ರೇವಂತ್ ರೆಡ್ಡಿ ಎಚ್ಚರಿಕೆ, ರಾಜಣ್ಣ ವಜಾ: ಹೈಕಮಾಂಡ್​ನಿಂದ​ ರಾಜ್ಯ ನಾಯಕರಿಗೆ ಹೊರಟಿತೇ ಕಠಿಣ ಸಂದೇಶ?
x

ರೇವಂತ್ ರೆಡ್ಡಿ ಎಚ್ಚರಿಕೆ, ರಾಜಣ್ಣ ವಜಾ: ಹೈಕಮಾಂಡ್​ನಿಂದ​ ರಾಜ್ಯ ನಾಯಕರಿಗೆ ಹೊರಟಿತೇ ಕಠಿಣ ಸಂದೇಶ?

ಮತದಾರರ ಪಟ್ಟಿ ಅಕ್ರಮ ನಡೆದಾಗ ನಮ್ಮದೇ ಸರ್ಕಾರವಿತ್ತು' ಎಂಬ ರಾಜಣ್ಣ ಅವರ ಹೇಳಿಕೆಯು, ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಹಿನ್ನಡೆ ಉಂಟುಮಾಡಿತ್ತು.


ರಾಹುಲ್ ಗಾಂಧಿಯವರ ದೃಷ್ಟಿಕೋನವನ್ನು ವಿರೋಧಿಸಿದರೆ ಅವರ ರಾಜಕೀಯ ಜೀವನಕ್ಕೆ ಅಂತ್ಯವಾಗಲಿದೆ. ಇದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇತ್ತೀಚೆಗೆ ನೀಡಿದ್ದ ಖಡಕ್ ಎಚ್ಚರಿಕೆ. ಈ ಹೇಳಿಕೆಯ ಬೆನ್ನಲ್ಲೇ, ಇತ್ತ ಕರ್ನಾಟಕದಲ್ಲಿ, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪಕ್ಷಕ್ಕೆ ಪದೇ ಪದೇ ಮುಜುಗರ ತರುತ್ತಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರ. ಈ ಎರಡೂ ಘಟನೆಗಳು ಮೇಲ್ನೋಟಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಪ್ರತ್ಯೇಕ ರಾಜಕೀಯ ಬೆಳವಣಿಗೆಗಳಂತೆ ಕಂಡರೂ, ಇವುಗಳ ಹಿಂದೆ ಕಾಂಗ್ರೆಸ್ ಹೈಕಮಾಂಡ್ ತನ್ನ ರಾಜ್ಯ ನಾಯಕರಿಗೆ ರವಾನಿಸುತ್ತಿರುವ ಒಂದು ಕಠಿಣ ಸಂದೇಶ ಅಡಗಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿವೆ.

ರಾಜಣ್ಣ ರಾಜೀನಾಮೆಗೆ ಕಾರಣವಾದದ್ದು ಏನು?

'ಮತದಾರರ ಪಟ್ಟಿ ಅಕ್ರಮ ನಡೆದಾಗ ನಮ್ಮದೇ ಸರ್ಕಾರವಿತ್ತು' ಎಂಬ ರಾಜಣ್ಣ ಅವರ ಹೇಳಿಕೆಯು, ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಹಿನ್ನಡೆ ಉಂಟುಮಾಡಿತ್ತು. ಆದರೆ, ಇದು ಕೇವಲ ಒಂದು ಹೇಳಿಕೆಯ ಪರಿಣಾಮವಾಗಿರಲಿಲ್ಲ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ, ಹನಿಟ್ರ್ಯಾಪ್ ಪ್ರಕರಣದ ಪ್ರಸ್ತಾಪ, ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಅಧಿಕೃತ ಸಭೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದು ಸೇರಿದಂತೆ, ರಾಜಣ್ಣ ಅವರ ಹಲವು ನಡೆಗಳು ಹೈಕಮಾಂಡ್​ನ ಕೆಂಗಣ್ಣಿಗೆ ಗುರಿಯಾಗಿತ್ತು. ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸಿ, ಸರ್ಕಾರದ ಮತ್ತು ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿದ್ದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್ ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು.

ರೇವಂತ್ ರೆಡ್ಡಿ ಹೇಳಿಕೆಯ ಅರ್ಥವೇನು?

ದೆಹಲಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ನಡೆದ ಪ್ರತಿಭಟನೆಯಲ್ಲಿ ರೇವಂತ್ ರೆಡ್ಡಿ ಅವರು, "ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ, ರಾಹುಲ್ ಗಾಂಧಿ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದರೆ ಅವರ ರಾಜಕೀಯ ಭವಿಷ್ಯ ಶೂನ್ಯವಾಗಲಿದೆ," ಎಂದು ಗುಡುಗಿದ್ದರು. ಈ ಹೇಳಿಕೆಯು, ರಾಹುಲ್ ಗಾಂಧಿಯವರ ನಾಯಕತ್ವವನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಬೇಕು ಮತ್ತು ಅವರ ಮಾತನ್ನು ಮೀರಿ ಯಾರೂ ನಡೆಯುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿತ್ತು. ಇದು ಕೇವಲ ತೆಲಂಗಾಣಕ್ಕೆ ಸೀಮಿತವಾದ ಹೇಳಿಕೆಯಾಗಿರದೆ, ಇಡೀ ದೇಶದ ಕಾಂಗ್ರೆಸ್ ನಾಯಕರಿಗೆ ನೀಡಿದ ಪರೋಕ್ಷ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗಿತ್ತು.

ಎರಡೂ ಘಟನೆಗಳ ನಡುವಿನ ಸಂಬಂಧ

ರೇವಂತ್ ರೆಡ್ಡಿ ಅವರ ಎಚ್ಚರಿಕೆಯ ಮಾತುಗಳು ಮತ್ತು ಕೆ.ಎನ್. ರಾಜಣ್ಣ ಅವರ ರಾಜೀನಾಮೆ, ಇವೆರಡನ್ನೂ ಒಟ್ಟಾಗಿ ನೋಡಿದಾಗ, ಕಾಂಗ್ರೆಸ್ ಹೈಕಮಾಂಡ್ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದು ಸ್ಪಷ್ಟವಾಗುತ್ತದೆ. ಲೋಕಸಭಾ ಚುನಾವಣೆಯ ನಂತರ, ಪಕ್ಷದಲ್ಲಿ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯ ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸು ಅಥವಾ ಆಂತರಿಕ ಬಣ ರಾಜಕೀಯಕ್ಕಾಗಿ ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಎರಡೂ ಘಟನೆಗಳು ಸಾರಿ ಹೇಳುತ್ತಿವೆ.

ರೇವಂತ್ ರೆಡ್ಡಿ ಅವರ ಮಾತುಗಳು ಒಂದು ರೀತಿಯಲ್ಲಿ ಸೈದ್ಧಾಂತಿಕ ಎಚ್ಚರಿಕೆಯಾಗಿದ್ದರೆ, ರಾಜಣ್ಣ ಅವರ ವಜಾ ಪ್ರಕ್ರಿಯೆಯು ಆ ಎಚ್ಚರಿಕೆಯನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದಕ್ಕೆ ಒಂದು ಪ್ರಾಯೋಗಿಕ ಉದಾಹರಣೆ.

Read More
Next Story