Save Karnataka Tigers | ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 5 ಹುಲಿಗಳ ಅನುಮಾನಾಸ್ಪದ ಸಾವು: ಐವರ ವಶ
x

ಮೃತಪಟ್ಟಿರುವ ಹುಲಿಗಳು 

Save Karnataka Tigers | ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 5 ಹುಲಿಗಳ ಅನುಮಾನಾಸ್ಪದ ಸಾವು: ಐವರ ವಶ

ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹಸುವಿನ ಕಳೇಬರದ ಬಳಿ ಕರೆದುಕೊಂಡು ಹೋಗಿ ಯಾರು ಅದರ ಮಾಲೀಕರು ಎಂಬುದನ್ನೂ ವಿಚಾರಣೆ ಮಾಡಲಾಗುತ್ತಿದೆ.


ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಹುಲಿಗಳ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಭರವಸೆ ನೀಡಿದೆ. ಶುಕ್ರವಾರ ಮೃತ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಲಿದೆ.

ಗ್ರಾಮಸ್ಥರ ವಿಚಾರಣೆ ಮತ್ತು ಪ್ರಾಥಮಿಕ ಶಂಕೆ

ಹುಲಿ ಸಾವಿನ ಕುರಿತು ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹುಲಿಗಳ ಮೃತದೇಹಗಳು ದೊರೆತ ಸ್ಥಳದಲ್ಲಿಯೇ ಹಸುವಿನ ಶವ ಕೂಡ ಸಿಕ್ಕಿದ್ದು, ಹುಲಿಗಳಿಗೆ ವಿಷಪ್ರಾಶನ ಮಾಡಿಸಿರುವ ಶಂಕೆಗೆ ಕಾರಣವಾಗಿದೆ. ಹಸುವಿನ ಮೃತದೇಹದ ಬಾಲ ತುಂಡಾಗಿರುವುದು ಕಂಡು ಬಂದಿದೆ. ಹೀಗಾಗಿ, ಸತ್ತ ಹಸುವಿಗೆ ಯಾರೋ ವಿಷ ಸಿಂಪಡಿಸಿರುವ ಸಾಧ್ಯತೆ ಇದೆ. ಅದನ್ನು ತಿಂದು ಹುಲಿ ಮತ್ತು ಹುಲಿ ಮರಿಗಳು ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಹಸುವಿನ ಕಳೇಬರದ ಬಳಿ ಕರೆದುಕೊಂಡು ಹೋಗಿ ಯಾರು ಅದರ ಮಾಲೀಕರು ಎಂಬುದನ್ನೂ ವಿಚಾರಣೆ ಮಾಡಲಾಗುತ್ತಿದೆ.

14 ದಿನಗಳೊಳಗೆ ವರದಿ ಸಲ್ಲಿಕೆಗೆ ಆದೇಶ, ಉನ್ನತ ಮಟ್ಟದ ತನಿಖಾ ತಂಡ ಸ್ಥಳಕ್ಕೆ

ಹುಲಿಗಳನ್ನು ವಿಷವಿಕ್ಕಿ ಕೊಲ್ಲಲಾಗಿದೆಯೇ, ಗುಂಡು ಹೊಡೆದು ಹತ್ಯೆ ಮಾಡಲಾಗಿದೆಯೇ ಅಥವಾ ಬೇರೆ ಯಾವ ರೀತಿಯಲ್ಲಿ ಹುಲಿಗಳ ಸಾವಾಗಿದೆ ಎಂಬುದರ ಕುರಿತು ತೀವ್ರ ತನಿಖೆ ನಡೆಯಲಿದೆ. ಬೇಟೆಗಾರರು ಅಥವಾ ದನಗಾಹಿಗಳು ವಿಷವಿಟ್ಟಿದ್ದಾರೆ ಎಂಬ ಆಯಾಮದಲ್ಲಿಯೂ ತನಿಖೆ ಕೇಂದ್ರೀಕೃತವಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು 14 ದಿನಗಳ ಒಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಐದು ಹುಲಿಗಳ ಅನುಮಾನಾಸ್ಪದ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಉನ್ನತಮಟ್ಟದ ತನಿಖಾ ತಂಡ ಆಗಮಿಸಿದೆ. ಈ ತಂಡದಲ್ಲಿ ಪಿಸಿಸಿಎಫ್ ಬಿ.ಪಿ. ರವಿ, ಎಪಿಸಿಸಿಎಫ್ ಶ್ರೀನಿವಾಸಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, ಎನ್‌ಟಿಪಿಎ (NTCA - ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಪಶುವೈದ್ಯಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಮತ್ತು ತಜ್ಞರು ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಘಟನೆಯು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ತನಿಖಾ ವರದಿಗಾಗಿ ಕಾದು ನೋಡಲಾಗುತ್ತಿದೆ.

Read More
Next Story