
ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್ಗೆ ನಾಮ ನಿರ್ದೇಶನ: ಸಿದ್ದರಾಮಯ್ಯ- ಹೈಕಮಾಂಡ್ ಮೇಲುಗೈ; ಡಿ.ಕೆ. ಶಿವಕುಮಾರ್ಗೆ ಮುಖಭಂಗ
ಮೇಲ್ಮನೆಗೆ ನಾಲ್ವರನ್ನು ಆಯ್ಕೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಲ್ಲಿ ಅಸಮಾಧಾನ ಪ್ರಾರಂಭವಾಗಿದೆ. ಆಕಾಂಕ್ಷಿಗಳ ಮನವೊಲಿಕೆ ಕಾರ್ಯವೂ ಶುರುವಾಗಿದೆ.
ಬಹುತೇಕ ಐದು ತಿಂಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಖಾಲಿ ಇರುವ ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ಭರ್ತಿ ಮಾಡುತ್ತಿದ್ದಂತೆ ಕೈ ಪಾಳಯದಲ್ಲಿ ಟಿಕೆಟ್ ವಂಚಿತರಿಂದ ಅಸಮಾಧಾನದ ಹೊಗೆ ಶುರುವಾಗಿದೆ. ಅಲ್ಲದೇ, ಮೇಲ್ಮನೆ ಆಯ್ಕೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ವಿಫಲವಾಗಿದೆ.
ನಾಮ ನಿರ್ದೇಶಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಸರ್ವಾನುಮತದಿಂದ ನಾಲ್ವರನ್ನು ಆಯ್ಕೆ ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಶಿಫಾರಸು ಮಾಡಿದ ಯಾರನ್ನೂ ಆಯ್ಕೆ ಮಾಡದೇ ಇರುವುದು ಪಕ್ಷದೊಳಗೆ ಅವರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇದು ಸಹಜವಾಗಿ ಪಕ್ಷದೊಳಗೆ ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ.
ಪರಿಷತ್ನ ನಾಲ್ಕು ಸ್ಥಾನಕ್ಕಾಗಿ ಹಲವು ಮಂದಿ ಲಾಬಿ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಪರಸ್ಪರ ಒಪ್ಪಿಕೊಂಡು ನಾಲ್ಕೂ ಮಂದಿಗೆ ಸ್ಥಾನ ಕೊಡಿಸುವಲ್ಲಿ ಸಫಲವಾಗಿದ್ದಾರೆ.
ಪತ್ರಕರ್ತ ದಿನೇಶ್ ಅಮೀನ್ಮಟ್ಟು ಅವರ ಹೆಸರನ್ನು ಸಿದ್ದರಾಮಯ್ಯ ನೇರವಾಗಿ ಶಿಫಾರಸು ಮಾಡಿದ್ದಾರೆ. ದಲಿತ ಮುಖಂಡ ಡಿ.ಜೆ. ಸಾಗರ್ ಅವರ ಹೆಸರನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಶಿಫಾರಸು ಮಾಡಿದ್ದಾರೆ. ಅನಿವಾಸಿ ಭಾರತೀಯರಾದ ಆರತಿ ಕೃಷ್ಣ ಅವರು ಸಿಎಂ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದಾರೆ. ಜತೆಗೆ ಲೋಕಸಭೆ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆಪ್ತವಲಯದಲ್ಲಿದ್ದಾರೆ. ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರ ಹೆಸರನ್ನು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಸೂಚಿಸಿದ್ದಾರೆ. ರಮೇಶ್ ಬಾಬು ಅವರು ಎಲ್ಲ ನಾಯಕರ ಜತೆ ಬಾಂಧವ್ಯ ಇಟ್ಟುಕೊಂಡಿದ್ದು, ಸಿದ್ದರಾಮಯ್ಯ ಜತೆಗೂ ಗುರುತಿಸಿಕೊಂಡಿದ್ದಾರೆ.
ಹಾಗಾಗಿ ನಾಲ್ಕೂ ಅಭ್ಯರ್ಥಿಗಳನ್ನು ಅಳೆದೂ ತೂಗಿ ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ, ಡಿ.ಕೆ. ಶಿವಕುಮಾರ್ ಅವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ನೇರವಾಗಿ ಕಂಡುಬರುತ್ತಿದೆ.
ಕಾಲ್ತುಳಿತ ದುರಂತಕ್ಕೂ, ನಾಮನಿರ್ದೇಶನಕ್ಕೂಸಂಬಂಧವಿದೆಯೇ?
ಹಲವು ತಿಂಗಳುಗಳಿಂದ ಎಂಎಲ್ಸಿ ಅಭ್ಯರ್ಥಿಗಳ ನಾಮ ನಿರ್ದೇಶನ ಪ್ರಕ್ರಿಯೆ ವಿಳಂಬವಾಗಿದ್ದರೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜತೆಯಾಗಿ ದೆಹಲಿಯಲ್ಲಿ ಹೈಕಮಾಂಡ್ ಬಳಿ ಚರ್ಚಿಸುವ ಬಗ್ಗೆ ನಿರ್ಧರಿಸಿದ್ದರೂ, ಏಕಾಏಕಿ ದೆಹಲಿಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮಲಕ ಚರ್ಚಿಸಿಯೇ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಯಿತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್ಸಿಬಿ ಐಪಿಎಲ್ ಕಪ್ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ ಕಾರ್ಯಕ್ರಮದ "ಮೇಲುಸ್ತುವಾರಿ" ವಹಿಸಿದ ಡಿ.ಕೆ. ಶಿವಕುಮಾರ್ ಅವರೇ ಅವಾಂತರಗಳಿಗೆ ಒಂದು ರೀತಿಯ ಕಾರಣ ಎಂದು ಸಿದ್ದರಾಮಯ್ಯ ಬಣ ವಾದಿಸಿದರೆ, ಇನ್ನೊಂದು ವಲಯದಿಂದ ಆಡಳಿತ ವ್ಯವಸ್ಥೆಯ ಕುಸಿತ ಹಾಗೂ ಸಿದ್ದರಾಮಯ್ಯ ಅವರೇ ಜವಾಬ್ದಾರಿ ಎಂಬ ವಾದವೂ ಕೇಳಿ ಬರುತ್ತಿದೆ.
ಇತ್ತೀಚೆಗೆ ನಡೆದ ಕೆಲವು ಘಟನೆಗಳು ಹಾಗೂ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಸೇರಿದಂತೆ ಹಲವು ಸಚಿವರನ್ನು ಬದಿಗೊತ್ತಿ ಏಕಾಏಕಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಹೈಕಮಾಂಡ್ಗೂ ಅಸಮಾಧಾನವಿದೆ. ಜತೆಗೆ, ಸಿದ್ದರಾಮಯ್ಯ ಅವರೂ ಶಿವಕುಮಾರ್ ಅವರಿಗೆ ರಾಜಕೀಯ ತಿರುಗೇಟು ನೀಡಲು ಸಮಯ ಕಾಯುತ್ತಿದ್ದರು. ಈಗ ಐದಾರು ತಿಂಗಳಿಂದ ಬಾಕಿ ಇರುವ ಪರಿಷತ್ ನ ನಾಮ ನಿರ್ದೇಶನ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಪರಿಗಣಿಸದೇ ಇರುವುದು ಮುಂದಿನ ರಾಜಕೀಯ ನಡೆಗಳ ಭವಿಷ್ಯದ ಬಗ್ಗೆ ಕುತೂಹಲ ಸೃಷ್ಟಿಸಿದೆ.
ಡಿಕೆಶಿ ಶಿಫಾರಸು ಮಾಡಿದ ಹೆಸರುಗಳು
ಡಿ.ಕೆ.ಶಿವಕುಮಾರ್ ಅವರು ಪಕ್ಷದ ಮುಖಂಡರಾದ ವಿನಯ್ ಕಾರ್ತಿಕ್, ಬಿ.ಎಲ್.ಶಂಕರ್ ಪರ ಶಿಫಾರಸ್ಸು ಮಾಡಿದ್ದರು. ಆದರೆ, ಹೈಕಮಾಂಡ್ ಈ ಹೆಸರುಗಳನ್ನು ಪರಿಗಣಿಸಿಲ್ಲ. ಅವರ ಶಿಫಾರಸ್ಸಿನ ಹೆಸರನ್ನು ಹೈಕಮಾಂಡ್ ಪರಿಗಣಿಸದಿರುವುದಕ್ಕೆ ರಾಜಕೀಯ ವಲಯದಲ್ಲಿ ಬೇರೆ ರೀತಿಯಲ್ಲಿಯೇ ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಡಿ.ಕೆ.ಶಿವಕುಮಾರ್ ಸೂಚಿಸಿರುವ ಹೆಸರನ್ನು ಪರಿಗಣಿಸದಿರುವುದು ಪಕ್ಷದಲ್ಲಿಯೇ ಆಶ್ಚರ್ಯ ವ್ಯಕ್ತವಾಗುತ್ತಿದೆ.
ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಕೆಲವರು ಅಸಮಾಧಾನ ಇದ್ದು, ಅದು ಮೇಲ್ಮನೆ ಆಯ್ಕೆ ವಿಚಾರದಲ್ಲಿಯೂ ಪರಿಣಾಮ ಬೀರಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಸೂಚಿಸಿದ ವ್ಯಕ್ತಿಗಳಿಗೆ ಟಿಕೆಟ್ ನೀಡಿದರೆ ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಒಳಬೇಗುದಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಮತ್ತಿತರರು ಡಿಕೆಶಿ ವಿರುದ್ಧವಾಗಿ ಲಾಬಿ ನಡೆಸುತ್ತಿರುವ ಬೆನ್ನಿಗೇ ಸಿದ್ದರಾಮಯ್ಯ ಅವರು ತಮ್ಮದೇ ರೀತಿಯ ಜಾಣ ನಡೆ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ʼಉತ್ತರʼ ನೀಡಿದ್ದಾರೆ.
ಜಾತಿ ಲೆಕ್ಕಾಚಾರ
ಈ ನಡುವೆ, ಪರಿಷತ್ಗೆ ಆಯ್ಕೆ ವಿಚಾರದಲ್ಲಿ ಜಾತಿಯ ಲೆಕ್ಕಾಚಾರ ಸಹ ನಡೆದಿದೆ. ಆಯ್ಕೆಯಾಗಿರುವ ನಾಲ್ವರಲ್ಲಿ ಆರತಿ ಕೃಷ್ಣ ಒಕ್ಕಲಿಗರಾಗಿದ್ದು, ದಿನೇಶ್ ಅಮೀನ್ಮಟ್ಟು , ರಮೇಶ್ ಬಾಬು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇನ್ನು, ಡಿ.ಜಿ.ಸಾಗರ್ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್, ತಿಪ್ಪೇಸ್ವಾಮಿ ಅವರ ಅವಧಿ ಜನರಿಗೆ ಮುಕ್ತಾಯಗೊಂಡಿತ್ತು. ಇನ್ನು, ಶಾಸಕ ಸಿ.ಪಿ.ಯೋಗೇಶ್ವರ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕಾಗಿ ಇದೀಗ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ನಲ್ಲಿ ಅಸಮಾಧಾನ:
ಮೇಲ್ಮನೆಗೆ ನಾಲ್ವರನ್ನು ಆಯ್ಕೆ ಮಾಡುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಅಸಮಾಧಾನ ಪ್ರಾರಂಭವಾಗಿದೆ. ದಿನೇಶ್ ಅಮೀನ್ ಮಟ್ಟು, ಆರತಿಕೃಷ್ಣ ಮತ್ತು ಡಿ.ಜಿ.ಸಾಗರ್ ಆಯ್ಕೆಯಲ್ಲಿ ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿಲ್ಲ. ಆದರೆ, ರಮೇಶ್ ಬಾಬು ಆಯ್ಕೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ.
ದಿನೇಶ್ ಅಮಿನ್ಮಟ್ಟು ಅವರು ಸಿದ್ದರಾಮಯ್ಯ ಅವರ ನೇರ ಆಯ್ಕೆಯಾಗಿದ್ದು, ಮುಖ್ಯಮಂತ್ರಿಗಳ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಹಲವು ಬಾರಿ ಸಿದ್ದರಾಮಯ್ಯ ತೀರ್ಮಾನಗಳನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಿಂದ ದಲಿತ ನಾಯಕ ಡಿ.ಜೆ.ಸಾಗರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಆಯ್ಕೆಯಾಗಿದೆ. ಹೀಗಾಗಿ ಈ ಮೂವರ ಆಯ್ಕೆ ವಿರುದ್ಧ ಪಕ್ಷದೊಳಗೆ ಅಸಮಾಧಾನ ಇಲ್ಲ ಎನ್ನಲಾಗಿದೆ. ರಮೇಶ್ಬಾಬು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದವರು. ಜೆಡಿಎಸ್ ತೊರೆದು ಬಂದ ಕೆಲವೇ ವರ್ಷದಲ್ಲಿ ಪರಿಷತ್ ಸ್ಥಾನ ನೀಡಬೇಕಾದ ಅಗತ್ಯ ಇತ್ತೇ? ಕಾಂಗ್ರೆಸ್ನಲ್ಲಿಯೇ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗಳಿದ್ದರೂ ಅವರನ್ನು ಆಯ್ಕೆ ಮಾಡಬಹುದಿತ್ತು ಎಂಬ ಚರ್ಚೆ ನಡೆದಿದೆ.
ಜೆಡಿಎಸ್ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಆ ಪಕ್ಷವನ್ನು ತೊರೆದು ಬಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ವರ್ಷದಲ್ಲಿಯೇ ಸ್ಥಾನ ಪಡೆದಿದ್ದಾರೆ. ಬಹಳಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಯಾವ ಸಂದೇಶ ಕಳುಹಿಸಿದಂತಾಗುತ್ತದೆ ಎಂಬ ಪ್ರಶ್ನೆಗಳು ಕೈ ಪಾಳಯದಲ್ಲಿ ಮೂಡಿವೆ. ಇದೇ ಕಾರಣಕ್ಕಾಗಿ ಅಸಮಾಧಾನ ಉಲ್ಬಣಗೊಂಡಿವೆ.
ರಮೇಶ್ ಬಾಬು ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಅಸಮಾಧಾನಗಳಿದ್ದರೂ, ಅಂತಹವರು ವಿಧಾನಪರಿಷತ್ನಲ್ಲಿ ಅಗತ್ಯ ಇದೆ. ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತಹ ವ್ಯಕ್ತಿಗಳು ಸದನದಲ್ಲಿ ಬೇಕಾಗಿದೆ. ಬಿಜೆಪಿ ಮತ್ತು ಜೆಡಿಎಸ್ಗೆ ತಿರುಗೇಟು ನೀಡಲು ಪ್ರಸ್ತುತ ಮೇಲ್ಮನೆಯಲ್ಲಿ ರಮೇಶ್ ಬಾಬು ಅರ್ಹ ಅಭ್ಯರ್ಥಿಯಾಗಿದ್ದಾರೆ.
ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುತ್ತಾ, ಬಿಜೆಪಿ ನಾಯಕರ ವಿರುದ್ಧ ದಾಖಲೆಗಳ ಮೂಲಕ ಅವರ ಆಡಳಿತ ಸಂದರ್ಭದಲ್ಲಾದ ವಿವಾದಗಳನ್ನು ಬಯಲಿಗೆಳೆದಿದ್ದರು. ಅವರಲ್ಲಿನ ಜ್ಞಾನವನ್ನೂ ಸಹ ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಅಸಮಾಧಾನಗೊಂಡಿರುವ ಆಕಾಂಕ್ಷಿಗಳ ಮನವೊಲಿಕೆ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇನ್ನು, ವಿಧಾನಪರಿಷತ್ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಹೈಕಮಾಂಡ್.. ಹೀಗೆ ತಲಾ ಒಬ್ಬ ಅಭ್ಯರ್ಥಿಯನ್ನು ಆಯಾ ಕೋಟಾಗಳ ಮೂಲಕ ಆಯ್ಕೆ ಮಾಡಬೇಕೆಂಬ ಚರ್ಚೆಗಳು ನಡೆದಿದ್ದವು. ಈ ವಿಚಾರದಲ್ಲಿ ಜಟಾಪಟಿಯೂ ಸಹ ನಡೆಯುತ್ತಿತ್ತು. ಕೆಪಿಸಿಸಿ ಅಧ್ಯಕ್ಷನಾಗಿರುವುದರಿಂದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ 3 ಸ್ಥಾನ ತಮ್ಮ ವಿವೇಚನೆಗೆ ಬಿಡಿ ಎಂಬುದಾಗಿ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದರು. ಆದರೆ ಇದು ಯಾವುದೇ ಕೆಲಸ ಮಾಡಿಲ್ಲ ಎಂದು ತಿಳಿದುಬಂದಿದೆ.