The Federal Interview: ಹೊಸ ಜಾತಿಗಣತಿ ನಡೆಸಲು ಮಾಹಿತಿ ಬಂದಿಲ್ಲ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್‌ ನಾಯ್ಕ್
x

The Federal Interview: ಹೊಸ ಜಾತಿಗಣತಿ ನಡೆಸಲು ಮಾಹಿತಿ ಬಂದಿಲ್ಲ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್‌ ನಾಯ್ಕ್

ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ನಾವು ಸಹ ಇದರ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿಯೇ ಅಧಿಕೃತ ಆದೇಶ ಪ್ರಕಟಿಸುವ ನಿರೀಕ್ಷೆಯಲ್ಲಿದ್ದೇವೆ. ಅಧಿಕೃತವಾಗಿ ಆದೇಶವು ಆಯೋಗದ ಕೈ ಸೇರಿದ ಕೂಡಲೇ ಮುಂದಿನ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸನ್ನದ್ದವಾಗಲಿದ್ದೇವೆ.


ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಲು 90 ದಿನಗಳ ಗಡುವು ನೀಡಿರುವ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧಿಕೃತವಾಗಿ ಮಾಹಿತಿಯನ್ನೇ ನೀಡಿಲ್ಲ.

ಕಳೆದ ವಾರ (ಜೂ.12) ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸುವ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಆದರೆ, ಸಮೀಕ್ಷೆ ನಡೆಸುವ ಹೊಣೆ ಹೊತ್ತಿರುವ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧಿಕೃತ ಆದೇಶ ನೀಡದೆ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಅನೌಪಪಚಾರಿಕವಾಗಿ ಕಾರ್ಯನಿರ್ವಹಿಸಬಹುದಾದರೂ ಸಮೀಕ್ಷೆ ನಡೆಸಲು ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕೃತ ಆದೇಶದ ಅಗತ್ಯ ಇದೆ. ಆದರೆ, ವಾರ ಕಳೆದರೂ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕಾರ್ಯ ಕೈಗೊಳ್ಳುವ ತೀರ್ಮಾನ ಕೈಗೊಂಡಿಲ್ಲ.

ಹೊಸದಾಗಿ ಸಮೀಕ್ಷೆ ನಡೆಸುವ ಸಂಬಂಧ ಅನೌಪಚಾರಿಕವಾಗಿ ತಯಾರಿ ಕಾರ್ಯ ಆರಂಭಿಸಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಮಾಜಿ ಅಡ್ವೋಕೇಟ್‌ ಜನರಲ್‌ ಮಧುಸೂದನ್‌ ಆರ್‌.ನಾಯ್ಕ್‌, ಸಂವಿಧಾನ ಬದ್ಧವಾಗಿ ಯಾವ ರೀತಿಯಾಗಿ ಸಮೀಕ್ಷೆ ನಡೆಸಲಾಗುತ್ತದೆ ಎಂಬುದರ ಕುರಿತು ದ ಫೆಡರಲ್‌ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

* ಹೊಸದಾಗಿ ಸಮೀಕ್ಷೆ ನಡೆಸಲು ಸರ್ಕಾರ ಸೂಚನೆ ನೀಡಿದೆ. ಅಧಿಕೃತವಾಗಿ ಸೂಚನೆ ಬಂದಿದೆಯೇ?

ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ನಾವು ಸಹ ಇದರ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿಯೇ ಅಧಿಕೃತ ಆದೇಶ ಪ್ರಕಟಿಸುವ ನಿರೀಕ್ಷೆಯಲ್ಲಿದ್ದೇವೆ. ಅಧಿಕೃತವಾಗಿ ಆದೇಶವು ಆಯೋಗದ ಕೈ ಸೇರಿದ ಕೂಡಲೇ ಮುಂದಿನ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸನ್ನದ್ದವಾಗಲಿದ್ದೇವೆ.

* ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಮಾನದಂಡಗಳನ್ನು ಪರಿಗಣಿಸಲಾಗುತ್ತದೆಯೇ?

ಸಾಧ್ಯವೇ ಇಲ್ಲ.. ಹಿಂದುಳಿದ ವರ್ಗಗಳ ಆಯೋಗದ ಈ ಹಿಂದಿನ ಅಧ್ಯಕ್ಷರಾದ ಕಾಂತರಾಜ್‌ ಮತ್ತು ಜಯಪ್ರಕಾಶ್‌ ಹೆಗ್ಡೆ ಅವರು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದರು. ಆದರೆ, ಆ ವರದಿಯನ್ನು ಯಾವುದೇ ಕಾರಣಕ್ಕೂ ಮಾನದಂಡವಾಗಿ ತೆಗೆದುಕೊಳ್ಳುವುದಿಲ್ಲ. ಸರ್ಕಾರವು ಸಂಪೂರ್ಣವಾಗಿ ಹೊಸದಾಗಿ ನಡೆಸುವಂತೆ ತಿಳಿಸಿದ್ದು, ಅದರಂತೆಯೇ ಹೊಸದಾಗಿ ಸಮೀಕ್ಷೆ ನಡೆಸಲಾಗುವುದು. ಕಾಂತರಾಜ್‌ ಮತ್ತು ಜಯಪ್ರಕಾಶ್‌ ಹೆಗ್ಡೆ ಅವರ ವರದಿಯಲ್ಲಿ ದತ್ತಾಂಶಗಳನ್ನು ಪರಿಗಣಿಸಲಾಗುವುದೇ ಹೊರತು ಅದರ ಮಾನದಂಡಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಹಿಂದಿನ ವರದಿಯು 10 ವರ್ಷಗಳ ಹಿಂದಿನದ್ದಾಗಿದ್ದು, ಜನಸಂಖ್ಯೆಯಲ್ಲಿಯೂ ಸಾಕಾಷ್ಟು ಬದಲಾವಣೆಯಾಗಿರುತ್ತದೆ. ಹೀಗಾಗಿ ಹೊಸದಾಗಿ ಮಾನದಂಡಗಳನ್ನು ರೂಪಿಸಿ ಸಮೀಕ್ಷೆ ನಡೆಸಲಾಗುವುದು.

* ಸಮೀಕ್ಷೆಗೆ 90 ದಿನಗಳ ಗಡುವು ನೀಡಲಾಗಿದೆ. ಇಷ್ಟು ಸಮಯಾವಕಾಶ ನಿಜವಾಗಲೂ ಸಾಕಾಗುವುದೇ?

ಸರ್ಕಾರವು ಸಮೀಕ್ಷೆ ನಡೆಸಲು 90 ದಿನಗಳ ಗಡುವು ನೀಡಿದೆ. ಇದು ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಬಂದ ದಿನದಿಂದ ಆರಂಭವಾಗಲಿದೆ. ನೈಜ ದತ್ತಾಂಶ ಕ್ರೋಢೀಕರಿಸಬೇಕಾಗಿದೆ. ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಸಮೀಕ್ಷೆ ನಡೆಸಬೇಕಾಗಿದೆ. ೯೦ ದಿನಗಳ ಅವಧಿಯಲ್ಲಿ ಸಮೀಕ್ಷೆ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇಲ್ಲವಾದರೆ ಈ ವರ್ಷಂತ್ಯದೊಳಗೆ ಸಮೀಕ್ಷೆಯ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು.

* ಸಮೀಕ್ಷೆಗಾಗಿ ಬಹುತೇಕ ಶಾಲಾ ಶಿಕ್ಷಕರನ್ನು ಬಳಕೆ ಮಾಡಲಾಗುತ್ತದೆ. ಶಾಲೆಗಳು ಪ್ರಾರಂಭವಾಗಿರುವುದರಿಂದ ಮಾನವ ಸಂಪನ್ಮೂಲ ಕ್ರೋಢೀಕರಣ ಹೇಗೆ ಮಾಡಲಾಗುತ್ತದೆ?

ಸದ್ಯಕ್ಕೆ ಇದು ಅಪ್ರಸ್ತುತ. ಸರ್ಕಾರ ಈಗಷ್ಟೇ ಹೊಸದಾಗಿ ಸಮೀಕ್ಷೆ ನಡೆಸುವ ಬಗ್ಗೆ ಘೋಷಣೆ ಮಾಡಿದೆ. ಪ್ರಾಥಮಿಕ ಹಂತದ ಚರ್ಚೆಗಳು ಸಹ ನಡೆದಿಲ್ಲ. ಸರ್ಕಾರದಿಂದ ಅಧಿಕೃತ ಆದೇಶವೂ ಬಂದಿಲ್ಲ. ಸರ್ಕಾರ ಆದೇಶ ಹೊರಡಿಸಿದ ಬಳಿಕವೇ ಮುಂದಿನ ಹಂತದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಶಿಕ್ಷಕರನ್ನು ಗಣತಿಗೆ ಬಳಸಿಕೊಳ್ಳಬೇಕೇ? ಅಥವಾ ಇತರೆ ಸಿಬ್ಬಂದಿಯನ್ನು ಸಹ ಬಳಸಿಕೊಳ್ಳಬೇಕೇ? ಎಂಬುದರ ಕುರಿತು ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಮೊದಲು ಅಗತ್ಯ ಇರುವ ಪ್ರಶ್ನಾವಳಿಗಳನ್ನು ಸಿದ್ದಪಡಿಸಲಾಗುವುದು. ನಂತರ ಮಾನವ ಸಂಪನ್ಮೂಲ ಬಳಕೆ ಬಗ್ಗೆ ನಿರ್ಧಾರ. ಯಾರಿಗೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.

* ಹಾಗಾದರೆ ಯಾವ ರೀತಿ ಸಿದ್ಧತೆ ಕೈಗೊಳ್ಳಬೇಕು ಎಂಬುದರ ಕುರಿತು ಏನಾದರೂ ಪ್ರಾಥಮಿಕ ಚರ್ಚೆ ಏನಾದರೂ ನಡೆದಿದೆಯೇ?

ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾಧ್ಯಮಗಳ ಮೂಲಕ ಸೇರಿದಂತೆ ಇತರೆ ಮಾಧ್ಯಮಗಳನ್ನು ಬಳಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಬಳಿಕ ಸಮೀಕ್ಷೆಯ ರೂಪುರೇಷೆಯನ್ನು ರೂಪಿಸಲಾಗುತ್ತದೆ. ವೈಜ್ಞಾನಿಕ ಸಮೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ. ಕಡಿಮೆ ಸಮಯಾವಕಾಶ ಇರುವ ಕಾರಣ ಇರುವ ಅವಧಿಯಲ್ಲಿಯೇ ನಿಖರವಾದ ಸಮೀಕ್ಷೆ ನಡೆಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಸರ್ಕಾರವು ಅಧಿಸೂಚನೆ ಹೊರಡಿಸಿದ ೧೫ ದಿನಗಳ ಬಳಿಕ ಇದಕ್ಕೆಲ್ಲಾ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

* ಕೇಂದ್ರ ಸರ್ಕಾರವು ಜಾತಿ ಗಣತಿ ನಡೆಸಲು ಈಗಾಗಲೇ ಅಧಿಸೂಚನೆ ಪ್ರಕಟಿಸಿದೆ. ರಾಜ್ಯ ಸರ್ಕಾರವು ಸಮೀಕ್ಷೆ ನಡೆಸಲು ಸೂಚನೆ ನೀಡಿದೆ. ಇದು ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ?

ಹಾಗೇನು ಇಲ್ಲ ರಿ... ಬಹಳಷ್ಟು ಮಂದಿ ತಪ್ಪು ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ನಡೆಸುವುದು ಜಾತಿ ಗಣತಿ. ರಾಜ್ಯ ಸರ್ಕಾರವು ಜಾತಿ ಗಣತಿ ನಡೆಸುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಲಿದೆ. ಸುಪ್ರೀಂಕೋರ್ಟ್‌ನ ತೀರ್ಪು ಮತ್ತು ಸಂವಿಧಾನದ ಕಲಂ 340ರನ್ವಯ ರಾಜ್ಯ ಸರ್ಕಾರಕ್ಕೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಅವಕಾಶ ಇದೆ. ರಾಜ್ಯದ ಜನತೆಯ ಸಾಮಾಜಿಕ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಾಗುತ್ತದೆ. ಇದು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ.

* ರಾಜ್ಯ ಸರ್ಕಾರವು ಒಳಮೀಸಲಾತಿಗಾಗಿ ನ್ಯಾ. ನಾಗಮೋಹನ್‌ದಾಸ್‌ ಆಯೋಗ ರಚನೆ ಮಾಡಿದೆ. ಇದರಿಂದ ಯಾವುದಾದರೂ ಮಾಹಿತಿ ಪಡೆದುಕೊಳ್ಳಲಾಗುತ್ತದೆಯೇ?

ಎಸ್‌ಸಿ ವರ್ಗದ ಒಳಮೀಸಲಾತಿ ಕುರಿತು ನ್ಯಾ.ನಾಗಮೋಹನ್‌ದಾಸ್‌ ಅಧ್ಯಯನ ನಡೆಸುತ್ತಿದ್ದಾರೆ. ಅಗತ್ಯಬಿದ್ದರೆ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಕೆಲವೊಂದು ವಿಚಾರದಲ್ಲಿ ನಮಗೂ ಸ್ಪಷ್ಟನೆ ಬೇಕಾಗುತ್ತದೆ. ಅವರ ಸಾಮಾಜಿಕ ಸ್ಥಿತಿ ಕುರಿತು ತಿಳಿದುಕೊಳ್ಳಲು ಅವರ ವರದಿಯು ಸಹಕಾರಿಯಾಗಲಿದೆ. ಆಯೋಗದಿಂದಲೂ ಮತ್ತೊಮ್ಮೆ ಅವರ ಸಾಮಾಜಿಕ ಸ್ಥಿತಿ ಅಧ್ಯಯನ ಮಾಡಿದರೆ ಅನಗತ್ಯವಾಗಿ ಸರ್ಕಾರದ ಹಣ ಫೋಲಾಗಲಿದೆ. ಹೀಗಾಗಿ ನ್ಯಾ.ನಾಗಮೋಹನ್‌ದಾಸ್‌ ಅವರ ವರದಿಯನ್ನು ಅವಲೋಕಿಸಲಾಗುವುದು. ಆದರೆ, ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆ ವರದಿಯನ್ನು ತೆಗೆದುಕೊಳ್ಳುತ್ತೇವೆ ಎಂಬುದು. ಮುಂದಿನ ದಿನದಲ್ಲಿ ಈ ಬಗ್ಗೆ ನೋಡೋಣ.

* ಅನೌಪಚಾರಿಕವಾಗಿ ಸಂಬಂಧಪಟ್ಟವರಿಂದ ಮಾಹಿತಿ ಏನಾದರೂ ಪಡೆದುಕೊಳ್ಳಲಾಗಿದೆಯೇ?

ಈ ಹಿಂದಿನ ಅಧ್ಯಕ್ಷರು, ಗಣತಿಯಲ್ಲಿ ಕಾರ್ಯನಿರ್ವಹಿಸಿದ ತಜ್ಞರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಯಾವ ರೀತಿಯಲ್ಲಿ ನಡೆಸಲಾಗಿತ್ತು ಎಂಬ ವಿಷಯವನ್ನು ಪಡೆದುಕೊಳ್ಳಲಾಗಿದೆ. ಇದು ನಾವು ಮುಂದೆ ಯಾವ ದಾರಿಯಲ್ಲಿ ಸಾಗಬೇಕು ಎಂಬುದಕ್ಕೆ ಪೂರಕವಾಗಲಿದೆ. ಆಯೋಗವು ಸಮೀಕ್ಷೆ ನಡೆಸಲು ಸರ್ವಸನ್ನದ್ಧವಾಗಿದೆ.

Read More
Next Story