ಪೂರ್ವ ಬೆಂಗಳೂರಿನ ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿ: ವರ್ಷಗಳ ನಂತರ ದುರಸ್ತಿ ಶುರು
x

ರಸ್ತೆ ಗುಂಡಿ

ಪೂರ್ವ ಬೆಂಗಳೂರಿನ ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿ: ವರ್ಷಗಳ ನಂತರ ದುರಸ್ತಿ ಶುರು

ಮಹದೇವಪುರದಲ್ಲಿ ಹಾನಿಗೊಳಗಾದ ಇನ್ನೂ ಹಲವು ರಸ್ತೆಗಳಿಗೆ ಡಾಂಬರು ಹಾಕಲು ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದಿದ್ದಾರೆ.


Click the Play button to hear this message in audio format

ವರ್ಷಗಳಿಂದ ಹದಗೆಟ್ಟು, ವಾಹನ ಸವಾರರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆ ನೀಡುತ್ತಿದ್ದ ಪೂರ್ವ ಬೆಂಗಳೂರಿನ ಮೂರು ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯವನ್ನು ನಗರ ನಿಗಮವು ಕೊನೆಗೂ ಕೈಗೆತ್ತಿಕೊಂಡಿದೆ. ಪಣತ್ತೂರು ರಸ್ತೆ, ಬಳಗೆರೆ ಮುಖ್ಯ ರಸ್ತೆ ಮತ್ತು ವಿಬ್ಗಯೋರ್ ಶಾಲಾ ರಸ್ತೆಗಳಲ್ಲಿ ಕಾಮಗಾರಿಗಳು ಚುರುಕುಗೊಂಡಿದ್ದು, ಸ್ಥಳೀಯರಲ್ಲಿ ಕೊಂಚ ನಿರಾಳತೆ ಮೂಡಿದೆ.

ನಿವಾಸಿಗಳ ನಿರಂತರ ದೂರು ಮತ್ತು ಆಕ್ರೋಶದ ನಂತರ, ನಿಗಮವು ಪಣತ್ತೂರು ರಸ್ತೆ ಮತ್ತು ವಿಬ್ಗಯೋರ್ ಶಾಲಾ ರಸ್ತೆಗಳಿಗೆ ಡಾಂಬರೀಕರಣ ನಡೆಸುತ್ತಿದೆ. ಇದೇ ವೇಳೆ, ಬಳಗೆರೆ ಮುಖ್ಯ ರಸ್ತೆಯಲ್ಲಿ ಹೆಚ್ಚು ಬಾಳಿಕೆ ಬರುವ 'ವೈಟ್-ಟಾಪಿಂಗ್' ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಮರ್ಪಕ ರಸ್ತೆಬದಿಯ ಚರಂಡಿಗಳ ಕೊರತೆ ಮತ್ತು ರಸ್ತೆಗಳ ಕಳಪೆ ಸ್ಥಿತಿಯಿಂದಾಗಿ ಈ ಪ್ರದೇಶಗಳಲ್ಲಿ ಸಂಚಾರ ದುಸ್ತರವಾಗಿತ್ತು.

ಕಂಪನಿಗಳ ಆಕ್ರೋಶ ಮತ್ತು ಸರ್ಕಾರದ ಪ್ರತಿಕ್ರಿಯೆ

ಇತ್ತೀಚೆಗೆ ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. 'ಬ್ಲ್ಯಾಕ್‌ಬಕ್‌' ಎಂಬ ಲಾಜಿಸ್ಟಿಕ್ಸ್ ಕಂಪನಿಯ ಸಿಇಒ ರಾಜೇಶ್ ಯಬಾಜಿ, ಹೊರ ವರ್ತುಲ ರಸ್ತೆಯ ಬೆಳ್ಳಂದೂರು ಬಳಿಯ ಕಚೇರಿಗೆ ಬರಲು ತಮ್ಮ ಉದ್ಯೋಗಿಗಳು ಗುಂಡಿ ಬಿದ್ದ ರಸ್ತೆ ಮತ್ತು ದೂಳಿನಿಂದಾಗಿ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ದುಸ್ಥಿತಿಯಿಂದಾಗಿ ಕಂಪನಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸುವುದಾಗಿಯೂ ಅವರು ಎಚ್ಚರಿಸಿದ್ದರು.

ಈ ಪೋಸ್ಟ್ ತೀವ್ರ ಚರ್ಚೆಗೆ ಗ್ರಾಸವಾಗಿ, ಐಟಿ ದಿಗ್ಗಜರಾದ ಮೋಹನ್‌ದಾಸ್ ಪೈ, ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಈ ಅವಕಾಶವನ್ನು ಬಳಸಿಕೊಂಡು, 'ಬ್ಲ್ಯಾಕ್‌ಬಕ್‌' ಸಂಸ್ಥೆಗೆ ತಮ್ಮ ರಾಜ್ಯಕ್ಕೆ ಆಹ್ವಾನ ನೀಡಿದ್ದರು.

ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಸರ್ಕಾರಕ್ಕೆ ಯಾರೂ ಬೆದರಿಕೆ ಹಾಕಲು ಸಾಧ್ಯವಿಲ್ಲ. ಹೋಗುವವರನ್ನು ನಾವು ತಡೆಯುವುದಿಲ್ಲ. ನಮ್ಮ ಸೌಲಭ್ಯಗಳಿಂದ ತೃಪ್ತರಾಗದಿದ್ದರೆ ಅವರು ಹೋಗಬಹುದು," ಎಂದು ಖಡಕ್ ಉತ್ತರ ನೀಡಿದ್ದರು. ನಂತರ, 'ಬ್ಲ್ಯಾಕ್‌ಬಕ್‌' ಸಿಇಒ ರಾಜೇಶ್ ಯಬಾಜಿ ಸ್ಪಷ್ಟನೆ ನೀಡಿ, ತಮ್ಮ ಕಾರ್ಯಾಚರಣೆ ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮತ್ತು ಸರ್ಕಾರದೊಂದಿಗೆ ಕೆಲಸ ಮಾಡಲು ಕಂಪನಿ ಬದ್ಧವಾಗಿದೆ ಎಂದು ತಿಳಿಸಿದ್ದರು.

ಹೆಚ್ಚುವರಿ ಅನುದಾನದ ನಿರೀಕ್ಷೆ

ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಜೊತೆಗೆ, ಮಹದೇವಪುರ ವಲಯದ ಮುನ್ನೇಕೊಳಲ ಮತ್ತು 150 ಅಡಿ ಸಿಡಿಪಿ ರಸ್ತೆಗಳಂತಹ ಇತರ ಹಾನಿಗೊಳಗಾದ ರಸ್ತೆಗಳ ದುರಸ್ತಿಗೂ ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಮಹದೇವಪುರ ಕಾರ್ಯಪಡೆಯ ಸದಸ್ಯ ಕ್ಲೆಮೆಂಟ್ ಜಯಕುಮಾರ್ ಹೇಳಿದ್ದಾರೆ. ಸಂಚಾರ ದಟ್ಟಣೆ ತಗ್ಗಿಸಲು ಈ ರಸ್ತೆಗಳನ್ನು ವರ್ತೂರಿನವರೆಗೆ ಅಗಲೀಕರಣ ಮಾಡಬೇಕೆಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದೆ.

Read More
Next Story