
Crisis in Medical Colleges | ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಿಗುತ್ತಿಲ್ಲ ಮೃತದೇಹಗಳು; ಸಿಕ್ಕರೂ ಮೂವತ್ತು ಮಂದಿಗೆ ಒಂದೇ!
ಅಧ್ಯಯನಕ್ಕೆ 10 ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, 25 ರಿಂದ 30 ವಿದ್ಯಾರ್ಥಿಗಳು ಒಂದು ಮೃತದೇಹದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕನಸು ಹೊತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಸೌಕರ್ಯಗಳಲ್ಲಿ ಮೃತ ದೇಹದ ಅಗತ್ಯತೆಯೂ ಒಂದಾಗಿದೆ. ಆದರೆ, ರಾಜ್ಯದ ಬಹುತೇಕ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಂಗರಚನಾಶಾಸ್ತ್ರ ಅಧ್ಯಯನಕ್ಕೆ ಬೇಕಾಗಿರುವ ಮೃತದೇಹದ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮೃತದೇಹಗಳು ಸಿಗದಿರುವುದು ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕಗಾಗಿದೆ.
ರಾಜ್ಯದಲ್ಲಿ ಶವಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲ್ಯಗಳು ಮತ್ತು ಅಂಗರಚನಾಶಾಸ್ತ್ರದ ಜ್ಞಾನವನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಗಳು ಮತ್ತು ಇತರ ವೈದ್ಯಕೀಯ ಕಾರ್ಯವಿಧಾನಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವೈದ್ಯಕೀಯ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದು ಭವಿಷ್ಯದ ವೈದ್ಯರ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶವಗಳ ಅಗತ್ಯ ಇದೆ.
ರಾಜ್ಯದ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ 25ಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದವು. ಇದೀಗ ಇವುಗಳ ಸಂಖ್ಯೆ 75ಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ವೈದ್ಯಕೀಯ ಕಾಲೇಜಿಗೆ 100 ರಿಂದ 150 ವಿದ್ಯಾರ್ಥಿಗಳ ದಾಖಲಾಗುತ್ತವೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದಾಗಿದೆ. ಮನುಷ್ಯನ ದೇಹದ ಪ್ರತಿಯೊಂದು ಅಂಗದ ಬಗ್ಗೆ ವಿವರಿಸಿ, ತರಬೇತಿ ನೀಡಲಾಗುತ್ತದೆ. ಮೃತದೇಹಗಳ ಕೊರತೆ ಉಂಟಾದರೆ ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಉಂಟಾಗುತ್ತದೆ. ಸರ್ಕಾರಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದಾನಿಗಳು ಮುಂದೆ ಬಂದು ದೇಹದಾನದ ವಾಗ್ದಾನ ನೀಡಬೇಕು ಎಂದು ಹಲವು ವೈದ್ಯಕೀಯ ಕಾಲೇಜುಗಳ ಉಪನ್ಯಾಸಕರ ಅಭಿಪ್ರಾಯವಾಗಿದೆ.
ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಗಳ ಪ್ರಕಾರ, 1.4ರ ಪ್ರಮಾಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೃತ ದೇಹಗಳ ಅಗತ್ಯ ಇದೆ. 10 ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಉದ್ದೇಶಕ್ಕೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. 25 ರಿಂದ 30 ವಿದ್ಯಾರ್ಥಿಗಳು ಒಂದು ಮೃತದೇಹದಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಇದರಿಂದ ಆಳ ಅಧ್ಯಯನ, ಸಂಶೋಧನೆಗೆ ತೊಡಕಾಗುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚೆಗಿನ ವರ್ಷದಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಕೊರತೆ
ಪ್ರತಿ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನೀಟ್ ಪ್ರವೇಶ ಪರೀಕ್ಷೆ ಪ್ರಾರಂಭವಾದಾಗಿನಿಂದ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಸಹ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುತ್ತಿದೆ. ಇಂತಹ ಕಾಲೇಜುಗಳಲ್ಲಿಯೇ ಮೃತ ದೇಹಗಳ ಕೊರತೆ ಕಾಣಿಸುತ್ತಿದೆ. ಗದಗ, ಹಾವೇರಿ, ಕೊಡಗು, ವಿಜಯನಗರ ಸೇರಿದಂತೆ ಇತರೆ ಕಾಲೇಜುಗಳು ಇತ್ತೀಚೆಗಿನ ವರ್ಷದಲ್ಲಿ ಆರಂಭಗೊಂಡ ವೈದ್ಯಕೀಯ ಕಾಲೇಜುಗಳಾಗಿವೆ. ಇಂತಹ ಕಾಲೇಜುಗಳಲ್ಲಿಯೇ ಅತಿ ಹೆಚ್ಚು ಮೃತದೇಹಗಳ ಕೊರತೆ ಇದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಕೊಡಗು ಮೊದಲು
ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಕೊಡಗಿನ ವೈದ್ಯಕೀಯ ಕಾಲೇಜು ಶವಗಳ ಕೊರತೆಯಲ್ಲಿ ಮೊದಲ ಸ್ಥಾನ ಇದ್ದರೆ, ವಿಮ್ಸ್ ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗಿನ ದಿನದಲ್ಲಿ ಶವಗಳ ಕೊರತೆ ಹೆಚ್ಚಾಗಿ ಕಾಡುತ್ತಿವೆ. ಕೊಡಗು, ವಿಜಯನಗರ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯು 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳ ಕೊರತೆ ಎದುರಿಸುತ್ತಿವೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ಸೇರಿ ಕೆಲ ವೈದ್ಯಕೀಯ ಕಾಲೇಜುಗಳಿಗೆ ಎಂಸಿಐ ಗೊತ್ತುಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಸ್ಥೆಯಲ್ಲಿ ಮೃತದೇಹಗಳು ಲಭ್ಯವಾಗುತ್ತಿವೆ. ಆದರೆ, ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳಲ್ಲಿರುವ ವೈದ್ಯಕೀಯ ಕಾಲೇಜುಗಳ ಮೃತದೇಹಗಳ ಕೊರತೆ ಇದೆ ಎಂಬುದು ತಿಳಿದುಬಂದಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನ ಮಹತ್ವದ್ದಾಗಿದೆ. ಮೃತ ದೇಹದ ಮೂಲಕ ಮನುಷ್ಯನ ದೇಹ ರಚನೆ, ಅಂಗಾಂಗಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ರೋಗಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ವ್ಯಕ್ತಿಗಳು ದೇಹ ದಾನದ ಪ್ರತಿಜ್ಞೆ ಕೈಗೊಂಡಿದ್ದರೂ ಮೃತರ ಕುಟುಂಬಸ್ಥರು ದೇಹಗಳನ್ನು ಹಸ್ತಾಂತರ ಮಾಡದಿದ್ದರಿಂದ ಕೆಲವೆಡೆ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿನ ಅನಾಥ ಶವಗಳನ್ನು ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಖಾಸಗಿ ಕಾಲೇಜುಗಳ ಲಾಬಿ?
ಸರ್ಕಾರಿ ವೈದ್ಯಕೀಯ ಕಾಲೇಜುಗಳು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸ್ಪರ್ಧೆವೊಡ್ಡುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಬಲಿಷ್ಠರ ಕಪಿಮುಷ್ಠಿಯಲ್ಲಿರುವ ಕಾರಣ ಸುಲಭವಾಗಿ ಎಲ್ಲಾ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿವೆ. ಮೃತದೇಹಗಳನ್ನು ಸಹ ಲಾಬಿ ಮಾಡಿ ಪಡೆದುಕೊಳ್ಳುತ್ತಿವೆ. ನಾನಾ ರೀತಿಯ ಅಮಿಷ ಇರಬಹುದು ಅಥವಾ ಪ್ರಭಾವ ಬೀರಿ ಮೃತದೇಹಗಳನ್ನು ಪಡೆದುಕೊಳ್ಳುತ್ತಿವೆ. ತಮ್ಮ ಕಾಲೇಜಿನ ಫಲಿತಾಂಶವನ್ನು ಉತ್ತಮವಾಗಿ ಬರುವಂತೆ ಮಾಡಿಕೊಳ್ಳಲು ಖಾಸಗಿ ವೈದ್ಯಕೀಯ ಕಾಲೇಜುಗಳು ಭಾರೀ ಪ್ರಮಾಣದಲ್ಲಿ ಲಾಬಿ ನಡೆಸುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಪ್ರೊಫೆಸರ್ರೊಬ್ಬರು ತಿಳಿಸಿದ್ದಾರೆ.
ಭವಿಷ್ಯದ ವೈದ್ಯರಿಗೆ ತರಬೇತಿ ನೀಡಲು ಶವ ದಾನ ಅತ್ಯಗತ್ಯ. ಇದು ಅವರಿಗೆ ಮಾನವ ಅಂಗರಚನಾಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಶಸ್ತ್ರಚಿಕಿತ್ಸಾ ತಂತ್ರಗಳನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. ರೋಗದ ಸ್ಥಳಗಳನ್ನು ಗುರುತಿಸಲು ಮತ್ತು ಸಾವಿನ ಕಾರಣಗಳನ್ನು ನಿರ್ಧರಿಸಲು ಶವಗಳು ಸಹಾಯ ಮಾಡುತ್ತವೆ. ಅಲ್ಲದೇ, ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆಹಚ್ಚುವಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. ಹೀಗಾಗಿ ಸರ್ಕಾರ ಮೃತದೇಹಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಹೇಳಿದ್ದಾರೆ.
ಮೌಢ್ಯತೆ ಹೆಚ್ಚಿರುವ ಕಾರಣ ದೇಹದಾನಕ್ಕೆ ಹಿಂದೇಟು
ಮೃತಪಟ್ಟ ಬಳಿಕ ದೇಹವನ್ನು ದಾನ ಮಾಡಲು ಹಿಂದೇಟು ಹಾಕುತ್ತಿರುವುದಕ್ಕೆ ಜನತೆಯಲ್ಲಿ ಮೌಢ್ಯತೆ ಹೆಚ್ಚಿರುವುದೇ ಪ್ರಮುಖ ಕಾರಣವಾಗಿದೆ. ಮೃತಪಟ್ಟ ಬಳಿಕ ದೇಹವನ್ನು ತಮ್ಮ ಸಮುದಾಯದ ಪದ್ಧತಿಯಂತೆ ಅಂತ್ಯಸಂಸ್ಕಾರ ಮಾಡಬೇಕು ಎಂಬುದು ಜನತೆಯ ಭಾವನೆಯಾಗಿದೆ. ದೇಹವನ್ನು ದಾನ ಮಾಡಿದರೆ ತಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ. ಅಲ್ಲದೇ, ದೇಹ ಮುಕ್ತಿ ಪಡೆಯುವುದಿಲ್ಲ. ಹೀಗಾಗಿ ದೇಹ ಮುಕ್ತಿ ಪಡೆಯಬೇಕು ಮತ್ತು ಕುಟುಂಬದ ಒಳಿತಿಗಾಗಿ ದಾನ ಒಳ್ಳೆಯದಲ್ಲ ಎಂಬ ಮೌಢ್ಯತೆ ಹೆಚ್ಚಿದೆ.
ಐಸಿಎಂಆರ್ನ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ , ಶೇ.೬೦ಕ್ಕೂ ಹೆಚ್ಚು ಮಂದಿಯಲ್ಲಿ ಇಂದಿಗೂ ಮೃತದೇಹ ದಾನ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದು ಮೃತದೇಹಗಳ ದಾನಕ್ಕೆ ಅಡಚಣೆಯಾಗಿದೆ. ಭಾವನಾತ್ಮಕ ಒತ್ತಡದಿಂದಾಗಿ ಕುಟುಂಬ ಸದಸ್ಯರು ಮೃತ ಪ್ರೀತಿ ಪಾತ್ರರ ಅಂಗಗಳನ್ನು ದಾನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಶೋಷಣೆಯ ಭಯ, ಧಾರ್ಮಿಕ ನಂಬಿಕೆಗಳು, ಅರಿವಿನ ಕೊರತೆಯಿಂದಾಗಿ ಶವಗಳನ್ನು ನೀಡುತ್ತಿಲ್ಲ ಎಂಬುದನ್ನು ಅಧ್ಯಯನ ಗಮನಿಸಿದೆ.
ಈ ನಡುವೆ, ಕೋವಿಡ್ ಬಂದ ಬಳಿಕ ಜನರು ಮೃತದೇಹಗಳನ್ನು ದಾನ ಮಾಡುವಲ್ಲಿ ಮತ್ತಷ್ಟು ಹಿಂದೇಟು ಹಾಕುತ್ತಿದ್ದಾರೆ. ಅವಿದ್ಯಾವಂತರು ಮಾತ್ರವಲ್ಲದೇ, ವಿದ್ಯಾವಂತರು ಸಹ ಮೃತದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ನೀಡುತ್ತಿಲ್ಲ ಎಂದು ಸಹ ಹೇಳಲಾಗಿದೆ.
ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕಾಗಿದೆ
ರಾಜ್ಯದಲ್ಲಿ ಅಂಗಾಂಗ ದಾನಗಳು ನಡೆಯುತ್ತಿವೆ. ಆದರೆ, ಅಂಗಾಂಗ ದಾನಗಳ ಸಂಖ್ಯೆಗೆ ಹೋಲಿಸಿದರೆ ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಮೃತ ದೇಹದ ದಾನಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರಲ್ಲಿ ಸರ್ಕಾರದ ಪಾತ್ರವು ಸಹ ಇದೆ. ರಾಜ್ಯ ಸರ್ಕಾರವು ಹೆಚ್ಚಿನ ರೀತಿಯಾಗಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ವರ್ಷಕ್ಕೊಮ್ಮೆ ಬರುವ ದಿನಾಚರಣೆಗಳಂದು ಮಾತ್ರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆಯೇ ಹೊರತು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮೃತದೇಹ ದಾನಗಳ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.
ಕರ್ನಾಟಕ ಅಂಗರಚನಾ ಶಾಸ್ತ್ರ ಕಾಯ್ದೆ 1957 ಮತ್ತು ತಿದ್ದುಪಡಿ 1999ರ ನಿಯಮದಡಿ ವೈದ್ಯಕೀಯ ಶಿಕ್ಷಣ ಮತ್ತು ಶಂಶೋಧನೆಯ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಗಳು ಮೃತದೇಹವನ್ನು ದಾನವಾಗಿ ಪಡೆಯಬಹುದಾಗಿದೆ. ಮೃತ ದೇಹವು 6 ಗಂಟೆಗಳ ಬಳಿಕ ಕೊಳೆಯಲು ಪ್ರಾರಂಭವಾಗುತ್ತದೆ. ಆದ್ದರಿಂದ ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ದೇಹವನ್ನು ದಾನವಾಗಿ ಪಡೆಯಬೇಕಾಗುತ್ತದೆ. ವ್ಯಕ್ತಿ ಬದುಕಿರುವಾಗಲೇ ತಮ್ಮ ದೇಹ ದಾನದ ಬಗ್ಗೆ ಸಮ್ಮತಿಯ ಉಯಿಲನ್ನು ಅಧಿಕೃತ ವೈದ್ಯಕೀಯ ಸಂಸ್ಥೆಗಳಲ್ಲಿ ನೋಂದಾಯಿಸಬಹುದು. ಅರ್ಜಿ ಸಲ್ಲಿಸದಿದ್ದಲ್ಲಿ ಮೃತ ವ್ಯಕ್ತಿಯ ದೇಹ ದಾನಕ್ಕೆ ಕುಟುಂಬಸ್ಥರು ಇಚ್ಛಿಸಿದರೆ ಅಫಿಡವಿಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮರಣದ ಕಾರಣವನ್ನು ದೃಢೀಕರಿಸಿದ ಪ್ರಮಾಣಪತ್ರದೊಂದಿಗೆ ಮೃತದೇಹವನ್ನು ಹಸ್ತಾಂತರಿಸಬೇಕಾಗುತ್ತದೆ. ವ್ಯಕ್ತಿಗಳು ಜೀವಿತಾವಧಿಯಲ್ಲಿ ದಾನಕ್ಕೆ ಪ್ರತಿಜ್ಞೆ ಕೈಗೊಂಡಿದ್ದರೂ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬಸ್ಥರು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡದ ಪರಿಣಾಮ ದೇಹ ದಾನಕ್ಕೆ ಹಿನ್ನಡೆಯಾಗುತ್ತಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜೊತೆ ಮಾತನಾಡಿದ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಬಾಯಿ ಮತ್ತು ಮಾಕ್ಸಿಲೊಪೇಶಿಯಲ್ ಶಸ್ತ್ರಚಿಕಿತ್ಸಕ ಡಾ. ಗಿರೀಶ್ ಗೌಡ, ಇತ್ತೀಚೆಗಿನ ವರ್ಷದಲ್ಲಿ ಮೃತದೇಹಗಳ ದಾನ ಮಾಡುವ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಜೊತೆಗೆ ಜನತೆಯು ಸಹ ಕೈ ಜೋಡಿಸಬೇಕಿದೆ. ಜನತೆ ಮೌಢ್ಯತೆಯಿಂದ ಹೊರಬಂದು ದೇಹದಾನ ಮಾಡುವ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಜನರು ಸ್ವಯಂ ಜಾಗೃತಿಯಾದರೆ ಮಾತ್ರ ಮೃತದೇಹ ದಾನಗಳ ಸಂಖ್ಯೆ ಹೆಚ್ಚಾಗಲಿದೆ. ಎಲ್ಲವೂ ಸರ್ಕಾರವೇ ಮಾಡಲು ಕಷ್ಟಕರ. ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಜನರು ಸಹಕಾರ ನೀಡಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೃತದೇಹಗಳ ಲಭ್ಯತೆ ಆಗಲಿದೆ ಎಂದು ಹೇಳಿದರು.