
ಸಚಿವ ಹೆಚ್.ಸಿ. ಮಹದೇವಪ್ಪ
ಧಾರ್ಮಿಕ ಆಚರಣೆಗಳಿಗೆ ರಾಜಕೀಯ ಬಣ್ಣ ಬೇಡ: ಸಚಿವ ಎಚ್.ಸಿ. ಮಹದೇವಪ್ಪ ಮನವಿ
ಎಲ್ಲರೂ ಕೋಮು ಸೌಹಾರ್ದತೆಯನ್ನು ಕಾಪಾಡುವುದು ಅತ್ಯಗತ್ಯ. ಸಾರ್ವಜನಿಕ ಜೀವನದಲ್ಲಿರುವವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಜೀವನದಲ್ಲಿ ಚೆಲ್ಲಾಟವಾಡಬಾರದು ಎಂದು ಎಚ್.ಸಿ. ಮಹದೇವಪ್ಪ ತಿಳಿಸಿದರು.
ಸಾರ್ವಜನಿಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಸಾಮಾಜಿಕ ಜವಾಬ್ದಾರಿ ಅರಿತು ವರ್ತಿಸಬೇಕು. ಕೋಮು ಭಾವನೆ ಕೆರಳಿಸುವುದು, ಉದ್ರೇಕಕಾರಿ ಭಾಷಣ ಮಾಡುವುದು ಮತ್ತು ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸುವುದು ಸರಿಯಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದು. ಕೋಮು ಸೌಹಾರ್ದತೆ ಕಾಪಾಡುವುದು ಅತ್ಯಗತ್ಯ. ಸಾರ್ವಜನಿಕ ಜೀವನದಲ್ಲಿರುವವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಜೀವದ ಜತೆ ಚೆಲ್ಲಾಟವಾಡಬಾರದು ಎಂದು ಹೇಳಿದ್ದಾರೆ.
ಧಾರ್ಮಿಕ ತೀವ್ರವಾದ, ಕೋಮು ಪ್ರಚೋದನೆ ಪ್ರವೃತ್ತಿ ಯಾವುದೇ ಧರ್ಮದವರು ಮಾಡಿದರೂ ಖಂಡನೀಯ. ಒಂದು ಧಾರ್ಮಿಕ ಆಚರಣೆಯನ್ನ ರಾಜಕೀಯ ವಿಷಯವಾಗಿ ಮಾಡಿ ಗೊಂದಲ ಉಂಟುಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ಅವರು, 2016 ರಿಂದ 2018 ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲು ಹೂಡಿದ ತಂತ್ರ ಮತ್ತು ಕುತಂತ್ರವೇ, ‘‘ಹಿಂದೂ ವಿರೋಧಿ ಸರ್ಕಾರ’’ ಎಂಬುದು ಎಂದು ಪೋಸ್ಟ್ ಮಾಡಿದ್ದಾರೆ.