
ಇರಾನ್ ಮೇಲೆ ಇಸ್ರೇಲ್ ದಾಳಿ: ಕೇಂದ್ರ ಮೌನಕ್ಕೆ ಸಿದ್ದರಾಮಯ್ಯ ಟೀಕೆ, ಸೋನಿಯಾ ಲೇಖನ ಉದ್ಧರಿಸಿದ ಸಿಎಂ
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬರೆದ ಲೇಖನವೊಂದನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ಇರಾನ್ ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಇರಾನ್ ಮತ್ತು ಇಸ್ರೇಲ್ ಘರ್ಷಣೆ ನಡುವೆ ಭಾರತ ಯಾವ ದೇಶಕ್ಕೂ ತನ್ನ ಅಧಿಕೃತ ಬೆಂಬಲ ವ್ಯಕ್ತಪಡಿಸಿಲ್ಲ. ರಾಜತಾಂತ್ರಿಕವಾಗಿ ಭಾರತ-ಇರಾನ್ ಹಾಗೂ ಭಾರತ-ಇಸ್ರೇಲ್ ಸಂಬಂಧಗಳು ಮುಂದುವರಿದಿದ್ದರೂ, ಪಾರಂಪರಿಕವಾಗಿ ಭಾರತ ಮತ್ತು ಇರಾನ್ ಸಂಬಂಧ ಹಳೆಯದೇ ಆಗಿದೆ.
ಇರಾನ್ ಮೇಲೆ ಇಸ್ರೇಲ್ ದಾಳಿಯನ್ನು ಭಾರತ ಖಂಡಿಸಿಲ್ಲ. ಆದರೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಇರಾನ್ ದೇಶವನ್ನು ಬೆಂಬಲಿಸಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. "ಇರಾನ್ ಮೇಲೆ ಇಸ್ರೇಲ್ ನಡೆಸಿದ ಕಾನೂನುಬಾಹಿರ ಹಾಗೂ ಈ ದಾಳಿಯು ಮುಂದಿನ ಅಪಾಯವನ್ನು ಉಲ್ಬಣಿಸುವಂತೆ ಮಾಡಿದೆ. ಹಾಗೂ ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ," ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.
ಈ ಸಂಬಂದ ಅವರು ತಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. "ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ," ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
"ಕಾಶ್ಮೀರ ಸೇರಿದಂತೆ ನಿರ್ಣಾಯಕ ಕ್ಷಣಗಳಲ್ಲಿ ಇರಾನ್ ಭಾರತದ ಪರವಾಗಿ ನಿಂತಿದೆ. ಮೊದಲು ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಮತ್ತು ಈಗ ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿ ಬಗ್ಗೆ ಆದರೂ, ನವದೆಹಲಿಯ ಮೌನ ಸರಿಯಲ್ಲ. ಅದು, ಶಾಂತಿ ಮತ್ತು ಸಮತೋಲನದಲ್ಲಿ ಬೇರೂರಿರುವ ಭಾರತದ ತತ್ವಬದ್ಧ ವಿದೇಶಾಂಗ ನೀತಿಯಿಂದ ದೂರ ಸರಿದಂತಾಗುತ್ತದೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ. "ಭಾರತ ಮಾತನಾಡಬೇಕು. ನೈತಿಕ ಸ್ಪಷ್ಟತೆಗಾಗಿ ಮಾತ್ರವಲ್ಲ, ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಿಲುವು ವ್ಯಕ್ತಪಡಿಸಬೇಕು," ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಲೇಖನ
"ಜೂನ್ 13ರಂದು ಇರಾನ್ ಭೂಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಯನ್ನು "ಕಾನೂನುಬಾಹಿರ ಮತ್ತು ಸಾರ್ವಭೌಮತ್ವದ ಉಲ್ಲಂಘನೆ" ಎಂದು ʼದ ಹಿಂದೂʼ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಖಂಡಿಸಿರುವ ಸೋನಿಯಾ ಗಾಂಧಿ, ಇಸ್ರೇಲ್ನ ಆಕ್ರಮಣಕಾರಿ ವರ್ತನೆ ಮತ್ತು ಇರಾನ್ನ ಸ್ವರಕ್ಷಣಾ ಮಿಲಿಟರಿ ಕ್ರಮಗಳು ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು,
ಇರಾನ್ ಮೇಲೆ ನಡೆದ ಈ ಬಾಂಬ್ ದಾಳಿಗಳನ್ನು ಖಂಡಿಸಿರುವ ಸೋನಿಯಾ, ಗಾಜಾದಲ್ಲಿ ಇಸ್ರೇಲ್ನ ಕ್ರೂರ ಕಾರ್ಯಾಚರಣೆ ಮತ್ತು ಇರಾನ್ ಮೇಲಿನ ಆಕ್ರಮಣಕಾರಿ ದಾಳಿಯನ್ನು ಪ್ರಾದೇಶಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ನಡೆಸಲಾಗಿದೆ ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು.
ಇದೇ ವೇಳೆ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿರುವ ಸೋನಿಯಾ ಗಾಂಧಿ, "ಇಸ್ರೇಲ್ಗೆ ಹತ್ತಿರವಾಗುವ ಭರದಲ್ಲಿ ನಾವು ಇರಾನ್ ಮರೆಯುವುದನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಲೇಖನದಲ್ಲಿ ಬರೆದಿದ್ದಾರೆ.
ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಇಂದಿಗೆ ದೀರ್ಘಕಾಲದ ಸಂಬಂಧಗಳನ್ನು ಹೊಂದಿರುವ ಭಾರತದ ವಿಶಿಷ್ಟ ರಾಜತಾಂತ್ರಿಕ ನಿಲುವನ್ನು ಒತ್ತಿಹೇಳಿರುವ ಅವರು, ಇಸ್ರೇಲ್ನೊಂದಿಗೆ ರಕ್ಷಣೆ, ವ್ಯಾಪಾರ ಮತ್ತು ಗುಪ್ತಚರ ಸಹಕಾರವನ್ನು ಭಾರತ ವಿಸ್ತರಿಸಿದ್ದರೂ, ಅದು ಇರಾನ್ನೊಂದಿಗೆ ಆಳವಾದ ಐತಿಹಾಸಿಕ, ನಾಗರಿಕ ಮತ್ತು ಕಾರ್ಯತಂತ್ರದ ಸಂಪರ್ಕಗಳನ್ನು ಸಹ ಉಳಿಸಿಕೊಂಡಿದೆ," ಎಂದು ಸ್ಪಷ್ಟವಾಗಿ ಹೇಳಿದ್ದಾರೆ.