Big Cats in Bengaluru: ಮುಂಬೈಗಿಂತ ಬೆಂಗಳೂರಿನಲ್ಲೇ ಹೆಚ್ಚು! ನಗರದ ಸುತ್ತ 80ಕ್ಕೂ ಹೆಚ್ಚು ಚಿರತೆಗಳು! ಹುಲಿ, ಸೀಳುನಾಯಿ ಭೀತಿ!
x
ಕೃಪೆ: ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನ ವರದಿ

Big Cats in Bengaluru: ಮುಂಬೈಗಿಂತ ಬೆಂಗಳೂರಿನಲ್ಲೇ ಹೆಚ್ಚು! ನಗರದ ಸುತ್ತ 80ಕ್ಕೂ ಹೆಚ್ಚು ಚಿರತೆಗಳು! ಹುಲಿ, ಸೀಳುನಾಯಿ ಭೀತಿ!

ಮಾಂಸಾಹಾರಿ ವನ್ಯಜೀವಿಗಳಾದ ಹುಲಿ, ಚಿರತೆ, ಸೀಳು ನಾಯಿ, ಮತ್ತು ಸಸ್ಯಾಹಾರಿ ವನ್ಯಜೀವಿಗಳಾದ ಆನೆ, ಕಾಟಿ, ಕಡವೆಯಂತಹ ಕಾಡುಪ್ರಾಣಿಗಳು ಮಹಾನಗರದ ಪಕ್ಕದಲ್ಲೇ ಇರುವ ಏಕೈಕ ಮಹಾನಗರ ಬೆಂಗಳೂರು.


ಮನುಷ್ಯನಿಗಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಓಡುವ ಚಿರತೆ ವಿಶ್ವದ ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ. ಅದ್ಭುತ ವೇಗವನ್ನು ಹೊಂದಿರುವ ಚಿರತೆಗಳು ಮಹಾರಾಷ್ಟ್ರದ ಮುಂಬೈಗಿಂತ ಕರ್ನಾಟಕದ ಬೆಂಗಳೂರಿನಲ್ಲಿ ಹೆಚ್ಚಿವೆ..!

ಚಿರತೆಗಳ ಸಂಖ್ಯೆ ಅಧಿಕವಾಗಿರುವುದು ಒಂದೆಡೆ ಸಂತಸದ ವಿಚಾರವಾದರೆ, ಮತ್ತೊಂದೆಡೆ ಆಧುನಿಕತೆಗೆ ಮೈಯೊಡ್ಡಿ ವಿಶ್ವದ ಗಮನ ಸೆಳೆದಿರುವ ಐಟಿ ನಗರಿ ಬೆಂಗಳೂರಿನ ಸುತ್ತಮುತ್ತಲೇ 80ಕ್ಕೂ ಹೆಚ್ಚು ಚಿರತೆಗಳಿರುವುದು ಹೊರವಲಯದ ನಿವಾಸಿಗಳ ನಿದ್ದೆಗೆಡಿಸಿದೆ. ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಯಲ್ಲಿ ಚಿರತೆಗಳ ದಾಳಿ ಸವಾಲಾಗಿದೆ. ಇಂತಹ ದಾಳಿಯನ್ನು ನಿರ್ವಹಿಸುವಲ್ಲಿ ಅರಣ್ಯ ಇಲಾಖೆಯು ಕಾರ್ಯಪಡೆಯನ್ನು ರಚನೆ ಮಾಡಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಸಾಧುವಾಗಿಲ್ಲ.

ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ʼಹೊಳೆಮತ್ತಿ ನೇಚರ್​ ಫೌಂಡೇಶನ್ʼ​ನ ತಂಡ ಬೆಂಗಳೂರಿನ ಸುತ್ತಮುತ್ತಲಿರುವ ಚಿರತೆಗಳ ಅಸಲಿ ಸಂಖ್ಯೆಯನ್ನು ಪತ್ತೆ ಮಾಡಿದೆ. ಬೆಂಗಳೂರು ನಗರದಲ್ಲಿ 80ಕ್ಕೂ ಹೆಚ್ಚು ಚಿರತೆಗಳು ಕಾಣಿಸಿಕೊಂಡಿರುವ ಅಂಶವು ತಂಡದ ಅಧ್ಯಯನದ ಮೂಲಕ ಬೆಳಕಿಗೆ ಬಂದಿದೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲದಿಂದ ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನದ ಪ್ರಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸೇರಿ ಬೆಂಗಳೂರಿನ ಸುತ್ತಮುತ್ತ ಸುಮಾರು 80 ರಿಂದ 85 ಚಿರತೆಗಳಿರಬಹುದು ಎಂದು ಅಂದಾಜು ಮಾಡಿದೆ.

ಹೇಗೆ ಪತ್ತೆ?

ಫೌಂಡೇಷನ್​ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್​ಗಳನ್ನು ಬಳಸಿ, ಚಿರತೆಗಳ ಸಂಖ್ಯೆಯನ್ನು ಪತ್ತೆ ಮಾಡಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 54 ಚಿರತೆಗಳು ಮತ್ತು ಬೆಂಗಳೂರಿನ ಸುತ್ತಮುತ್ತಲಿರುವ ಅರಣ್ಯ ಪ್ರದೇಶಗಳಲ್ಲಿ ಸುಮಾರು 30 ಚಿರತೆಗಳಿವೆ ಎಂಬ ಅಂಶ ಗೊತ್ತಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸೇರಿ, ಬಿ.ಎಂ.ಕಾವಲ್, ಯು.ಎಂ. ಕಾವಲ್, ತುರಹಳ್ಳಿ, ತುರಹಳ್ಳಿಗುಡ್ಡ, ಸೂಳಿಕೆರೆ, ಹೆಸರಘಟ್ಟ, ಮಾರಸಂದ್ರ, ಮಂಡೂರು, ಇತರ ಸರ್ಕಾರಿ ಇಲಾಖೆಗಳ ಜಾಗ ಸೇರಿ ಹಲವು ಖಾಸಗಿ ಜಮೀನುಗಳನ್ನೊಳಗೊಂಡ ಸುಮಾರು 282 ಚದರ ಕಿ.ಮೀ ಪ್ರದೇಶದಲ್ಲಿ ಅಧ್ಯಯನ ಕೈಗೊಂಡು ಚಿರತೆಗಳ ಸಂಖ್ಯೆಯನ್ನು ಪತ್ತೆ ಮಾಡಲಾಗಿದೆ.

ಕೃಪೆ: ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನ ವರದಿ

ಕ್ಯಾಮೆರಾ ಟ್ರ್ಯಾಪ್‌ಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಬ್ಯಾಟರಿಗಳನ್ನು ಪರಿಶೀಲಿಸಲು ಛಾಯಾಚಿತ್ರಗಳನ್ನು ಡೌನ್ಲೋಡ್ ಮಾಡಲು ಮತ್ತು ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು 2-3 ದಿನಗಳಿಗೊಮ್ಮೆ ನಿಯಮಿತವಾಗಿ ಪರಿಶೀಲಿಸಲಾಯಿತು. ಡೌನ್ಲೋಡ್ ಮಾಡಿದ ಚಿತ್ರಗಳನ್ನು ಜಾತಿಗಳ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ಚಿರತೆಗಳಲ್ಲದೆ ಇತರೆ 34 ಪ್ರಭೇದದ Sಸ್ತನಿಗಳು ಈ ಅಧ್ಯಯನದ ಮೂಲಕ ದಾಖಲಾಗಿದೆ. ಇವುಗಳಲ್ಲಿ ನಾಲ್ಕು, ನಶಿಸುವ ಮತ್ತು ನಾಲ್ಕು, ಅಪಾಯದ ಅಂಚಿನಲ್ಲಿರುವ ಪ್ರಭೇದಗಳಾಗಿವೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೃಪೆ: ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನ ವರದಿ

ಇತ್ತೀಚಿನ ಅಧ್ಯಯನಗಳು ಮುಂಬೈ ನಗರದ ಆಸುಪಾಸಿನಲ್ಲಿ 54 ಚಿರತೆಗಳಿರುವುದನ್ನು ದಾಖಲಿಸಿದೆ. ದೊಡ್ಡ ಮಾಂಸಾಹಾರಿ ವನ್ಯಜೀವಿಗಳಾದ ಹುಲಿ, ಚಿರತೆ, ಸೀಳು ನಾಯಿ, ಮತ್ತು ಸಸ್ಯಾಹಾರಿ ವನ್ಯಜೀವಿಗಳಾದ ಆನೆ, ಕಾಟಿ, ಕಡವೆಯಂತಹ ದೊಡ್ಡ ಕಶೇರುಕಗಳು ಮಹಾನಗರದ ಪಕ್ಕದಲ್ಲೇ ಇರುವ ಏಕೈಕ ಮಹಾನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಚಿರತೆಗಳು ಮತ್ತಿತರ ವನ್ಯಜೀವಿಗಳೊಟ್ಟಿಗೆ ಸಹಬಾಳ್ವೆ ನಡೆಸುತ್ತಿರುವ ಬೆಂಗಳೂರು ಮತ್ತು ಆಸುಪಾಸಿನ ನಿವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ಸಹ ತಿಳಿಸಲಾಗಿದೆ.

ಚಿರತೆಗಳ ದಾಳಿಗೆ ಕಾರಣಗಳು:

ಅರಣ್ಯ ಪ್ರದೇಶಗಳಲ್ಲಿ ನೆಲೆಸಿರುವ ಚಿರತೆಗಳು ನಾಡಿನತ್ತ ಬರುತ್ತಿದ್ದು, ದಾಳಿಗಳು ಹೆಚ್ಚಾಗುತ್ತಿವೆ. ಎಷ್ಟೇ ಕ್ರಮಗಳನ್ನು ಕೈಗೊಂಡರೂ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರಂತರವಾಗಿದೆ. ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಯಲ್ಲಿ ಚಿರತೆಗಳ ದಾಳಿ ಸವಾಲಾಗಿದೆ. ಆನೆಗಳ ದಾಳಿ ಮತ್ತು ಕಾಡುಹಂದಿಗಳ ದಾಳಿಯ ನಂತರದ ಸ್ಥಾನದಲ್ಲಿ ಚಿರತೆಗಳ ದಾಳಿಯಿದೆ. ಪ್ರತಿ ವರ್ಷವೂ ಚಿರತೆ ದಾಳಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದರೂ, ಸಮಸ್ಯೆಯ ಬಗ್ಗೆ ಅರಣ್ಯಾಧಿಕಾರಿಗಳು ಸಮರ್ಪಕವಾಗಿ ಎಚ್ಚರಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬೆಳೆಯುತ್ತಿರುವ ನಗರ ಪ್ರದೇಶವು ಸಹ ಚಿರತೆಗಳ ದಾಳಿಗೆ ಒಂದು ಕಾರಣವಾಗಿದೆ. ಚಿರತೆಗಳು ನೆಲೆಸಿರುವ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ನಗರ ಪ್ರದೇಶ ಬೆಳೆಯುತ್ತಿದೆ. ಪರಿಣಾಮ ಚಿರತೆಗಳು ನಾಡಿನ ಕಡೆ ಪಯಣ ಆರಂಭಿಸಿವೆ. ಐಟಿ-ಬಿಟಿ ಕಂಪನಿಗಳು ನಗರದ ಹೊರವಲಯ ಭಾಗದಲ್ಲಿ ಹೆಚ್ಚಾಗಿ ತಲೆ ಎತ್ತುತ್ತಿವೆ. ಭಾಗಶಃ ಆ ಪ್ರದೇಶದಲ್ಲೆಲ್ಲಾ ಪ್ರಾಣಿಗಳೇ ನೆಲೆಸಿದ್ದವು. ವನ್ಯಜೀವಿಗಳ ವಾಸಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಅವುಗಳು ತಮ್ಮ ಸ್ಥಳಕ್ಕೆ ಅಗಮಿಸುತ್ತಿವೆ. ಪರಿಣಾಮ ದಾಳಿಗಳ ಸಂಖ್ಯೆಗಳು ಹೆಚ್ಚುತ್ತಿವೆ ಎಂಬುದು ವನ್ಯಜೀವಿಗಳ ತಜ್ಞರ ಅಭಿಪ್ರಾಯಗಳಾಗಿವೆ.

ಕೃಪೆ: ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನ ವರದಿ

ಇನ್ನು, ನಗರ ಪ್ರದೇಶದ ಹೊರವಲಯದಲ್ಲಿ ಕೋಳಿಫಾರಂಗಳ ಸಂಖ್ಯೆ ಹೆಚ್ಚಾಗಿವೆ. ಅಲ್ಲಿಂದಲೇ ನಗರ ಪ್ರದೇಶಗಳಿಗೆ ಕೋಳಿಗಳನ್ನು ಸರಬರಾಜು ಮಾಡಲಾಗುತ್ತದೆ. ಕೋಳಿಫಾರಂ ಹೆಚ್ಚಾಗಿರುವ ಕಾರಣ ಚಿರತೆಗಳು ಸಹಜವಾಗಿಯೇ ಅವುಗಳ ವಾಸನೆ ಹಿಡಿದು ತಿನ್ನಲು ನಗರ ಪ್ರದೇಶಕ್ಕೆ ನುಗ್ಗುತ್ತವೆ. ಇವು ಮಾನವ ಹಾನಿಗೂ ಕಾರಣವಾಗುತ್ತಿವೆ. ಇಷ್ಟೇ ಅಲ್ಲದೇ, ಅಕ್ರಮ ಕಸಾಯಿಖಾನೆಗಳು ದುಪ್ಪಟ್ಟಾಗಿವೆ. ಕಸಾಯಿಖಾನೆಗಳಲ್ಲಿನ ಸಾಕುಪ್ರಾಣಿಗಳನ್ನು ತಿನ್ನಲು ಸಹ ಚಿರತೆಗಳು ನಗರದೊಳಗೆ ಕಾಲಿಡುತ್ತಿವೆ. ಇವುಗಳ ನಿಯಂತ್ರಣ ಮಾಡಿದರೆ ಚಿರತೆಗಳ ದಾಳಿಯು ಹತೋಟಿಗೆ ಬರಲಿದೆ ಎಂದು ಹೇಳಲಾಗಿದೆ.

ಚಿರತೆಗಳ ದೈಹಿಕ ಗುಣಲಕ್ಷಣಗಳು:

ಚಿರತೆಗಳು ತೆಳುವಾದ ದೇಹವನ್ನು ಹೊಂದಿದ್ದು, ಕಿರಿದಾದ ಸೊಂಟ ಮತ್ತು ಆಳವಾದ ಎದೆಯನ್ನು ಹೊಂದಿರುತ್ತವೆ. ಅವು ದೊಡ್ಡ ಮೂಗಿನ ಹೊಳ್ಳೆಗಳನ್ನು ಹೊಂದಿದ್ದು, ಅವು ಆಮ್ಲಜನಕದ ಸೇವನೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಚಿರತೆಗಳು ದೊಡ್ಡ ಶ್ವಾಸಕೋಶ ಮತ್ತು ಹೃದಯಗಳನ್ನು ಹೊಂದಿದ್ದು, ಬಲವಾದ ಅಪಧಮನಿಗಳು ಮತ್ತು ಮೂತ್ರಜನಕಾಂಗಗಳನ್ನು ಹೊಂದಿರುವ ರಕ್ತಪರಿಚಲನಾ ವ್ಯವಸ್ಥೆಗೆ ಸಂಪರ್ಕ ಹೊಂದಿವೆ. ಇದು ರಕ್ತದ ಮೂಲಕ ಆಮ್ಲಜನಕವನ್ನು ಬಹಳ ಪರಿಣಾಮಕಾರಿಯಾಗಿ ಪರಿಚಲನೆ ಮಾಡಲು ಒಟ್ಟಾಗಿ ಕೆಲಸ ಮಾಡುತ್ತದೆ.

ತನ್ನ ಉದ್ದವಾದ ಕಾಲುಗಳು ಮತ್ತು ಅತ್ಯಂತ ತೆಳ್ಳಗಿನ ದೇಹವನ್ನು ಹೊಂದಿರುವ ಚಿರತೆಯು ಸಾಕಷ್ಟು ಭಿನ್ನವಾಗಿದೆ. ಚಿರತೆಯ ಜೀವನ ಚಕ್ರದಲ್ಲಿ ಮೂರು ಹಂತಗಳಿವೆ. ಜನನದಿಂದ 18 ತಿಂಗಳವರೆಗೆ ಮರಿ ಚಿರತೆಯಾಗಿದ್ದು, 18 ರಿಂದ 24 ತಿಂಗಳವರೆಗೆ ಹದಿಹರೆಯದ ಚಿರತೆಯಾಗಿರುತ್ತದೆ. ಪ್ರೌಢಾವಸ್ಥೆ ಚಿರತೆಯು 24 ತಿಂಗಳುಗಳು ಮತ್ತು ನಂತರದ್ದಾಗಿರುತ್ತದೆ. ಚಿರತೆಯ ಗರ್ಭಾವಸ್ಥೆಯ ಅವಧಿ 93 ದಿನಗಳಾಗಿರುತ್ತದೆ. ವಯಸ್ಕ ಚಿರತೆಗಳ ತೂಕ ಸರಾಸರಿ 75 ರಿಂದ 125 ಪೌಂಡ್‌ಗಳ (34-79) ನಡುವೆ ಇರುತ್ತದೆ. ಅವು ತಲೆಯಿಂದ ಹಿಂಭಾಗದವರೆಗೆ 40 ರಿಂದ 60 ಇಂಚುಗಳಷ್ಟು ಉದ್ದವನ್ನು ಅಳೆಯಬಹುದು. ಬಾಲವು ಇನ್ನೂ 24 ರಿಂದ 32 ಇಂಚುಗಳನ್ನು ಸೇರಿಸಬಹುದು, ಇದು ಒಟ್ಟು ಒಟ್ಟಾರೆ ಉದ್ದವನ್ನು 7.5 ಅಡಿಗಳಿಗೆ ಹೆಚ್ಚಿಸುತ್ತದೆ. ಸರಾಸರಿಯಾಗಿ, ಚಿರತೆಗಳು ಭುಜದ ಮೇಲೆ 28 ರಿಂದ 36 ಇಂಚುಗಳಷ್ಟು ಎತ್ತರವಿರುತ್ತವೆ ಎಂದು ಹೇಳಲಾಗಿದೆ.

ಹೆಣ್ಣು ಚಿರತೆಗಳು ಒಡಹುಟ್ಟಿದವರು ಲೈಂಗಿಕವಾಗಿ ಪ್ರಬುದ್ಧರಾದಾಗ, ಗುಂಪಿನಿಂದ ಬೇರ್ಪಟ್ಟು ಸ್ವತಂತ್ರ ಜೀವನವನ್ನು ನಡೆಸುತ್ತವೆ. ಆದರೆ, ಗಂಡು ಚಿರತೆಗಳು ಒಡಹುಟ್ಟಿದವರ ಜತೆ ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ಇರುತ್ತವೆ ಎನ್ನಲಾಗಿದೆ.

ಸಂಜಯ್‌ಗುಬ್ಬಿ ನೇತೃತ್ವ ತಂಡದ ಶಿಫಾರಸ್ಸುಗಳು

* ಬಿ.ಎಂ.ಕಾವಲ್, ಯು.ಎಂ.ಕಾವಲ್, ರೋರಿಚ್ ಎಸ್ಟೇಟ್, ಮತ್ತು ಗುಲ್ಲಹಳ್ಳಿಗುಡ್ಡ ಕಾಡುಗಳನ್ನು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಬೇಕು. ಆಗ ವನ್ಯಜೀವಿ ಸಂರಕ್ಷಣೆಯೊಂದಿಗೆ, ಈ ಪ್ರದೇಶದ ನೀರಿನ ಸಂರಕ್ಷಣೆಯಾಗುತ್ತದೆ ಮತ್ತು ಬೆಂಗಳೂರು ನಗರಕ್ಕೆ ಇದು ಶಾಶ್ವತ ಶ್ವಾಸಕೋಶವಾಗಿ ಕಾರ್ಯನಿರ್ವಹಿಸುತ್ತದೆ.

* ಕ್ಯಾಮರಾ ಟ್ರ್ಯಾಪ್​ಗಳಲ್ಲಿ ಹುಲಿಗಳು ಕಂಡು ಬಂದಿರುವ ದುರ್ಗದಕಲ್, ಬೆಟ್ಟಹಳ್ಳಿವಾಡೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳು, ಮತ್ತು ಜೆ.ಐ.ಬಾಚಹಳ್ಳಿ ಮತ್ತು ಎಂ.ಮಣಿಯಂಬಳ್ ಪ್ರದೇಶಗಳ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಬೇಕು.

* ಬೆಂಗಳೂರು ನಗರದ ಅತಿಯಾದ ಬೆಳವಣಿಗೆಯ ಹಿನ್ನಲೆಯಲ್ಲಿ ಮಾನವ-ಚಿರತೆ ಸಹಬಾಳ್ವೆಗೆ ಒತ್ತು ಕೊಡಬೇಕು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು.

* ಮುನೇಶ್ವರಬೆಟ್ಟ-ಬನ್ನೇರುಘಟ್ಟ ವನ್ಯಜೀವಿ ಕಾರಿಡಾರ್ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

* ಮಾನವ-ಪ್ರಾಣಿ ಸಂಘರ್ಷದ ಹಿನ್ನಲೆಯಲ್ಲಿ ಇತರ ಪ್ರದೇಶಗಳಲ್ಲಿ ಹಿಡಿದ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು.

ಕೃಪೆ: ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್​ ಫೌಂಡೇಶನ್​ನ ತಂಡದವರು ನಡೆಸಿದ ಅಧ್ಯಯನ ವರದಿ

ಸಂಜಯ್‌ ಗುಬ್ಬಿ ಪ್ರತಿಕ್ರಿಯೆ

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ವನ್ಯ ಜೀವಿ ತಜ್ಞ ಡಾ. ಸಂಜಯ್​ ಗುಬ್ಬಿ, ನಗರದೊಳಗೆ ಚಿರತೆಗಳು ಬರುವುದು ಬಹು ಅಪರೂಪ. ಅದು ಅವುಗಳ ಆವಾಸಸ್ಥಾನವಲ್ಲ. ಆದರೆ ನಗರದ ಅಂಚಿನಲ್ಲಿರುವ ವಸತಿ ಪ್ರದೇಶಗಳಲ್ಲಿ ಕೆಲವೊಮ್ಮೆ ಚಿರತೆಗಳು ಕಾಣಿಸಿಕೊಳ್ಳುತ್ತವೆ. ಆಗ ನಾವುಗಳು ಕೆಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಸಂಘರ್ಷವಾಗುವುದನ್ನು ತಡೆಯಬಹುದು ಎಂದಿದ್ದಾರೆ.

ಚಿರತೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಗೆ ಒತ್ತು ಕೊಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರು ಮತ್ತು ಕೋಳಿ ಸಾಕಾಣೆ ಮಾಡುವವರು ರಾತ್ರಿ ವೇಳೆ ತಮ್ಮ ಪ್ರಾಣಿಗಳನ್ನು ಸುರಕ್ಷಿತವಾಗಿ ಕೊಟ್ಟಿಗೆ ಅಥವಾ ಗೂಡುಗಳಲ್ಲಿ ಇಡಲು ಕ್ರಮ ಕೈಗೊಳ್ಳಬೇಕು. ತೆರೆದ ಜಾಗದಲ್ಲಿ ನಾಯಿ, ದನ-ಕರುಗಳನ್ನು, ಇತರ ಪ್ರಾಣಿಗಳನ್ನು ಕಟ್ಟಿದರೆ ಚಿರತೆಗಳನ್ನು ಆಕರ್ಷಿಸಿದಂತಾಗುತ್ತದೆ. ಈಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರಲ್ಲಿ ಭಯ, ಆತಂಕ ಮೂಡಿಸುವ ಕೆಲಸ ಹೆಚ್ಚಾಗಿದೆ. ಹಾಗಾಗಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೇರೆಡೆ ಸ್ಥಳಾಂತರ ಬೇಡ!

ಸರ್ಕಾರವು ಚಿರತೆಗಳನ್ನು ಅನಾವಶ್ಯಕವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು. ಜೀವ ಹಾನಿ, ಅತಿಯಾದ ಸಂಘರ್ಷ ಮತ್ತಿತರ ತುರ್ತು ಪರಿಸ್ಥಿಗಳಲ್ಲಿ ಮಾತ್ರ ಚಿರತೆಗಳನ್ನು ಹಿಡಿದು ಮೃಗಾಲಯಗಳಿಗೆ ತೆಗೆದುಕೊಂಡು ಹೋಗಬೇಕು. ಪ್ರತಿ ವರ್ಷವೂ ನೂರಾರು ಚಿರತೆಗಳನ್ನು ಹಿಡಿದು ಸ್ಥಳಾಂತರಗೊಳಿಸಲಾಗಿದೆ. ಆದರೂ ಸಂಘರ್ಷ ಕಡಿಮೆಯಾಗಲಿಲ್ಲ ಎನ್ನುವುದು ಈ ಕಾರ್ಯನೀತಿ ಸರಿಯಿಲ್ಲವೆನ್ನುವುದನ್ನು ಎತ್ತಿ ತೋರುತ್ತದೆ. ಅರಣ್ಯ ಇಲಾಖೆಯ ಸಿಬ್ಬ್ಬಂದಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾನವ-ವನ್ಯಜೀವಿ ಸಂಘರ್ಷ ನಿಭಾಯಿಸುವ ಬಗ್ಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮಗಳು ಕಡ್ಡಾಯಗೊಳಿಸಬೇಕು ಎಂದಿದ್ದಾರೆ.

ರೈತರು ರಾತ್ರಿ ವೇಳೆ ತೋಟ, ಜಮೀನುಗಳಿಗೆ ನೀರು ಕಟ್ಟಲು ಹೋದಾಗ ಹಲವಾರು ಬಾರಿ ಚಿರತೆ, ಕರಡಿ, ಆನೆಗಳಿಂದ ಜೀವ ಹಾನಿಯಾಗಿದೆ. ಹಾಗಾಗಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಹಳ್ಳಿಗಳಲ್ಲಿ ದಿನದ ವೇಳೆ ಮೂರು ಫೇಸ್ ವಿದ್ಯುಚ್ಛಕ್ತಿ ನೀಡುವ ವ್ಯವಸ್ಥೆ ಆಗಬೇಕು. ಕಾಡಂಚಿನ ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಒಂಟಿಯಿರುವ ಮನೆಗಳಿಗೆ ವಿದ್ಯುಚ್ಛಕ್ತಿ ಅಥವಾ ಸೌರಶಕ್ತಿ ದೀಪಗಳ ಸೌಲಭ್ಯ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ.

Read More
Next Story