There is a big conspiracy behind the stampede: Congress spokesperson R. Lakshman
x

ನಿವೃತ್ತ ನ್ಯಾ. ಜಾನ್‌ ಮೈಕಲ್‌ ಕುನ್ಹಾ ಆಯೋಗಕ್ಕೆ ಕಾಂಗ್ರೆಸ್‌ ವಕ್ತಾರ ಆರ್‌. ಲಕ್ಷ್ಮಣ್‌ ದೂರು ನೀಡಿದರು.

ಕಾಲ್ತುಳಿತ ದುರಂತದ ಹಿಂದೆ ಬಿಜೆಪಿ ಷಡ್ಯಂತ್ರ: ಕಾಂಗ್ರೆಸ್‌ ವಕ್ತಾರ ಆರ್‌. ಲಕ್ಷ್ಮಣ್‌ ಆರೋಪ

ನಿವೃತ್ತ ನ್ಯಾ. ಜಾನ್‌ ಮೈಕಲ್‌ ಕುನ್ಹಾ ಅವರ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಬಹಳ ತುಚ್ಚವಾಗಿ ಮಾತನಾಡಿದ್ದಾರೆ. ಇದರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ತಿಳಿಸಿದರು.


ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಹಿಂದೆ ಬಿಜೆಪಿಯ ಷಡ್ಯಂತ್ರ ಅಡಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಟ್ವೀಟ್ ಹಾಗೂ ವಿಡಿಯೋಗಳ ಬಗ್ಗೆ ಆಯೋಗಕ್ಕೆ ದಾಖಲೆ ನೀಡಿದ್ದೇವೆ ಎಂದರು.

"ಆರ್‌ಸಿಬಿ ವಿಜಯೋತ್ಸವದ ವೇಳೆ ಜನಸಂದಣಿ ನಡುವೆ ಬಿಜೆಪಿಯ ಕೆಲ ಗೂಂಡಾಗಳು ಜನರ ಮಧ್ಯೆ ಸೇರಿಕೊಂಡು ನೂಕು ನುಗ್ಗಲಾಗುವಂತೆ ಮಾಡಿದ್ದಾರೆ. ಯಾರು ಆ ರೀತಿ ತಳ್ಳಿದ್ದಾರೆ ಎಂಬುದನ್ನು ಗುರುತು ಮಾಡಿ ವಿಡಿಯೋ ನೀಡಿದ್ದೇವೆ. ಇದರ ಹಿಂದೆ ದೊಡ್ಡ ಸಂಚು ಇರುವುದು ನಿಶ್ಚಿತ" ಎಂದು ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಆರ್‌ಸಿಬಿ ಕಾಲ್ತುಳಿತ ದುರಂತದ ತನಿಖೆ ವಿವಿಧ ಆಯಾಮಗಳಿಂದ ಆಗಬೇಕು ಎಂದು ಎಂ. ಲಕ್ಷ್ಮಣ್ ಇದೇ ವೇಳೆ ಆಗ್ರಹಿಸಿದ್ದಾರೆ. "11 ಜನರ ಕಾಲ್ತುಳಿತವನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ, ಈ ದುರಂತದ ಹಿಂದೆ ಏನೋ‌ ಷಡ್ಯಂತ್ರ ಅಡಗಿದೆ" ಎಂದು ಅವರು ಪುನರುಚ್ಚರಿಸಿದರು. ಅಲ್ಲದೆ, ನಿವೃತ್ತ ನ್ಯಾ. ಕುನ್ಹಾ ಅವರ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಬಹಳ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಲಕ್ಷ್ಮಣ್, ಅದರ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನ್ಯಾ. ಕುನ್ಹಾ ಅವರು ಜೈಲಿಗೆ ಕಳಿಸಿದ್ದರು ಎನ್ನುವ ಕಾರಣಕ್ಕೆ ಆರ್‌. ಅಶೋಕ್ ಮಾತನಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.

ಏನಿದು ದುರಂತ?

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4 ರಂದು ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದುರಂತದ ತನಿಖೆಗಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್​ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

Read More
Next Story