
ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರನ್ನು ಸಿಎಂ ಹಾಗೂ ಡಿಸಿಎಂ ಅಭಿನಂದಿಸಿದರು
RCB Champion | ಆರ್ಸಿಬಿ ವಿಜಯೋತ್ಸವ ದುರಂತಕ್ಕೆ ರಾಜಕೀಯ ಮೇಲಾಟವೇ ಕಾರಣ? ಚರ್ಚೆ ಶುರು
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ 'ಕ್ರೆಡಿಟ್ ಪಾಲಿಟಿಕ್ಸ್' ಕಾರಣದಿಂದಲೇ ಅಮಾಯಕರ ಪ್ರಾಣ ಹೋಗಿದೆ ಎಂಬ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆರೋಪಗಳು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿವೆ. ಮಹಾನ್ ನಾಯಕರೊಬ್ಬರು ತಮ್ಮ ರಾಜಕೀಯ ಲಾಭಕ್ಕಾಗಿ ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಐಪಿಎಲ್ -2025 ಟ್ರೋಫಿ ಗೆದ್ದ ಐತಿಹಾಸಿಕ ಸಂಭ್ರಮವು ದುರಂತಕ್ಕೆ ಕಾರಣವಾಗಿದೆ. ಆದರೆ, ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಸರ್ಕಾರದ ವೈಫಲ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡರೂ ಘಟನೆಯ ಹಿಂದೆ ರಾಜಕೀಯ ಮೇಲಾಟ ಇರುವ ಕುರಿತ ಚರ್ಚೆಗಳು ಜೋರಾಗಿವೆ.
ಬುಧವಾರ(ಜೂ.4) ಬೆಂಗಳೂರಿನ ವಿಧಾನಸೌಧ ಮತ್ತು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಏಕಕಾಲಕ್ಕೆ ಕಾರ್ಯಕ್ರಮ ಆಯೋಜಿಸಿದ್ದರಿಂದ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಗಿ ಸುಮಾರು **ಹತ್ತು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಆರ್ಸಿಬಿ ತಂಡದ ಸಂಭ್ರಮದಲ್ಲಿ ಇಡೀ ರಾಜ್ಯವೇ ಮುಳುಗಿರುವಾಗ ಸಾವಿನ ಸೂತಕದ ಛಾಯೆ ಆವರಿಸಿರುವುದು ದಿಗ್ಬ್ರಮೆ ಮೂಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ 'ಕ್ರೆಡಿಟ್ ಪಾಲಿಟಿಕ್ಸ್' ಕಾರಣದಿಂದಲೇ ಅಮಾಯಕರ ಪ್ರಾಣ ಹೋಗಿದೆ ಎಂಬ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆರೋಪಗಳು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿವೆ. ಮಹಾನ್ ನಾಯಕರೊಬ್ಬರು ತಮ್ಮ ರಾಜಕೀಯ ಲಾಭಕ್ಕಾಗಿ ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ಆರೋಪಗಳನ್ನು ಪುಷ್ಠೀಕರಿಸುವ ನಿದರ್ಶನಗಳು ಗೋಚರಿಸುತ್ತಿರುವುದು ಇಂತದ್ದೊಂದು ಚರ್ಚೆಗೆ ಕಾರಣವಾಗಿದೆ. ಆರ್ಸಿಬಿ ತಂಡವು ಮಂಗಳವಾರ ರಾತ್ರಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿತು. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಜೂನ್ 4ರಂದೇ ಆರ್ಸಿಬಿ ತಂಡವನ್ನು ಬೆಂಗಳೂರಿಗೆ ಕರೆಸಿ, ವಿಜಯೋತ್ಸವ ಮೆರವಣಿಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಹಾನ್ ನಾಯಕರೇ ನಿಗದಿಪಡಿಸಿದ್ದರು. ಬುಧವಾರ ಬೆಳಿಗ್ಗೆ ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಪಡಿಸಲಾಯಿತು.
ಪ್ರಶಸ್ತಿ ಗೆದ್ದು ಒಂದೆರಡು ದಿನ ವಿಶ್ರಾಂತಿ ಬಳಿಕ ವಿಜಯೋತ್ಸವ ಆಚರಿಸೋಣ ಎಂದುಕೊಂಡಿದ್ದ ಆರ್ಸಿಬಿ ಆಟಗಾರರಿಗೆ ದಿಢೀರ್ ಬುಲಾವ್ ನೀಡಿ, ಅಹಮದಾಬಾದ್ನಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಕರೆಸಿಕೊಳ್ಳಲಾಯಿತು. ಆರ್ಸಿಬಿ ವಿಜಯೋತ್ಸವವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಮುಂದಾದರು. ಅಲ್ಲದೇ ಎಚ್ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಆರ್ಸಿಬಿ ಆಟಗಾರರನ್ನು ವಿಧಾನಸೌಧಕ್ಕೆ ಕರೆತಂದರು ಎಂದು ಹೇಳಲಾಗಿದೆ.
ವಿಧಾನಸೌಧದ ಬಳಿ ವಿಜಯೋತ್ಸವ ಆಚರಣೆಗೆ ಪೊಲೀಸ್ ಅಧಿಕಾರಿಗಳು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಆ ಮಹಾನ್ ನಾಯಕ ಇದೇ ಅವಕಾಶ 'ಸದುಪಯೋಗಪಡಿಸಿಕೊಳ್ಳುವುದಕ್ಕೆ' ಕಾರ್ಯಕ್ರಮ ಆಯೋಜಿಸಲು ಮುಂದಾದರು ಎಂಬ ಆರೋಪವಿದೆ.
ಆರ್ಸಿಬಿ ಆಟಗಾರರು ಬೆಳಿಗ್ಗೆ 10 ಗಂಟೆಗೆ ಅಹಮದಾಬಾದ್ನಿಂದ ಹೊರಟು, ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಗೆ ಹೋದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರಿಗೂ ಹೂಗುಚ್ಛ ನೀಡಿ ಸ್ವಾಗತಿಸಿದ್ದರು. ನಂತರ ಆಟಗಾರರು ವಿಧಾನಸೌಧ ಕಡೆಗೆ ಬಂದಿದ್ದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟಗಾರರಿಗೆ ಸನ್ಮಾನ ಮಾಡಿದ್ದರು.
ವಿಧಾನ ಸೌಧದಲ್ಲಿ ಸನ್ಮಾನ ಸಮಾರಂಭ ಮುಗಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಜನರು ಸಾಗುವಾಗ ಜನಸಂದಣಿಯಿಂದಾಗಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತು.
ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ದಿನ ದೊಡ್ಡ ಸಂಖ್ಯೆಯ ಜನರನ್ನು ಒಟ್ಟುಗೂಡಿಸುವುದರಿಂದ ಉಂಟಾಗಬಹುದಾದ ಗೊಂದಲದ ಬಗ್ಗೆ ಸರ್ಕಾರಕ್ಕೆ ಸೂಕ್ತ ಗಮನವಿರಲಿಲ್ಲವೇ ಎಂಬ ಪ್ರಶ್ನೆ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲೂ ಈ ಕುರಿತ ಚರ್ಚೆ ಆರಂಭವಾಗಿದ್ದು, ಆರ್ಸಿಬಿ ತಂಡದ ಸನ್ಮಾನ ಕಾರ್ಯಕ್ರಮವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಒಬ್ಬ ಬಲಿಷ್ಠ ವ್ಯಕ್ತಿಯ ಅಥವಾ ಮಹಾನ್ ನಾಯಕನ ಆದೇಶದಿಂದ ಆಯೋಜನೆಗೊಂಡಿತು. ಅವರು ಈ ಸಂದರ್ಭವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸಿದ್ದರಿಂದ ಅಮಾಯಕ ಜನರು ಬಲಿಯಾದರು ಎಂದು ಆರೋಪಿಸಲಾಗಿದೆ.
ಜನಸಂದಣಿ ನಿಯಂತ್ರಿಸಲು ಸೂಕ್ತ ಭದ್ರತಾ ವ್ಯವಸ್ಥೆ ಮಾಡದಿರುವುದು ಈ ದುರಂತಕ್ಕೆ ಕಾರಣವಾಯಿತು ಎಂದು ಹಲವರು ಟೀಕಿಸಿದ್ದಾರೆ. ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ತುಂಬಿದ್ದ ಜನಸಂದಣಿಯನ್ನು ನಿರ್ವಹಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ಎಂದು ದೂರಲಾಗಿದೆ.
ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡುವುದಕ್ಕಿಂತಲೂ, ಅವರ ಅಭಿಮಾನಿಗಳನ್ನು ಖುಷಿಪಡಿಸುವುದೇ ಈ ಕಾರ್ಯಕ್ರಮದ ಹಿಂದಿರುವ ಮುಖ್ಯ ಉದ್ದೇಶವಾಗಿತ್ತು ಎಂಬಂತೆ ಭಾಸವಾಗಿದೆ. ಆದರೆ, ಈ ಉದ್ದೇಶವು ರಾಜಕೀಯ ಲಾಭಕ್ಕಾಗಿ ದುರ್ಬಳಕೆಯಾಗಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ.
ವಿಧಾನ ಸೌಧದ ಬಳಿ ಜಮಾಯಿಸಿದ್ದವರಲ್ಲಿ ಬಹಳಷ್ಟು ಜನರು ಆರ್ಸಿಬಿ ಅಭಿಮಾನಿಗಳಾಗಿರಲಿಲ್ಲ. ಅವರು ಆ ಮಹಾನ್ ನಾಯಕರ ತವರು ಕ್ಷೇತ್ರದವರಾಗಿದ್ದರು ಎಂಬುದು ಗೊತ್ತಾಯಿತು. ಈ ಕುರಿತು ಅಲ್ಲಿದ್ದವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿದಾಗ ನಾವು 'ಅಣ್ಣನಿಗೆ ಜೈಕಾರ ಹಾಕಲು ಬಂದಿರುವುದಾಗಿ' ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಘಟನೆಯು ಕಾಂಗ್ರೆಸ್ಗೆ ರಾಜಕೀಯವಾಗಿ ಮುಜುಗರ ಉಂಟು ಮಾಡಿದ್ದು, ಸರ್ಕಾರದ ಆಡಳಿತವನ್ನು ಪ್ರಶ್ನಿಸುವಂತಾಗಿದೆ. ಅಲ್ಲದೇ ಈ ದುರಂತವು ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸೂಕ್ತ ಭದ್ರತಾ ಕ್ರಮ ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.