Spike in Heart Attacks | ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೆ ಮೂವರು ಬಲಿ; 40 ದಿನದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ
x

Spike in Heart Attacks | ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೆ ಮೂವರು ಬಲಿ; 40 ದಿನದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ

ಹಾಸನದಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಂಬಾಳು ಗ್ರಾಮದಲ್ಲಿ ಯೋಧ ಲೋಹಿತ್‌ (38), ಬೇಲೂರಿನ ಗೃಹಿಣಿ ಲೇಪಾಕ್ಷಿ(50), ಹೊಳೆನರಸೀಪುರದ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಮುತ್ತಯ್ಯ(58) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಹಾಸನದಲ್ಲಿ ಹಠಾತ್‌ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಎರಡು ದಿನಗಳಲ್ಲಿ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕಳೆದ 40 ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿದೆ.

ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್‌(38) ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಭಾನುವಾರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ದಿಢೀರ್‌ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸೋಮವಾರ ಬೇಲೂರು ಪಟ್ಟಣದ ಜೆ.ಪಿ ನಗರದ ಗೃಹಿಣಿ ಲೇಪಾಕ್ಷಿ(50) ಎಂಬುವರು ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಿಗ್ಗೆಯಿಂದಲೇ ನಿತ್ರಾಣಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆ ಉಸಿರೆಳೆದಿದ್ದಾರೆ.

ಇನ್ನು ಹೊಳೆನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಯ್ಯ (58) ಅವರು ಕಾಲೇಜು ಕ್ಯಾಂಟಿನ್‌ನಲ್ಲಿ ಟೀ ಕುಡಿಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಹ್ಯಾರಾನೆ ಗ್ರಾಮದ ಗಿರೀಶ್(41) ಜೋಳದ ಹೊಲಕ್ಕೆ ಗೊಬ್ಬರ ಹಾಕಲು ಹೋಗಿ ಮಧ್ಯಾಹ್ನ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲೇ ಗಿರೀಶ್ ಕುಸಿದು ಬಿದ್ದಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಶನಿವಾರ(ಜೂ.28) ಆಟೋ ಚಾಲಕ ಗೋವಿಂದ ಹೃದಯಾಘಾತದಿಂದ ಮೃತಪಟ್ಟಿದ್ದರು.

ಜಿಲ್ಲೆಯ ಹೊರಗೂ ಹೃದಯಾಘಾತದಿಂದ ಸಾವು

ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯ ಯುವಜನರು ಜಿಲ್ಲೆಯ ಹೊರ ಭಾಗಗಳಲ್ಲೂ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅದೇ ದಿನ ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಮೇ 28 ರಂದು ಕವನ, ಜೂನ್‌ 11 ರಂದು ನಿಶಾಂತ್, ಜೂನ್‌ 12 ರಂದು ನಾಗಪ್ಪ, ನೀಲಕಂಠಪ್ಪ ಕೂಡ ಮೃತಪಟ್ಟಿದ್ದರು.

ಜೂನ್‌ 13 ರಂದು ದೇವರಾಜ್, ಸತೀಶ್, ಜೂನ್‌ 14 ರಂದು ಕಾಂತರಾಜು ಬಲಿಯಾಗಿದ್ದರು. ಜೂನ್‌ 18 ರಂದು ನವೀನ್, ತೀರ್ಥಪ್ಪ, ಜೂನ್‌ 21 ರಂದು ನಿಶಾದ್ ಅಹ್ಮದ್ ಮತ್ತು ಚೇತನ್ ಮೃತಪಟ್ಟಿದ್ದರು.

ಜೂ.25 ರಂದು ಯೋಗೇಶ್. ಎಂ.ಕೆ, ಮಂಜುನಾಥ್, ಜೂ.26 ರಂದು 22 ವರ್ಷದ ಸುಪ್ರೀತಾ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮೃತಪಟ್ಟಿದ್ದರು. ಜೂ.28ರಂದು ಆಟೋ ಚಾಲಕ ಗೋವಿಂದ (37) ಮೃತರಾಗಿದ್ದರು.

ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಯುವಜನರೇ ಬಲಿಯಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಯುವ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

Read More
Next Story