
ಇವಿಎಂ ಅನುಮಾನ | ಜಿ.ಪಂ, ತಾ.ಪಂ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯ ಚುನಾವಣಾ ಆಯೋಗ ಚಿಂತನೆ
ಇವಿಎಂ ಬಗ್ಗೆ ಅನುಮಾನಗಳು ಮಾತ್ರ ದೂರವಾಗುತ್ತಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಇಂತಹ ಆರೋಪಗಳು ಬಾರದಿರಲಿ ಎಂದು ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಿದೆ.
ಎಲೆಕ್ಟ್ರಾನಿಕ್ ಮತ ಯಂತ್ರಗಳು ಅಥವಾ ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆ ಮಾಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆದರೂ ಬಿಜೆಪಿಯೇತರ ಸರ್ಕಾರಗಳುಳ್ಳ ರಾಜ್ಯಗಳಲ್ಲಿ ಬ್ಯಾಲೆಟ್ ಪೇಪರ್ನತ್ತ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ಹಾಗೆಯೇ, ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕವೂ ಕೂಡ.
ಇವಿಎಂಗಳು ಚುನಾವಣೆಗಳನ್ನು ಸುಲಭವಾಗಿ ಮತ್ತು ಟ್ಯಾಂಪರಿಂಗ್-ಪ್ರೂಫ್ ಆಗಿ ಮಾಡಬಹದು. ಆದರೆ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಬೇಕು ಎಂಬ ಒತ್ತಾಯಗಳನ್ನು ಮಾಡುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಚುನಾವಣಾ ಆಯೋಗವು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ಗಳ ಬಳಕೆಗೆ ಗಂಭೀರವಾಗಿ ಚಿಂತನೆ ನಡೆಸಿದೆ.
ಇವಿಎಂಗಳ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದ ಸೃಷ್ಟಿಯ ನಡುವೆ ಬ್ಯಾಲೆಟ್ ಪೇಪರ್ಗಳ ಬಳಕೆಗೆ ಮುಂದಾಗಿರುವ ರಾಜ್ಯ ಚುನಾವಣಾ ಆಯೋಗದ ನಡೆಯು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸಾಂಪ್ರದಾಯಿಕ ಮತಪತ್ರದ ಬಳಕೆಯು ಅಗ್ಗ ಮತ್ತು ರಾಜ್ಯಗಳಿಗೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಕೆಗೆ ಆಸಕ್ತಿ ತೋರಿವೆ.
ಸಾಮಾನ್ಯವಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದವು. ಆದರೆ, ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಚುನಾವಣೆಗಳನ್ನು ನಡೆಸಿಲ್ಲ. ಪರಿಣಾಮ ಇದೀಗ ಎರಡು ಒಟ್ಟಿಗೆ ನಡೆಸುವ ಪ್ರಮೇಯ ಎದುರಾಗಿದೆ. ಎರಡು ಒಟ್ಟಿಗೆ ಚುನಾವಣೆಗಳನ್ನು ನಡೆಸಲು ಅಷ್ಟು ಪ್ರಮಾಣದಲ್ಲಿ ಇವಿಎಂಗಳು ಲಭ್ಯವಿಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಇವಿಎಂಗಳನ್ನು ಕ್ರೋಢೀಕರೀಸುವುದು ಸಹ ಸುಲಭದ ಕೆಲಸವಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ಮೊರೆ ಹೋಗುವುದು ಉತ್ತಮ ಎಂಬ ನಿಲುವು ರಾಜ್ಯ ಚುನಾವಣಾ ಆಯೋಗದ್ದಾಗಿದೆ.
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ಗಳನ್ನು ಬಳಕೆ ಮಾಡಲು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ 239 ತಾಲೂಕು ಪಂಚಾಯತ್ ಮತ್ತು 31 ಜಿಲ್ಲಾ ಪಂಚಾಯತ್ಗಳಿವೆ. ಇವುಗಳಿಗೆ ಮುಕ್ತ ಮತ್ತು ಪಾರದರ್ಶಕತೆಯಿಂದ ಚುನಾವಣೆ ನಡೆಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆಯಾದರೂ ರಾಜ್ಯ ಸರ್ಕಾರ ಮಾತ್ರ ಮನಸ್ಸು ಮಾಡುತ್ತಿಲ್ಲ. ಚುನಾವಣೆ ನಡೆಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗುತ್ತಿಲ್ಲ. ಇದು ಚುನಾವಣೆ ನಡೆಸಲು ಹಿನ್ನೆಡೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಜಿಲ್ಲಾ ಪುನರ್ ವಿಂಗಡಣಾ ಆಯೋಗದ ವರದಿ ದೊರೆಯುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಚುನಾವಣೆಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಹೈಕೋರ್ಟ್ನಲ್ಲಿ ಸರ್ಕಾರ ಮೀಸಲಾತಿ ಹೊರಡಿಸುವ ಬಗ್ಗೆ ಭರವಸೆ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಆಯೋಗವು ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿಗಳನ್ನು ನೀಡುವಂತೆ ತಿಳಿಸಲಾಗಿದೆ. ಅವುಗಳು ಸಹ ಸಿಕ್ಕಿಲ್ಲ. ಅವೆಲ್ಲಾ ಸಿಕ್ಕ ಕೂಡಲೇ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲು ಆಯೋಗ ಸಜ್ಜಾಗಿದೆ.
ಇವಿಎಂ ಯಂತ್ರದ ಮೇಲೆ ಕೇವಲ ರಾಜಕೀಯ ಪಕ್ಷಗಳು ಅಷ್ಟೇ ಅಲ್ಲ ಜನಸಾಮಾನ್ಯರು ಕೂಡ ಸಂಶಯ ವ್ಯಕ್ತಪಡಿಸುವಂತಾಗಿದೆ. ಸುಪ್ರೀಂಕೋರ್ಟ್ನಲ್ಲಿಯೂ ಈ ಬಗ್ಗೆ ಸತ್ವ ಪರೀಕ್ಷೆಯಾಗಿದೆ. ಜನಪ್ರತಿನಿಧಿಗಳಲ್ಲಿ ಮತ್ತು ಜನತೆಯಲ್ಲಿ ಈವರೆವಿಗೂ ಇವಿಎಂ ಬಗ್ಗೆ ಸಂಶಯಗಳಿವೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮನವೊಲಿಸಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರಗಳನ್ನೇ ಬಳಕೆ ಮಾಡುವ ಉದ್ದೇಶವನ್ನು ರಾಜ್ಯ ಚುನಾವಣಾ ಆಯೋಗ ಹೊಂದಿದೆ.
ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದಾಗ ರಾಜ್ಯದಲ್ಲಿನ ಇವಿಎಂ ಯಂತ್ರಗಳ ಬಳಕೆ ಮಾತ್ರವಲ್ಲದೇ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ರಾಜ್ಯಗಳಿಂದಲೂ ಇವಿಎಂಗಳನ್ನು ತರಿಸಿ ಬಳಕೆ ಮಾಡಲಾಗಿತ್ತು. ಅಲ್ಲದೇ, ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಯಿಂದಲೂ ಸಹ ಇವಿಎಂಗಳನ್ನು ಪೂರೈಕೆ ಮಾಡಲಾಗುತ್ತದೆ. ಆದರೂ ಈ ಹಿಂದೆ ನಡೆದ ಚುನಾವಣೆಯಲ್ಲಿ ಇವಿಎಂಗಳ ಕೊರತೆ ಉಂಟಾಗಿದ್ದವು. ಈ ಕಾರಣಕ್ಕಾಗಿ ಬ್ಯಾಲೆಟ್ ಪೇಪರ್ ಬಳಕೆ ಆಲೋಚನೆ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಇವಿಎಂ ಬಗ್ಗೆ ಅನುಮಾನ
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇವಿಎಂ ಮೂಲಕ ಮತಗಳನ್ನು ತಿರುಚಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರಕೂಟ ಪಕ್ಷಗಳ ಆರೋಪಕ್ಕೆ ಸುಪ್ರೀಂಕೋರ್ಟ್ ಸಹ ಚಾಟಿ ಬೀಸಿದೆ. ಅಲ್ಲದೇ, ಕೇಂದ್ರ ಚುನಾವಣಾ ಆಯೋಗವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೂ ಇವಿಎಂ ಬಗೆಗಿನ ಅನುಮಾನಗಳು ಮಾತ್ರ ದೂರವಾಗುತ್ತಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಇಂತಹ ಆರೋಪಗಳು ಬಾರದಿರಲಿ ಎಂಬ ಕಾರಣಕ್ಕಾಗಿ ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಕೆಯ ದಿಟ್ಟ ಹೆಜ್ಜೆ ಇಟ್ಟಿದೆ.
ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯಲ್ಲಿ ಯಾರಿಗೂ ಅನ್ಯಾಯವಾಗದಂತೆ ರಚನೆ ಮಾಡಿ ಚುನಾವಣೆ ನಡೆಸಬೇಕಾಗಿದೆ. ಮತದಾರರ ಪಟ್ಟಿಯನ್ನು ಸಹ ಆಯೋಗವು ಸಿದ್ಧಪಡಿಸಬೇಕು. ಮತದಾರರ ಪಟ್ಟಿಯನ್ನು ತಯಾರಿಗೊಳಿಸುವ ಕೆಲಸ ಪ್ರಾರಂಭಿಸಬೇಕಾಗಿದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ತೀರ್ಮಾನ ಕೈಗೊಳ್ಳುವುದರ ಜೊತೆಗೆ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸುವುದು ಸಹ ರಾಜ್ಯ ಚುನಾವಣಾ ಆಯೋಗದ ಪ್ರಮುಖ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುವ ಅಗತ್ಯ ಇದೆ.