತೊಂದು ಕಡೆ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲದ ಕಾರಣ ನಾವು ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದೇವೆ ಎನ್ನುವ ವಾದವೂ ಎದ್ದಿದೆ. ಈ ಆರೋಪದಗಳ ಬೆನ್ನಲ್ಲೇ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಎಚ್ಚೆತ್ತುಕೊಂಡಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಶತಮಾನದ ಹೊಸ್ತಿಲಲ್ಲಿ ಇರುವ ಶಾಲೆಯಲ್ಲಿ…

ಚಾಮರಾಜನಗರ ತಾಲ್ಲೂಕಿನ ಆಲೂರು ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂದಿನ ವರ್ಷ ನೂರು ವರ್ಷ ತುಂಬಲಿದೆ. ಪ್ರಾರಂಭದಿಂದಲೂ ಉತ್ತಮ ಸಾಧನೆ ಮಾಡಿಕೊಂಡು ಬಂದಿದ್ದ ಶಾಲೆಯಲ್ಲಿ 2015ರ ನಂತರ ದಾಖಲಾತಿಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. 2023-24 ರಲ್ಲಿ 32 ವಿದ್ಯಾರ್ಥಿಗಳು ಇದ್ದರೆ 2024-25ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳಿಗೆ ಕುಸಿತ ಕಂಡಿತ್ತು. ಈ ಕಾರಣದಿಂದ ನಿಯಮಾನುಸಾರ ಇದ್ದ ಮೂರು ಶಿಕ್ಷಕರಲ್ಲಿ ಒಬ್ಬರನ್ನು ಕಡಿತ ಮಾಡಲಾಗಿತ್ತು. ಇಬ್ಬರು ಅಡುಗೆಯವರಲ್ಲಿ ಒಬ್ಬರನ್ನು ಕಡಿತ ಮಾಡಿ, 22 ವರ್ಷಗಳಿಂದ ಇದೇ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸದ ಮಾಡುತ್ತಿದ್ದ ನಂಜಮ್ಮ ಎಂಬವರನ್ನು ಮುಖ್ಯ ಅಡುಗೆಯವರಾಗಿ ನೇಮಕ ಮಾಡಲಾಗಿತ್ತು. ಇದರ ಜೊತೆಗೆ ಈ ಹಿಂದೆ ಎರಡು ಬಾರಿ ಪೋಷಕರು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುತ್ತಿಲ್ಲ ಎನ್ನುವ ಆರೋಪ ಮಾಡಿ ಪ್ರತಿಭಟನೆಯನ್ನೂ ಮಾಡಿದ್ದರು.

ಆರು ತಿಂಗಳಿಂದಲೂ ಎಲ್ಲರೂ ಊಟ ಮಾಡುತ್ತಿರಲಿಲ್ಲ

ನಾನು ಮುಖ್ಯ ಅಡುಗೆಯವಳಾಗಿ ನೇಮಕವಾದ ಬಳಿಕ ಶಾಲೆಯಲ್ಲಿ ಎಲ್ಲಾ ಮಕ್ಕಳೂ ಊಟ ಮಾಡುತ್ತಿರಲಿಲ್ಲ. ಕೆಲವರು ಮನೆಗೆ ಹೋಗುತ್ತಿದ್ದರು. ಇದೀಗ ಇದೇ ಕಾರಣದಿಂದ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. ಹೀಗೆ ಆದರೆ ನಾನು ಎಲ್ಲಿಗೆ ಹೋಗಲಿ..? ಏನು ಮಾಡಲಿ..?" ಎನ್ನುವ ಪ್ರಶ್ನೆ ಮುಂದಿಟ್ಟಿರುವ ಅಡುಗೆ ಕೆಲಸದ ನಂಜಮ್ಮ ಇದೇ ಶಾಲೆಯಲ್ಲಿ 22 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆ ಇವರಿಗೆ ಮುಂಬಡ್ತಿ ನೀಡಿದ್ದು, ಇವರು ಮಾಡುವ ಅಡುಗೆಯನ್ನು ಮೇಲ್ವರ್ಗದ ಮಕ್ಕಳು ತಿನ್ನಬೇಕಾ ಎನ್ನುವ ಮನಸ್ಥಿತಿಯವರಿಂದ ಈ ರೀತಿ ಆಗಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಶಿಕ್ಷಕರಲ್ಲಿ ಬದ್ಧತೆ ಇಲ್ಲ, ಊಟದಲ್ಲಿ ರುಚಿ ಇಲ್ಲ

ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸುತ್ತಿರುವುದಕ್ಕೆ ಪೋಷಕರು ನೀಡುತ್ತಿರುವ ಕಾರಣವೇ ಬೇರೆ. ಇಲ್ಲಿನ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ, ಸರಿಯಾಗಿ ಪಾಠ ಮಾಡುತ್ತಿಲ್ಲ. ಬೇರೆ ಶಾಲೆಯ ಮಕ್ಕಳನ್ನು ನೋಡಿದರೆ ನಮ್ಮ ಮಕ್ಕಳು ಅವರಿಗಿಂತ ತುಂಬಾ ಹಿಂದೆ ಉಳಿದಿದ್ದಾರೆ. ಹೀಗೆ ಆದರೆ ನಮ್ಮ ಮಕ್ಕಳ ಭವಿಷ್ಯ ಏನು..? ಎನ್ನುವುದು ಅವರ ಮೂಲ ಪ್ರಶ್ನೆ. ಈ ಬಗ್ಗೆ ಹೆಸರು ಹೇಳಲು ಇಚ್ಚಿಸದ ಪೋಷಕರೊಬ್ಬರು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿ, "ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎನ್ನುವುದು ನಮ್ಮ ಆಸೆ. ಆದರೆ ಶಿಕ್ಷಕರು ಸರಿಯಾಗಿ ಪಾಠ ಮಾಡದೇ ಇದ್ದರೆ, ಊಟದಲ್ಲಿ ಶುಚಿ, ರುಚಿ ಇಲ್ಲದೇ ಇದ್ದರೆ ನಾವು ಏನು ಮಾಡುವುದು. ಈ ಬಗ್ಗೆ ಹಿಂದೆಯೂ ಸಾಕಷ್ಟು ಬಾರಿ ಶಿಕ್ಷಕರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿದ್ದೇವೆ. ಈಗ ದಲಿತ ಹೆಂಗಸು ಮುಖ್ಯ ಅಡುಗೆಯವರಾಗಿ ನೇಮಕವಾದರು ಎನ್ನುವ ಕಾರಣಕ್ಕೆ ಟಿಸಿ (Transfer Certificate) ಪಡೆದು ಬೇರೆ ಶಾಲೆಗೆ ಸೇರಿಸಲಾಗುತ್ತಿದೆ ಎನ್ನುವುದು ತಪ್ಪು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಭಾವನೆಯನ್ನು ಮಾತ್ರವೇ ಇಟ್ಟುಕೊಂಡಿರುವುದು. ಅಲ್ಲಿ ಏನು ಊಟ ಕೊಡುತ್ತಾರೆ, ಯಾರು ಅಡುಗೆ ಮಾಡುತ್ತಾರೆ ಎನ್ನುವುದು ನಮಗೆ ಯಾಕೆ?"ಎಂದು ಹೇಳುತ್ತಾರೆ.

ಎಂಟು ಮಕ್ಕಳು ಮರಳಿ ಶಾಲೆಗೆ

ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ಶಾಲೆಗೆ ಭೇಟಿ ನೀಡಿ ಪೋಷಕರು, ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಎಲ್ಲರ ಮನವೊಲಿಸುವ ಪ್ರಯತ್ನ ಮಾಡಿದೆ. ಈ ವೇಳೆ ಅಧಿಕಾರಿಗಳ ಸಮ್ಮುಖದಲ್ಲಿ ಪೋಷಕರು ಸಾಕಷ್ಟು ವಿಚಾರವನ್ನು ಮಂಡಿಸಿದ್ದಾರೆ. ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ, ಊಟದ ವಿಚಾರದಲ್ಲಿ ರುಚಿ, ಶುಚಿ ಕಾಪಾಡಿಕೊಂಡರೆ ನಮ್ಮದು ಯಾವುದೇ ತಕರಾರು ಇಲ್ಲ, ಮಕ್ಕಳನ್ನು ಮತ್ತೆ ಇದೇ ಶಾಲೆಗೆ ಸೇರಿಸುತ್ತೇವೆ ಎಂದಿದ್ದಾರೆ. ಅದರಂತೆ ಎಂಟು ಮಕ್ಕಳು ಮರಳಿ ಶಾಲೆಗೆ ಸೇರಿದ್ದಾರೆ. ಪಕ್ಕದ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಮಲ್ಲೇಶ್ವರ ಶಾಲೆಗೆ ಸೇರಿರುವ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಸೇರುವ ಭರವಸೆ ಇದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್‌, ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಎರಡು ವಾದಗಳ ನಡುವಲ್ಲಿ ಸೊರಗದಿರಲಿ ಮೌಲ್ಯ..

ಈ ಘಟನೆ ಸಂಬಂಧ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಪ್ರತಿಕ್ರಿಯೆ ನೀಡಿ, "ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣದಿಂದ ಒಬ್ಬ ಅಡುಗೆಯವರನ್ನು ನಿಯಮಾನುಸಾರ ತೆಗೆದು ನಂಜಮ್ಮ ಅವರನ್ನು ಮುಖ್ಯ ಅಡುಗೆಯವರಾಗಿ ನೇಮಕ ಮಾಡಲಾಗಿತ್ತು. ಇದೀಗ ಪೋಷಕರು ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸುತ್ತಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರವಾಗಿ ಸಭೆ ನಡೆದಿದ್ದು, ಮತ್ತೆ ಶಾಲೆಗೆ ಮಕ್ಕಳು ಸೇರಲಿದ್ದಾರೆ," ಎಂದಷ್ಟೇ ಹೇಳಿದ್ದಾರೆ.

ಇನ್ನು ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ಜನಪ್ರತಿನಿಧಿಗಳು ಯಾರ ಭಾವನೆಗಳಿಗೂ ಧಕ್ಕೆ ಆಗದ ರೀತಿಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಜಿಪಂ ಸಿಇಒ, ಎಸ್‌ ಪಿ, ಡಿಡಿಪಿಐ ಸೇರಿ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಪೋಷಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಹಾಲಿ ಇರುವ ಇಬ್ಬರು ಶಿಕ್ಷಕರನ್ನು ಬೇರೆ ಕಡೆಗೆ ವರ್ಗ ಮಾಡಿ, ಬೇರೆ ಇಬ್ಬರು ಶಿಕ್ಷಕರನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ.

ಯಾವುದೇ ಸಮಸ್ಯೆ ಇಲ್ಲ, ಎಲ್ಲವೂ ಬಗೆಹರಿದಿದೆ

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಡಿಡಿಪಿಐ ರಾಮಚಂದ್ರರಾಜೇ ಅರಸ್‌ ಅವರು, "ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು, ಅಡುಗೆ ಕೆಲಸದ ನಂಜಮ್ಮ ಸೇರಿ ಎಲ್ಲರೊಂದಿಗೂ ಸಭೆ ನಡೆದಿದೆ. ಈಗ ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಬ್ಬರು ಶಿಕ್ಷಕರನ್ನು ಬದಲಾಯಿಸುತ್ತೇವೆ. ನಮ್ಮ ಮಾತಿಗೆ ಒಪ್ಪಿ ಎಂಟು ಮಕ್ಕಳು ಮರಳಿ ಶಾಲೆಗೆ ಬಂದಿದ್ದಾರೆ. ಇನ್ನೂ ಹತ್ತು ಮಕ್ಕಳು ಶಾಲೆಗೆ ಸೇರಲಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ," ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿ, "ಮಕ್ಕಳು ಶಾಲೆ ಬಿಟ್ಟುಹೋಗಿದ್ದು ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿರಲಿಲ್ಲ ಎನ್ನುವ ಕಾರಣದಿಂದ. ಅದನ್ನು ಬಗೆಹರಿಸುವ ಭರವಸೆ ಸಿಕ್ಕ ಬಳಿಕ ಪೋಷಕರು ಮತ್ತೆ ಮಕ್ಕಳನ್ನು ಶಾಲೆಗೆ ಸೇರಿಸಲು ಒಪ್ಪಿದ್ದಾರೆ. ಊಟದಲ್ಲಿ ಶುಚಿತ್ವ ಕಾಪಾಡಬೇಕು ಎನ್ನುವ ಮನವಿಯನ್ನು ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು, ಶಿಕ್ಷಕರು ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಈಗ ಶಾಲೆಯಲ್ಲಿ ಯಾವುದೇ ಗೊಂದಲ ಇಲ್ಲ, ಎಂದಿನಂತೆ ಶಾಲೆ ನಡೆದುಕೊಂಡು ಹೋಗಲಿದೆ," ಎಂದು ತಿಳಿಸಿದ್ದಾರೆ.

ಒಟ್ಟಾರೆ ಇಡೀ ಪ್ರಕರಣ ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದು. ದಲಿತ ಮಹಿಳೆ ಮುಖ್ಯ ಅಡುಗೆಯವಾಗಿ ನೇಮಕವಾದದ್ದಕ್ಕೆ ಮಕ್ಕಳು ಶಾಲೆ ಬಿಟ್ಟು ಹೊರ ಹೋಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಪೋಷಕರಲ್ಲಿ, ಮಕ್ಕಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘ, ಸಂಸ್ಥೆಗಳು ದುಡಿಯಬೇಕು. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎನ್ನುವ ವಾದವನ್ನೂ ಪರಿಗಣಿಸಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಈಗಾಗಲೇ ಸೊರಗಿ ನಿಂತಿರುವ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ನೆಲಕಚ್ಚುವುದು ಗ್ಯಾರಂಟಿ.

Read More
Next Story