
ಸಾಲುಮರದ ತಿಮ್ಮಕ್ಕ
ಕಲಾಗ್ರಾಮದಲ್ಲಿ ಇಂದು 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕನವರ ಅಂತ್ಯಕ್ರಿಯೆ
ಶುಕ್ರವಾರ ವಯೋಸಹಜ ಅನಾರೋಗ್ಯದಿಂದಾಗಿ ನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದ ತಿಮ್ಮಕ್ಕನವರಿಗೆ ಗೌರವಯುತ ವಿದಾಯ ಹೇಳಲು ಸರ್ಕಾರ ಮತ್ತು ಸಾರ್ವಜನಿಕರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ತಮ್ಮ ಜೀವನವನ್ನು ಪರಿಸರ ಸೇವೆಗಾಗಿಯೇ ಮುಡಿಪಾಗಿಟ್ಟು, ನೂರಾರು ಮರಗಳನ್ನು ನೆಟ್ಟು ಪೋಷಿಸಿ 'ವೃಕ್ಷಮಾತೆ' ಎಂದು ಜಗತ್ತಿನಾದ್ಯಂತ ಪ್ರೀತಿ-ಗೌರವಕ್ಕೆ ಪಾತ್ರರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು (ಶನಿವಾರ) ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜ್ಞಾನಭಾರತಿ ಸಮೀಪದ ಕಲಾಗ್ರಾಮ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಶುಕ್ರವಾರ ವಯೋಸಹಜ ಅನಾರೋಗ್ಯದಿಂದಾಗಿ ನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದ ತಿಮ್ಮಕ್ಕನವರಿಗೆ ಗೌರವಯುತ ವಿದಾಯ ಹೇಳಲು ಸರ್ಕಾರ ಮತ್ತು ಸಾರ್ವಜನಿಕರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ
ಸಾರ್ವಜನಿಕರು, ಗಣ್ಯರು ಮತ್ತು ಪರಿಸರ ಪ್ರೇಮಿಗಳು ತಮ್ಮ ನೆಚ್ಚಿನ 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಲು ಅನುಕೂಲವಾಗುವಂತೆ, ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 7.30 ರಿಂದ 10.30 ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಈ ವ್ಯವಸ್ಥೆ ಮಾಡಲಾಗಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಕುರಿತು ಮಾಹಿತಿ ನೀಡಿದ್ದರು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ಹಸಿರು ತಾಯಿಯ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಹುಟ್ಟೂರಿನಿಂದ ರಾಜಧಾನಿಯವರೆಗೆ ಅಂತಿಮ ಯಾತ್ರೆ
ನಿಧನದ ನಂತರ, ತಿಮ್ಮಕ್ಕ ಅವರ ಪಾರ್ಥಿವ ಶರೀರವನ್ನು ಮೊದಲು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಅವರ ಸ್ವಗ್ರಾಮ ಹುಲಿಕಲ್ಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಗ್ರಾಮಸ್ಥರು ಮತ್ತು ಕುಟುಂಬದವರು ಅಂತಿಮ ದರ್ಶನ ಪಡೆದರು. ನಂತರ, ಅವರ ಸಾಕುಮಗ ಉಮೇಶ್ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು, ರಾತ್ರಿಯಿಡೀ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಿಗ್ಗೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಯಿತು.
ಹಸಿರು ತಾಯಿಯ ಅಮರ ಸೇವೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ, ಮಕ್ಕಳಿಲ್ಲದ ಕೊರಗನ್ನು ಮರೆಯಲು ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ ಸೇರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಹುಲಿಕಲ್ ಮತ್ತು ಕುದೂರು ನಡುವಿನ 4 ಕಿಲೋಮೀಟರ್ ರಸ್ತೆಯುದ್ದಕ್ಕೂ 385ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು, ಮೈಲುಗಟ್ಟಲೆ ದೂರದಿಂದ ನೀರು ಹೊತ್ತು ತಂದು, ಜಾನುವಾರುಗಳಿಂದ ರಕ್ಷಿಸಿ, ಮಕ್ಕಳಿಗಿಂತ ಹೆಚ್ಚಾಗಿ ಪೋಷಿಸಿದ್ದರು. ಅವರ ಈ ಅನನ್ಯ ಪರಿಸರ ಸೇವೆಗೆ ಭಾರತ ಸರ್ಕಾರದ ಪದ್ಮಶ್ರೀ, ನಾಡೋಜ ಪ್ರಶಸ್ತಿ, ರಾಷ್ಟ್ರೀಯ ಪೌರ ಪ್ರಶಸ್ತಿ ಸೇರಿದಂತೆ ನೂರಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳು ಸಂದಿವೆ. ‘ವೃಕ್ಷಮಾತೆ’ಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದಾದ್ಯಂತ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

