Victory Day stampede: Deadline extended for submission of magisterial report
x

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್‌

Bangalore Stampede | ಕಾಲ್ತುಳಿತ ಘಟನೆಗೆ ಸಾಕ್ಷಿ ಹೇಳಲು ಬಾರದ ಸಾರ್ವಜನಿಕರು

ಕಾಲ್ತುಳಿತ ಘಟನೆಗೆ ಸಂಬಂಧಿಸಿ ಸಾರ್ವಜನಿಕರ ಹೇಳಿಕೆ ದಾಖಲಿಸಲು ಶುಕ್ರವಾರ ಅವಕಾಶ ನೀಡಲಾಗಿತ್ತು. ಆದರೆ, ಯಾರೊಬ್ಬರೂ ಹೇಳಿಕೆ ದಾಖಲಿಸಲು ಬಾರದ ಕಾರಣ ತನಿಖೆಗೆ ಕೊಂಚ ಹಿನ್ನಡೆಯಾಗಿದೆ.


ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ.4ರಂದು ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಮಾಹಿತಿ ನೀಡಲು ಸಾರ್ವಜನಿಕರು ಮುಂದೆ ಬಾರದಿರುವುದು ಮ್ಯಾಜಿಸ್ಟ್ರೇಟ್‌ ತನಿಖೆಗೆ ಕೊಂಚ ಹಿನ್ನಡೆ ತಂದಿದೆ.

ಮ್ಯಾಜಿಸ್ಟ್ರೇಟ್‌ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ ಅವರು ಘಟನೆ ಕುರಿತಂತೆ ಪೊಲೀಸ್‌ ಅಧಿಕಾರಿಗಳು, ಕಾರ್ಯಕ್ರಮ ಆಯೋಜಕರ ಹೇಳಿಕೆ ಜೊತೆಗೆ ಸಾರ್ವಜನಿಕರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲು ಮುಂದಾಗಿತ್ತು. ಅದರಂತೆ ಜೂ.27 ರಂದು ಸಾರ್ವಜನಿಕರ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗಿತ್ತು.

ನಗರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಹೇಳಿಕೆ ದಾಖಲಿಸಿಕೊಳ್ಳಲು ಜಿಲ್ಲಾಧಿಕಾರಿ ಕಾದು ಕುಳಿತರೂ ಯಾರೊಬ್ಬರು ಸಾಕ್ಷ್ಯ ನುಡಿಯಲು ಅಥವಾ ಮಾಹಿತಿ ನೀಡಲು ಬರಲಿಲ್ಲ. ಕಾಲ್ತುಳಿತ ಘಟನೆಗೆ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ದೂರಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗಿತ್ತು.

ಘಟನೆ ಕುರಿತು ಸಾಕ್ಷ್ಯ ನುಡಿಯಲು ಯಾವುದೇ ಪ್ರತ್ಯಕ್ಷದರ್ಶಿಗಳು ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್‌ ವಾಪಸಾದರು. ಘಟನೆಗೆ ಸಂಬಂಧಿಸಿದ ಸಾಕ್ಷ್ಯ ಅಥವಾ ದೃಶ್ಯಗಳನ್ನು ಹೊಂದಿರುವವರು ಮುಂದಿನ ದಿನಗಳಲ್ಲಿ ವಿಚಾರಣಾಧಿಕಾರಿಗೆ ತಾವು ತಿಳಿದ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳು ಮತ್ತೆ ಮನವಿ ಮಾಡುವ ಸಾಧ್ಯತೆ ಇದೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಅವರು ಗುರುವಾರವಷ್ಟೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ ನೇತೃತ್ವದ ಮ್ಯಾಜಿಸ್ಟ್ರೇಟ್‌ ತನಿಖಾ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.

Read More
Next Story