ಕಮಲ್‌ ಕನ್ನಡ ವಿವಾದ: ಕಮಲ್‍ ಹಾಸನ್‍ ಕನ್ನಡದ ಬಗ್ಗೆ ತುಂಬಾ ಗೌರವ ಕೊಡುತ್ತಾರೆ;  ಶಿವರಾಜಕುಮಾರ್ ಮೊದಲ ಪ್ರತಿಕ್ರಿಯೆ
x

ಕಮಲ್‌ ಕನ್ನಡ ವಿವಾದ: ಕಮಲ್‍ ಹಾಸನ್‍ ಕನ್ನಡದ ಬಗ್ಗೆ ತುಂಬಾ ಗೌರವ ಕೊಡುತ್ತಾರೆ; ಶಿವರಾಜಕುಮಾರ್ ಮೊದಲ ಪ್ರತಿಕ್ರಿಯೆ

ಕನ್ನಡದ ಬಗ್ಗೆ ತಮಿಳಿನ ಜನಪ್ರಿಯ ನಟ ಕಮಲ್‍ ಹಾಸನ್‍ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು, ಅದು ಯಾವತ್ತೂ ಇರಬೇಕು ಎಂದು ಹೇಳಿದ್ದಾರೆ.


ಕನ್ನಡದ ಬಗ್ಗೆ ತಮಿಳಿನ ಜನಪ್ರಿಯ ನಟ ಕಮಲ್‍ ಹಾಸನ್‍ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು, ಅದು ಯಾವತ್ತೂ ಇರಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ, ಚೆನ್ನೈನಲ್ಲಿ ಕಮಲ್‍ ಹಾಸನ್‍ ಅಭಿನಯದ ‘ಥಗ್‍ ಲೈಫ್‍’ ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಕಮಲ್‍ ಹಾಸನ್‍, ‘ಕನ್ನಡವು ತಮಿಳಿನಿಂದ ಹುಟ್ಟಿತು …’ ಎಂದು ಹೇಳಿದ್ದರು. ಈ ಕುರಿತು ಸಾಕಷ್ಟು ವಿವಾದ ಉಂಟಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದರೂ, ಶಿವರಾಜಕುಮಾರ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬುಧವಾರ ರಾತ್ರಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಕಮಲ್‍ ಹಾಸನ್‍ ಕನ್ನಡದ ಬಗ್ಗೆ ತುಂಬಾ ಗೌರವ ಕೊಡುತ್ತಾರೆ. ಅವರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಕನ್ನಡ ಸಿನಿಮಾಗಳನ್ನೂ ಮಾಡಿದವರು ಅವರು. ಬೆಂಗಳೂರಿಗೆ ಬಂದಾಗಲೂ ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ನಾನು ಅವರನ್ನು ನೋಡಿ ಬೆಳೆದವನು. ಅವರ ಅಭಿಮಾನಿ. ತಂದೆ ಇರುವಾಗ ಅವರ ಅಭಿಮಾನಿ ಯಾಕೆ ಎಂದು ಕೆಲವರು ಹೇಳಬಹುದು. ತಂದೆಯವರು ಕುಟುಂಬದವರು. ತಂದೆ ಸ್ಥಾನ ಬೇರೆ. ಆದರೆ, ಕಮಲ್‍ ಹಾಸನ್‍ ಅವರಿಗೆ ನಾನು ಕೊಡುವ ಸ್ಥಾನ ಬೇರೆ. ಅವರಿಂದ ಸಾಕಷ್ಟು ಪ್ರೇರಣೆಗೊಂಡಿದ್ದೇನೆ. ನನ್ನ ಮೆಚ್ಚಿನ ನಟ ಅವರು. ಖಂಡಿತಾ ಅವರಿಗೆ ಗೊತ್ತಾಗುತ್ತದೆ. ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು.

ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು ಎಂದಿರುವ ಶಿವರಾಜಕುಮಾರ್, ‘ನಾನು ಅವರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಅವರು ಗೌರವದಿಂದ ಬರಮಾಡಿಕೊಂಡರು. ಆಮೇಲೆ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಇಲ್ಲಿಗೆ ಬಂದಾಗ ದೊಡ್ಡ ಸುದ್ದಿಯಾಗಿತ್ತು. ಅದಾದ ಮೇಲೆ ಅವರು ಬೆಂಗಳೂರಿಗೆ ಬಂದಿದ್ದರು. ಎಲ್ಲರ ಜೊತೆಗೂ ಮಾತನಾಡುತ್ತಿದ್ದರು. ಇಲ್ಲೇ ಅವರನ್ನು ಕೇಳಬಹುದಿತ್ತು. ಆದರೆ, ಯಾಕೆ ಕೇಳಲಿಲ್ಲ ಎಂದು ನನಗೆ ಗೊತ್ತಿಲ್ಲ. ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು. ಅದು ಯಾವತ್ತೂ ಇರಬೇಕು. ಕನ್ನಡ ಯಾವತ್ತೂ ಹೃದಯದಲ್ಲಿರಬೇಕು. ಕನ್ನಡಕ್ಕಾಗಿ ಹೋರಾಡುತ್ತೇವೆ, ಕನ್ನಡಕ್ಕಾಗಿ ಸಾಯುತ್ತೇವೆ. ಬರೀ ಮಾತಾಡೋದಲ್ಲ. ಸುದ್ದಿಗಾಗಿ ಪೋಸ್‍ ಕೊಡೋದು ದೊಡ್ಡ ವಿಷಯವಲ್ಲ’ ಎಂದರು.

ನಾವು ಮಾಡುತ್ತಿರುವುದು ಸರಿಯಾ ಎಂದು ಯೋಚನೆ ಮಾಡಿ ಎಂದಿರುವ ಅವರು, ‘ಕನ್ನಡಕ್ಕೆ ನಾವೇನು ಮಾಡುತ್ತೇವೆ ಎಂದು ನೀವೇ ಯೋಚಿಸಿ ನೋಡಿ. ಅಲ್ಲೇ ನಿಮಗೆ ಉತ್ತರ ಸಿಗುತ್ತದೆ. ಕನ್ನಡ ಸಿನಿಮಾಗೆ ನೀವೇನು ಮಾಡುತ್ತೀರಿ? ಬರೀ ಸ್ಟಾರ್ ಚಿತ್ರಗಳಿಗೆ ಮಾತ್ರ ಪ್ರೋತ್ಸಾಹ ಕೊಡೋದಷ್ಟೇ ಅಲ್ಲ. ಹೊಸಬರಿಗೂ ಪ್ರೋತ್ಸಾಹ ಕೊಡಬೇಕು. ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಹೊಸಬರಿಗೆ ಪ್ರೋತ್ಸಾಹ ಮಾಡದಿದ್ದರೆ, ಕನ್ನಡ ಹೇಗೆ ಬೆಳೆಯುತ್ತದೆ. ಅದು ನಮ್ಮ ಜವಾಬ್ದಾರಿ. ದಯವಿಟ್ಟು ಬೇರೆ ತರಹ ಅರ್ಥ ಮಾಡಿಕೊಳ‍್ಳಬೇಡಿ. ನಿಮ್ಮ ಮನಸ್ಸನ್ನು ನೀವೇ ಮುಟ್ಟು ನೋಡಿಕೊಳ್ಳಿ, ನಾವು ಮಾಡುತ್ತಿರುವುದು ಸರಿಯಾ ಎಂದು ಯೋಚನೆ ಮಾಡಿ. ಆಗ ನಿಮಗೇ ಉತ್ತರ ಸಿಗುತ್ತದೆ’ ಎಂದರು.

ಇನ್ನು, ಕಮಲ್ ಹಾಸನ್‍ ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ’ ಎಂದು ಹೇಳಿದ್ದಾರೆ.

Read More
Next Story