
ವಾಮಾಚಾರಕ್ಕಾಗಿ ಸಾಕು ನಾಯಿಯನ್ನೇ ಕತ್ತು ಸೀಳಿ ಕೊಂದ ಮಹಿಳೆ!
ಪಶ್ಚಿಮ ಬಂಗಾಳ ಮೂಲದ ಮಹಿಳೆಯೋರ್ವರು ತಾನಿದ್ದ ಅಪಾರ್ಟ್ಮೆಂಟ್ನಲ್ಲೇ ಸಾಕಿದ ನಾಯಿಯನ್ನೇ ಕೊಂದು ಬಚ್ಚಿಟ್ಟಿದ್ದರು ಬಚ್ಚಿಟ್ಟಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನ ಮಹದೇವಪುರದ ಚಿನ್ನಪ್ಪ ಲೇಔಟ್ ಅಪಾರ್ಟ್ಮೆಂಟ್ವೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವಾಮಾಚಾರದ ಪೂಜೆಗಾಗಿ ತನ್ನದೇ ಸಾಕು ನಾಯಿಯನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಆರೋಪ ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರ ಮೇಲೆ ಕೇಳಿಬಂದಿದೆ.
ಮಹಿಳೆಯು ತಾನು ಸಾಕಿದ್ದ ನಾಲ್ಕು ಲ್ಯಾಬ್ರಡಾರ್ ನಾಯಿಗಳಲ್ಲಿ ಒಂದನ್ನು ಕೊಂದು, ಅದರ ಕಳೇಬರವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದರು. ನಾಲ್ಕು ದಿನಗಳ ಹಿಂದೆಯೇ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ನಾಯಿಯ ಕಳೇಬರದಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಮಹದೇವಪುರ ಪೊಲೀಸರು ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನಾಯಿಯ ಕಳೇಬರ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಸಂಗ್ರಹಣೆಗಾಗಿ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕೃತ್ಯವು ಬ್ಲ್ಯಾಕ್ ಮ್ಯಾಜಿಕ್ (ಮಾಟಮಂತ್ರ) ಸಂಬಂಧಿ ಉದ್ದೇಶದಿಂದ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.