ಕರ್ನಾಟಕದ ಮೂರನೇ ಅತಿದೊಡ್ಡ ಮಮದಾಪುರ ಕೆರೆಗೆ ಪುನಶ್ಚೇತನ
x

ಕರ್ನಾಟಕದ ಮೂರನೇ ಅತಿದೊಡ್ಡ ಮಮದಾಪುರ ಕೆರೆಗೆ ಪುನಶ್ಚೇತನ


ರಾಜ್ಯದ 3ನೇ ಅತಿದೊಡ್ಡ ಕೆರೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಐತಿಹಾಸಿಕ ಮಮದಾಪುರ ಕೆರೆಯನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಕೋಕಾಕೋಲಾ ಕಂಪನಿ ಮುಂದೆ ಬಂದಿದೆ. 16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಿತವಾಗಿರುವ ಮಮದಾಪುರ ಕೆರೆಯು ರಾಜ್ಯದ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿದ್ದು, 674 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರಿಗೆ ಕೋಕೋಕೋಲಾ ಕಂಪೆನಿ ಈ ಭರವಸೆ ನೀಡಿದೆ. ಶುಕ್ರವಾರ ಈ ಬಗ್ಗೆ ಕಂಪನಿಯ ಉನ್ನತಾಧಿಕಾರಿಗಳಾದ ಹಿಮಾಂಶು ಪ್ರಿಯದರ್ಶಿ ಮತ್ತು ಮುಕುಂದ್ ತ್ರಿವೇದಿ ಸಚಿವರನ್ನು ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.

ಕೋಕಾಕೋಲಾ ಕಂಪನಿಯು ಕೆರೆಗೆ ನೀರನ್ನು ಹೊತ್ತು ತರುವ ಮುಖ್ಯ ನಾಲೆಯ ಹೂಳೆತ್ತಿ, ಬಾಂದಾರವನ್ನು ನಿರ್ಮಿಸಲಿದೆ. ಜೊತೆಗೆ ಕೆರೆಯ ಏರಿ ಬಲಪಡಿಸುವಿಕೆ, ಬೇಲಿ, ಪಾದಚಾರಿ ಮಾರ್ಗ ಮತ್ತು ಮಕ್ಕಳು ಆಟವಾಡುವ ಜಾಗವನ್ನು ಮಾಡಿಕೊಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೆರೆಯ ಸುತ್ತಮುತ್ತ ಹಸಿರಿನಿಂದ ತುಂಬಿರುವ 1,654 ಎಕರೆ ಅರಣ್ಯವಿದೆ. ಕೆರೆ ಪುನಶ್ಚೇತನದ ಬಳಿಕ ಈ ಸ್ಥಳವು ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಮತ್ತು ಎರಡನೇ ಅತಿ ದೊಡ್ಡ ಕೆರೆಗಳು

ರಾಜ್ಯದ ಮೊದಲ ಅತಿ ದೊಡ್ಡ ಕೆರೆ ಸೂಳೆಕೆರೆ. ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿರುವ ಒಂದು ಕೆರೆ. ಈ ಕೆರೆ ಶಾಂತಿ ಸಾಗರ ಎಂಬ ಮತ್ತೊಂದು ಹೆಸರಿನಿಂದಲೂ ಜನಪ್ರಿಯವಾಗಿದೆ. 12 ನೇ ಶತಮಾನದಲ್ಲಿ ಕಟ್ಟಲಾದ ಈ ಕೆರೆಯನ್ನು ಹರಿದ್ರಾವತಿ ನದಿಗೆ (ಹಿರೇ ಹಳ್ಳ) ಅಡ್ಡವಾಗಿ ಕಟ್ಟಲಾಗಿದೆ.

ರಾಜ್ಯದ ಎರಡನೇ ಅತಿದೊಡ್ಡ ಕೆರೆ ಅಯ್ಯನಕೆರೆ (ಮದಗದ ಕೆರೆ) ಆಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯನಪಟ್ಟಣದ ಬಳಿ ಇದೆ. ಇದು ಚಿಕ್ಕಮಗಳೂರಿನಿಂದ ಸುಮಾರು ೨೫ ಕಿ. ಮೀ ದೂರದಲ್ಲಿದೆ ಹಾಗು ಚಂದ್ರ ದ್ರೋಣ ಪರ್ವತದ ತಪ್ಪಲಿನಲ್ಲಿ ಇದೆ.

Read More
Next Story