
Stampade| ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಪೊಲೀಸ್ ಆಯುಕ್ತ, ಕೆಎಸ್ಸಿಎ ಕಾರ್ಯದರ್ಶಿ, ಆರ್ಸಿಬಿಗೆ ನೋಟಿಸ್
ಕ್ರೀಡಾಂಗಣ ಹಾಗೂ ಸುತ್ತಲಿನ ಸಿಸಿಟಿವಿ ಕ್ಯಾಮೆರಾ, ವಿಡಿಯೋ ದೃಶ್ಯಗಳು ಹಾಗೂ ಮಾಧ್ಯಮಗಳ ವರದಿಯ ಕ್ಲಿಪ್ಗಳನ್ನು ವಿಶ್ಲೇಷಣೆ ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಗೆ ಸಂಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಶುರುವಾಗಿದೆ.
ಗುರುವಾರ ಬೆಳಿಗ್ಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ಕಾಲ್ತುಳಿತ ಹೇಗಾಯಿತು, ಕಾರಣಗಳೇನು, ಘಟನೆ ನಂತರದ ಬೆಳವಣಿಗೆಗಳೇನು ಎಂಬ ಮಾಹಿತಿ ಕಲೆ ಹಾಕಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಅವರು, ಮೊದಲು ಕಾಲ್ತುಳಿತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕ್ರೀಡಾಂಗಣ ಹಾಗೂ ಸುತ್ತಲಿನ ಸಿಸಿಟಿವಿ ಕ್ಯಾಮೆರಾ, ವಿಡಿಯೋ ದೃಶ್ಯಗಳು ಹಾಗೂ ಮಾಧ್ಯಮಗಳ ವರದಿಯ ಕ್ಲಿಪ್ಗಳನ್ನು ವಿಶ್ಲೇಷಣೆ ಮಾಡಲಾಗುವುದು. ಮೊದಲಿಗೆ ಮೃತರು ಹಾಗೂ ಗಾಯಾಳುಗಳ ಕುಟುಂಬದವರಿಗೆ ನೋಟಿಸ್ ನೀಡಿ ಹೇಳಿಕೆ ಪಡೆಯಲಾಗುವುದು. ಆ ಬಳಿಕ ಘಟನೆಗೆ ಸಾಕ್ಷಿಯಾದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರಿಂದಲೂ ಮಾಹಿತಿ ಕೋರಿಕೆ
ಕಾಲ್ತುಳಿತ ಘಟನೆಗೆ ಸಂಬಂಧಿಸಿ ಜೂ.13 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ಸಾರ್ವಜನಿಕರ ಅಭಿಪ್ರಾಯ ಕೇಳಲಾಗುವುದು. ಈ ಸಂಬಂಧ ಸಾರ್ವಜನಿಕ ತಿಳಿವಳಿಕೆ ನೋಟಿಸ್ ಹೊರಡಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ, ದೂರು ನೀಡಲು ಇಚ್ಛಿಸುವವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ನಿಗದಿಪಡಿಸಿದ ಅವಧಿಯಲ್ಲಿ ಹೇಳಿಕೆ ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.
ಪೊಲೀಸ್ ಆಯುಕ್ತರಿಗೂ ನೋಟಿಸ್
ಕಾಲ್ತುಳಿತ ದುರಂತದ ಪ್ರತ್ಯಕ್ಷದರ್ಶಿಗಳಾಗಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳ ಪಟ್ಟಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಿಗೂ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಜೂ.13ರಂದು ಮಧ್ಯಾಹ್ನ 3ಗಂಟೆಗೆ ಪೊಲೀಸ್ ಆಯುಕ್ತರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಇದಲ್ಲದೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ, ಆರ್ಸಿಬಿ ಆಡಳಿತ ಮಂಡಳಿ, ಕಾರ್ಯಕ್ರಮ ಆಯೋಜಿಸಿದ್ದ ಡಿಎನ್ಎ ಇವೆಂಟ್ಸ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಜನದಟ್ಟಣೆ ಹೆಚ್ಚಾಗಿದ್ದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡದ ಬಿಎಂಆರ್ಸಿಎಲ್ ಅಧಿಕಾರಿಗಳಿಗೂ ನೋಟಿಸ್ ನೀಡಲಾಗುವುದು ಎಂದು ಜಗದೀಶ್ ತಿಳಿಸಿದರು.
ಘಟನೆಗೆ ಸಂಬಂಧಿಸಿ ಈ ಎಲ್ಲರ ಹೇಳಿಕೆ, ದಾಖಲೆಗಳ ಪರಿಶೀಲನೆ, ಸಿಸಿಟಿವಿ ದೃಶ್ಯಗಳ ವಿಶ್ಲೇಷಣೆ ನಂತರ ಸರ್ಕಾರದಕ್ಕೆ 15 ದಿನದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.