
ಪರಪ್ಪನ ಅಗ್ರಹಾರ
Parappana Agrahara Jail| ಪರಪ್ಪನ ಅಗ್ರಹಾರ ಜೈಲಿನಲ್ಲಿ ನಗದು, ಚಾಕು, ಮೊಬೈಲ್ ಪತ್ತೆ; ಅಧಿಕಾರಿಗಳ ಮೇಲೆ ಕೇಸ್
ಜೈಲಿನ ಸಿಬ್ಬಂದಿ ಹಾಗೂ ಕೆಎಸ್ಐಎಸ್ಎಫ್ ಅಧಿಕಾರಿಗಳು ಕೈದಿಗಳೊಂದಿಗೆ ಶಾಮೀಲಾಗಿರುವ ಕಾರಣ ನಿಷೇಧಿತ ವಸ್ತುಗಳು ಬಳಕೆಯಾಗುತ್ತಿವೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಶೋಧ ಕಾರ್ಯದ ವೇಳೆ ನಗದು, ಮೊಬೈಲ್ ಫೋನ್, ಚಾಕುಗಳು ಮತ್ತು ಇಂಡಕ್ಷನ್ ಸ್ಟೌವ್ ಪತ್ತೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್) ಸಿಬ್ಬಂದಿಯ ವಿಚಾರಣೆ ನಡೆಸಲು ಆಗ್ನೆಯ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಆಗ್ನೆಯ ವಿಭಾಗದ ಹುಳಿಮಾವು, ಬಂಡೆಪಾಳ್ಯ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಮತ್ತು ಪರಪ್ಪನ ಅಗ್ರಹಾರ ಠಾಣೆಗಳ ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿ ಸೇರಿದಂತೆ 175 ಮಂದಿಯ ಬೃಹತ್ ತಂಡವು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಾಳಿ ನಡೆಸಿತ್ತು. ಈ ಶೋಧ ಕಾರ್ಯದ ವೇಳೆ, ಕೈದಿಗಳ ಬ್ಯಾರಕ್ಗಳಲ್ಲಿ ₹16,000 ನಗದು, ಒಂದು ಮೊಬೈಲ್ ಫೋನ್, ಒಂದು ಇಂಡಕ್ಷನ್ ಸ್ಟೌವ್ ಮತ್ತು ನಾಲ್ಕು ಚಾಕುಗಳು ಪತ್ತೆಯಾಗಿವೆ.
ಅಧಿಕಾರಿಗಳ ಶಾಮೀಲು ಆರೋಪ
ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲಿನ ಸಿಬ್ಬಂದಿ ಹಾಗೂ ಕೆಎಸ್ಐಎಸ್ಎಫ್ ಅಧಿಕಾರಿಗಳು ಕೈದಿಗಳೊಂದಿಗೆ ಶಾಮೀಲಾಗಿರುವ ಕಾರಣ ನಿಷೇಧಿತ ವಸ್ತುಗಳು ಬಳಕೆಯಾಗುತ್ತಿವೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ದಾಳಿಗೆ ಸಂಬಂಧಿಸಿದಂತೆ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಕೆ.ಎಂ. ಸತೀಶ್ ಅವರು ನೀಡಿರುವ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಜೈಲು ಸಿಬ್ಬಂದಿ ಹಾಗೂ ಕೆಎಸ್ಐಎಸ್ಎಫ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಕೈದಿಗಳಾದ ಚಲುವ, ಇರ್ಷಾದ್, ಆಕಾಶ್ ಮತ್ತು ಮಾರುತಿ ಅವರನ್ನು ಸಹ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.
ಆಗ್ನೆಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾತನಾಡಿ, "ಜೈಲಿನಲ್ಲಿ ಹೊಡೆದಾಟದ ಪ್ರಕರಣ ದಾಖಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜೈಲಿನಲ್ಲಿ ಶೋಧ ನಡೆಸಲಾಗಿದೆ. ನಗದು, ಮೊಬೈಲ್ ಪತ್ತೆಯಾಗಿರುವ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ. ಈ ಘಟನೆಯು ಕಾರಾಗೃಹದ ಭದ್ರತಾ ವ್ಯವಸ್ಥೆಯ ಲೋಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.