
ಆರ್ಸಿಬಿ ವಿಜಯೋತ್ಸವ ದುರಂತ: ಸಿಎಂ, ಡಿಸಿಎಂ ವಿರುದ್ಧ ಪೊಲೀಸ್ ದೂರು ನೀಡಿದ ಸ್ನೇಹಮಯಿ ಕೃಷ್ಣ
ಪೊಲೀಸರು ಅಸಹಜ ಸಾವುಕರಣ ದಾಖಲಿಸಿಕೊಂಡಿದ್ದಾರೆ. ಇದು ಸರಿಯಾದ ರೀತಿಯಲ್ಲ. ಭಾರತೀಯ ದಂಡ ಸಂಹಿತೆ 106 ಅಡಿ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 106 (ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ತಮ್ಮ ದೂರಿನಲ್ಲಿ, ಆಡಳಿತಗಾರರು ಮತ್ತು ಆಯೋಜಕರು ಜನಸಂದಣಿಯ ನಿರ್ವಹಣೆ, ಸುರಕ್ಷತೆ ಮತ್ತು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ಅನೇಕ ನಿರಪರಾಧಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಆರ್ಸಿಬಿ ರಾಜ್ಯವನ್ನು ಪ್ರತಿನಿಧಿಸುವ ತಂಡವಲ್ಲ. ಇದು ಖಾಸಗಿ ಸಂಸ್ಥೆ. ಮದ್ಯ ತಯಾರಿಕಾ ಸಂಸ್ಥೆಯೊಂದರ ಮಾಲೀಕತ್ವದ ತಂಡ. ಸರ್ಕಾರವು ಯಾವುದೇ ಸೂಕ್ತ ಪೂರ್ವ ತಯಾರಿ ಇಲ್ಲದೆ, ಜನಸಂದಣಿಯ ನಿರ್ವಹಣೆಗೆ ಅಗತ್ಯ ಕ್ರಮವಿಲ್ಲದೆ, ತುರ್ತು ಕಾರ್ಯಕ್ರಮವನ್ನು ಆಯೋಜಿಸಿದ್ದೇ ದುರಂತಕ್ಕೆ ಕಾರಣ," ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಿಎಂ, ಡಿಸಿಎಂ ಈ ದುರಂತಕ್ಕೆ ಹೊಣೆಗಾರರಾಗಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಸರಿಯಾದ ರೀತಿಯಲ್ಲ. ಭಾರತೀಯ ದಂಡ ಸಂಹಿತೆ 106 ಅಡಿ ಪ್ರಕರಣ ದಾಖಲಿಸಬೇಕು.
ಈ ಪ್ರಕರಣವನ್ನು ಸಿದ್ದರಾಮಯ್ಯ ಮ್ಯಾಜಿಸ್ಟೀರಿಯಲ್ ತನಿಖೆಗೆ ಕೊಟ್ಟಿರುವುದು ಕಣ್ಣೊರೆಸುವ ತಂತ್ರ. ಇದರಿಂದ ಏನೂ ಪ್ರಯೋಜನವಿಲ್ಲ. ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಸ್ನೇಹಮಯಿ ಕೃಷ್ಣ ಅವರು, ದೂರಿನ ಪ್ರತಿಯನ್ನ ಮುಖ್ಯ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದೇನೆ ಎಂದರು.
ಸಾರ್ವಜನಿಕರ ಪ್ರತಿಕ್ರಿಯೆ
ಈ ದುರಂತದ ಬಳಿಕ ಸರ್ಕಾರದ ನಿರ್ವಹಣಾ ವೈಫಲ್ಯವನ್ನು ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿ ನಾಯಕರು, "ಮೃತ್ಯುಗಳು ವರದಿಯಾಗುತ್ತಿದ್ದರೂ, ಸರ್ಕಾರ ಕಾರ್ಯಕ್ರಮವನ್ನು ಮುಂದುವರೆಸಿದ್ದೇಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವರು, ಸರ್ಕಾರವು ಮಾಜಿಸ್ಟೀರಿಯಲ್ ತನಿಖೆಯ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ
ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡವನ್ನು ಸನ್ಮಾನಿಸಲು ವಿಧಾನಸೌಧದ ಮುಂಭಾಗ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ಕಾರ್ಯಕ್ರಮಗಳನ್ನು ತುರ್ತಾಗಿ ಆಯೋಜಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಉಚಿತ ಪಾಸ್ಗಳ ವದಂತಿಗಳು, ಅನಿಯಮಿತ ಪ್ರಕಟಣೆಗಳು, ನಿರ್ವಹಣೆಯ ಕೊರತೆ, ಮತ್ತು ಅಪಾರ ಜನಸಂದಣಿ ಈ ಕಾಲ್ತುತಕ್ಕೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದ ಬಳಿಕ, ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಿದ್ದು, ಸಾಮಾಜಿಕ ಕಾರ್ಯಕರ್ತರಿಂದ ಅಧಿಕೃತ ದೂರು ಕೂಡ ದಾಖಲಾಗಿದೆ. ಸರ್ಕಾರ ತನಿಖೆ ಮತ್ತು ಪರಿಹಾರ ಘೋಷಣೆ ಮಾಡಿದರೂ, ನಿರ್ವಹಣಾ ವೈಫಲ್ಯ, ತುರ್ತು ಯೋಜನೆ, ಮತ್ತು ಜನಸಂದಣಿಯ ನಿಯಂತ್ರಣದ ಕೊರತೆಯೇ ಈ ದುರಂತಕ್ಕೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿದೆ.