ಗ್ಯಾರಂಟಿ ಯೋಜನೆಗೆ SCSP, TSP ಹಣ ಬಳಕೆ: ವಿವರಣೆ ಕೇಳಿ ಸರ್ಕಾರಕ್ಕೆ ಪ.ಪಂ. ರಾಷ್ಟ್ರೀಯ ಆಯೋಗ ಪತ್ರ
x

ಗ್ಯಾರಂಟಿ ಯೋಜನೆಗೆ SCSP, TSP ಹಣ ಬಳಕೆ: ವಿವರಣೆ ಕೇಳಿ ಸರ್ಕಾರಕ್ಕೆ ಪ.ಪಂ. ರಾಷ್ಟ್ರೀಯ ಆಯೋಗ ಪತ್ರ


ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆಂದು (TSP) ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಬಳಕೆ ವಿಚಾರವಾಗಿ ಏಳು ದಿನಗಳ ಒಳಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ವರದಿ ಕೇಳಿದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿವರಣೆ ಕೇಳಿದ್ದು, 7 ದಿನಗಳ ಒಳಗಾಗಿ ಸಂಪೂರ್ಣ ವರದಿ ನೀಡುವಂತೆ ಪತ್ರದಲ್ಲಿ ಸೂಚನೆ ನೀಡಿದೆ.

ಪತ್ರದಲ್ಲ ಏನಿದೆ?

ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಬುಡಕಟ್ಟು ಉಪ ಯೋಜನೆ (TSP) ಅಡಿಯಲ್ಲಿ ನಿಗದಿಪಡಿಸಿದ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂಬ‌ ಮಾಹಿತಿ ಇದೆ. ಕರ್ನಾಟಕ ಸರ್ಕಾರವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಂಚಿಕೆಯಿಂದ ಗ್ಯಾರಂಟಿ ಯೋಜನೆಗಳಿಗೆ ಯೋಜನೆಗಳಿಗೆ 14,730.53 ಕೋಟಿ ರೂ ಬಳಸಿಕೊಳ್ಳಲು ತೀರ್ಮಾನ ತೆಗೆದುಕೊಂಡಿದೆ.

"ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ವಿಶೇಷ ಕೇಂದ್ರ ಸಹಾಯ (ಎಸ್‌ಸಿಎ)ವೂ ಇದೆ. ಹಾಗಾಗಿ ಭಾರತ ಸಂವಿಧಾನದ 338 ನೇ ವಿಧಿಯ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಕಡ್ಡಾಯವಾಗಿ ಅನುಸರಿಸಲು ಆಯೋಗ ಬದ್ಧವಾಗಿದೆ. ದಯವಿಟ್ಟು ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು 7 ದಿನಗಳೊಳಗೆ ಆಯೋಗಕ್ಕೆ ಒದಗಿಸಬೇಕೆಂದು" ಪತ್ರ ಬರೆದಿದೆ. ಅಲ್ಲದೇ ಇದನ್ನು ಅತ್ಯಂತ ತುರ್ತು ಎಂದು ಪರಿಗಣಿಸಬೇಕು ಎಂದೂ ಆಯೋಗ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಉದ್ದೇಶಿಸಿರುವ ಸುಮಾರು ₹15,000 ಕೋಟಿಗಳನ್ನು ಲೂಟಿ ಮಾಡಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇದೀಗ ಭಾರೀ ಪರಿಶೀಲನೆಗೆ ಒಳಗಾಗಿದೆ. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು 7 ದಿನಗಳಲ್ಲಿ ವಿವರವಾದ ವರದಿಯನ್ನು ನೀಡಬೇಕು ಎಂದು ಒತ್ತಾಯಿಸಿದೆ. ವಾಲ್ಮೀಕಿ ಸಮುದಾಯಕ್ಕೆ ಉದ್ದೇಶಿಸಿರುವ ಸುಮಾರು ₹ 200 ಕೋಟಿಗಳ ಆಘಾತಕಾರಿ ಲೂಟಿಯ ನಂತರ ಇದು ಬಂದಿದೆ. ಹಿಂದುಳಿದ ಸಮುದಾಯಗಳಿಗೆ ಹಣ ಲೂಟಿ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕುʼʼ ಎಂದು ಹೇಳಿದೆ.


Read More
Next Story