Bangalore Stampede | ಕಾಲ್ತುಳಿತ ದುರಂತ: ಹೇಳಿಕೆ ನೀಡಲು ಸಾರ್ವಜನಿಕರಿಗೆ ಆಯೋಗದಿಂದ ಆಹ್ವಾನ
x

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ

Bangalore Stampede | ಕಾಲ್ತುಳಿತ ದುರಂತ: ಹೇಳಿಕೆ ನೀಡಲು ಸಾರ್ವಜನಿಕರಿಗೆ ಆಯೋಗದಿಂದ ಆಹ್ವಾನ

ಕಾಲ್ತುಳಿತ ಘಟನೆಯ ವಾಸ್ತವಾಂಶದ ವಿವರಗಳ ಕುರಿತು ಮಾಹಿತಿ ಮತ್ತು ಸತ್ಯ ಸಂಗತಿಗಳು ಹಾಗೂ ಸಂದರ್ಭಗಳ ವಿವರ ತಿಳಿದಿರುವವರು ಮತ್ತು ತನಿಖಾ ಆಯೋಗದ ನಡವಳಿಗಳ ಬಗ್ಗೆ ಅಸಕ್ತಿಯಿರುವವರು ತಮ್ಮ ಹೇಳಿಕೆಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ತನಿಖೆ ನಡೆಸಲು ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಿರುವ ಏಕಸದಸ್ಯ ಆಯೋಗವು ಸಾರ್ವಜನಿಕರಿಂದ ಹೇಳಿಕೆಗಳನ್ನು ಆಹ್ವಾನಿಸಿದೆ.

ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಗೆ ಕಾರಣಗಳು, ಕಾರಣಕರ್ತರು, ಘಟನಾವಳಿಗಳ ಸರಣಿ ಮತ್ತು ಸನ್ನಿವೇಶಗಳ ಆಧಾರದ ಮೇಲೆ ದುರಂತಕ್ಕೆ ಕಾರಣಗಳನ್ನು ಪತ್ತೆ ಹಚ್ಚುವುದು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಕುರಿತು ತನಿಖೆ ನಡೆಸುವಂತೆ ಸರ್ಕಾರವು ವಿಚಾರಣಾ ಆಯೋಗಕ್ಕೆ ವ್ಯಾಪ್ತಿ ನಿಗದಿಪಡಿಸಿದೆ.

-ಹೇಳಿಕೆ ಮತ್ತು ದಾಖಲೆ ಸಲ್ಲಿಸಲು ಸೂಚನೆ

ಕಾಲ್ತುಳಿತ ಘಟನೆಯ ವಾಸ್ತವಾಂಶದ ವಿವರಗಳು, ಮಾಹಿತಿ ಮತ್ತು ಸತ್ಯಸಂಗತಿಗಳು ಹಾಗೂ ಸಂದರ್ಭಗಳ ಬಗ್ಗೆ ತಿಳಿದಿರುವವರು, ಅಥವಾ ತನಿಖಾ ಆಯೋಗದ ನಡವಳಿಗಳ ಬಗ್ಗೆ ಆಸಕ್ತಿಯಿರುವವರು, ಅಥವಾ ಆಯೋಗಕ್ಕೆ ಸಹಕರಿಸಲು ಇಚ್ಛಿಸುವವರು ತಮ್ಮ ಹೇಳಿಕೆಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸಬಹುದು. ಈ ಹೇಳಿಕೆಗಳನ್ನು ಎರಡು ಪ್ರತಿಗಳಲ್ಲಿ ಪ್ರಮಾಣ ಪತ್ರದೊಂದಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಜೂನ್ 27ರೊಳಗೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿನ ಕೊಠಡಿ ಸಂಖ್ಯೆ 12ಕ್ಕೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆ, ಕೊರಿಯರ್ ಸೇವೆ ಹಾಗೂ ಇ-ಮೇಲ್ (cdingcom@gmail.com) ಮೂಲಕ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಲ್ಲಿಸಲಾದ ದಾಖಲೆಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು ಎಂದು ಆಯೋಗ ಹೇಳಿದೆ.

Read More
Next Story