
Bangalore Stampede : ಕಾಲ್ತುಳಿತ ದುರಂತ: ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ಇಲ್ಲದಿರುವ ನಿದರ್ಶನವೆ?
ಆರ್ಸಿಬಿ ಸಂಭ್ರಮೋತ್ಸವ ಬಗ್ಗೆ ಇಲಾಖೆ ನಡುವೆ ಪತ್ರ ವ್ಯವಹಾರ ನಡೆದರೂ ಸಮನ್ವಯ ಕೊರತೆ ಎದ್ದುಕಾಣುತ್ತದೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ.
ಐಪಿಎಲ್ ಪಂದ್ಯಾವಳಿಯಲ್ಲಿ ಚೊಚ್ಚಲ ಕಪ್ ಪಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತವು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದೇಶದಲ್ಲಿಯೇ ಮುಜಗರಕ್ಕೀಡು ಮಾಡಿದೆ. ಘಟನೆ ಸಂಬಂಧ ನಡೆಯುತ್ತಿರುವ ಪ್ರತಿ ಬೆಳವಣಿಗೆಯೂ ಸಹ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲ್ತುಳಿತ ಘಟನೆಯು ತಮಗೆ ತಡವಾಗಿ ಮಾಹಿತಿ ಬಂದಿದೆ ಎಂಬ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರ್ಸಿಬಿ ಸಂಭ್ರಮೋತ್ಸವವನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ ಇತರೆ ಇಲಾಖೆ ಮತ್ತು ಸಂಸ್ಥೆಗಳ ನಡುವೆ ಪತ್ರ ವ್ಯವಹಾರ ನಡೆದಿದೆ. ಭದ್ರತಾ ವಿಚಾರ ಸಂಬಂಧವೂ ಸಹ ಪ್ರಸ್ತಾಪವಾಗಿದೆ. ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದಾಗಿ ರಾಜ್ಯವು ಕಂಡಿರಿಯದ ದುರಂತ ನಡೆದಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ.
ದೇಶ-ವಿದೇಶ ಮಟ್ಟದಲ್ಲಿ ಮುಖಭಂಗವಾಗುವಂತಹ ಘಟನೆ ನಡೆದರೂ ಸಹ ಸರ್ಕಾರವು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭದ್ರತಾ ವಿಚಾರದಲ್ಲಿ ಲೋಪವಾಗಿರುವ ಬಗ್ಗೆ ಒಪ್ಪಿಕೊಂಡಿದ್ದರೂ ಸಹ ತಮ್ಮ ಪಾತ್ರವೇನಿಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಘಟನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೆ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಇಷ್ಟೇ ಅಲ್ಲದೇ, ಇಲಾಖೆಗಳು ಸಹ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಮುಂದಾಗಿತ್ತಿಲ್ಲ. ಪೊಲೀಸ್ ಆಯುಕ್ತರು ಸೇರಿದಂತೆ ಐವರ ತಲೆದಂಡವಾದರೂ ಪೊಲೀಸ್ ಇಲಾಖೆಯು ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಸರ್ಕಾರವು ಪೊಲೀಸ್ಯತ್ತ ಬೊಟ್ಟು ಮಾಡಿ ನುಣಿಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಪೊಲೀಸ್ ವ್ಯವಸ್ಥೆ ಎನ್ನುವುದು ಸರ್ಕಾರದ ಕಾರ್ಯಾಂಗದ ಒಂದು ಭಾಗವಾಗಿದ್ದು, ಯಾರದೇ ತಪ್ಪಾದರೂ ಸರ್ಕಾರದ್ದೇ ತಪ್ಪಾಗುತ್ತದೆ. ಆದರೆ, ಇಲ್ಲಿ ಸರ್ಕಾರ ಮತ್ತು ಪೊಲೀಸ್ ಪ್ರತ್ಯೇಕ ಎಂಬ ರೀತಿಯಲ್ಲಿ ಹೇಳಿಕೆಗಳು ಬರುತ್ತಿರುವುದು ತಪ್ಪನ್ನು ಮುಚ್ಚಲು ನಡೆಸುವ ಯತ್ನ ಎಂಬಂತೆ ಭಾಸವಾಗುತ್ತಿದೆ.
ಆರೋಪ-ಪ್ರತ್ಯಾರೋಪಗಳ ನಡುವೆಯೇ ಘಟನೆಗೆ ಇಡೀ ವ್ಯವಸ್ಥೆಯೇ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಕಾಲ್ತುಳಿತ ಪ್ರಕರಣದ ಕುರಿತು ಮುಖ್ಯಮಂತ್ರಿಗಳು ತಮಗೆ ತಡವಾಗಿ ಮಾಹಿತಿ ಲಭ್ಯವಾಯಿತು ಎಂಬ ಹೇಳಿಕೆಯು ಸಮಂಜಸವಲ್ಲ. ಒಂದು ವೇಳೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುವಲ್ಲಿ ತಡವಾಗಿದ್ದರೆ ಅದು ಅಧಿಕಾರಿಗಳ ಸಂಪೂರ್ಣ ವೈಫಲ್ಯ. ದೇಶ-ವಿದೇಶದಲ್ಲಿ ರಾಜ್ಯಕ್ಕೆ ಮುಖಭಂಗವಾಗುವಂತಹ ಘಟನೆ ಇದಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ರಾಜಕೀಯ ವಿಶ್ಲೇಷಕರ ಆಗ್ರಹವಾಗಿದೆ.
ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸುವಾಗ ಸರ್ಕಾರವು ಕೆಲವೊಂದು ಶಿಷ್ಟಾಚಾರಗಳನ್ನು ಅನುಸರಿಸಬೇಕು. ಆದರೆ, ವಿಧಾನಸೌಧದ ಮುಂಭಾಗದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಗಳಲ್ಲಿ ಅವುಗಳನ್ನು ಗಾಳಿಗೆ ತೂರಲಾಗಿದೆ. ರಾಜ್ಯಪಾಲರನ್ನು ಕರೆಸಿದ ಬಳಿಕ ಆರ್ಸಿಬಿ ಆಟಗಾರರನ್ನು ಕರೆಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಯಾವುದೇ ಕಾರ್ಯಕ್ರಮದಲ್ಲಿಯೂ ರಾಜ್ಯಪಾಲರಿದ್ದರೆ, ಎಲ್ಲರೂ ವೇದಿಕೆಗೆ ಆಗಮಿಸಿದ ಬಳಿಕ ರಾಜ್ಯಪಾಲರನ್ನು ಕರೆಸಬೇಕು. ಆದರೆ, ಆರ್ಸಿಬಿ ಅಭಿನಂದನಾ ಕಾರ್ಯಕ್ರಮದಲ್ಲಿ ಎಲ್ಲವೂ ನಿಯಮ ಉಲ್ಲಂಘಿಸಲಾಗಿದೆ ಎಂದು ಟೀಕಿಸಲಾಗಿದೆ.
ಇತ್ತೀಚೆಗೆ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಈ ಬಗ್ಗೆ ತಮಗೆ ತಡವಾಗಿ ಮಾಹಿತಿ ಬಂದಿದೆ. ಅಧಿಕಾಗಳು ತಕ್ಷಣ ಮಾಹಿತಿ ಒದಗಿಸಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ನಡೆದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಗೊತ್ತಾಗಲಿಲ್ಲ. ಅಧಿಕಾರಿಗಳು ತಡವಾಗಿ ಮಾಹಿತಿ ನೀಡಿದ ಕಾರಣಕ್ಕಾಗಿ ತಡವಾಗಿ ವಿಷಯ ತಿಳಿದುಬಂತು ಎಂಬುದು ಸಿದ್ದರಾಮಯ್ಯ ಸಮಜಾಯಿಷಿಯಾಗಿದೆ. ಆದರೂ ಸರ್ಕಾರದ ಹೊಣೆ ಹೊತ್ತ ಮುಖ್ಯಮಂತ್ರಿಗಳು ತಮ್ಮನ್ನು ಈ ರೀತಿಯಲ್ಲಿ ಸಮರ್ಥಿಸಿಕೊಳ್ಳುವುದು ಸಮಂಜಸವಲ್ಲ ಎಂಬುದು ರಾಜಕೀಯ ವಲಯದಲ್ಲಿಯೇ ಕೇಳಿಬಂದ ಮಾತುಗಳಾಗಿವೆ.
ದ ಫೆಡರಲ್ ಕರ್ನಾಟಕದ ಜೊತೆಗೆ ಮಾತನಾಡಿದ ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ, ಕಾಲ್ತುಳಿತ ಪ್ರಕರಣವು ಇಡೀ ವ್ಯವಸ್ಥೆಯ ಲೋಪವಾಗಿದೆ. ಸರ್ಕಾರವೇ ಸಂಪೂರ್ಣವಾಗಿ ಹೊಣೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆಯವರ ಕಡೆ ಬೆರಳು ತೋರಿಸುವುದು ಸರಿಯಲ್ಲ. ಐಪಿಎಲ್ ಪಂದ್ಯವು ಒಂದು ದುಡ್ಡಿನ ಪಂದ್ಯವಾಗಿದೆ. ಅದಕ್ಕೆ ಸರ್ಕಾರವು ಇಷ್ಟೊಂದು ಅದ್ದೂರಿ ಕಾರ್ಯಕ್ರಮ ನಡೆಸುವ ಅಗತ್ಯ ಇರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಪಂದ್ಯವನ್ನು ಲಲಿತ್ ಮೋದಿ ಆರಂಭಿಸಿ, ಆರ್ಥಿಕ ಅಪರಾಧ ಎಸಗಿ ವಿದೇಶದಲ್ಲಿ ಅವಿತುಕೊಂಡಿದ್ದಾನೆ. ಅಂತೆಯೇ ಆರ್ಸಿಬಿ ಮಾಲೀಕರಾಗಿದ್ದ ವಿಜಯ್ ಮಲ್ಯ ಸಹ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿದ್ದಾನೆ. ಇಂತಹ ವ್ಯಕ್ತಿಗಳು ನಡೆಸುತ್ತಿರುವ ಪಂದ್ಯಕ್ಕೆ ರಾಜ್ಯ ಸರ್ಕಾರ ಸಂಭ್ರಮ ಪಡುವ ಅಗತ್ಯವೇನಿತ್ತು ಪ್ರಶ್ನಿಸಿದ್ದಾರೆ.
ಇನ್ನು, ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ. ಆರ್ಸಿಬಿ ಆಟಗಾರರಿಗಾಗಿ ರಾಜ್ಯಪಾಲರನ್ನು ಮೊದಲೇ ಕರೆಸಿ ಕಾಯುವಂತೆ ಮಾಡಿದ್ದಾರೆ. ಇದು ಸಂವಿಧಾನಾತ್ಮಕ ಹುದ್ದೆಯಾದ ರಾಜ್ಯಪಾಲರಿಗೆ ಮಾಡಿದ ಅಗೌರವವಾಗಿದೆ. ಶಿಷ್ಟಾಚಾರ ಪಾಲನೆ ಮಾಡಿಲ್ಲ. ಅಲ್ಲದೇ, ಮುಖ್ಯಮಂತ್ರಿಗಳು ದುರಂತದ ಘಟನೆಯ ಬಗ್ಗೆ ಮಾಹಿತಿ ಇಲ್ಲ ಎನ್ನಬಾರದು. ಒಂದು ವೇಳೆ ಅವರಿಗೆ ಮಾಹಿತಿ ಇಲ್ಲದಿದ್ದರೆ ಅದು ಇಡೀ ಸರ್ಕಾರದಲ್ಲಿನ ಅಧಿಕಾರಿಗಳ ಲೋಪವಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಮತ್ತೋರ್ವ ರಾಜಕೀಯ ವಿಶ್ಲೇಷಕ ಬಿ. ಸಮೀವುಲ್ಲಾ ದ ಫೆಡರಲ್ ಕರ್ನಾಟಕ ಜೊತೆಗೆ ಮಾತನಾಡಿ, ದುರಂತ ನಡೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಕಾಲ್ತುಳಿತ ದುರಂತ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕು. ಇಂತಹ ಘಟನೆಗಳು ನಡೆದಾಗ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳು ಸಂಪೂರ್ಣವಾಗಿ ಲೋಪಕ್ಕೆ ಕಾರಣವಾಗಿದ್ದಾರೆ. ಅಧಿಕಾರಿಗಳಿಗೆ ಯಾರು ಹೇಳೋರು, ಕೇಳೋರು ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆಯಲ್ಲಿಯೇ ಗೊಂದಲಕ್ಕೊಳಗಾಗಿದ್ದು, ಅಧಿಕಾರಿಗಳು ನಿಯಂತ್ರಣದಲ್ಲಿಲ್ಲ ಎಂಬುದು ಘಟನೆ ಸಾಕ್ಷಿಕರಿಸಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಕಾಲ್ತುಳಿತ ನಡೆದಿದೆ. ಇದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿದೆ. ಕಾಲ್ತುಳಿತ ನಂತರವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೇಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ನಡೆಸಲು ಯಾರು ಬಿಟ್ಟವರು ಯಾರು? ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು, ಲೋಪದೋಷಗಳು ಮರುಕಳಿಸಬಾರದು ಎಂದಿದ್ದಾರೆ.