Sugarcane crisis | CM objects to allocation of ethanol, distilleries, Minister Joshi clarifies
x

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹಾಗೂ ಸಿಎಂ ಸಿದ್ದರಾಮಯ್ಯ

Sugarcane crisis|ಎಥೆನಾಲ್, ಡಿಸ್ಟಿಲರಿಗಳ ಹಂಚಿಕೆಗೆ ಸಿಎಂ ಆಕ್ಷೇಪ, ಸಚಿವ ಜೋಶಿ ಸ್ಪಷ್ಟನೆ

2022 ಹಾಗೂ 23 ಮತ್ತು 2023 ಹಾಗೂ 24ರ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರದಿಂದ ಕಬ್ಬಿನ ಬಾಕಿ ಶೂನ್ಯವಾಗಿದೆ. 2024 ಹಾಗೂ25ಕ್ಕೆ ಸುಮಾರು 50 ಲಕ್ಷ ರೂ. ಬಾಕಿ ಇದೆಯಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.


Click the Play button to hear this message in audio format

ಎಥೆನಾಲ್‌ ಹಾಗೂ ಡಿಸ್ಟಿಲರಿಗಳ ಹಂಚಿಕೆ ವಿಚಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳು ನಷ್ಟದ ಹಾದಿ ತುಳಿಯಲು ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಉತ್ತರ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ನೀಡಿರುವ ಬಾಕಿ ಹಣ, ಎಥೆನಾಲ್ ಡಿಸ್ಟಿಲರಿ ಹಾಗೂ ಸಕ್ಕರೆ ರಫ್ತಿಗೆ ಸಂಬಂಧಿಸಿದ ವಿವರವನ್ನು ಪತ್ರದಲ್ಲಿ ನೀಡಿದ್ದಾರೆ.

ಪತ್ರದಲ್ಲಿ ಏನಿದೆ?

ಈ ಹಿಂದೆ ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ರೈತರು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಳೆಗಾರರ ಸಂಕಷ್ಟ ಅರಿತು ಹಲವು ಕ್ರಮಗಳನ್ನು ಕೈಗೊಂಡಿದೆ. 2022 -23 ಮತ್ತು 2023-24ರಲ್ಲಿ ಸಕ್ಕರೆ ಹಂಗಾಮಿನಲ್ಲಿ ಕಬ್ಬಿನ ಬಾಕಿ ಶೂನ್ಯಕ್ಕೆ ತರಲಾಗಿದೆ. 2024 -25ರಲ್ಲಿ ಸುಮಾರು 50 ಲಕ್ಷ ರೂ. ಬಾಕಿ ಇದೆಯಷ್ಟೇ. ವಾಸ್ತವ ಹೀಗಿರುವಾಗ, ಕೇಂದ್ರದತ್ತ ಬೆರಳು ತೋರುವುದು ಸರಿಯಲ್ಲ. ರೈತರನ್ನು ದಿಕ್ಕು ತಪ್ಪಿಸುವ ಕ್ರಮವಾಗಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

16,500 ಕೋಟಿ ರೂ. ಆರ್ಥಿಕ ನೆರವು

ಕಬ್ಬು ಬೆಳೆಗಾರರಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕಾರವು ವಿವಿಧ ರೀತಿಯಲ್ಲಿ ನೆರವು ನೀಡಿದೆ. 2014-15ರಿಂದ 2020- 21ರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ರೈತರ ಕಬ್ಬಿನ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸುಮಾರು 16,500 ಕೋಟಿ ರೂ. ಆರ್ಥಿಕ ನೆರವು ಒದಗಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಫ್‌ಆರ್‌ಪಿ 355 ರೂ. ಕ್ವಿಂಟಲ್‌ ದರ

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸು ಮೇರೆಗೆ ಕೇಂದ್ರ ಸರ್ಕಾರ ಪ್ರತಿ ಸಕ್ಕರೆ ಹಂಗಾಮಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನೇ (FRP) ನಿಗದಿಪಡಿಸುತ್ತದೆ. ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಿಗೂ ಅನ್ವಯಿಸಿ 2025 ಹಾಗೂ26ರಲ್ಲಿ ಉತ್ಪಾದನಾ ವೆಚ್ಚ ಒಳಗೊಂಡಂತೆ ಎಫ್‌ಆರ್‌ಪಿ 355 ರೂ. ಕ್ವಿಂಟಲ್‌ ದರದಲ್ಲಿ ಅನುಮೋದಿಸಿದೆ. ಉತ್ಪಾದನಾ ವೆಚ್ಚಕ್ಕಿಂತ ಶೇ.105.2ರಷ್ಟು ಮಾರ್ಜಿನ್‌ ಆಗಿದೆ ಎಂದು ತಿಳಿಸಿದ್ದಾರೆ.

ದರದಲ್ಲಿ ಗಮನಾರ್ಹ ಏರಿಕೆ

ಕಳೆದ ದಶಕದಿಂದ ಎಫ್‌ಆರ್‌ಪಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2013-14ರಲ್ಲಿ 210 ರೂ. ಇದ್ದ ಎಫ್‌ಆರ್‌ಪಿ ದರ ಇದೀಗ 355 ರೂ. ಗೆ ಏರಿಕೆಯಾಗಿದೆ. ಅಲ್ಲದೇ, ಶೇ0.1ರಷ್ಟು ಚೇತರಿಕೆಗೆ ರೈತರು ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ 3.46 ರೂ. ಪಡೆಯುತ್ತಾರೆ. ಕರ್ನಾಟಕದಲ್ಲಿ ಸರಾಸರಿ ಶೇ10.5ರಷ್ಟು ಚೇತರಿಕೆಯೊಂದಿಗೆ ಪ್ರತಿ ಕ್ವಿಂಟಲ್‌ಗೆ ಎಫ್‌ಆರ್‌ಪಿ 363 ರೂ. ಆಗಿದೆ.

ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಳ

2013 ಹಾಗೂ14ರಿಂದ 2024 ಹಾಗೂ25ರ ಅವಧಿಯಲ್ಲಿ ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದರ ಮೌಲ್ಯ 1,02,687 ಕೋಟಿ ರೂ. ಆಗಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರದಂತೆ ಸಕ್ಕರೆ ಕಾರ್ಖಾನೆಗಳು 14 ದಿನಗಳಲ್ಲಿ ರೈತರಿಗೆ ಸಕಾಲಿಕವಾಗಿ ಕಬ್ಬಿನ ವೆಚ್ಚ ಪಾವತಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ 1966ರ ಕಬ್ಬು ನಿಯಂತ್ರಣ (ಆದೇಶ) ನಿಬಂಧನೆ ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

ಎಸ್‌ಎಪಿ ಘೋಷಿಸಲು ಸಲಹೆ

ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರದತ್ತ ಬೆರಳು ತೋರುತ್ತಿರುವ ರಾಜ್ಯ ಸರ್ಕಾರ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ಘೋಷಿಸಲಿ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣದಂತೆ ಇಲ್ಲೂ ಎಸ್‌ಎಪಿ ಘೋಷಿಸಬಹುದೆಂದು ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ಬರೆದ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಎಥೆನಾಲ್‌ಗೆ ಕಬ್ಬು ಬಳಸಲು ಉತ್ತೇಜನ

ಹೆಚ್ಚುವರಿ ಕಬ್ಬನ್ನು ಎಥೆನಾಲ್‌ಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. 2013ರವರೆಗೆ ಒಎಂಸಿಗಳಿಗೆ ಕೇವಲ 38 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿತ್ತು. ಆಗ ಮಿಶ್ರಣ ಮಟ್ಟ ಕೇವಲ ಶೇ.1.53ರಷ್ಟಿತ್ತು. ಇದೀಗ ಶೇ.20ರಷ್ಟು ಮಿಶ್ರಣದೊಂದಿಗೆ ಸುಮಾರು 1001 ಕೋಟಿ ಲೀಟರ್‌ಗೆ ಏರಿದೆ.

ರಾಜ್ಯದಲ್ಲಿ ಎಥೆನಾಲ್‌ ಡಿಸ್ಟಿಲರಿ ಸ್ಥಾಪನೆಗೆ ನೆರವು

ಕರ್ನಾಟಕದಲ್ಲಿ ಎಥೆನಾಲ್ ಡಿಸ್ಟಿಲರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ʼಎಥೆನಾಲ್ ಬಡ್ಡಿ ಸಬ್ವೆನ್ಷನ್ʼ ಯೋಜನೆಯಡಿ 435.42 ಕೋಟಿ ರೂ. ಆರ್ಥಿಕ ನೆರವು ನೀಡಿದೆ. ಕರ್ನಾಟಕದ ಡಿಸ್ಟಿಲರಿಗಳಿಗೆ ಎಥೆನಾಲ್ ಹಂಚಿಕೆ ಇಎಸ್‌ವೈ 2022 ಹಾಗೂ 23ರಲ್ಲಿ 85 ಕೋಟಿ ಲೀಟರ್‌ಗಳಿಂದ ಇಎಸ್‌ವೈ 2025 ಹಾಗೂ 26ರಲ್ಲಿ 133 ಕೋಟಿ ಲೀಟರ್‌ಗೆ ಹೆಚ್ಚಾಗಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಹರಿವನ್ನು ಒದಗಿಸಿದೆ ಎಂದಿದ್ದಾರೆ.

15 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಅವಕಾಶ

ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 10 ಲಕ್ಷ ಮೆಟ್ರಿಕ್‌ ಟನ್‌ನಿಂದ 15 ಲಕ್ಷ ಮೆಟ್ರಿಕ್‌ ಟನ್‌ ರಫ್ತಿಗೆ ಅವಕಾಶ ನೀಡಲು ನಿರ್ಧರಿಸಿದೆ. ಅಲ್ಲದೇ, ಮೊಲಾಸಸ್ ಮೇಲಿನ ಶೇ.50ರಷ್ಟು ರಫ್ತು ಸುಂಕವನ್ನು ತೆಗೆದುಹಾಕಿ ನೆರವು ಕಲ್ಪಿಸಿದೆ. ಹೀಗೆ ಕೇಂದ್ರ ಸರ್ಕಾರ ರೈತರು ಮತ್ತು ಸಕ್ಕರೆ ಉದ್ಯಮ ಎರಡನ್ನೂ ಬೆಂಬಲಿಸುವ ನಿಟ್ಟಿನಲ್ಲಿ ಸಮತೋಲಿತವಾಗಿ ಸ್ಪಂದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೋಶಿ ನೀಡಿದ ಮಾಹಿತಿ ಸುಳ್ಳು ಎಂದಿದ್ದ ಸಿಎಂ

"2024-25ನೇ ಸಾಲಿನಲ್ಲಿ ರಾಜ್ಯದ 46 ಡಿಸ್ಟಿಲರಿಗಳ 270 ಕೋಟಿ ಲೀಟರ್ ಸಾಮರ್ಥ್ಯಕ್ಕೆ ಎಥೆನಾಲ್‌ ಉತ್ಪಾದನೆಗೆ ಪ್ರತಿಯಾಗಿ ತೈಲ ಕಂಪನಿಗಳಿಗೆ ಕೇವಲ 47 ಕೋಟಿ ಲೀಟರ್ ಹಂಚಿಕೆ ಮಾಡಲಾಗಿದೆ ಎಂದು ಸ್ವತಃ ಕೇಂದ್ರ ಸಚಿವರೇ 2025ರ ಆಗಸ್ಟ್ 6ರಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದರು. ಹೀಗಿರುವಾಗ ಒಂದು ಜೋಶಿ ನೀಡಿದ ಮಾಹಿತಿ ಸುಳ್ಳಾಗಿರಬೇಕು, ಇಲ್ಲವೇ ಲೋಕಸಭೆಯಲ್ಲಿ ನೀಡಿದ ಅಂಶ ಸುಳ್ಳಾಗಿರಬೇಕು. ಎರಡರಲ್ಲಿ ಒಂದು ಹೇಳಿಕೆ ಒಪ್ಪಿಕೊಂಡರೂ ಅವರಿಗೆ ಸುಳ್ಳುಗಾರನ ಪಟ್ಟ ತಪ್ಪಿದ್ದಲ್ಲ," ಎಂದು ಸಿಎಂ ಕುಟುಕಿದ್ದರು.

ರಾಜ್ಯಕ್ಕೆ ನಿರಂತರ ಅನ್ಯಾಯ

ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

"2021 ರಿಂದ 2025ರವರೆಗೆ ಕರ್ನಾಟಕದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 879 ಕೋಟಿ ಲೀಟರ್ ಇದ್ದರೆ, ಖರೀದಿ ಮಾಡಿರುವುದು ಕೇವಲ 171 ಕೋಟಿ ಲೀಟರ್ ಮಾತ್ರ. ಆದರೆ, 40 ಕೋಟಿ ಲೀಟರ್ ಸಾಮರ್ಥ್ಯದ ಗುಜರಾತ್‌ಗೆ 31 ಕೋಟಿ ಲೀಟರ್ ಹಂಚಿಕೆ ಮಾಡಲಾಗಿದೆ. ಇದ್ಯಾವ ನ್ಯಾಯ?" ಎಂದು ಪ್ರಶ್ನಿಸಿದ್ದರು.

"ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿ ಎಂಬ ನಮ್ಮ ರೈತಪರ ಬೇಡಿಕೆಗೆ ಬೆಂಬಲ ನೀಡಬೇಕಿದ್ದ ಜೋಷಿ, ನಮ್ಮ ವಿರುದ್ಧವೇ ಮಾತನಾಡಿ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದ್ದರು.

Read More
Next Story