ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಪೊಲೀಸ್‌ ಅಧಿಕಾರಿ ಶಾಮೀಲು? ಕೋಟಿ, ಕೋಟಿ ಡೀಲ್‌?
x

ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಪೊಲೀಸ್‌ ಅಧಿಕಾರಿ ಶಾಮೀಲು? ಕೋಟಿ, ಕೋಟಿ ಡೀಲ್‌?


ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣವನ್ನು ಮುಚ್ಚಿಹಾಕಲು ನಟ ದರ್ಶನ್‌ ಪೊಲೀಸ್‌ ಅಧಿಕಾರಿ, ವೈದ್ಯರು ಸೇರಿದಂತೆ ಕೆಲವರಿಗೆ ಕೋಟಿ ಕೋಟಿ ಡೀಲ್‌ ಮಾಡಿದ್ದರು ಎಂಬ ವಿಷಯ ತನಿಖೆಯಲ್ಲಿ ಬಹಿರಂಗವಾಗಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪುಸಲಾಯಿಸಿ ಕರೆತಂದ ಬಳಿಕ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಹೊಡೆದು ಸಾಯಿಸಿದ ಬಳಿಕ ಸ್ವತಃ ದರ್ಶನ್‌ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಶವ ವಿಲೇವಾರಿಗೆ ಸಲಹೆ ಪಡೆದುಕೊಂಡಿದ್ದರು.

ಈ ವೇಳೆ ಆ ಅಧಿಕಾರಿ, ತಮ್ಮ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆಡೆ ಶವ ವಿಲೇವಾರಿ ಮಾಡಿ ಎಂದು ದರ್ಶನ್‌ ಅವರಿಗೆ ಐಡಿಯಾ ಕೊಟ್ಟು ಸಹಕರಿಸಿದ್ದರು. ಅದಕ್ಕಾಗಿ ಕೋಟಿ ಕೋಟಿ ಡೀಲ್‌ ಮಾತುಕತೆ ಕೂಡ ನಡೆದಿತ್ತು ಎಂಬ ಅಂಶ ಪೊಲೀಸರ ತನಿಖೆ ವೇಳೆ ಹೊರಬಿದ್ದಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಶವ ಪತ್ತೆಯಾದಲ್ಲಿ ಆ ಶವ ಪರೀಕ್ಷೆಯ ವರದಿಯನ್ನು ಕೂಡ ಹೇಗೆ ತಮಗೆ ಅನುಕೂಲಕರವಾಗಿ ತಿದ್ದುಪಡಿ ಮಾಡಿಸುವುದು ಎಂಬ ಬಗ್ಗೆಯೂ ದರ್ಶನ್‌ ಹುನ್ನಾರ ನಡೆಸಿದ್ದರು. ಅದಕ್ಕಾಗಿ ಶವ ಎಸೆಯಲು ಯೋಜಿಸಿದ್ದ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಮಾತನಾಡಿ ಒಂದು ಕೋಟಿ ರೂಪಾಯಿಗೆ ಡೀಲ್‌ ಮಾಡಿರುವ ಸಂಗತಿ ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.

ಕೊಲೆ ಆರೋಪ ಹೊರಲು ಮೂವತ್ತು ಲಕ್ಷ ಡೀಲ್‌

ರೇಣುಕಾಸ್ವಾಮಿ ಹತ್ಯೆಯ ಬೆನ್ನಲ್ಲೇ ನಟ ದರ್ಶನ್‌, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ನಾಲ್ವರು ಹುಡುಗರಿಗೆ ಡೀಲ್‌ ಕೊಟ್ಟಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ.

ಜನರಿಗೆ ಕಾಣುವಂತೆ ಶವವನ್ನು ಮೋರಿಗೆ ಎಸೆಯುವುದು, ಅದು ಪೊಲೀಸರ ಗಮನಕ್ಕೆ ಬಂದು ತನಿಖೆ ಆರಂಭಿಸಿದ ಬಳಿಕ ಠಾಣೆಗೆ ಹೋಗಿ ಶರಣಾಗಿ ಆ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಳ್ಳುವುದು. ಹಣಕಾಸು ವಿಷಯಕ್ಕಾಗಿ ಕೊಲೆ ಮಾಡಿರುವುದಾಗಿ ಕಥೆ ಕಟ್ಟುವುದು ಸೇರಿದಂತೆ ಎಲ್ಲಾ ʼಪ್ಯಾಕೇಜ್‌ʼ ಡೀಲ್‌ ಕೊಟ್ಟಿದ್ದ ದರ್ಶನ್‌, ಅದಕ್ಕಾಗಿ ಆ ನಾಲ್ವರಿಗೆ ಬರೋಬ್ಬರಿ ಮೂವತ್ತು ಲಕ್ಷ ರೂ. ಡೀಲ್‌ ಫೈನಲ್‌ ಮಾಡಿದ್ದ ಎಂದು ವರದಿಯಾಗಿದೆ.

ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊರಬೀಳುತ್ತಿರುವ ಈ ಸಂಗತಿಗಳು, ಕೊಲೆ ಮಾಡಿರುವುದೇ ಅಲ್ಲದೆ, ಅದನ್ನು ಮುಚ್ಚಿಹಾಕಲು ಎಲ್ಲಾ ಸಂಚು ರೂಪಿಸಲಾಗಿತ್ತು ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಕೂಡ ಬಹಿರಂಗಪಡಿಸಿವೆ.

Read More
Next Story