HPPL PROJECT | ಕಾಮಗಾರಿಗಾಗಿ ಸ್ಥಳೀಯರಿಗೆ ದಿಗ್ಬಂಧನ: ಸೆಕ್ಷನ್144‌ ನಿಷೇಧಾಜ್ಞೆ ಜಾರಿ
x

HPPL PROJECT | ಕಾಮಗಾರಿಗಾಗಿ ಸ್ಥಳೀಯರಿಗೆ ದಿಗ್ಬಂಧನ: ಸೆಕ್ಷನ್144‌ ನಿಷೇಧಾಜ್ಞೆ ಜಾರಿ

ಕಾರ್ಮಿಕರಿಗೆ ಬೆದರಿಕೆ ಒಡ್ಡುತ್ತಿರುವುದರಿಂದ ಕಾಮಗಾರಿ ನಡೆಸಲು ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ‌ ನಿರ್ಮಾಣವಾಗುತ್ತಿರುವ ಬಂದರು ಕಂಪೆನಿ ವಿರುದ್ಧವಾಗಿ ನಡೆಯುತ್ತಿರುವ ಸ್ಥಳೀಯರ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಾಸರಕೋಡ ಟೊಂಕಾ ಪ್ರದೇಶದಲ್ಲಿ ಸೆ.144 ಜಾರಿ ಮಾಡಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಇದನ್ನೂ ಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ

ಕಾಮಗಾರಿ ಗುತ್ತಿಗೆ ಪಡೆದ ಕಂಪೆನಿಯವರು ಕಾಮಗಾರಿಗೆ ಬಳಸುವ ವಾಹನ, ಯಂತ್ರೋಪಕರಣಗಳಿಗೆ ಸ್ಥಳೀಯರಿಂದ ಹಾನಿ ಮಾಡಲಾಗುತ್ತಿದೆ. ಕಾಮಗಾರಿ ನಿರ್ಮಾಣ ಕಾರ್ಮಿಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಇದರಿಂದ ಕಾಮಗಾರಿ ನಡೆಸಲು ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: HPPL PROJECT | ಚುನಾವಣಾ ಬಾಂಡ್‌: ಜಿವಿಪಿಆರ್‌ ಸಂಸ್ಥೆಯಿಂದ ಬಿಜೆಪಿ-ಕಾಂಗ್ರೆಸ್‌ಗೂ ದೇಣಿಗೆ

ಮಾರ್ಚ್‌ 29 ರಿಂದ ಎಪ್ರಿಲ್‌ 05 ರವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದ್ದು, 5 ಕ್ಕಿಂತ ಹೆಚ್ಚು ಜನರು ಈ ಪ್ರದೇಶದಲ್ಲಿ ಧರಣಿ ನಡೆಸಬಾರದು, ಪ್ರತಿಭಟನೆ ಉದ್ದೇಶದಿಂದ ಸೇರಬಾರದು, ಘೋಷಣೆ ಕೂಗಬಾರದು ಎಂದು ನಿಬಂಧನೆ ವಿಧಿಸಲಾಗಿದೆ.

ಇದನ್ನೂ ಓದಿ: HPPL PROJECT | ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ಸರಣಿಗೆ ಕೊನೆ ಇಲ್ಲ!

ಆದರೆ, ಸ್ಥಳೀಯರ ಪ್ರಕಾರ, ಕಾಮಗಾರಿ ನಡೆಸುತ್ತಿರುವ ಹೆಚ್‌ ಪಿಪಿಎಲ್‌ ಕಂಪೆನಿಯ ಕಾರ್ಮಿಕರೇ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಸ್ಥಳೀಯ ಪರಿಸರಕ್ಕೆ ಹಾನಿಯುಂಟಾಗುವುದರಿಂದ ಕಾಮಗಾರಿಯನ್ನು ವಿರೋಧಿಸುತ್ತಿರುವ ಸ್ಥಳೀಯ ಮೀನುಗಾರರ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಇದೀಗ, ಕಂಪೆನಿಯ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಂದರು ನಿರ್ಮಾಣ ಯೋಜನೆಯ ಗುತ್ತಿಗೆ ಪಡೆದಿರುವ ಹೊನ್ನಾವರ ಪ್ರೈವೇಟ್‌ ಪೋರ್ಟ್‌ ಲಿಮಿಟೆಡ್‌ (HPPL) ನ ಮಾತೃ ಸಂಸ್ಥೆ ಜಿವಿಪಿಆರ್‌ ಇಂಜಿನಿಯರ್ಸ್‌ ಲಿಮಿಟೆಡ್‌ ಸಂಸ್ಥೆಯು ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಕ್ಕೆ ಕೋಟ್ಯಾಂತರ ದೇಣಿಗೆ ನೀಡಿರುವುದು ಇತ್ತೀಚೆಗೆ ಬಯಲಾಗಿತ್ತು. ದೇಣಿಗೆ ನೀಡಿದ ಬಳಿಕ, ಕಾಮಗಾರಿ ಚಟುವಟಿಕೆಗಳು ತೀವ್ರವಾಗಿದ್ದು, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ನಡೆಸಿದ್ದರು. ಇದೀಗ, ಕಂಪೆನಿಯ ಪರವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

Read More
Next Story