
Puneeth Rajkumar | ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ವಿಶೇಷ ಪೋಸ್ಟ್ ಕಾರ್ಡ್ ಬಿಡುಗಡೆ
ಅಂಚೆ ಇಲಾಖೆ ವತಿಯಿಂದ ಪವರ್ ಸ್ಟಾರ್, ಅಪ್ಪು, ನಗುಮುಖದ ರಾಜಕುಮಾರ, ಕರ್ನಾಟಕ ರತ್ನ, ಅಭಿಮಾನಿಗಳ ದೇವರು ಎಂಬ ಹೆಸರಿನ ಪೋಸ್ಟ್ ಕಾರ್ಡ್ಗಳನ್ನು ಅನಾವರಣ ಮಾಡಲಾಯಿತು.
ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರ 50 ನೇ ಜನ್ಮದಿನವನ್ನು ಸ್ಮರಣೀಯಗೊಳಿಸುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯೊಂದು "ಅಪ್ಪು ಗಂಧದಗುಡಿ" ಅಗರಬತ್ತಿ ಸಹಯೋಗದಲ್ಲಿ ಭಾರತೀಯ ಅಂಚೆ ಇಲಾಖೆಯು ಪುನೀತ್ ರಾಜ್ ಕುಮಾರ್ ಅವರ ಐದು ವಿಶೇಷ ಪೋಸ್ಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಿತು.
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಜಿಪಿಒ ಸಭಾಂಗಣದಲ್ಲಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ವಿಶೇಷ ಪೋಸ್ಟ್ ಕಾರ್ಡ್ ಗಳನ್ನು ಲೋಕಾರ್ಪಣೆ ಮಾಡಿದರು. ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಂದ್ರಶೇಖರ್ ಕಾಕಮಾನು, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಘುನಂದನ್, ಅಪ್ಪು ಗಂಧದ ಗುಡಿ ಅಗರಬತ್ತಿ ಸಂಸ್ಥೆಯ ಸಹ ಸಂಸ್ಥಾಪಕಿ ಸ್ವಪ್ನಾ ರಾಜೇಶ್ ಉಪಸ್ಥಿತರಿದ್ದರು.
ಪವರ್ ಸ್ಟಾರ್, ಅಪ್ಪು, ನಗುಮುಖದ ರಾಜಕುಮಾರ, ಕರ್ನಾಟಕ ರತ್ನ, ಅಭಿಮಾನಿಗಳ ದೇವರು ಎಂಬ ಹೆಸರಿನ ಪೋಸ್ಟ್ ಕಾರ್ಡ್ಗಳನ್ನು ಅನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಇಂದು ಪುನೀತ್ ರಾಜ್ ಕುಮಾರ್ ಅವರ ವಿಶೇಷ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲು ಇಲಾಖೆ ಸಿದ್ಧವಾಗಿದೆ. ಖಾಸಗಿ ವಲಯದಿಂದ ಬರುವ ಬೇಡಿಕೆ ಆಧರಿಸಿ ರಾಷ್ಟ್ರಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರತಿಯೊಂದು ಪೋಸ್ಟ್ ಕಾರ್ಡ್ ಗಳು ಡಾ. ಪುನೀತ್ ರಾಜ್ಕುಮಾರ್ ಅವರ ಜೀವನ ಮತ್ತು ಪರಂಪರೆ ಒಳಗೊಂಡಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 17 ರಂದು ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನವಿದ್ದು, ಅಂದಿನಿಂದ ವಿಶೇಷ ಪೋಸ್ಟ್ ಕಾರ್ಡ್ ಗಳು ಲಭ್ಯವಾಗಲಿವೆ. ಪೋಸ್ಟ್ ಕಾರ್ಡ್ ಸಂಗ್ರಹಕಾರರಿಗೆ ಇದು ನಿಜಕ್ಕೂ ಅಪೇಕ್ಷಿತ ವಸ್ತುವಾಗಿದೆ. ಇವು ಜಿಪಿಒ ಕೌಂಟರ್ಗಳಲ್ಲಿ ಖರೀದಿಗೆ ಲಭ್ಯವಿರಲಿವೆ. ನಾವಾಡುವ ನುಡಿಯೇ ನುಡಿ ಹಾಡು ಈಗಲೂ ಮೈ ನವಿರೇಳಿಸುತ್ತದೆ. ಅಪ್ಪು ಕೇವಲ ನಟರಷ್ಟೇ ಅಲ್ಲದೇ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದ್ದಾರೆ.
ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮಾತನಾಡಿ, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್, ಪ್ರೀಮಿಯಂ ಧೂಪದ್ರವ್ಯ ಕಡ್ಡಿಗಳು ಮತ್ತು ಸಂಬಂಧಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. 1950 ರಲ್ಲಿ ಬಾಲಾಜಿ ಸ್ಟೋರ್ಸ್ ಮತ್ತು ಪಲ್ವರೈಸರ್ಸ್ನೊಂದಿಗೆ ಪ್ರಾರಂಭವಾದ ಪರಂಪರೆ ಆಧರಿಸಿ, ಕಂಪನಿಯು ನಿರಂತರವಾಗಿ ನಾವೀನ್ಯತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿದೆ. ಇತ್ತೀಚಿನ ಬಿಡುಗಡೆಯಾದ "ಅಪ್ಪುಸ್ ಗಂಧದಗುಡಿ ಅಗರಬತ್ತಿ", ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬದ್ಧತೆಗೆ ಸಾಕ್ಷಿಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗ ಹೊಂದಿದ್ದು, ಎರಡು ಅಗರ ಬತ್ತಿ ಸಣ್ಣ ಪ್ಯಾಕೆಟ್ ಮಾರಾಟವಾದರೆ 1 ರೂ.ಮೊತ್ತವನ್ನು ಪುನೀತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ.